ಅಮ್ಮನಂತೆ ಪರಪ್ಪನ ಅಗ್ರಹಾರ ಜೈಲಿನಿಂದಲೇ ಚಿನ್ನಮ್ಮನ ದರ್ಬಾರ್!
ಗುರುವಾರ ಶಶಿಕಲಾ ನಟರಾಜನ್ ಬಂಟ ಎಡಪ್ಪಡಿ ಕೆ ಪಳನಿಸ್ವಾಮಿಯನ್ನು ಸರಕಾರ ರಚಿಸುವಂತೆ ರಾಜ್ಯಪಾಲ, ವಿದ್ಯಾಸಾಗರ ರಾವ್ ಆಹ್ವಾನಿಸಿದ್ದಾರೆ. 2014ರಲ್ಲೂ ಹೀಗೆಯೇ ಆಗಿತ್ತು. ಆ ದಿನ ಜಯಲಲಿತಾ ಜೈಲಿನಿಂದಲೇ ಪನ್ನೀರ್ ಸೆಲ್ವಂ ಮೂಲಕ 2 ತಿಂಗಳು ಅಧಿಕಾರ.
ಬೆಂಗಳೂರು, ಫೆಬ್ರವರಿ 16: ಚೆನ್ನೈನಿಂದ ಬೆಂಗಳೂರಿಗೆ ಸುದೀರ್ಘ 7 ಗಂಟೆಗಳ ಪ್ರಯಾಣದ ನಂತರ ಬುಧವಾರ ಸಂಜೆ ವಿಶೇಷ ನ್ಯಾಯಾಲಯದ ಮುಂದೆ ಶಶಿಕಲಾ ನಟರಾಜನ್ ಹಾಜರಾದರು. ನಂತರ ಅವರನ್ನು ಅಲ್ಲಿಂದ ಜೈಲೊಳಕ್ಕೆ ಕರೆದೊಯ್ಯಲಾಯಿತು. ಇದೇ ಜೈಲಿನಲ್ಲಿ ಶಶಿಕಲಾ ತಮ್ಮ ಜೈಲಿನ ನಾಲ್ಕು ವರ್ಷಗಳನ್ನು ಪೂರೈಸಲಿದ್ದಾರೆ.
ಇದೇ ಸಮಯಕ್ಕೆ ಗುರುವಾರ ಶಶಿಕಲಾ ನಟರಾಜನ್ ಬಂಟ ಎಡಪ್ಪಡಿ ಕೆ ಪಳನಿಸ್ವಾಮಿಯನ್ನು ಸರಕಾರ ರಚಿಸುವಂತೆ ರಾಜ್ಯಪಾಲ, ವಿದ್ಯಾಸಾಗರ ರಾವ್ ಆಹ್ವಾನಿಸಿದ್ದಾರೆ. 2014ರಲ್ಲೂ ಹೀಗೆಯೇ ಆಗಿತ್ತು. ಅವತ್ತು ಜಯಲಲಿತಾ ಜೈಲಿನಿಂದಲೇ 2 ತಿಂಗಳು ಅಧಿಕಾರ ನಡೆಸಿದ್ದರು. ಇದೀಗ ಚಿನ್ನಮ್ಮ ಕೂಡಾ ತಮ್ಮ ಬಂಟನನ್ನು ಮುಖ್ಯಮಂತ್ರಿ ಮಾಡಿ ಕಂಬಿ ಹಿಂದಿನಿಂದಲೇ ಅಧಿಕಾರ ನಡೆಸುವ ಸೂಚನೆ ನೀಡಿದ್ದಾರೆ.[ಪರಪ್ಪನ ಅಗ್ರಹಾರದಲ್ಲಿ ಶಶಿಕಲಾ ಗಳಿಸಲಿರುವ ಹಣವೆಷ್ಟು?]
ಆದರೆ 2014ರಲ್ಲಿ ಶಶಿಕಲಾ ಮತ್ತು ಜಯಲಲಿತಾ ಇದೇ ಜೈಲಿನೊಳಕ್ಕೆ ಬಂದಾಗ ಪರಿಸ್ಥಿತಿ ಪೂರ್ತಿ ಭಿನ್ನವಾಗಿತ್ತು. ಸೆಪ್ಟೆಂಬರ್ 27, 2014ರಲ್ಲಿ ಜಯಲಲಿತಾಗೆ ಕೋರ್ಟಿಗೆ ಹಾಜರಾಗುವಂತೆ ವಿಶೇಷ ನ್ಯಾಯಾಲಯ ಸೂಚಿಸಿತ್ತು. ಅವತ್ತು ನ್ಯಾಯಾಧೀಶರು ಜಯಲಲಿತಾ ಪ್ರಕರಣಗಳಲ್ಲಿ ಆದೇಶ ನೀಡಲಿದ್ದುದರಿಂದ ಅವರನ್ನು ಖುದ್ದು ಹಾಜರಿರುವಂತೆ ಹೇಳಲಾಗಿತ್ತು. ಬೆಳಗ್ಗೆ ಚೆನ್ನೈನಿಂದ ಹೊರಟು ಏಳು ಗಂಟೆಗಳ ದೀರ್ಘ ಪ್ರಯಾಣದ ನಂತರ ಜಯಲಲಿತಾ ಬೆಂಗಳೂರು ತಲುಪಿದ್ದರು.[ಜಯಾ ಅಕ್ರಮ ಆಸ್ತಿ ಪ್ರಕರಣದಲ್ಲಿ ಕರ್ನಾಟಕ ಖರ್ಚು ಮಾಡಿದ್ದು 5 ಕೋಟಿ!]
ಭಾರೀ ಭದ್ರತೆ
ಜಯಲಲಿತಾ ಬೆಂಗಳೂರಿಗೆ ಬರುವ ದಿನ ಭದ್ರತೆಯನ್ನು ಹೆಚ್ಚಿಸಲಾಗಿತ್ತು. ಕೋರ್ಟ್ ಆವರಣದಿಂದ ಕಿಲೋಮೀಟರ್ ಮೊದಲೇ ಇಡೀ ರಸ್ತೆಯನ್ನು ಖಾಲಿ ಮಾಡಲಾಗಿತ್ತು. ಮಾಧ್ಯಮದವರನ್ನೂ ಚೆಕ್ ಮಾಡಿಯೇ ಕೋರ್ಟ್ ಆವರಣಕ್ಕೆ ಬಿಡಲಾಗಿತ್ತು. ಮುಂಜಾಗ್ರತಾ ಕ್ರಮವಾಗಿ ಕೋರ್ಟ್ ಆವರಣದ ಒಂದು ಕಿಲೋಮೀಟರ್ ವ್ಯಾಪ್ತಿಯಲ್ಲಿ ಅಂಗಡಿ ಮುಂಗಟ್ಟುಗಳನ್ನೆಲ್ಲಾ ಮುಚ್ಚಲಾಗಿತ್ತು.
ಅಮ್ಮ ಬಂದಾಗ
ಝಡ್ ಪ್ಲಸ್ ಭದ್ರತೆಯೊಂದಿಗೆ ತಮ್ಮ ಎಸ್.ಯು.ವಿ ಕಾರಿನಲ್ಲಿ ಜಯಲಲಿತಾ ಕೋರ್ಟ್ ಆವರಣಕ್ಕೆ ಬಂದಾಗ ಅವರನ್ನು ಸ್ವಾಗತಿಸಲು ಸಾವಿರಾರು ಎಐಎಡಿಎಂಕೆ ಕಾರ್ಯಕರ್ತರು ಕಾಯುತ್ತಿದ್ದರು. ಆಕೆ ತುಂಬು ವಿಶ್ವಾದಲ್ಲಿದ್ದರು. ಎಂದಿನಂತೆ ಕೈಮೇಲೆತ್ತಿ ವಿಜಯದ ಚಿನ್ಹೆಯನ್ನು ಕಾರ್ಯಕರ್ತರತ್ತ ತೋರಿಸಿ ಮುನ್ನಡೆದಿದ್ದರು. ಆಕೆಯ ಬೆಂಬಲಿಗರಲ್ಲ, ಇಡೀ ಸಂಪುಟದ ಮಂತ್ರಿಗಳೇ ಕೋರ್ಟ್ ಹಾಲಿನತ್ತ ಬಂದಿದ್ದರು. ಆದರೆ ಭದ್ರತಾ ಸಿಬ್ಬಂದಿಗಳು ಸಚಿವರನ್ನೂ ಕೋರ್ಟ್ ಹತ್ತಿರಕ್ಕೆ ಬಿಟ್ಟಿರಲಿಲ್ಲ.
ಅಭಿಮಾನಿಗಳ ಆಕ್ರೋಶ
ಕೋರ್ಟಿನಲ್ಲಿ ಆದೇಶ ಬಂದಾಗ ಜಯಾ ಅಭಿಮಾನಿಗಳ ಮುಖ ಕಪ್ಪಿಟ್ಟಿತ್ತು. ಅವರೆಲ್ಲರ ಮುಖದಲ್ಲಿಯೂ ಆಕ್ರೋಷ ಹೊತ್ತಿ ಉರಿಯುತ್ತಿತ್ತು. ವಕೀಲರಂತೆ ಕೋರ್ಟ್ ಒಳಗೆ ಹೋಗಿದ್ದ ಕೆಲವರು ಸುದ್ದಿಯನ್ನು ಹೊರಗಿದ್ದ ನಮ್ಮ ಸಹೊದ್ಯೋಗಿಗಳಿಗೆ ತಲುಪಿಸಿದರು. "ಆಕೆ ದೋಷಿ ಎಂದು ತೀರ್ಪಾಗಿದೆ. 100 ಕೋಟಿ ದಂಡ ಹಾಗೂ ನಾಲ್ಕು ವರ್ಷಗಳ ಜೈಲು ಶಿಕ್ಷೆ ನೀಡಲಾಗಿದೆ," ಎಂದು ಒಂದೇ ಉಸಿರಿನಲ್ಲಿ ಹೇಳಿ ಕೋರ್ಟಿನಲ್ಲಿದ್ದವರು ಫೋನಿಟ್ಟರು. 'ಉಳಿದವರಿಗೆ ಏನು?' ಎಂಬ ಪ್ರಶ್ನೆಗೆ "ಎಲ್ಲರಿಗೂ ಒಂದೇ," ಎಂದು ಹೇಳಿ ಫೋನಿಟ್ಟು ಬಿಟ್ಟಿದ್ದರು.
ಕುಸಿದ ಅಮ್ಮ
ಆದೇಶ ಬರುತ್ತಿದ್ದಂತೆ ಇಡೀ ಕೋರ್ಟ್ ಹಾಲ್ ನಾಟಕೀಯ ಘಟನೆಗಳಿಗೆ ಸಾಕ್ಷಿಯಾಯಿತು. ಜಯಲಲಿತಾ ಅಲ್ಲೇ ಕುಳಿತು ಬಿಟ್ಟರು. ಆಕೆಯ ವಕೀಲರಿಗೆ ಹತ್ತಿರ ಹೋಗುವ ಧೈರ್ಯವೂ ಇರಲಿಲ್ಲ. ಅದರಲ್ಲೊಬ್ಬರು ಹಿರಿಯ ವಕೀಲರು ಧೈರ್ಯ ಮಾಡಿ ಜಯಲಲಿತಾ ಹತ್ತಿರ ಹೋದರು. ಆಗ ಆಕೆ ಕೇಳಿದ್ದು ಒಂದೇ 'ಎನ್ನ ಪನ್ನಿಟ್ರೆ? (ನೀವು ಏನು ಮಾಡಿದಿರಿ)?'
ಜೈಲು ಸೇರಿದ ಜಯಾ
ಜಯಲಲಿತಾರನ್ನು ಜೈಲಿಗೆ ಹೋಗಲು ಸೂಚಿಸಲಾಯಿತು. ಜಯಲಲಿತಾ ಜೈಲಿನ 23ನೇ ಕೋಣೆಗೆ ಹೋಗುತ್ತಿದ್ದಂತೆ ಆಕೆಯ ಸಂಪುಟದ ಮಂತ್ರಿಗಳೆಲ್ಲಾ ಚಿಕ್ಕಮಕ್ಕಳಂತೆ ಬಿಕ್ಕಿ ಬಿಕ್ಕಿ ಅಳಲು ಆರಂಭಿಸಿದ್ದರು. ಅಳುವವರ ಸಾಲಿನಲ್ಲಿ ಒ ಪನ್ನೀರ್ ಸೆಲ್ವಂ ಮೊದಲ ಸಾಲಿನಲ್ಲಿದ್ದರು. ಅವರೆಲ್ಲರೂ ಸ್ಥಳದಿಂದ ಹೋಗಲು ಸಿದ್ಧರಿರಲಿಲ್ಲ. ಕೊನೆಗೆ ಸಂಜೆ 6 ಗಂಟೆ ಸುಮಾರಿಗೆ ಅವರನ್ನೆಲ್ಲಾ ಜೈಲಿನ ಬಳಿ ಹೋಗಲು ಅವಕಾಶ ನೀಡಲಾಗಿತ್ತು. ಕೆಲವರು ಜೈಲಿನ ಹೊರಗೆಯೇ ಕುಳಿತುಕೊಂಡು ಬಿಟ್ಟರು. ಕೆಲವರು ಅಮ್ಮ ಜಾಮೀನು ಮೂಲಕ ಹೊರಬರುವವರೆಗೂ ಅಲ್ಲೇ ಇದ್ದರು. ಅಮ್ಮ ಹೊರಬಂದಿದ್ದು 2 ತಿಂಗಳ ನಂತರ.
ಪನ್ನೀರ್ ಸೆಲ್ವಂ ಮುಖ್ಯಮಂತ್ರಿ
ಜೈಲಿನಲ್ಲಿದ್ದ ಜಯಲಲಿತಾ ಪನ್ನೀರ್ ಸೆಲ್ವಂರನ್ನು ಮುಖ್ಯಮಂತ್ರಿ ಹುದ್ದೆಗೆ ಆಯ್ಕೆ ಮಾಡಿದ್ದರು. ಸೆಲ್ವಂ ಪ್ರಮಾಣ ವಚನಕ್ಕೊಮ್ಮೆ ಸಚಿವರೆಲ್ಲಾ ಹೋಗಿ ಬಂದಿದ್ದರು. ನಂತರದ ಎರಡು ತಿಂಗಳು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಿಂದಲೇ ತಮಿಳುನಾಡಿನ ಆಡಳಿತ ನಡೆಸಲಾಗಿತ್ತು.
ಜಯಾ ಪ್ರತಿರೂಪ
ಜಯಲಲಿತಾ ಪ್ರತಿರೂಪದಂತೆ ಕಾಣುತ್ತಿರುವವರು ಶಶಿಕಲಾ. ಆಕೆ ನೋಟ, ಉಡುಗೆ ತೊಡುಗೆ, ಹಾವಭಾವ ಎಲ್ಲದರಲ್ಲೂ ಜಯಲಲಿತಾರನ್ನೇ ಹೋಲುತ್ತಾರೆ. ಆಕೆ ಬೆಂಗಳೂರಿಗೆ ಬರುವ ಮೊದಲು ಜಯಲಲಿತಾರ ಸಂಮಾಧಿಗೆ ಬೇಟಿ ನೀಡಿ ನಮನ ಸಲ್ಲಿಸಿ ಬಂದು ಕೋರ್ಟಿಗೆ ಶರಣಾಗಿದ್ದಾರೆ.
ಪರಿಸ್ಥಿತ ಬದಲಾಗಿತ್ತು
ಶಶಿಕಲಾ ಬೆಂಗಳೂರಿಗೆ ಬಂದಾಗ ಪರಿಸ್ಥಿತಿ ಪೂರ್ತಿ ಬದಲಾಗಿತ್ತು. ಸಚಿವರಾಗಲೀ ಶಾಸಕರಾಗಲಿ ಆಕೆಯ ಜತೆ ಬೆಂಗಳೂರಿಗೆ ಬಂದಿರಲಿಲ್ಲ. ಬೆಂಬಲಿಗರ ಬದಲು ಶಶಿಕಲಾ ದ್ವೇಷಿಗಳು ಕೋರ್ಟ್ ಆವರಣದ ಹೊರಗೆ ನೆರೆದಿದ್ದರು. ಪೊಲೀಸರು ಮಾತ್ರ ಒ ಪನ್ನೀರ್ ಸೆಲ್ವಂ ಗುಂಪಿನವರು ಮತ್ತು ಕಾವೇರಿ ವಿಚಾರದಲ್ಲಿ ಸಿಟ್ಟಿದ್ದವರು ಗಲಾಟೆ ಎಬ್ಬಿಸಿದರು ಎನ್ನುತ್ತಾರೆ.
ಅಭಿಮಾನಿಗಳು ಯಾರೂ ಇಲ್ಲ
ಶಶಿಕಲಾ ಎಸ್.ಯು.ವಿ 5:15ರ ಸುಮಾರಿಗೆ ಬೆಂಗಳೂರಿಗೆ ಬಂತು. ಆದರೆ ಗಮನಿಸಬೇಕಾದ ಅಂಶ ಎಂದರೆ ಆಕೆಯ ಕಾರು ಬಂದಾಗ ಅಭಿಮಾನಿಗಳ ಕೊರತೆ ಕಾಣಿಸುತ್ತಿತ್ತು. ಬದಲಿಗೆ ಆಕೆಯ ವಿರೋಧಿಗಳೇ ಹೆಚ್ಚಾಗಿದ್ದರು. ಜೈಲಿನಲ್ಲಿ ಆಕೆ ಬಂದಾಗ ಲೋಕಸಭಾ ಉಪ ಸಭಾಪತಿ ತಂಬಿದೊರೈ ಮತ್ತು ಆಕೆಯ ಗಂಡ ನಟರಾಜನ್ ಮಾತ್ರ ಜೈಲಿನ ಬಳಿ ಇದ್ದರು. ನಟರಾಜನ್ ಆಗೆಯನ್ನೊಮ್ಮೆ ಅಪ್ಪಿ ಜೈಲಿನೊಳಕ್ಕೆ ಕಳುಹಿಸಿಕೊಟ್ಟರು.
ಹೊರಗೂ ಯಾರೂ ಇಲ್ಲ
ಜಯಲಲಿತಾಗಾಗಿ ಕಾಯುತ್ತಿದ್ದ ಅಭಿಮಾನಿಗಳಂತೆ ಈಕೆಗೆ ಯಾರೂ ಕಾಯುತ್ತಿಲ್ಲ. ಜೈಲಿನ ಗೇಟು ಹಿಡಿದು ಅಳುತ್ತಿರುವವರೂ ಯಾರು ಇಲ್ಲ. ಸಂಪುಟವೂ ಜೈಲಿನ ಹೊರಗೆಯೇನೂ ನೆರೆದಿಲ್ಲ. ಅಂತಿಮವಾಗಿ ಏನು ಹೇಳಬಹುದೆಂದರೆ ಚಿನ್ನಮ್ಮ ಅಮ್ಮ ಆಗಲು ಸಾಧ್ಯವಿಲ್ಲ.