ರಮ್ಯಾ ಪ್ರಶ್ನೆಗೆ ಉತ್ತರ ಕೊಟ್ಟರೆ 25 ಸಾವಿರ ರು. ಬಹುಮಾನ! ಹೇಗೆ?
ಕಾಂಗ್ರೆಸ್ ನಾಯಕಿ ರಮ್ಯಾಗೆ ಟ್ವಿಟರ್ ನಲ್ಲಿ ತರಾಟೆ. ಪ್ರಧಾನಿ ಮೋದಿ ಟೀಕಿಸಿದ್ದಕ್ಕೆ ಬೈಗುಳ. ಪ್ರವಾಹ ಪೀಡಿತರ ನೆರವಿಗೆ ಬಾರಲಿಲ್ಲ ಎಂದು ಮೋದಿ ವಿರುದ್ಧ ಕಿಡಿ ಕಾರಿದ್ದ ರಮ್ಯಾ.
Recommended Video
ಬೆಂಗಳೂರು, ಆಗಸ್ಟ್ 22: ನಟಿ ರಮ್ಯಾ ಅವರು ಪ್ರಶ್ನೆಯೊಂದನ್ನು ಕೇಳಿದ್ದಾರೆ. ಆ ಪ್ರಶ್ನೆಗೆ ಉತ್ತರಿಸಿದರೆ 25 ಸಾವಿರ ರು. ಬಹುಮಾನ ಕೊಡುತ್ತಾರಂತೆ. ಹಾಗಂತ ಅವರೇ ಟ್ವಿಟ್ಟರ್ ನಲ್ಲಿ ಹೇಳಿಕೊಂಡಿದ್ದಾರೆ.
ಅವರ ಪ್ರಶ್ನೆ ಹೀಗಿದೆ. ಬಿಹಾರ ಸೇರಿದಂತೆ ಉತ್ತರ ಭಾರತದ ಹಲವೆಡೆ ಜನರು ಪ್ರವಾಹ ಪೀಡಿತರಾಗಿದ್ದು ಜನರು ಅಸ್ತವ್ಯಸ್ತಗೊಂಡಿದೆ. ಬಿಹಾರವೊಂದರಲ್ಲೇ ಸುಮಾರು 150 ಜನರು ಸಾವನ್ನಪ್ಪಿದ್ದು, ಸಾವಿರಾರು ಜನರು ನಿರ್ಗತಿಕರಾಗಿದ್ದಾರೆ. ಈ ಪ್ರವಾಹ ಪೀಡಿತರ ಜತೆಗೆ ಪ್ರಧಾನಿ ಮೋದಿ ನಿಂತಿರುವ ಯಾವುದಾದರೂ ಒಂದು ಫೋಟವನ್ನು ತೋರಿಸಿದರೆ ಸಾಕಂತೆ. ಅವರು 25 ಸಾವಿರ ರು. ಬಹುಮಾನ ಕೊಡುತ್ತಾರಂತೆ!
ಅವರು ಇಂಥದ್ದೊಂದು ಘೋಷಣೆ ಮಾಡಲು ಕಾರಣ, ಟ್ವಿಟ್ಟರ್ ನಲ್ಲಿ ಅವರು ಮೈಮೇಲೆಳೆದುಕೊಂಡ ವಿವಾದ. ಬಿಹಾರ, ಅಸ್ಸಾಂ, ಗುಜರಾತ್ ಪ್ರವಾಹ ಪೀಡಿತರ ಬಗ್ಗೆ ಟ್ವಿಟ್ಟರ್ ನಲ್ಲಿ ಪ್ರಸ್ತಾಪಿಸಿರುವ ರಮ್ಯಾ, ''ಬಿಹಾರ, ಅಸ್ಸಾಂ, ಗುಜರಾತ್ ನಲ್ಲಿ ಉಂಟಾಗಿರುವ ಪ್ರವಾಹದಿಂದ ನಲುಗಿರುವ ಸಂತ್ರಸ್ಥರ ನೆರವಿಗೆ ಪ್ರಧಾನಿ ಬರಲಿಲ್ಲ. ಅಲ್ಲಿಗೆ ಭೇಟಿ ನೀಡಿದರೆ ತಮ್ಮನ್ನು ಎಲ್ಲಿ ಬಡಿಯುತ್ತಾರೋ ಎಂಬ ಭೀತಿ ಅವರನ್ನು ಹೆಚ್ಚು ಕಾಡಿರಬಹುದು'' ಎಂದು ಅವರು ಟ್ವೀಟ್ ಮಾಡಿದ್ದರು.
ಇದಕ್ಕೆ ಉತ್ತರಿಸಿರುವ ಹಲವಾರು ಮಂದಿ, ರಮ್ಯಾ ಅವರನ್ನೇ ಕಿಂಡಲ್ ಮಾಡಿದ್ದಾರೆ. ಸಿನಿಮಾಗಳಲ್ಲಿ ಅವರು ನೀರಿನಲ್ಲಿ, ಬೀಚ್ ಗಳಲ್ಲಿ ನಿಂತಿರುವ ಫೋಟೋಗಳನ್ನು ಹಾಕಿ, 'ಪ್ರವಾಹ ಸಂತ್ರಸ್ಥರ ನೆರವಿಗೆ ಪ್ರಧಾನಿಯಂತೂ ಬರಲಿಲ್ಲ. ನೀವು ಹೋಗಿದ್ದೀರಲ್ವಾ? ಸಂತ್ರಸ್ಥರನ್ನು ಭೇಟಿಯಾಗಿ ಬಂದ ನೀವು ಒದ್ದೆಯಾಗಿದ್ದೀರಲ್ಲವೇ?' ಎಂದು ಜೋಕ್ ಮಾಡುತ್ತಾ ಟೀಕಿಸಿದ್ದಾರೆ.
ಇದಕ್ಕೆ ಉತ್ತರಿಸಿರುವ ರಮ್ಯಾ ಅವರು, ''ಸರಿ. ಹಾಗಾದರೆ, ಸದ್ಯಕ್ಕೆ ನಿರ್ಗತಿಕರಾಗಿರುವ ಬಿಹಾರ, ಅಸ್ಸಾಂ, ಗುಜರಾತ್ ನ ಪ್ರವಾಹ ಪೀಡಿತರ ಯಾವುದೇ ಫೋಟೋಗಳಲ್ಲಿ ಪ್ರಧಾನಿ ಮೋದಿ ನಿಂತಿರುವ ಒಂದಾದರೂ ಫೋಟೋ ತೋರಿಸಿ. ನಿಮಗೆ 25 ಸಾವಿರ ರು. ಬಹುಮಾನ ಕೊಡುತ್ತೇನೆ. ಆದರೆ, ಫೋಟೋ ಶಾಪ್ ಕೆಲಸ ಮಾಡಕೂಡದು'' ಎಂದು ಹೇಳಿದ್ದಾರೆ.