ಕನ್ನಡ ಕಲಿಯಲೇಬೇಕ್ : ಶ್ರೀವತ್ಸ ಕೃಷ್ಣಗೆ ಸಿದ್ದು ಟಾಂಗ್
ಕಲಬುರಗಿ, ಮಾರ್ಚ್ 18 : ಕರ್ನಾಟಕದ ಎಲ್ಲ ಅಧಿಕಾರಿಗಳು ಕನ್ನಡ ಕಲಿಯಲೇಬೇಕು, ಕನ್ನಡದಲ್ಲೇ ಮಾತಾಡಬೇಕು, ಎಲ್ಲ ವ್ಯವಹಾರಗಳಲ್ಲಿ ಕನ್ನಡವನ್ನೇ ಬಳಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗುಡುಗಿದ್ದಾರೆ.
ಕಳೆದ 10 ವರ್ಷಗಳಿಂದ ಕರ್ನಾಟಕದಲ್ಲಿಯೇ ಇದ್ದು ಕಾವೇರಿ ನೀರನ್ನು ಕುಡಿದು 'ಖಡಕ್' ಮಾತುಗಳ ಐಎಎಸ್ ಅಧಿಕಾರಿ ಶ್ರೀವತ್ಸ ಕೃಷ್ಣ ಅವರು ಕನ್ನಡವನ್ನು ಅತೀ ಹೀನಾಯವಾಗಿ ಕಾಣುತ್ತಿದ್ದಾರೆ ಎಂಬ ಆರೋಪ ಬಂದಿರುವ ಹಿನ್ನೆಲೆಯಲ್ಲಿ ಸಿದ್ದರಾಮಯ್ಯನವರು ಮೇಲಿನಂತೆ ಹೇಳಿಕೆ ನೀಡಿದ್ದಾರೆ. [ಕನ್ನಡ ವಿರೋಧಿ ಐಎಎಸ್ ಅಧಿಕಾರಿಯ ಬಣ್ಣ ಪಬ್ಲಿಕ್ ಆಯ್ತು]
ಕನ್ನಡವೇ ಕರ್ನಾಟಕದಲ್ಲಿ ಆಡಳಿತ ಭಾಷೆಯಾಗಿದ್ದು ಎಲ್ಲ ಐಎಎಸ್ ಅಧಿಕಾರಿಗಳು ಇದನ್ನು ಕಡ್ಡಾಯವಾಗಿ ಜಾರಿಗೆ ತರಬೇಕು. ಇದನ್ನು ಜಾರಿಗೆ ತರಲು ವಿಫಲರಾದವರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಸಿದ್ದರಾಮಯ್ಯ ಕಲಬುರಗಿಯಲ್ಲಿ ಶನಿವಾರ ಹೇಳಿದರು.
ಸಾರ್ವಜನಿಕ ಉದ್ಯಮಿಗಳ ಕಾರ್ಯದರ್ಶಿಯಾಗಿರುವ ಶ್ರೀವತ್ಸ ಕೃಷ್ಣ ಅವರಿಗೆ ಕನ್ನಡ, ಕನ್ನಡಿಗರೆಂದರೆ ತಾತ್ಸಾರ, ಕನ್ನಡದಲ್ಲೇ ಇರಬೇಕಾಗಿದ್ದ ಕಡತಗಳನ್ನೆಲ್ಲ ಇಂಗ್ಲಿಷಿನಲ್ಲೇ ತರಬೇಕೆಂದು ಕೆಳ ಅಧಿಕಾರಿಗಳಿಗೆ ತಾಕೀತು ಮಾಡುತ್ತಾರೆಂದು ಅವರ ಮೇಲೆ ಆರೋಪವಿದೆ.
ದೆಹಲಿ ಮೂಲದ ಐಎಎಸ್ ಅಧಿಕಾರಿ ಶ್ರೀವತ್ಸ ಕೃಷ್ಣಗೆ ಕನ್ನಡ ಬರುವುದಿಲ್ಲವೆಂದಲ್ಲ, ಹರಕುಮುರುಕು ಕನ್ನಡ ಮಾತನಾಡುತ್ತಾರೆ. ಆದರೆ, ಮೊದಲಿನಿಂದಲೂ ಕನ್ನಡದ ಬಗ್ಗೆ ಅಸಡ್ಡೆ. ಹೀಗಾಗಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅವರಿಗೆ ನೋಟೀಸ್ ಜಾರಿ ಮಾಡಿತ್ತು.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್ ಜಿ ಸಿದ್ದರಾಮಯ್ಯನವರು, ಇಂಥವರ ವಿರುದ್ಧ ಕ್ರಮ ತೆಗೆದುಕೊಳ್ಳದಿದ್ದರೆ ಅವರಿಗೆ ಬುದ್ಧಿ ಬರುವುದಿಲ್ಲ. ತಿದ್ದಿಕೊಳ್ಳದಿದ್ದರೆ ಅವರನ್ನು ಕೆಲಸದಿಂದ ತೆಗೆದುಹಾಕಬೇಕೆಂದು ಶಿಫಾರಸು ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದರು.
ಈ ಹಿನ್ನೆಲೆಯಲ್ಲಿ ಸಿದ್ದರಾಮಯ್ಯನವರು ರಾಜ್ಯದಲ್ಲಿರುವ ಎಲ್ಲ ಸರಕಾರಿ ಅಧಿಕಾರಿಗಳು ಕನ್ನಡದಲ್ಲೇ ವ್ಯವಹರಿಸಬೇಕು, ಕನ್ನಡವನ್ನೇ ಮಾತನಾಡಬೇಕು ಎಂದು ಹೇಳಿದ್ದಾರೆ. ಈ ಮಾತನ್ನು ಶ್ರೀವತ್ಸ ಕೃಷ್ಣ ಕಿವಿಗೆ ಹಾಕಿಕೊಳ್ಳುತ್ತಾರಾ?