ಯುನೈಟೆಡ್ ಬೆಂಗಳೂರಿನ ಕೆರೆ ಉಳಿಸಿ ಹೋರಾಟಕ್ಕೆ ನಟ ಯಶ್ ಸಾಥ್
ಯುನೈಟೆಡ್ ಬೆಂಗಳೂರು ಸಂಸ್ಥೆಯು ಶನಿವಾರ ಬೆಂಗಳೂರಿನಲ್ಲಿ ಆಯೋಜಿಸಿದ್ದ ಕೆರೆ ಉಳಿಸಿ ಸಂವಾದಕ್ಕೆ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸಂವಾದದಲ್ಲಿ ಕೇಳಿಬಂದ ಒತ್ತಾಯ, ಮಾಹಿತಿ ಹಾಗೂ ವಿವರಗಳು ಇಲ್ಲಿವೆ
ಬೆಂಗಳೂರು, ಮೇ 13: ಬೆಂಗಳೂರಿನ ಟೌನ್ ಹಾಲ್ ನಲ್ಲಿ ಶನಿವಾರ ಯುನೈಟೆಡ್ ಬೆಂಗಳೂರು ವತಿಯಿಂದ ನಮ್ಮ ಕೆರೆಗಳನ್ನು ರಕ್ಷಿಸಿ ಮತ್ತು ಹಿಂಪಡೆಯುವ ಬಗ್ಗೆ ಸಂವಾದ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಯಾರು, ಏನೆಂದರು ಎಂಬುದನ್ನು ಇಲ್ಲಿ ತಿಳಿಸಲಾಗಿದೆ.
ಎನ್ ಎಸ್ ಮುಕುಂದ ಮಾತನಾಡಿ, ಸರಕಾರವು ಪಾರದರ್ಶಕವಾಗಿರಬೇಕು ಹಾಗೂ ಉತ್ತರದಾಯಿತ್ವ ಇರಬೇಕು. ಜತೆಗೆ ಬೆಂಗಳೂರು ನಾಗರಿಕರು ಈ ವಿಚಾರದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು. ಅದು ಹೇಗೆಂದರೆ, ಸ್ಟೀಲ್ ಫ್ಲೈ ಓವರ್ ಹೋರಾಟದಲ್ಲಿ ಹೇಗೆ ಭಾಗವಹಿಸಿದ್ದರಲ್ಲ, ಅದೇ ರೀತಿ ಕೆರೆಗಳನ್ನು ಉಳಿಸಿಕೊಳ್ಳಲು ಮುಂದಾಗಬೇಕು.[ಕಾಳೇನ ಅಗ್ರಹಾರ ಕೆರೆ ಉಳಿವಿಗೆ ಟೊಂಕಕಟ್ಟಿದ ನಿರ್ಮಲಾ]
ಕೆರೆಗಳನ್ನು ನಮ್ಮ ಹಿರಿಯರು ನಿರ್ಮಿಸಿರುವುದು. ಅವುಗಳನ್ನು ಉಳಿಸಿಕೊಳ್ಳಬೇಕು ಎಂದರು. ಪೂವಯ್ಯ ಮತ್ತು ಕಂಪೆನಿಯ ಮನು ಕುಲಕರ್ಣಿ, ನೀರಿದೆಯೋ ಇಲ್ಲವೋ ಅದು ಬೇರೆ ಮಾತು. ನಕ್ಷೆಯಲ್ಲಿ ಇರುವ ಕೆರೆಗಳನ್ನು ಗುರುತಿಸಿ, ಉಳಿಸಬೇಕು. ಬೆಂಗಳೂರು ಕೆರೆಗಳನ್ನು ಉಳಿಸಿಕೊಳ್ಳಲು ಹಲವು ದಾರಿ ಇದೆ. ಅದೇ ರೀತಿ ಅಡತಡೆಗಳೂ ಇವೆ ಎಂದರು.
ಎಟಿ ರಾಮಸ್ವಾಮಿ ಮಾತನಾಡಿ, ಬೆಂಗಳೂರಿನ ಸಂಪನ್ಮೂಲವನ್ನು ಕಾಪಾಡಿಕೊಳ್ಳದಿದ್ದರೆ, ನಮ್ಮ ಭವಿಷ್ಯವನ್ನು ತೊಂದರೆಗೆ ಸಿಲುಕಿಸಿದಂತೆಯೇ. ಈ ಹಿಂದೆ ಭಾರತದಲ್ಲಿ ಮೂವತ್ತಾರು ಸಾವಿರ ಕೆರೆಗಳಿದ್ದವು. ಈಗ ಹನ್ನೆರಡು ಸಾವಿರದಷ್ಟಾಗಿದೆ. ಬೆಂಗಳೂರಿನ ಸಂಪನ್ಮೂಲವನ್ನು ರಕ್ಷಿಸಬೇಕಾದದ್ದು ಸರಕಾರದ ಜವಾಬ್ದಾರಿ, ಅಂಥದ್ದರಲ್ಲಿ ಜನಪ್ರತಿನಿಧಿಗಳೇ ಭೂಕಬಳಿಕೆ, ಒತ್ತುವರಿಯಲ್ಲಿ ತೊಡಗಿದ್ದಾರೆ ಎಂದರು.[ಬೆಳ್ಳಂದೂರು ಕೆರೆ ಮಾಲಿನ್ಯಕ್ಕೆ ಎನ್ ಜಿಟಿಯಿಂದ ರಾಜ್ಯ ಸರಕಾರದ ತರಾಟೆ]
ಮಲಿನವಾದ ಎಲ್ಲ ಕೆರೆ ಉಳಿಸಿಕೊಳ್ಳಬೇಕು
ವಿ.ಬಾಲಸುಬ್ರಮಣಿಯನ್, ಮನೆಯ ಕಸವೇ ಕೆರೆಗಳ ಮಾಲಿನ್ಯಕ್ಕೆ ಪ್ರಮುಖ ಕಾರಣ. ಈ ನಿಟ್ಟಿನಲ್ಲಿ ಸರಕಾರ ಹಾಗೂ ಜನರು ಕೆಲಸ ಮಾಡಬೇಕು. ಕಸವು ಕೆರೆಗಳನ್ನು ಸೇರದಿರುವಂತೆ ತಡೆಯಬೇಕು. ಗಮನವೆಲ್ಲ ಬೆಳ್ಳಂದೂರು ಕೆರೆ ಬಗ್ಗೆ ಮಾತ್ರ ಇದ್ದರೆ ಸಾಲದು. ಮಲಿನವಾಗಿರುವ ಉಳಿದ ಕೆರೆಗಳನ್ನು ಉಳಿಸಿಕೊಳ್ಳಲು ಯತ್ನಿಸಬೇಕು ಎಂದರು.
ಜಲಮಂಡಳಿಯ ವೈಫಲ್ಯ ಕಾರಣ
ಕಸವನ್ನು ಕೆರೆಗೆ ಬಿಡುವ ಬದಲು ಅದನ್ನು ಗೊಬ್ಬರವಾಗಿ ಮಾಡಿ, ರೈತರಿಗೆ ನೀಡಬಹುದು. ಬೆಂಗಳೂರಿನ ಎಲ್ಲ ವಾರ್ಡ್ ಗಳಲ್ಲೂ ಈ ಬಗ್ಗೆ ಸಲಹೆ ನೀಡಲು ತಜ್ಞರ ಸಮಿತಿ ಇರಬೇಕು ಎಂದು ಡಾ.ಯಲ್ಲಪ್ಪ ರೆಡ್ಡಿ ಹೇಳಿದರು. ಇನ್ನು ನರೇಶ್ ನರಸಿಂಹನ್ ಮಾತನಾಡಿ, ಕೆರೆಗಳು ಮಲಿನ ಆಗಿರುವುದಕ್ಕೆ ಆಡಳಿತ ವೈಫಲ್ಯವೇ ಕಾರಣ. ಕೆರೆಗಳನ್ನು ರಕ್ಷಿಸಲು ಬೆಂಗಳೂರು ಜಲಮಂಡಳಿ ವಿಫಲವಾಗಿದೆ. ಎಲ್ಲ ಕೆರೆಗಳನ್ನು ಒಂದು ನಿರ್ವಹಣಾ ವ್ಯವಸ್ಥೆ ಕೆಳಗೆ ತರಲು ಏಕೆ ಸಾಧ್ಯವಿಲ್ಲ ಎಂದರು.
ಸಾವಿರ ವರ್ಷಗಳ ಕೆರೆ ಎರಡು ದಶಕದಲ್ಲಿ ಹಾಳು
ಸಿಟಿಜನ್ಸ್ ಆಫ್ ಬೆಂಗಳೂರಿನ ಸದಸ್ಯರೂ ಆಗಿರುವ ಪ್ರಕಾಶ್ ಬೆಳವಾಡಿ ಮಾತನಾಡಿ, ನಮ್ಮ ಕೆರೆಗಳನ್ನು ಸಾವಿರ ವರ್ಷದ ಹಿಂದೆ ನಿರ್ಮಿಸಲಾಗಿದೆ. ಅವುಗಳನ್ನು ಎರಡು ದಶಕಗಳಲ್ಲಿ ಹಾಳು ಮಾಡಲಾಗಿದೆ. ಸರಕಾರ ಯಾವಾಗಲೂ ಚುನಾವಣೆ ಬಗ್ಗೆ ಯೋಚಿಸುತ್ತದೆ. ಅದರಿಂದ ನಾವು ಹೆಚ್ಚು ನಿರೀಕ್ಷೆ ಮಾಡುವುದಕ್ಕೆ ಆಗಲ್ಲ ಎಂದರು.
ಕೆರೆ ಉಳಿಸುವ ಹೋರಾಟಕ್ಕೆ ಯಶ್ ಬೆಂಬಲ
ಡಾ.ಹಿತಾ ಉನ್ನಿಕೃಷ್ಣನ್, ಕೆರೆಗಳ ಪುನರುಜ್ಜೀವನಕ್ಕಾಗಿ ಯುನೈಟೆಡ್ ಬೆಂಗಳೂರು ಪರಿಣಾಮಕಾರಿಯಾದ ಕೆಲಸ ಮಾಡಲೇಬೇಕು ಎಂದು ಹೇಳಿದರು. ಯುನೈಟೆಡ್ ಬೆಂಗಳೂರಿನ ಚಲವಳಿಗೆ ಚಿತ್ರನಟ ಯಶ್ ಬೆಂಬಲ ಸೂಚಿಸಿ, ಸಂವಾದದಲ್ಲಿ ಭಾಗಿಯಾಗಿದ್ದರು. ಕೋಳಿವಾಡ, ದೊರೆಸ್ವಾಮಿ ಮತ್ತಿತರರು ಹಾಜರಿದ್ದರು.