ಬೆಂಗಳೂರು-ಮೈಸೂರು ನಡುವೆ ಮತ್ತೆ ವಿಮಾನ ಸೇವೆ?
ಬೆಂಗಳೂರು, ಆಗಸ್ಟ್ 01 : ಬೆಂಗಳೂರು-ಮೈಸೂರು ನಡುವೆ ವಿಮಾನಯಾನ ಸೇವೆ ಪುನಃ ಆರಂಭವಾಗುವ ನಿರೀಕ್ಷೆ ಇದೆ. ದಸರಾಕ್ಕೆ ಆಗಮಿಸುವ ಪ್ರಯಾಣಿಕರನ್ನು ಸೆಳೆಯಲು ಈ ಎರಡೂ ನಗರಗಳ ನಡುವೆ ವಿಮಾನ ಸಂಚಾರ ಆರಂಭಿಸಲು ಸಿದ್ಧತೆ ನಡೆದಿದೆ.
ಅಕ್ಟೋಬರ್ನಲ್ಲಿ ದಸರಾ ನಡೆಯಲಿದ್ದು ಈ ಸಮಯದಲ್ಲಿ ಬೆಂಗಳೂರು-ಮೈಸೂರು ನಡುವೆ ವಿಮಾನ ಸೇವೆ ಆರಂಭಿಸಲು ನಿರ್ಧರಿಸಲಾಗಿದೆ. 'ಕೇಂದ್ರ ವಿಮಾನಯಾನ ಪ್ರಾಧಿಕಾರಕ್ಕೆ ಈ ಕುರಿತು ಪ್ರಸ್ತಾವನೆ ಸಲ್ಲಿಸಲಾಗಿದೆ' ಎಂದು ಮೈಸೂರು ಜಿಲ್ಲಾಧಿಕಾರಿ ಸಿ.ಶಿಖಾ ಹೇಳಿದ್ದಾರೆ.[ಬೆಂಗಳೂರು-ಮೈಸೂರು ವಿಮಾನ ಸಂಚಾರ ಸ್ಥಗಿತ]
2015ರ ಸೆಪ್ಟೆಂಬರ್ 3ರಂದು ಅಲೆಯನ್ಸ್ ಏರ್ ಬೆಂಗಳೂರು-ಮೈಸೂರು ನಡುವೆ ವಿಮಾನ ಯಾನ ಸೇವೆಯನ್ನು ಆರಂಭಿಸಿತ್ತು. ಭಾನುವಾರ ಹೊರತುಪಡಿಸಿ ವಾರದಲ್ಲಿ ಆರು ದಿನ ವಿಮಾನ ಸಂಚಾರ ನಡೆಸುತ್ತಿತ್ತು. ಆದರೆ, 2015ರ ನವೆಂಬರ್ನಲ್ಲಿ ಪ್ರಯಾಣಿಕರ ಕೊರತೆಯಿಂದಾಗಿ ಸಂಚಾರ ಸ್ಥಗಿತಗೊಳಿಸಿತ್ತು.[ಹುಬ್ಬಳ್ಳಿ, ಬೆಳಗಾವಿ ವಿಮಾನ ನಿಲ್ದಾಣ ಅಭಿವೃದ್ಧಿ]
ಮೈಸೂರು ಜಿಲ್ಲಾಡಳಿತ ಸಲ್ಲಿಸಿರುವ ಪ್ರಸ್ತಾವನೆಗೆ ಅಲೆಯನ್ಸ್ ಏರ್ ಮೊದಲ ಹಂತದ ಸಮ್ಮತಿ ಸೂಚಿಸಿದೆ. 2016ರ ದಸರಾ ಸಂದರ್ಭದಲ್ಲಿ ಬೆಂಗಳೂರು-ಮೈಸೂರು ನಡುವೆ ವಿಮಾನ ಸೇವೆ ಒದಗಿಸಲು ಒಪ್ಪಿಗೆ ನೀಡಿದೆ....
ಮೊದಲು ಕಿಂಗ್ ಫಿಶರ್ ಹಾರಾಟ
ಬೆಂಗಳೂರು-ಮೈಸೂರು-ಚೆನ್ನೈ ನಡುವೆ 2010 ಅಕ್ಟೋಬರ್ 1ರಂದು ವಿಜಯ್ ಮಲ್ಯ ಒಡೆತನದ ಕಿಂಗ್ಫಿಶರ್ ವಿಮಾನ ಮೊದಲು ಹಾರಾಟ ನಡೆಸಿತ್ತು. ಈ ಮೂಲಕ ಮೈಸೂರಿಗರ ವಿಮಾನ ಹಾರಾಟದ ಕನಸನ್ನು ಅವರು ನನಸು ಮಾಡಿದ್ದರು. ಆದರೆ, ಇದು ಹೆಚ್ಚು ದಿನ ನಡೆಯಲಿಲ್ಲ. ನಷ್ಟದ ಹಿನ್ನಲೆಯಲ್ಲಿ ಸೇವೆ ಸ್ಥಗಿತವಾಯಿತು.
ಸ್ಪೈಸ್ ಜೆಟ್ ವಿಮಾನ ಹಾರಾಟ
2013ರಲ್ಲಿ ಸ್ಪೈಸ್ ಜೆಟ್ ಬೆಂಗಳೂರು-ಮೈಸೂರು ನಡುವೆ ವಿಮಾನ ಸಂಚಾರ ಆರಂಭಿಸಿತು. ಆದರೆ, ಇದೂ ಹೆಚ್ಚು ದಿನ ನಡೆಯಲಿಲ್ಲ. 2014ರ ಸೆಪ್ಟೆಂಬರ್ 5ರಿಂದ ಅದು ಕೂಡ ಹಾರಾಟ ನಿಲ್ಲಿಸಿತು. ಪ್ರಯಾಣಿಕರ ಕೊರತೆಯಿಂದ ಹಾರಾಟ ನಿಂತು ಹೋಯಿತು.
ಅಲೆಯನ್ಸ್ ಏರ್ ಹಾರಾಟ
2015ರ ಸೆಪ್ಟೆಂಬರ್ 5ರಂದು ಅಲೆಯನ್ಸ್ ಏರ್ ಬೆಂಗಳೂರು-ಮೈಸೂರು ನಡುವೆ ವಿಮಾನ ಯಾನ ಸೇವೆಯನ್ನು ಆರಂಭಿಸಿತು. ಪುನಃ ಉಭಯ ನಗರಗಳ ನಡುವೆ ವಿಮಾನ ಸಂಪರ್ಕ ಆರಂಭವಾಯಿತು. ಆದರೆ, ಎರಡು ತಿಂಗಳಿನಲ್ಲಿಯೇ ಪ್ರಯಾಣಿಕರ ಕೊರತೆ ನೆಪ ಹೇಳಿ ಸೇವೆಯನ್ನು ಸ್ಥಗಿತಗೊಳಿಸಲಾಯಿತು.
ದಸರಾ ಸಮಯದಲ್ಲಿ ಮಾತ್ರ ಹಾರಾಟ
ಈಗ 2016ರ ದಸರಾಕ್ಕೆ ಪ್ರವಾಸಿಗರನ್ನು ಸೆಳೆಯಲು ಪುನಃ ಬೆಂಗಳೂರು-ಮೈಸೂರು ನಡುವೆ ವಿಮಾನ ಸೇವೆ ಆರಂಭಿಸಲು ನಿರ್ಧರಿಸಲಾಗಿದೆ. ಮೈಸೂರು ಜಿಲ್ಲಾಡಳಿತ ಈ ಕುರಿತು ಸಲ್ಲಿಸಿದ್ದ ಪ್ರಸ್ತಾವನೆಗೆ ಅಲೆಯನ್ಸ್ ಏರ್ ಒಪ್ಪಿಗೆ ಕೊಟ್ಟಿದೆ. ಸರ್ಕಾರದ ಮಟ್ಟದಲ್ಲಿ ಈ ಕುರಿತು ಅಂತಿಮ ಮಾತುಕತೆ ನಡೆಯಬೇಕಾಗಿದೆ.