ಹೋಟೆಲು ಶಾಲೆ ಅಂಗಡಿ ಮುಂಗಟ್ಟು ಎಲ್ಲ ತೆರೆದಿವೆ!
ಬೆಂಗಳೂರು, ನವೆಂಬರ್ 28 : ಪ್ರತಿಭಟನೆ ಪ್ರತಿಯೊಬ್ಬ ಭಾರತೀಯನ ಜನ್ಮಸಿದ್ಧ ಹಕ್ಕು. ಭಾರತೀಯ ಸಂವಿಧಾನ ಅನುಚ್ಛೇದ 19(1)(ಬಿ) ಅಡಿಯಲ್ಲಿ, ಯಾವುದೇ ಶಸ್ತ್ರಾಸ್ತ್ರ ಹೊಂದರೆ, ಯಾವುದೇ ದಂಗೆ ಮಾಡದಂತೆ ಶಾಂತಿಯುತವಾಗಿ ಪ್ರತಿಭಟಿಸುವ ಹಕ್ಕು ಸಾರ್ವಜನಿಕರಿಗೆ ನೀಡಲಾಗಿದೆ.
ಪ್ರತಿಭಟನೆಯಲ್ಲೂ ನಾನಾ ರೂಪಗಳು. ಉಪವಾಸ ಸತ್ಯಾಗ್ರಹ, ಮೌನ ಮೆರವಣಿಗೆ, ಆಕಾಶವನ್ನೂ ಸೀಳುವಂಥ ಧಿಕ್ಕಾರಗಳು, ಕತ್ತೆಯ ಮೇಲೆ ಸವಾರಿ, ಚಾಪೆ ಹಾಸಿಕೊಂಡು ರೋಡಲ್ಲಿ ಮಲಗುವುದು ಇತ್ಯಾದಿ ಇತ್ಯಾದಿ. ಇವುಗಳಿಗೆ ಯಾವುದೇ ಹೆಸರಿರುವುದಿಲ್ಲ. ಆದರೆ, ಅಪನಗದೀಕರಣದ ವಿರುದ್ಧ ವಿರೋಧಪಕ್ಷದವರು ಘೋಷಿಸಿರುವ ಪ್ರತಿಭಟನೆಗೆ 'ಆಕ್ರೋಶ್ ದಿವಸ್' ಎಂಬ ಹೆಸರಿಟ್ಟಿದ್ದಾರೆ.
ಹೆಸರು ಕೇಳಿಯೇ, ದೇಶಾದ್ಯಂತ ಭಾರೀ ಪ್ರತಿಭಟನೆ ನಡೆಯಬಹುದು, ವ್ಯಾಪಾರ ವಹಿವಾಟೆಲ್ಲ ಬಂದ್ ಆಗಬಹುದು, ಹೋಟೆಲುಗಳೆಲ್ಲ ಬಂದ್ ಆಗಿ ಊಟಕ್ಕೆ ಜನರೇನು ಮಾಡಬೇಕು ಎಂಬಂಥ ಪ್ರಸಂಗ ಉದ್ಭವವಾಗಬಹುದು, ಪೆಟ್ರೋಲ್ ಇಲ್ಲದೆ ಜನ ಗಾಡಿಯನ್ನು ತಳ್ಳಿಕೊಂಡು ಹೋಗುವಂತಾಗಬಹುದು, ಆಟೋ ಸಿಗದಿರಬಹುದು, ಬಸ್ಸು ಬರದಿರಬಹುದು... ನಟರಾಜ ವಾಕಿಂಗೇ ಗತಿ ಎಂದು ಜನರು ಊಹಿಸಿದ್ದರು.
ದೇಶಾದ್ಯಂತ ಬಂದ್ ಅಂದ್ರೆ ಸುಮ್ನೇನಾ? ಹೀಗಾದ್ರೆ, ಸೋಮವಾರ ಮಕ್ಕಳ ಶಾಲೆಯ ಗತಿಯೇನು? ವ್ಯಾನ್ ಬರುತ್ತೋ ಇಲ್ವೋ? ಬಿಎಂಟಿಸಿ ಬಸ್ ಬರಲ್ಲ ಅಂದ್ರೆ ಮಕ್ಕಳನ್ನು ಶಾಲೆಗೆ ಹೇಗೆ ಕಳಿಸುವುದು? ಒಂದು ವೇಳೆ ಪ್ರತಿಭಟನೆ ತಾರಕಕ್ಕೇರಿ ಹಿಂಸಾಚಾರಕ್ಕೆ ತಿರುಗಿದರೆ ಮಕ್ಕಳ ಗತಿಯೇನು? ಶಾಲೆಗಳು ಇನ್ನೂ ರಜಾ ಘೋಷಿಸಿಲ್ಲ ಇತ್ಯಾದಿಯಾಗಿ ಪಾಲಕರು ಕಳವಳಗೊಂಡಿದ್ದರು.
ಬೇರೆ ಪ್ರತಿಭಟನೆ ಅಥವಾ ಬಂದ್ ಗಳಾಗಿದ್ದರೆ ಕಚೇರಿಗೆ, ದೈನಂದಿನ ಕೆಲಸಗಳಿಗೆ ಹೋಗುವವರಿಗಿಂತ ಸಂತುಷ್ಟರು ಇನ್ನೊಬ್ಬರು ಇರುತ್ತಿರಲಿಲ್ಲ. ಭಾನುವಾರ ಮುಗಿದ ಕೂಡಲೆ ಸೋಮವಾರವೂ ರಜಾ ಸಿಗುತ್ತದೆಂದಾರೆ ಯಾರು ಬೇಡ ಅಂತಾರೆ? ಮಂಡೆ ಅಂದ್ರೆ ಕೆಲವರಿಗೆ 'ಮಂಡೆ' ಬಿಸಿಯಾಗುತ್ತದೆ.
ಅಚ್ಚರಿಯ ಸಂಗತಿಯೆಂದರೆ, ಕಾಂಗ್ರೆಸ್ ನೇತೃತ್ವದಲ್ಲಿ ಕರೆಯಲಾಗಿರುವ 'ಆಕ್ರೋಶ್ ದಿವಸ್'ಗೆ ಬೆಂಗಳೂರಿನಲ್ಲಿ ಅಂತಹ ಪ್ರತಿಸ್ಪಂದನೆ ವ್ಯಕ್ತವಾಗುತ್ತಿಲ್ಲ. ಆಟೋ ಡ್ರೈವರೊಬ್ಬ 'ಈ ಪ್ರತಿಭಟನೆಗೆ ನನ್ನ ಬೆಂಬಲವಿಲ್ಲ' ಎಂಬ ಸ್ಟಿಕ್ಕರ್ ಅಂಟಿಸಿಕೊಂಡು ಬಿಂದಾಸ್ ಆಗಿ ಓಡಾಡುತ್ತಿದ್ದರು.
ಈ ಪ್ರತಿಭಟನೆಯ ದಿನದಂದು ಬಿಎಂಟಿಸಿ, ಕೆಎಸ್ಸಾರ್ಟಿಸಿ, ಮೆಟ್ರೋ ಸಂಚರಿಸುವುದಿಲ್ಲ ಎಂದು ಗೃಹಮಂತ್ರಿ ಡಾ. ಜಿ. ಪರಮೇಶ್ವರ್ ಅವರೇ ಘಂಟಾಘೋಷಿಸಿದ್ದರು. ಆದರೆ, ಆದದ್ದಾದರೂ ಏನು? ಈ ಇಲಾಖೆಗಳೆಲ್ಲ ಗೃಹಸಚಿವರ ಮಾತಿಗೆ ಕವಡೆಕಾಸಿನ ಕಿಮ್ಮತ್ತು ನೀಡಿಲ್ಲ. ಬೆಂಗಳೂರು ಮಾತ್ರವಲ್ಲ, ಇಡೀ ಕರ್ನಾಟಕದಲ್ಲಿ ಎಲ್ಲೂ ಸಂಚಾರದಲ್ಲಿ ಅಂತಹ ವ್ಯತ್ಯಯವಾಗಿಲ್ಲ.
ಇನ್ನು ಸೋಷಿಯಲ್ ಮೀಡಿಯಾದಲ್ಲಿ, 'ಈ ಬಂದ್ ಗೆ ಯಾವುದೇ ಕಾರಣಕ್ಕೂ ಬೆಂಬಲ ನೀಡಬಾರದು. ರಜಾ ತೆಗೆದುಕೊಳ್ಳುವುದು ಅತ್ಲಾಗಿರಲಿ, ಈ ದಿನ ಇನ್ನೂ ಮೂರು ಗಂಟೆ ಹೆಚ್ಚಾಗಿಯೇ ಕೆಲಸ ಮಾಡುತ್ತೇವೆ' ಎಂದು ವಿರೋಧಪಕ್ಷಗಳಿಗೆ ಬಹಿರಂಗ ಸವಾಲು ಒಡ್ಡಿದ್ದಾರೆ. ಇವರೆಲ್ಲ ಬಿಜೆಪಿ ಬೆಂಬಲಿಗರಲ್ಲ, ಮೋದಿ ನಡೆಸುತ್ತಿರುವ ಭ್ರಷ್ಟಾಚಾರದ ವಿರುದ್ಧದ ಸಮರಕ್ಕೆ ಬೆಂಬಲವಾಗಿ ನಿಂತವರು.