ಲಂಚ ಸ್ವೀಕಾರ, ಭೂ ದಾಖಲೆಗಳ ಉಪನಿರ್ದೇಶಕ ಎಸಿಬಿ ಬಲೆಗೆ
ಬೆಂಗಳೂರು, ಡಿಸೆಂಬರ್ 18: ಕೃಷಿ ಭೂಮಿಗೆ ತತ್ಕಾಲ್ ಪೋಡಿಗೆ ಅವಶ್ಯವಿದ್ದ ಟಿಪ್ಪಣಿ ಅನುಮೋದಿಸಲು ರು 50,000ಗಳ ಲಂಚ ಸ್ವೀಕಾರ ವೇಳೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ಭೂ ದಾಖಲೆಗಳ ಉಪನಿರ್ದೇಶಕ ಇ.ಪ್ರಕಾಶ್ ಎಸಿಬಿ ದಾಳಿಗೆ ತುತ್ತಾಗಿದ್ದಾರೆ.
ಹೊಸಕೋಟೆ ತಾಲ್ಲೂಕು ಬೇಗೂರು ಗ್ರಾಮದಲ್ಲಿ ನಾಗರಿಕರೊಬ್ಬರು ಕೃಷಿ ಭೂಮಿಯನ್ನು ಖರೀದಿಸಿದರು. ಆದರೆ ಪೋಡಿ ಮಾಡಿಸಲು ಕಂದಾಯ ಇಲಾಖೆಗೆ ತತ್ಕಾಲ್ ಪೋಡಿಗಾಗಿ ಅರ್ಜಿಯನ್ನು ಸಲ್ಲಿಸಿದ್ದರು.ಪೋಡಿ ಮಾಡಲು ತಾಲ್ಲೂಕು ಕಚೇರಿಯಿಂದ ಸರ್ವೇಯರ್ ನೀಡಿದ ಟಿಪ್ಪಣಿಯ ಆಧಾರದ ಮೇಲೆ ದೊಡ್ಡಬಳ್ಳಾಪುರ ಭೂ ದಾಖಲೆಗಳ ಸಹಾಯಕ ನಿರ್ದೇಶಕರು ಟಿಪ್ಪಣಿಯ ಅನುಮೋದನೆಗಾಗಿ ಕಡತವನ್ನು ಬೆಂಗಳೂರು ಗ್ರಾಮಾಂತರ ಜಿಲ್ಲಾ ನಿರ್ದೇಶಕರು ಟಿಪ್ಪಣಿಯನ್ನು ಶಿಫಾರಸ್ಸು ಮಾಡಿ ಕಳುಹಿಸಿದ್ದರು.[ಲಂಚ ಪಡೆಯುವಾಗ ಎಸಿಬಿ ಕೈಗೆ ಸಿಕ್ಕಿಬಿದ್ದ ಮಾಜಿ ಸಚಿವರ ಪಿಎ]
ಉಪನಿರ್ದೇಶಕ ಇ.ಪ್ರಕಾಶ್ ಟಿಪ್ಪಣಿಯನ್ನು ಅನುಮೋದಿಸದೇ ಕಡತವನ್ನು ಬಾಕಿ ಇಟ್ಟಿದ್ದರು. ಕಚೇರಿಗೆ ಹಲವಾರು ಬಾರಿ ಅಲೇದಿದ್ದ ಬೇಗೂರಿನ ನಾಗರಿಕರು. ಮತ್ತೊಬ್ಬರಿಗೆ ತಮ್ಮ ದುಃಖವನ್ನು ಹೇಳಿಕೊಂಡಿದ್ದರು. ಅವರು ಭೂ ದಾಖಲೆಗಳ ಉಪನಿರ್ದೇಶಕ ಪ್ರಕಾಶರನ್ನು ಭೇಟಿ ಮಾಡಿದ್ದು, ತತ್ಕಾಲ್ ಪೋಡಿಗೆ ಅವಶ್ಯಕ ಟಿಪ್ಪಣಿಯನ್ನು ಅನುಮೋದಿಸಲು ರು 50,000 ಬೇಡಿಕೆ ಇಟ್ಟಿದ್ದರು.
ಇದರಿಂದ ಹಣವನ್ನು ಏಲ್ಲಿ ನೀಡುವುದು ಎಂದು ಗಾಬರಿಗೊಂಡ ಖರೀದಿದಾರರು ಭ್ರಷ್ಟಾಚಾರ ನಿಗ್ರಹ ದಳಕ್ಕೆ ದೂರು ದಾಖಲಿಸಿದ್ದರು. ದೂರುದಾರರು ನೀಡಿದ ದೂರಿನನ್ವಯ ಶನಿವಾರ ದೂರುದಾರರಿಂದ ರು.50,000 ಗಳ ಲಂಚದ ಹಣವನ್ನು ಸ್ವೀಕರಿಸುವ ವೇಳೆ ಎಸಿಬಿ ಅಧಿಕಾರಿಗಳು ದಾಳಿ ಮಾಡಿದ್ದು, ಪ್ರಕರಣವನ್ನು ದಾಖಲಿಸಿರುವುದಾಗಿ ಎಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.