ರಾಜ್ಯದಲ್ಲಿ ದೇಶದ ಪ್ರಪ್ರಥಮ ಕೃಷಿ ಬೆಲೆ ಆಯೋಗ ಅಸ್ತಿತ್ವಕ್ಕೆ
ಕರ್ನಾಟಕದಲ್ಲಿ ಅಸ್ತಿತ್ವಕ್ಕೆ ಬಂದಿರುವ ಕೃಷಿ ಬೆಲೆ ಆಯೋಗವು ಈ ಮಾದರಿಯಲ್ಲಿ ದೇಶದಲ್ಲೇ ಜಾರಿಗೊಂಡ ಮೊದಲ ವ್ಯವಸ್ಥೆ. ಭಾರತೀಯ ಕೃಷಿ ವ್ಯವಸ್ಥಾಪಕ ಸಂಸ್ಥೆಯ ಅಧ್ಯಕ್ಷ ಡಾ. ವಿ.ಜಿ. ಧನ ಕುಮಾರ್ ಹೇಳಿಕೆ.
ಬೆಂಗಳೂರು, ಸೆಪ್ಟೆಂಬರ್ 6: ರಾಜ್ಯ ಸರ್ಕಾರವು ಜಾರಿಗೊಳಿಸಿರುವ ಕೃಷಿ ಬೆಲೆ ಆಯೋಗದ ಮೂಲಕ ರೈತರ ಬೆಳೆಗಳಿಗೆ ಸೂಕ್ತವಾದ ಬೆಲೆ ನಿಗದಿಗೊಳಿಸುವ ವ್ಯವಸ್ಥೆ ದೇಶದಲ್ಲಿಯೇ ಪ್ರಪ್ರಥಮವಾದದ್ದು ಎಂದು ಭಾರತೀಯ ತೋಟಗಾರಿಕೆ ನಿರ್ವಹಣಾ ಸಂಸ್ಥೆಯ ಅಧ್ಯಕ್ಷ ಡಾ. ವಿ.ಜಿ. ಧನಕುಮಾರ್ ಅವರು ಶ್ಲಾಘಿಸಿದ್ದಾರೆ.
ಭಾರತೀಯ ತೋಟಗಾರಿಕೆ ನಿರ್ವಹಣಾ ಸಂಸ್ಥೆ ಹಾಗೂ ಕರ್ನಾಟಕ ಕೃಷಿ ಬೆಲೆ ಆಯೋಗದ ಸಹ ಭಾಗಿತ್ವದಲ್ಲಿ ನಡೆಯುತ್ತಿರುವ ವಿವಿಧ ತೋಟಗಾರಿಕಾ ಬೆಳೆಗಳಿಗೆ ಸಂಬಂಧಪಟ್ಟ ಸಂಘ ಸಂಸ್ಥೆಗಳ ಬಲವರ್ಧನಾ ಕಾರ್ಯಗಾರವನ್ನು ಉದ್ದೇಶಿಸಿ ಮಾತನಾಡಿದ ಅವರು, ರಾಜ್ಯ, ಕೇಂದ್ರ ಮತ್ತು ಮಾರುಕಟ್ಟೆಗಳು ಒಂದಾಗಬೇಕು. ಆಗ ನಮ್ಮ ರೈತರ ಉತ್ಪನ್ನಗಳಿಗೆ ಉತ್ತಮ ಬೆಲೆ ಸಿಗುತ್ತದೆ. ರೈತರು ನಮ್ಮ ದೇಶದ ಬೆನ್ನೆಲುಬು. ಅವರು ಬೆಳೆಯುವ ಬೆಳೆಗಳಿಗೆ ಉತ್ತಮವಾದ ಬೆಲೆ ಸಿಗುವ ರೀತಿ ಸರ್ಕಾರ ಮತ್ತು ಮಾರುಕಟ್ಟೆಗಳು ಗಮನ ಹರಿಸಬೇಕು ಎಂದರು.
ಅಲ್ಲದೆ, ದೇಶದಲ್ಲಿಯೇ, ಕರ್ನಾಟಕ ರಾಜ್ಯದ ಬೆಂಗಳೂರಿನಲ್ಲಿ ಮಾತ್ರ ಭಾರತೀಯ ತೋಟಗಾರಿಕೆ ನಿರ್ವಹಣಾ ಸಂಸ್ಥೆ ಇದೆ. ಇದರ ಉಪಯೋಗವನ್ನು ನಮ್ಮ ರೈತರು ಮತ್ತು ಸಂಘ ಸಂಸ್ಥೆಗಳು ಪಡೆದುಕೊಂಡು, ರೈತರ ಉತ್ಪನ್ನಗಳಿಗೆ ಉತ್ತಮ ಮಾರುಕಟ್ಟೆ ಸಿಗುವ ರೀತಿ ವ್ಯವಸ್ಥೆ ಮಾಡಬೇಕು ಎಂದು .
ಈ ಸಂದರ್ಭದಲ್ಲಿ ಮಾತನಾಡಿದ ರೈತರಿಗೆ ಕರ್ನಾಟಕ ಕೃಷಿ ಬೆಲೆ ಆಯೋಗದ ಅಧ್ಯಕ್ಷ ಡಾ.ಟಿ.ಎನ್.ಪ್ರಕಾಶ್ ಕಮ್ಮರಡಿ, ಅವರವರ ಉತ್ಪನ್ನಗಳಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಸಿಗುವಂತಾಗಬೇಕು ಎಂದು ಆಗ್ರಹಿಸಿದರು.
ರೈತರು ತಮ್ಮ ಬೆಳೆಗಳಿಗೆ ತಾವೇ ಬೆಲೆಯನ್ನು ತೀರ್ಮಾನಿಸಬೇಕು. ರೈತರ ಬೆಳೆಗಳಿಗೆ ಬೆಲೆ ಕಡಿಮೆ ಆದಾಗ ಸರ್ಕಾರ ನಮ್ಮ ಪರ ಬನ್ನಿ ಎಂಬುದಾಗಿ ನಿಲ್ಲಿಸಬೇಕು. ರೈತರನ್ನು ಬಿಟ್ಟರೆ ಬೇರೆ ಯಾವುದೇ ವ್ಯಾಪರಸ್ಥರು ತಮ್ಮ ಉತ್ಪನ್ನಗಳಿಗೆ ಅವರೇ ಬೆಲೆ ತೀರ್ಮಾನ ಮಾಡುತ್ತಾರೆ. ಕರ್ನಾಟಕದಲ್ಲಿ ರೈತರ ಉತ್ಪನ್ನಗಳಿಗೆ ಗುಂಪು ಮಾರಾಟ ವ್ಯವಸ್ಥೆಗೆ ಯೋಚಿಸಿ ಯೋಜನೆ ಮಾಡಿ ಸರ್ಕಾರಕ್ಕೆ ವರದಿ ನೀಡುತ್ತೇವೆ ಎಂದು ತಿಳಿಸಿದರು.
ರೈತನಲ್ಲಿ ದೇವರನ್ನು ಕಾಣುತ್ತೇವೆ. ನಮಗೆ ಹಸಿವಾದಾಗ ರೈತರನ್ನು ನೆನಪಿಸಿಕೊಳ್ಳಬೇಕು. ರೈತರು ಮತ್ತು ವಿನಿಗಳು ಸ್ನೇಹಿತರಾಗಿರಬೇಕು. ಇದಕ್ಕೆ ಸರ್ಕಾರದ ಸಹಕಾರ ತುಂಬಾ ಮುಖ್ಯ ಎಂದು ಅಡಿಕೆ ಮಾರಾಟ ಮಹಾಮಂಡಲಿ ಅಧ್ಯಕ್ಷ ಕೋಕಡಿ ಪದ್ಮನಾಭ ಭಟ್ ಅವರು ತಿಳಿಸಿದರು.
ಅಂತರ ರಾಷ್ಟ್ರೀಯ ಮಟ್ಟದಲ್ಲಿ ಕೃಷಿ ಉತ್ಪನಗಳಿಗೆ ಉತ್ತಮ ಬೆಲೆ ಸಿಗಬೇಕು. ಆಗ, ನಮ್ಮ ರೈತರ ಆದಾಯ ದುಪ್ಪಟಗೊಳ್ಳುತ್ತದೆ ಎಂದು ಕೃಷಿ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಡಿ.ಎಲ್.ಮಹೇಶ್ವರ್ ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಭಾರತೀಯ ತೋಟಗಾರಿಕೆ ನಿರ್ವಹಣಾ ಸಂಸ್ಥೆಯ ಅಧಿಕಾರಿಗಳು ಮತ್ತು ರೈತರು ಭಾಗವಹಿಸಿದರು.