ಬೆಂಗಳೂರಿನಿಂದ ಏರ್ ಶೋ ಸ್ಥಳಾಂತರ?, ಪರಮೇಶ್ವರ ಟ್ವೀಟ್
ಬೆಂಗಳೂರು, ಆಗಸ್ಟ್ 12 : ಉದ್ಯಾನ ನಗರಿ ಬೆಂಗಳೂರಿನಿಂದ ಏರ್ ಶೋ ಸ್ಥಳಾಂತರವಾಗಲಿದೆ ಎಂಬ ಸುದ್ದಿ ಹಬ್ಬಿತ್ತು. ಈಗ ಉಪ ಮುಖ್ಯಮಂತ್ರಿಗಳು ಈ ಬಗ್ಗೆ ಟ್ವಿಟ್ ಮಾಡಿದ್ದು, ರಕ್ಷಣಾ ಸಚಿವೆ ನಿರ್ಮಲಾ ಸೀತರಾಮನ್ ಅವರಿಂದ ಸ್ಪಷ್ಟನೆ ಕೇಳಿದ್ದಾರೆ.
11 ವರ್ಷಗಳಿಂದ ವಾಯುಪಡೆ ಬೆಂಗಳೂರಿನಲ್ಲಿ ಏರ್ ಶೋ ಆಯೋಜನೆ ಮಾಡುತ್ತಿತ್ತು. ಆದರೆ, ಈ ಬಾರಿ ಉತ್ತರ ಪ್ರದೇಶದಕ್ಕೆ ಏರ್ ಶೋ ಸ್ಥಳಾಂತರ ಮಾಡಲಿದ್ದಾರೆ ಎಂಬ ಸುದ್ದಿ ಕಳೆದ ವಾರ ಹಬ್ಬಿತ್ತು. ಬೆಂಗಳೂರಿಗೆ ಆಗಮಿಸಿದ್ದ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಈ ಬಗ್ಗೆ ಖಚಿತವಾದ ಹೇಳಿಕೆ ನೀಡಿರಲಿಲ್ಲ.
ಬೆಂಗಳೂರಿನಿಂದ ಏರೋ ಇಂಡಿಯಾ ಲಕ್ನೋಗೆ ಶಿಫ್ಟ್ ?
ಉಪ ಮುಖ್ಯಮಂತ್ರಿ ಮತ್ತು ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರು ಟ್ವಿಟ್ ಮಾಡಿದ್ದು ಏರ್ ಶೋ ಬೆಂಗಳೂರಿನಲ್ಲಿ ನಡೆಯುವುದಿಲ್ಲ. ಈ ಬಗ್ಗೆ ರಕ್ಷಣಾ ಸಚಿವರು ಸ್ಪಷ್ಟನೆ ನೀಡಬೇಕು ಎಂದು ಹೇಳಿದ್ದಾರೆ. ಇದರಿಂದಾಗಿ ಏರ್ ಶೋ ಸ್ಥಳಾಂತರವಾಗಿದೆಯೇ ? ಎಂಬ ಪ್ರಶ್ನೆ ಎದ್ದಿದೆ.
Reports of #AeroIndia being moved out of Bengaluru are very unfortunate.
— Dr. G Parameshwara (@DrParameshwara) August 11, 2018
We have been India's Defence Hub since Independence, but under the NDA we are constantly losing key defense projects and flagship programs.
I request @nsitharaman to clarify her stand on the issue.
ನಿರ್ಮಲಾ ಸೀತಾರಾಮನ್ ಅವರು ಕರ್ನಾಟಕ ವಿಧಾನಸಭೆಯಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದಾರೆ. ಅವರು ರಕ್ಷಣಾ ಸಚಿವರಾದ ಬಳಿಕ ಏರ್ ಶೋ ಸ್ಥಳಾಂತರದ ಬಗ್ಗೆ ಸುದ್ದಿಗಳು ಹರಿದಾಡುತ್ತಿದ್ದವು.
ಏರೋ ಇಂಡಿಯಾ ಸ್ಥಳಾಂತರಿಸದಂತೆ ಸಂಸದ ರಾಜೀವ್ ಗೌಡ ಮನವಿ
ಏರ್ ಶೋ ವನ್ನು ಉತ್ತರ ಪ್ರದೇಶದ ಲಕ್ನೋಗೆ ಸ್ಥಳಾಂತರ ಮಾಡುವಂತೆ ಯೋಗಿ ಆದಿತ್ಯನಾಥ್ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದರು. ಲಕ್ನೋದ ಭಕ್ಷಿತಾ ತಲಾಬ್ ವಾಯುನೆಲೆಯಲ್ಲಿ ಏರ್ ಶೋ ನಡೆಸುವಂತೆ ಮನವಿಯಲ್ಲಿ ತಿಳಿಸಿದ್ದರು.
2017ರ ಫೆಬ್ರವರಿ 13 ರಿಂದ ಐದು ದಿನಗಳ ಕಾಲ ಏರ್ ಶೋ ಬೆಂಗಳೂರಿನಲ್ಲಿ ನಡೆದಿತ್ತು. ಆಗ ಮುಂದಿನ ಏರ್ ಶೋ ದಿನಾಂಕ ಮತ್ತು ಸ್ಥಳವನ್ನು ಘೋಷಣೆ ಮಾಡಿರಲಿಲ್ಲ. ಯಲಹಂಕ ವಾಯುನೆಲೆಯಲ್ಲಿ ಈ ಬಾರಿ ಏರ್ ಶೋ ನಡೆಸಲು ಅಭ್ಯಾಸ, ಅಗತ್ಯ ಕೆಲಸಗಳನ್ನು ಇನ್ನೂ ಕೈಗೆತ್ತಿಕೊಂಡಿಲ್ಲ.
ಏರ್ ಶೋವನ್ನು ಗೋವಾಗೆ ಸ್ಥಳಾಂತರ ಮಾಡಬೇಕು ಎಂಬ ಚರ್ಚೆಯೂ ನಡೆಯುತ್ತಿತ್ತು. ಈಗ ಉತ್ತರ ಪ್ರದೇಶದ ಮನವಿಯಂತೆ ಲಕ್ನೋಗೆ ಸ್ಥಳಾಂತರ ಮಾಡುವ ಸಾಧ್ಯತೆ ಹೆಚ್ಚಾಗಿದೆ.