ಸಿಎಂ ಸಿದ್ದರಾಮಯ್ಯ ಜತೆ ನಟ ಸುದೀಪ್ ಸುದೀರ್ಘ ಚರ್ಚೆ
ಬೆಂಗಳೂರು, ಡಿಸೆಂಬರ್ 11: ಬಹುಭಾಷಾ ನಟ ಸುದೀಪ್ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.
ಬೆಂಗಳೂರು ಕೆರೆಗಳನ್ನು ಕಾಪಾಡಿ ಎಂದು ಸಿಎಂಗೆ ಕಿಚ್ಚ ಸುದೀಪ್ ಪತ್ರ
ಸಿಎಂ ನಿವಾಸದಲ್ಲಿ ಸಿದ್ದರಾಮಯ್ಯರನ್ನು ಭೇಟಿಯಾದ ನಟ ಸುದೀಪ್ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಮಾತುಕತೆ ನಡೆಸಿದರು.
ಡಾ. ವಿಷ್ಣುವರ್ಧನ್ ಪುಣ್ಯಭೂಮಿ ಅಭಿವೃದ್ಧಿಗೆ ಸಂಬಂಧಿಸಿದಂತೆ ಸುದೀಪ್ ಮುಖ್ಯಮಂತ್ರಿಗಳ ಜತೆ ಚರ್ಚೆ ನಡೆಸಿದರು. ಮತ್ತು ಈ ಕುರಿತು ಮುಖ್ಯಮಂತ್ರಿಗಳಿಗೆ ಮನವಿ ಪತ್ರವನ್ನೂ ನೀಡಿದರು.
ಡಾ. ವಿಷ್ಣುವರ್ಧನ್ ಅವರ ಪುಣ್ಯಭೂಮಿ ನಿರ್ಮಾಣಕ್ಕೆ ಇದೇ ಡಿಸೆಂಬರ್ 30ರ ಒಳಗೆ ತಾರ್ಕಿಕ ಅಂತ್ಯ ಕಾಣಿಸುವಂತೆ ಮುಖ್ಯಮಂತ್ರಿಗಳ ಬಳಿ ಸುದೀಪ್ ಮನವಿ ಮಾಡಿಕೊಂಡರು.
ತಮ್ಮ ಮನವಿ ಪತ್ರದಲ್ಲಿ ಸುದೀಪ್, ಅಭಿಮಾನ್ ಸ್ಟುಡಿಯೋದಲ್ಲಿ ಡಾ. ವಿಷ್ಣುವರ್ಧನ್ ಅವರ ಸ್ಮಾರಕ ಅಭಿವೃದ್ಧಿಗೆ ತಮ್ಮದೇ ಆದ ನಾಲ್ಕು ಸಲಹೆಗಳನ್ನೂ ಮುಖ್ಯಮಂತ್ರಿಗಳ ಮುಂದಿಟ್ಟಿದ್ದಾರೆ.
ವಿಷ್ಣುವರ್ಧನ್ ಪತ್ನಿ ಭಾರತೀ ವಿಷ್ಣುವರ್ಧನ್ ಒಪ್ಪಿದರೆ ಮೈಸೂರಿನಲ್ಲಿ ಸ್ಮಾರಕ ಅಭಿವೃದ್ಧಿ ಇಲ್ಲದಿದ್ದರೆ ಸಮಾಧಿ ಮಾಡಲಾದ ಅಭಿಮಾನ್ ಸ್ಟುಡಿಯೋದಲ್ಲೇ ಒಂದು ಎಕರೆ ಜಾಗ ನೀಡಿದರೆ ನಾವೇ ಅಭಿವೃದ್ಧಿ ಪಡಿಸುತ್ತೇವೆ ಎಂದು ಸುದೀಪ್ ಲಿಖಿತ ಮನವಿಯಲ್ಲಿ ಭರವಸೆ ನೀಡಿದ್ದಾರೆ.