ಬೆಂಗಳೂರು ದಕ್ಷಿಣ ನೂತನ ಡೆಪ್ಯೂಟಿ ಕಮಿಷನರ್, ಐಪಿಎಸ್, ಕೆ ಅಣ್ಣಾಮಲೈ ಸಂದರ್ಶನ
Recommended Video
ಉಡುಪಿ, ಚಿಕ್ಕಮಗಳೂರು ಮುಂತಾದ ಕಡೆ ಪೊಲೀಸ್ ವರಿಷ್ಠಾಧಿಕಾರಿಯಾಗಿ ಕೆಲಸ ನಿರ್ವಹಿಸಿ, ಸಾರ್ವಜನಿಕರಿಂದ ಶಹಬ್ಬಾಸ್ ಗಿರಿ ಗಿಟ್ಟಿಸಿಕೊಂಡಿದ್ದ ಐಪಿಎಸ್ ಅಧಿಕಾರಿ ಕೆ ಅಣ್ಣಾಮಲೈ, ಈಗ ಬೆಂಗಳೂರು ದಕ್ಷಿಣಕ್ಕೆ ಡಿಸಿಪಿಯಾಗಿ ವರ್ಗಾವಣೆಗೊಂಡಿದ್ದಾರೆ.
ಖಡಕ್ ಪೊಲೀಸ್ ಆಫೀಸರ್ ಎಂದೇ ಹೆಸರಾಗಿರುವ ಅಣ್ಣಾಮಲೈ, ಅವರನ್ನು ವಿಶೇಷ ಟಾಸ್ಕ್ ಮೇಲೆ ಬೆಂಗಳೂರಿಗೆ ವರ್ಗ ಮಾಡಲಾಗಿದೆ ಎನ್ನುವ ಮಾತಿದೆ. ಒಂದೊಂದು ವಿಭಾಗದಲ್ಲೂ, ಒಂದೊಂದು ರೀತಿಯ ಸವಾಲುಗಳು ಇರುತ್ತವೆ ಎನ್ನುವ ಅಣ್ಣಾಮಲೈ, ಸಾರ್ವಜನಿಕರಿಗಾಗಿ ನನ್ನ ಕಚೇರಿಯ ಬಾಗಿಲು ಸದಾ ತೆರೆದಿರುತ್ತದೆ ಎನ್ನುತ್ತಾರೆ.
ಚಿಕ್ಕಮಗಳೂರು ಎಸ್ಪಿ ಅಣ್ಣಾಮಲೈ ಪಾಠದ ಧಾಟಿಯಲ್ಲಿ ವಾರ್ನಿಂಗ್
ಆಯಕಟ್ಟಿನ ಬೆಂಗಳೂರು ದಕ್ಷಿಣಕ್ಕೆ ಡಿಸಿಪಿಯಾಗಿ (ಡೆಪ್ಯೂಟಿ ಕಮಿಷನರ್ ಆಫ್ ಪೊಲೀಸ್) ವರ್ಗಾವಣೆಗೊಂಡಿರುವ ಅಣ್ಣಾಮಲೈ ಅವರ ಟಾಸ್ಕ್ ಏನು, ಅವರಿಗಿರುವ ಅಡೆತಡೆಗಳೇನು, ವೃತ್ತಿಜೀವನದಲ್ಲಿ ಎದುರಿಸಿದ ಕಷ್ಟಕರ ಅನುಭವ, ಮುಂತಾದ ವಿಚಾರದ ಬಗ್ಗೆ, 'ಒನ್ ಇಂಡಿಯಾ' ಜೊತೆ ಮಾತುಕತೆ ನಡೆಸಿದ್ದಾರೆ. ಅವರ ಸಂದರ್ಶನದ ಆಯ್ದಭಾಗ ಇಂತಿದೆ:
ಪ್ರ: ಉಡುಪಿ, ಚಿಕ್ಕಮಗಳೂರು ಜಿಲ್ಲೆಗೆ ಹೋಲಿಸಿದರೆ, ಬೆಂಗಳೂರಲ್ಲಿ ಕಾನೂನು, ಸುವ್ಯವಸ್ಥೆ ಕಾಪಾಡುವುದು ಕಷ್ಟವೇ?
ಅಣ್ಣಾಮಲೈ: ಒಂದೊಂದು ಪ್ರದೇಶದಲ್ಲಿ ಕೆಲಸದ ರೂಪ ಬೇರೆ ಬೇರೆ ರೀತಿಯಲ್ಲಿರುತ್ತದೆ. ಉಡುಪಿಯಲ್ಲಿರುವ ಪ್ರಾಬ್ಲಂಗಳು ಬೇರೆ, ಚಿಕ್ಕಮಗಳೂರಿನಲ್ಲಿರುವ ಪ್ರಾಬ್ಲಂಗಳು ಬೇರೆ. ನನ್ನ ಕಾರ್ಯದ ಶೈಲಿ ಹೇಗೆಂದರೆ, ಕೆಲವೊಂದು ವಿಚಾರವನ್ನು ಮರೀಬೇಕು, ಕೆಲವೊಂದು ವಿಷಯವನ್ನು ಕಲಿಯಬೇಕು. ಬೆಂಗಳೂರು ನಗರದಲ್ಲಿ ಕಲಿಯಲು ತುಂಬಾ ವಿಚಾರವಿದೆ.
ವರ್ಷದ ವ್ಯಕ್ತಿ: ಚಿಕ್ಕಮಗಳೂರು ಎಸ್ಪಿ ಅಣ್ಣಾಮಲೈ
ಯಾವ ರೀತಿ ಕ್ರೈಂ ನಡೀತಾ ಇದೆ, ಅದನ್ನು ತಪ್ಪಿಸಲು ಏನು ಮಾಡಬಹುದು. ಡಿಸಿಪಿ ದಕ್ಷಿಣ ತುಂಬಾ ಸವಾಲಿನ ಕೆಲಸ. ಇಲ್ಲಿರುವ ಜನಸಂಖ್ಯೆ, ಸಾಂಪ್ರದಾಯಿಕ ಕ್ರೈಂಗಳು, ಹೊರಗಡೆಯಿಂದ ಬರುವವರು ತುಂಬಾ ಜನರಿದ್ದಾರೆ. ಇದನ್ನೆಲ್ಲಾ ತಿಳಿದುಕೊಳ್ಳಲು, ನನಗೂ ಸ್ವಲ್ಪ ಕಾಲಾವಕಾಶ ಬೇಕು.
ಬೆಂಗಳೂರು ನಗರಕ್ಕೆ ಪೋಸ್ಟಿಂಗ್
ಪ್ರ: ಸ್ಪೆಷಲ್ ಟಾಸ್ಕ್ ನೀಡಿ ನಿಮ್ಮನ್ನು, ಬೆಂಗಳೂರು ನಗರಕ್ಕೆ ಪೋಸ್ಟಿಂಗ್ ಮಾಡಲಾಗಿದೆ ಎನ್ನುವ ಸುದ್ದಿ ಇದೆಯಲ್ಲಾ?
ಅಣ್ಣಾಮಲೈ: ಯಾವ ಸಮಯದಲ್ಲಿ, ಯಾವ ಅಧಿಕಾರಿಗಳನ್ನು ಎಲ್ಲಿಗೆ ಹಾಕಬೇಕು ಎನ್ನುವುದನ್ನು ಸರಕಾರ ನಿರ್ಧರಿಸುತ್ತದೆ. ನಾನು ಇಲ್ಲಿಗೆ ಬರುವ ಮೊದಲು ಡಿಸಿಪಿ ಶರಣಪ್ಪ ಇದ್ದರು, ತುಂಬಾ ಚೆನ್ನಾಗಿ ಕೆಲಸ ನಿರ್ವಹಿಸಿದ್ದಾರೆ. ಎಲ್ಲಾ ನಗರಗಳಲ್ಲಿ ಏನಾಗುತ್ತದೆ ಅಂದರೆ, ಕ್ರೈಂನ ರೂಪ ಬದಲಾಗುತ್ತಾ ಸಾಗುತ್ತದೆ.
ಲೋಕಲ್ ರೌಡಿಸಂ, ಹೊರವಲಯದಲ್ಲಿನ ದರೋಡೆ ಮುಂತಾದ ಪ್ರಕರಣಗಳು ಹೆಚ್ಚಾಗಿದೆ. ನನ್ನ ಪ್ರಕಾರ, ನನ್ನದು ನಾರ್ಮಲ್ ವರ್ಗಾವಣೆ. ಸರಕಾರ ನನಗೆ ಕೊಟ್ಟ ಜವಾಬ್ದಾರಿಯನ್ನು ಸಾಧ್ಯವಾದಷ್ಟು ಮಟ್ಟಿಗೆ ಉತ್ತಮವಾಗಿ ನಿರ್ವಹಿಸಲು ಪ್ರಯತ್ನಿಸುತ್ತೇನೆ.
ಮೀಟರ್ ಬಡ್ಡಿ ದಂಧೆ, ಭೂಮಾಫಿಯಾ, ಜೂಜು ಅಡ್ಡ, ನೈಟ್ ಕ್ಲಬ್ ಹಾವಳಿ
ಪ್ರ: ಮೀಟರ್ ಬಡ್ಡಿ ದಂಧೆ, ಭೂಮಾಫಿಯಾ, ಜೂಜು ಅಡ್ಡ, ನೈಟ್ ಕ್ಲಬ್ ಹಾವಳಿ ನಿಮ್ಮ ವ್ಯಾಪ್ತಿಯಲ್ಲಿ ಬಹಳಷ್ಟು ಇದೆಯಾ?
ಅಣ್ಣಾಮಲೈ: ನನ್ನ ವ್ಯಾಪ್ತಿಯಲ್ಲಿ ನೈಟ್ ಕ್ಲಬ್ ಸಮಸ್ಯೆ ಅಷ್ಟಾಗಿ ಇಲ್ಲ, ಆದರೂ ಎಲ್ಲಾ ಕಡೆ ಕಣ್ಣಿಟ್ಟಿದ್ದೇವೆ. ಮಿಕ್ಕ ಮಾಫಿಯಾದ ವಿಚಾರಗಳ ಮೇಲೆ ತೀವ್ರ ನಿಗಾ ಇಟ್ಟಿದ್ದೇವೆ. ಒಟ್ಟು ನಮ್ಮ ಉದ್ದೇಶವೇನಂದರೆ, ಸಾರ್ವಜನಿಕರು ನೆಮ್ಮದಿಯಿಂದ ಇರಬೇಕು. ವಾಕಿಂಗ್ ಹೋಗುವಾಗ ಭಯ ಆಗುತ್ತದೆ ಎಂದು ಇತ್ತೀಚೆಗೆ ಮಹಿಳೆಯೊಬ್ಬರು ನನ್ನಲ್ಲಿ ದೂರಿದ್ದರು.
ನಮಗೆ ಮೊದಲ ಆದ್ಯತೆ ನೆಮ್ಮದಿ. ಪೊಲೀಸ್ ಸಿಬ್ಬಂದಿಗಳಿಗೆ ಮೊದಲು ನಮ್ಮ ಸಿಸ್ಟಂ ಮೇಲೆ ವಿಶ್ವಾಸವಿರಬೇಕು. ಮೇಲೆ ಕೇಳಿದ ನಿಮ್ಮ ಪ್ರಶ್ನೆಯ ಬಗ್ಗೆ 80% ಜನರಿಗೆ ಅದರ ಬಗ್ಗೆ ಚಿಂತೆಯಿಲ್ಲ. ಹಾಗಾಗಿ, ಆದ್ಯತೆಯಿಂದ ನಾವು ಮಾಡಬೇಕಾಗಿರುವ ಕೆಲಸಗಳ ಮೇಲೆ ಮೊದಲು ಗಮನ ಹರಿಸುತ್ತೇವೆ.
ಸಿಎಂ ಕುಮಾರಸ್ವಾಮಿ ಡೈನಾಮಿಕ್ ನಿರ್ಧಾರಕ್ಕೆ ಸಾರ್ವಜನಿಕರ ಉಘೇ..ಉಘೇ..
ನಿಮ್ಮ ವ್ಯಾಪ್ತಿಯಲ್ಲಿ ಬರುವ ಠಾಣೆಗಳ ಪೈಕಿ, ಸೆನ್ಸಿಟಿವ್ ಪೊಲೀಸ್ ಠಾಣೆ ಯಾವುದು
ಪ್ರ: ಪೊಲೀಸರಿಗೆ ವೀಕ್ಲಿ ಆಫ್ ಕಂಪಲ್ಸರಿ ಅನ್ನೋ ಆದೇಶ ಹೊರಡಿಸಿದ್ರಿ. ನಿಮ್ಮ juridiction ನಲ್ಲಿ ಇದು ಜಾರಿಗೆ ಬಂದಿದೆಯಾ?
ಅಣ್ಣಾಮಲೈ: ಹೌದು, ಈ ಪದ್ದತಿಯನ್ನು ನವೆಂಬರ್ ತಿಂಗಳಿನಿಂದ ಶುರು ಮಾಡಿದ್ದೇವೆ. ಮಾಸಾಂತ್ಯದಲ್ಲಿ ಈ ಬಗ್ಗೆ ಚರ್ಚಿಸಿ, ಅದನ್ನು ಮತ್ತೆ ಪರಿಶೀಲಿಸುತ್ತೇವೆ. ಪ್ರತೀ ದಿನ ವೀಕ್ಲಿ ಆಫ್ ಯಾರು ಹೋಗುತ್ತಾರೆ ಅದನ್ನು ಬೋರ್ಡಿನಲ್ಲಿ ಹಾಕುತ್ತಿದ್ದೇವೆ. ತಿಂಗಳ ಕೊನೆಯಲ್ಲಿ ಇದನ್ನು ಮತ್ತೆ ಪರಾಮರ್ಶಿಸುತ್ತೇವೆ.
ಪ್ರ: ನಿಮ್ಮ ವ್ಯಾಪ್ತಿಯಲ್ಲಿ ಬರುವ ಪೊಲೀಸ್ ಠಾಣೆಗಳ ಪೈಕಿ, ಸೆನ್ಸಿಟಿವ್ ಪೊಲೀಸ್ ಠಾಣೆ ಯಾವುದು?
ಅಣ್ಣಾಮಲೈ: 18 ಠಾಣೆಗಳು ನಮ್ಮ ವ್ಯಾಪ್ತಿಗೆ ಬರುತ್ತದೆ, ಎಲ್ಲಾ ಠಾಣೆಗಳು ನಮಗೆ ಮುಖ್ಯ. ನಗರದ ಹೊರವಲಯದಲ್ಲಿರುವ ತಲಘಟಪುರ, ಸುಬ್ರಮಣ್ಯಪುರ, ಗಿರಿನಗರ ಈ ಎಲ್ಲಾ ಠಾಣೆಗಳೇ ಬೇರೆ. ಜಯನಗರ, ಬಸವನಗುಡಿ ಮುಂತಾದ ವಿವಿಐಪಿ ಠಾಣೆಗಳೂ ಇವೆ. ಎಲ್ಲಾ ಠಾಣಾ ವ್ಯಾಪ್ತಿಯಲ್ಲೂ ಸಣ್ಣಪುಟ್ಟ ಕ್ರೈಂಗಳು ನಡೆಯುತ್ತಲೆ ಇರುತ್ತದೆ. ಎಲ್ಲಾ ಠಾಣೆಗಳಿಗೆ ನ್ಯಾಯ ಒದಗಿಸುವುದು ನನ್ನ ಕರ್ತವ್ಯ.
ಸಾರ್ವಜನಿಕ ಜೀವನದಲ್ಲಿ ಇರುವವರಿಂದಲೇ ಜನಸಾಮಾನ್ಯರಿಗೆ ತಪ್ಪು ಸಂದೇಶ
ಪ್ರ: ಈ ಹಿಂದೆ, 5ಕೆ.ಜಿ ತೂಕ ಇಳಿಸಿದರೆ, ಕೇಳಿದ ಕಡೆ ಟ್ರಾನ್ಸ್ ಫರ್ ಕೊಡುತ್ತೇನೆಂದು ಪೊಲೀಸರಿಗೆ ಆಫರ್ ನೀಡಿದ್ರಿ. ಇಲ್ಲಿ ಯಾರಿಗಾದರೂ ಈ ರೀತಿಯ ಆಫರ್ ನೀಡಿದ್ರಾ?
ಅಣ್ಣಾಮಲೈ: ನನಗೆ ವರ್ಗಾವಣೆ ಮಾಡುವ ಪವರ್ ಇಲ್ಲ. ಕಮಿಷನರ್ ಲೆವೆಲ್ ನಲ್ಲಿ ಮಾತ್ರ ಈ ಪವರ್ ಇರುತ್ತದೆ. ಆದರೆ, ಬೆಂಗಳೂರು ದಕ್ಷಿಣ ವ್ಯಾಪ್ತಿಯಲ್ಲಿ ನನ್ನ ಸಿಬ್ಬಂದಿಗಳಿಗೆ ಉತ್ತೇಜನ ನೀಡುವಂತಹ ಕೆಲಸಗಳಿಗೆ ನನ್ನ ಬೆಂಬಲ ಇದ್ದೇ ಇರುತ್ತದೆ.
ಪ್ರ: ಸಾರ್ವಜನಿಕ ಜೀವನದಲ್ಲಿ ಇರುವವರಿಂದಲೇ ಜನಸಾಮಾನ್ಯರಿಗೆ ತಪ್ಪು ಸಂದೇಶ ರವಾನೆ ಆಗುತ್ತಿದೆಯಾ?
ಅಣ್ಣಾಮಲೈ: ಮಾಧ್ಯಮ ಸ್ನೇಹಿತರಿಗೂ ನನ್ನ ಮನವಿ ಏನೆಂದರೆ, ಮಿಡಿಯಾದಲ್ಲಿ ಬರುತ್ತದೆ ಎಂದು ವಿಚಾರ ಇನ್ನೂ ದೊಡ್ಡದಾಗುತ್ತಾ ಸಾಗುತ್ತದೆ. ಕೆಲವೊಮ್ಮೆ, ಮಾಧ್ಯಮಗಳೂ ಸಣ್ಣಸಣ್ಣ ವಿಷಯವನ್ನು ವರ್ಣರಂಜಿತವಾಗಿ ಟಿಆರ್ಪಿಗಾಗಿ ತೋರಿಸುತ್ತದೆ. ದುನಿಯಾ ವಿಜಯ್ ಕೇಸನ್ನು ಮಾತ್ರ ನಾನು ಉಲ್ಲೇಖಿಸುತ್ತಿಲ್ಲ.
ಕಾನೂನಿನಲ್ಲಿ ಎಲ್ಲಾ ಸಮಸ್ಯೆ ಬಗೆಹರಿಸಲು ಆಯ್ಕೆಗಳಿವೆ, ಸರಿಯಾದ ಸಮಯಕ್ಕೆ ಸರಿಯಾಗಿರುವುದನ್ನು ಆಯ್ಕೆ ಮಾಡಿಕೊಳ್ಳಬೇಕು. ಮಾಧ್ಯಮಗಳು ಪಾಸಿಟಿವ್ ಸುದ್ದಿ ಪ್ರಸಾರ ಮಾಡಬೇಕು ಎನ್ನುವುದು ನಮ್ಮ ಮನವಿ.
ಉಡುಪಿ ಜಿಲ್ಲೆಯ ಎಸ್ಪಿಯಾಗಿ ಕಾರ್ಯನಿರ್ವಹಿಸುತ್ತಿದ್ದೆ
ಪ್ರ: ಇದುವರೆಗಿನ ನಿಮ್ಮ ವೃತ್ತಿಜೀವನದಲ್ಲಿ ನೀವು ಎದುರಿಸಿದ ಕಷ್ಟಕರ/ಮರೆಯಲಾಗದ ಟಾಸ್ಕ್ ಯಾವುದು?
ಅಣ್ಣಾಮಲೈ: ಕಷ್ಟಕರ ಕೆಲಸಗಳನ್ನು ತುಂಬಾ ಎದುರಿಸಿದ್ದೇವೆ. ನನಗೆ ಹೃದಯಕ್ಕೆ ತುಂಬಾ ಹತ್ತಿರವಾದ ಘಟನೆಯ ನೆನಪು/ನೋವು ನನಗೆ ಆಗಿಂದಾಗಲೇ ಕಾಡುತ್ತಲೇ ಇದೆ. ನಾನು ಉಡುಪಿ ಜಿಲ್ಲೆಯ ಎಸ್ಪಿಯಾಗಿ ಕಾರ್ಯನಿರ್ವಹಿಸುತ್ತಿದ್ದೆ. ಹತ್ತು ವರ್ಷದ ಮಗುವನ್ನು ಅತ್ಯಾಚಾರ ಮಾಡಿ, ಕೊಲೆ ಮಾಡುತ್ತಾರೆ. ಅಪರಾಧಿಗಳನ್ನು ಮೂರು ದಿನದಲ್ಲಿ ನಾವು ಬಂಧಿಸಿದ್ದೇವೆ.
ಆದರೂ, ಆ ಘಟನೆ ಭಾವನಾತ್ಮಕವಾಗಿ ನನ್ನನ್ನು ಆವಾಗಾವಾಗ ಕಾಡುತ್ತಲೇ ಇದೆ, ಏನು ಅರಿಯದ ಮಗು ಅದು. ಚೆನ್ನಾಗಿ ಓದುವ ಹುಡುಗಿಯಾಗಿತ್ತು. ಇಂದು (ನ 19) ಬೆಳಗ್ಗೆ ಕೂಡಾ ಜೆ ಪಿ ನಗರದಲ್ಲಿ ನಡೆದ ಘಟನೆಯನ್ನು ರಿವಿವ್ ಮಾಡಿದ್ದೇನೆ. ತಂದೆ ಆಸ್ತಿ ಕೊಡಲಿಲ್ಲ ಎಂದು ಮಗ, ಅವರ ಎರಡು ಕಣ್ಣನ್ನೇ ಕಿತ್ತು ಬಿಟ್ಟಿದ್ದಾನೆ.
ಈ ರೀತಿಯ ಘಟನೆಗಳು ವೈಯಕ್ತಿಕವಾಗಿ ಬಹಳ ನೋವು ತರುತ್ತದೆ. ಉಡುಪಿಯಲ್ಲಿ ನಡೆದ ಘಟನೆ, ಇನ್ನೂ ನನ್ನನ್ನು ಕಾಡುತ್ತಿದೆ. ಇಷ್ಟು ನೆಗೆಟಿವಿಟಿ ನಮ್ಮ ಸಮಾಜದಲ್ಲಿ ಇದೆ ಎನ್ನುವುದೇ ಬೇಸರದ ಸಂಗತಿ. ಚಿಕ್ಕಮಗಳೂರಿನ ಬಿಜೆಪಿ ಮುಖಂಡರ ಕೊಲೆ ಕೇಸೂ ನಮಗೆ ಚಾಲೆಂಜ್ ಆಗಿತ್ತು.
ಯುವ ಸಮುದಾಯದವರಿಗೆ ನಿಮ್ಮ ಸಲಹೆ, ಸಂದೇಶ
ಪ್ರ: ಸಾರ್ವಜನಿಕರಿಗೆ, ಅದರಲ್ಲೂ ಪ್ರಮುಖವಾಗಿ ಯುವ ಸಮುದಾಯದವರಿಗೆ ನಿಮ್ಮ ಸಲಹೆ, ಸಂದೇಶ?
ಅಣ್ಣಾಮಲೈ: ಇತ್ತೀಚೆಗೆ ಯುವ ಸಮುದಾಯ ಯಾವುದರ ಬಗ್ಗೆಯೂ ಜಾಸ್ತಿ ತಲೆಕೆಡಿಸಿಕೊಳ್ಳುತ್ತಿಲ್ಲ. ಏನಾದರೂ ಆಗಲಿ, ಅದರಿಂದ ನಮಗೇನು ಎನ್ನುವ ಭಾವನೆಯನ್ನು ಹೊಂದಿರುವುದು ದುರಂತ, ಇದನ್ನು ಸಾಧ್ಯವಾದಷ್ಟು ಮಟ್ಟಿಗೆ ತಪ್ಪಿಸಬೇಕು. ಸಮಾಜದಲ್ಲಿ ಏನಾದರೂ ಆಗಲಿ, ಅದಕ್ಕೂ ನನಗೆ ಸಂಬಂಧವಿಲ್ಲ ಎಂದು ಎಲ್ಲರೂ ಸುಮ್ಮನಾದರೆ, ನಮಗೆ ಒಳ್ಳೆಯ ನಾಯಕ ಸಿಗುವುದಿಲ್ಲ.
ಯುವಕರು ತಪ್ಪು ಕಂಡಲ್ಲಿ ಅದರ ವಿರುದ್ದ ಧ್ವನಿ ಎತ್ತಬೇಕು. ಜೀವನದಲ್ಲಿ ಏನು ಸಿಗುತ್ತೋ, ಅದನ್ನು ಒಪ್ಪಿಕೊಳ್ಳುವ ಯುವಕರ ಸಂಖ್ಯೆ ಹೆಚ್ಚಾಗಿದೆ. ಪೊಲೀಸ್ ಇಲಾಖೆಗೂ ಯುವಕರು ಸಪೋರ್ಟ್ ಮಾಡಬೇಕು. ಟ್ವಿಟ್ಟರ್ ಮತ್ತು ಫೇಸ್ ಬುಕ್ ನಲ್ಲಿ ಪೊಲೀಸರು ಮಾಡುವ ಒಳ್ಳೆಯ ಕೆಲಸದ ಬಗ್ಗೆ ಬರೀಬೇಕು. ಇದರಿಂದ, ನಮಗೂ ನೈತಿಕ ಬಲಸಿಕ್ಕಂತಾಗುತ್ತದೆ.