ಏರೋ ಇಂಡಿಯಾ ದೆಸೆಯಿಂದ ಮಾಂಸಪ್ರಿಯರಿಗೆ ಉಪವಾಸ!
ಯಲಹಂಕ ವಾಯುನೆಲೆ ಸುತ್ತಮುತ್ತಲ ಪ್ರದೇಶಗಳ 300ಕ್ಕೂ ಹೆಚ್ಚು ಮಾಂಸ ಮಾರಾಟ ಅಂಗಡಿಗಳನ್ನು ಮುಚ್ಚಲು ಬಿಬಿಎಂಪಿ ಆದೇಶಿಸಿದೆ.
ಬೆಂಗಳೂರು, ಫೆಬ್ರವರಿ 09: ಯಲಹಂಕ ವಾಯುನೆಲೆ ಸುತ್ತಮುತ್ತಲ ಪ್ರದೇಶಗಳ 300ಕ್ಕೂ ಹೆಚ್ಚು ಮಾಂಸ ಮಾರಾಟ ಅಂಗಡಿಗಳನ್ನು ಮುಚ್ಚಲು ಬಿಬಿಎಂಪಿ ಆದೇಶಿಸಿದೆ.
ಏರ್ ಶೋ ವೇಳೆ ಹಕ್ಕಿಗಳ ಡಿಕ್ಕಿ ಹೊಡೆತದಿಂದ ಅನಾಹುತ ಸಂಭವಿಸಬಾರದು ಎಂಬ ಮುನ್ನಚ್ಚೆರಿಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಐದು ದಿನಗಳ ಏರೋ ಇಂಡಿಯಾ 2017 ವೈಮಾನಿಕ ಪ್ರದರ್ಶನ ಫೆಬ್ರವರಿ 18ರಂದು ಮುಕ್ತಾಯವಾಗಲಿದೆ.
ಫೆ. 14 ರಿಂದ ಫೆಬ್ರವರಿ 18ರಂದು ಏರೊ ಇಂಡಿಯಾ ಮುಗಿಯುವವರೆಗೂ ಮಾಂಸದ ಅಂಗಡಿಗಳನ್ನು ತೆರೆಯಬಾರದು. ಐದು ದಿನಗಳ ಪ್ರದರ್ಶನ ವೇಳೆ ಹೋಟೆಲ್ ಮತ್ತು ರೆಸ್ಟೋರೆಂಟ್ಗಳು ಕೇವಲ ಸಸ್ಯಾಹಾರಿ ಊಟ- ಉಪಾಹಾರವನ್ನಷ್ಟೇ ಸಿದ್ಧಪಡಿಸುವಂತೆ ಸೂಚಿಸಲಾಗಿದೆ.
"ಈ ಭಾಗದಲ್ಲಿ 296 ಮಾಂಸದ ಅಂಗಡಿಗಳು ಕಾರ್ಯ ನಿರ್ವಹಿಸುತ್ತಿವೆ. ಇವುಗಳನ್ನು ಮುಚ್ಚುವ ಜತೆಗೆ ಈ ವಲಯದ ಎಲ್ಲ 11 ವಾರ್ಡ್ಗಳಲ್ಲಿ ಹೋಟೆಲ್ ಮತ್ತು ರೆಸ್ಟೋರೆಂಟ್ಗಳು ಈ ಅವಧಿಯಲ್ಲಿ ಕೇವಲ ಸಸ್ಯಾಹಾರಿ ಊಟ ಸಿದ್ಧಪಡಿಸುವಂತೆ ಸೂಚಿಸಲಾಗಿದೆ. ಇದನ್ನು ಉಲ್ಲಂಘಿಸುವವರಿಗೆ 2 ಸಾವಿರ ರೂಪಾಯಿ ದಂಡ ವಿಧಿಸಲಾಗುವುದು" ಎಂದು ಪಶುಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ವಿ.ರಮೇಶ್ ಹೇಳಿದ್ದಾರೆ.