ಬಂಧನ ಭೀತಿಯ ಬಗ್ಗೆ ಡಿಕೆ ಶಿವಕುಮಾರ್ ಏನು ಹೇಳಿದರು?
ಬೆಂಗಳೂರು, ಸೆಪ್ಟೆಂಬರ್ 08: ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಸೋಮವಾರ ಅಥವಾ ಮಂಗಳವಾರ ಮಂತ್ರಿ ಡಿ.ಕೆ.ಶಿವಕುಮಾರ್ ಅವರು ಬಂಧನವಾಗುವ ಸಾಧ್ಯತೆ ಇದೆ.
ತಮ್ಮ ಬಂಧನದ ಸುದ್ದಿಯ ಬಗ್ಗೆ ಮಾತನಾಡಿದ ಡಿ.ಕೆ.ಶಿವಕುಮಾರ್ ಅವರು, ಇಡಿ ಇಲಾಖೆ ನನ್ನ ಮೇಲೆ ಎಫ್ಐಆರ್ ದಾಖಲಿಸಿರುವ ಬಗ್ಗೆ ನನಗೆ ಈವರೆಗೆ ಮಾಹಿತಿ ಇಲ್ಲ ಎಂದರು.
ಈಗಾಗಲೇ ಕೇಂದ್ರವು ದುರುದ್ದೇಶಪೂರ್ವಕವಾಗಿ ನನ್ನ ಮೇಲೆ ಕೆಲವು ಕೇಸುಗಳನ್ನು ದಾಖಲಿಸಿದೆ. ಅದಕ್ಕೆ ಸಂಬಂಧಪಟ್ಟಂತೆ ನ್ಯಾಯಾಲಯ ವ್ಯವಸ್ಥೆಗೆ ಗೌರವ ಕೊಟ್ಟು, ಆದಾಯ ತೆರಿಗೆ ಅಧಿಕಾರಿಗಳಿಗೆ ಗೌರವ ಕೊಟ್ಟು ಎಲ್ಲ ಪ್ರಕರಣಗಳನ್ನು ನ್ಯಾಯಯುತವಾಗಿಯೇ ಎದುರಿಸುತ್ತಿದ್ದೇನೆ. ಇಡಿ ಪ್ರಕರಣ ದಾಖಲಿಸಿದರೆ ಅದನ್ನೂ ಎದುರಿಸುತ್ತೇನೆ ಎಂದಿದ್ದಾರೆ.
ಡಿಕೆಶಿ ವಿರುದ್ಧ ಷಡ್ಯಂತ್ರ: ಖುದ್ದು ಮೋದಿಗೆ ಮೊರೆ ಹೋದ ಡಿಕೆ ಸುರೇಶ್
ಯಡಿಯೂರಪ್ಪ ಅವರು ತಮ್ಮ ವಿರುದ್ಧ ಐಟಿ ಇಲಾಖೆಗೆ ಪತ್ರ ಬರೆದಿದ್ದಾರೆ ಎಂಬ ಬಗ್ಗೆ ಮಾತನಾಡಿದ ಡಿ.ಕೆ.ಶಿವಕುಮಾರ್ ಅವರು, ಯಡಿಯೂರಪ್ಪ ಅವರಿಗೆ ಯಾರಾದರೂ ಸರಿಯಾಗಿ ಮಾರ್ಗದರ್ಶನ ಮಾಡಬೇಕು ಎಂದು ಮಾರ್ಮಿಕವಾಗಿ ನುಡಿದರು.
ತಪ್ಪು ಮಾಡಿದ್ರೆ ಜೈಲಿಗೆ ಹೋಗೋಣ, ಇಲ್ಲದಿದ್ರೆ ಏಕೆ ಹೆದರಿಕೆ? ಎಂದ ಡಿಕೆಶಿ
ಡಿ.ಕೆ.ಸುರೇಶ್ ಬಿಡುಗಡೆ ಮಾಡಿರುವ ಪತ್ರ ನಕಲಿ ಎಂದು ಯಡಿಯೂರಪ್ಪ ಅವರ ಹೇಳಿಕೆಗೂ ಮಾರ್ಮಿಕವಾಗಿಯೇ ಪ್ರತಿಕ್ರಿಯಿಸಿದ ಡಿ.ಕೆ.ಶಿವಕುಮಾರ್ ಅವರು, 'ಆ ಪತ್ರ ನಕಲಿ ಆಗಿದ್ದರೆ ಒಳ್ಳೆಯದು. ಹಣ್ಣು ಇದ್ದ ಮರಕ್ಕೆ ಕಲ್ಲು ಬೀಳುವುದು ಹೆಚ್ಚು ಹಾಗಾಗಿ ನನ್ನನ್ನೇ ಟಾರ್ಗೆಟ್ ಮಾಡುತ್ತಿದ್ದಾರೆ' ಎಂದು ಅವರು ಹೇಳಿದರು.