ಆತ್ಮಹತ್ಯೆಗೆ ಯತ್ನಿಸಿದ ವೆಂಕಟ್ ಹುಡುಕಿಕೊಂಡು ಬಂದ ಪೊಲೀಸರು
ನಟ ಹುಚ್ಚ ವೆಂಕಟ್ ಅವರು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ ಘಟನೆ ವರದಿಯಾಗಿದೆ. ಫಿನಾಯೆಲ್ ಕುಡಿದು ಸಾಯಲು ಯತ್ನಿಸಿದ್ದ ವೆಂಕಟ್, ಸದ್ಯ ಪ್ರಾಣಾಪಾಯದಿಂದ ಪಾರಾಗಿದ್ದಾರೆ
ಬೆಂಗಳೂರು, ಜೂನ್ 18: ನಟ ಹುಚ್ಚ ವೆಂಕಟ್ ಅವರು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ ಘಟನೆ ವರದಿಯಾಗಿದೆ. ಫಿನಾಯೆಲ್ ಕುಡಿದು ಸಾಯಲು ಯತ್ನಿಸಿದ್ದ ವೆಂಕಟ್, ಸದ್ಯ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಅತ್ಮಹತ್ಯೆಗೆ ಯತ್ನಿಸಿದ ವೆಂಕಟ್ ಹುಡುಕಿಕೊಂಡು ಪೊಲೀಸರು ಬಂದಿದ್ದಾರೆ. ಆದರೆ, ವೆಂಕಟ್ ಅವರು ಮಾತನಾಡುವ ಸ್ಥಿತಿಯಲ್ಲಿಲ್ಲದ ಕಾರಣ, ವೈದ್ಯರಿಂದ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ. ಭಾರತೀಯ ದಂಡ ಸಂಹಿತೆ 309 ರ ಅನ್ವಯ ಶಿಕ್ಷಾರ್ಹ ಅಪರಾಧವಾಗಿದೆ. ಅದರೆ, ಮಾನಸಿಕ ಸ್ಥಿಮಿತ ಕಳೆದುಕೊಂಡ ವ್ಯಕ್ತಿಗಳ ಇಂಥ ಹುಚ್ಚಾಟಕ್ಕೆ ಸರ್ಕಾರ ಪ್ರತ್ಯೇಕ ವಿಧೇಯಕ ಜಾರಿಗೆ ತಂದಿದ್ದು, ಪುನರ್ವಸತಿ ಕೇಂದ್ರದಲ್ಲಿ ಇರಿಸಿ ಚಿಕಿತ್ಸೆ ಕೊಡಿಸಲಾಗುತ್ತದೆ.
ಪ್ರೇಮ ವೈಫಲ್ಯದಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಮಾಧ್ಯಮ ಪ್ರತಿನಿಧಿಗಳಿಗೆ ಸಂದೇಶ ಕಳಿಸಿದ್ದರು. ಖಾಸಗಿ ಆಸ್ಪತ್ರೆಗೆ ದಾಖಲಾಗಿರುವ ವೆಂಕಟ್ ರಿಂದ ಆಸ್ಪತ್ರೆಯಲ್ಲೂ ರಂಪಾಟ ಮಾಡಿರುವುದು ಸುದ್ದಿ ವಾಹಿನಿಗಳಲ್ಲಿ ಕಂಡು ಬಂದಿದೆ.
'ಬಿಗ್ ಬಾಸ್' ಕಾರ್ಯಕ್ರಮದ ಮೂಲಕ ಕನ್ನಡ ಜನಗಳ ಪ್ರೀತಿ ಸಂಪಾದನೆ ಮಾಡಿದ್ದ ಪ್ರಥಮ್ ಈಗ ಆತ್ಮಹತ್ಯೆಗೆ ಮುಂದಾದಾಗ 'ಫೈರಿಂಗ್ ಸ್ಟಾರ್', ಪೊರ್ಕಿ ಹುಚ್ಚ ವೆಂಕಟ್ ಅವರು ಬುದ್ಧಿವಾದ ಹೇಳಿದ್ದರು.
'ಹುಚ್ಚ ವೆಂಕಟ್ ಸಿನಿಮಾ ಸೋತಾಗ ನಾನೂ ಆತ್ಮಹತ್ಯೆ ಮಾಡಬೇಕಂತ ಅಂದುಕೊಂಡಿದ್ದೆ ಆದರೆ ಸೋಲೇ ಜೀವನವಲ್ಲ. ಅದರಲ್ಲೂ ಗೆದ್ದವರು ಈ ರೀತಿ ಮಾಡಿದರೆ ಮುಟ್ಟಾಳತನ ಎಂದು ಹೇಳಬೇಕಷ್ಟೇ' ಎಂದಿದ್ದರು.
ವ್ಯಕ್ತಿಯೊಬ್ಬ ಎಲ್ಲರನ್ನೂ ತೃಪ್ತಿಪಡಿಸಲು ಆಗಲ್ಲ, ಆದ್ರೆ ಪ್ರೀತಿಸುವವರನ್ನು ತೃಪ್ತಿಪಡಿಸಬೇಕು. ಜೀವನದಲ್ಲಿ ಹೊಗಳಿಕೆ ಇದ್ದರೆ ತೆಗಳುವವರೂ ಇರುತ್ತಾರೆ. ಹೀಗಾಗಿ ಸಣ್ಣ ಪುಟ್ಟ ವಿಚಾರಗಳಿಗೆ ಹೀಗೆ ಸೂಸೈಡ್ ಮಾಡಿಕೊಳ್ಳುತ್ತೇನೆ ಎನ್ನುವುದು ತಪ್ಪು ಎಂದಿದ್ದರು.
ರಿಯಾಲಿಟಿ ಶೋನ ಸಹನಟಿ ಜತೆ ವೆಂಕಟ್ ಅವರಿಗೆ ಪ್ರೇಮಾಂಕುರವಾಗಿತ್ತು. ಆಕೆ ಮದುವೆಯಾಗಲು ಒಪ್ಪದ ಕಾರಣ, ಮನನೊಂದ ವೆಂಕಟ್, 'ಪ್ರೀತಿಸಿದ ಹುಡುಗಿ ಕೈಕೊಟ್ಟಿದ್ದಾಳೆ' ಎಂದು ಕಾರಣ ಹೇಳಿ, ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ನಟಿ ರಮ್ಯಾ ನನ್ನ ಹೆಂಡತಿ ಎಂದು ಜೈಲು ದರ್ಶನ ಮಾಡಿ ಬಂದ ವೆಂಕಟ್ ಅವರಿಗೆ ಈಗಾಗಲೆ ಮದುವೆಯಾಗಿದ್ದು, ಹೆಂಡತಿಯನ್ನು ತೊರೆದಿದ್ದರೆ ಎಂಬ ಸುದ್ದಿಯೂ ಇದೆ. ಯೂಟ್ಯೂಬ್ ವಿಡಿಯೋ, ಬಿಗ್ ಬಾಸ್ ರಂಪಾಟಗಳ ಮೂಲಕ ವೆಂಕಟ್ ಜನಪ್ರಿಯ.