ವಿಧಾನಸಭೆ ಚುನಾವಣಾ ಕಣದಲ್ಲಿ ಆಮ್ ಆದ್ಮಿ ಪಾರ್ಟಿ!
ಬೆಂಗಳೂರು, ಜನವರಿ 18 : ಈ ಬಾರಿಯ ವಿಧಾನ ಸಭಾ ಚುನಾವಣೆಯಲ್ಲಿ ಕಣಕ್ಕಿಳಿಯಲು ಆಮ್ ಆದ್ಮಿ ಪಕ್ಷ ನಿರ್ಧರಿಸಿದ್ದು ರಾಜ್ಯದ ರಾಜಕೀಯ ಪರಿಸ್ಥಿತಿ ಹಿನ್ನೆಲೆಯಲ್ಲಿ ತಾನು ಹೇಗೆ ಪ್ರಸ್ತುತ ಎಂಬುದನ್ನು ಮನವರಿಕೆ ಮಾಡಿಕೊಡಲು ಮುಂದಾಗಿದೆ.
ಇದರ ಕುರಿತು ಗುರುವಾರ ಆಮ್ ಆದ್ಮಿ ಪಕ್ಷದ ರಾಜ್ಯ ಸಹ ಸಂಚಾಲಕ ಶಿವಕುಮಾರ್ ಚೆಂಗಲರಾಯ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಇಂದಿನ ರಾಜಕೀಯ ಪರಿಸ್ಥಿತಿಗಳನ್ನು ವಿವರಿಸುತ್ತಾ, ಕರ್ನಾಟಕದ ಜನತೆ ಎಲ್ಲಾ ಮುಖ್ಯವಾಹಿನಿ ರಾಜಕೀಯ ಪಕ್ಷಗಳನ್ನು ಪರಾಮರ್ಶಿಸಿ ನೋಡಿ ಮೈಕೈ ಸುಟ್ಟುಕೊಂಡಾಗಿದೆ. ಅವುಗಳನ್ನು ಹೆಚ್ಚಿನ ವ್ಯತ್ಯಾಸವೇನೂ ಇಲ್ಲ. ಅವರು ಜನರ ಸೇವೆಗಾಗಿ ಬಂದವರಲ್ಲ, ಜನರ ಮೇಲೆ ಆಡಳಿತ ಮಾಡಲು ಬಂದವರು, ಅವರು ಜನರ ಸಮಸ್ಯೆಗಳಿಗೆ ಪರಿಹಾರ ಹುಡುಕಲು ಬಂದವರಲ್ಲ. ಹಣ ಮಾಡಿಕೊಳ್ಳಲು ಬಂದವರು ಎಂದು ರಾಜಕೀಯ ಪಕ್ಷವನ್ನು ದೂರಿದರು.
ಜನಸಾಮಾನ್ಯರ ಸಮಸ್ಯೆಗೆ ಪರಿಹಾರ
ಜನರು ಇಂತಹ ರಾಜಕೀಯ ಪಕ್ಷಗಳಿಂದ ಬೇಸತ್ತಿದ್ದಾರೆ.ಇತ್ತೀಚೆಗೆ ನಡೆಸಿದ ಖಾಸಗಿ ಸಮೀಕ್ಷೆಯಲ್ಲಿ ಶೇ80 ರಷ್ಟು ಜನ ಸರಿಯಾದ, ನಂಬಿಕಸ್ಥ ಪರ್ಯಾಯ ಪಕ್ಷಕ್ಕೆ ಮತ ನೀಡಲು ಸಿದ್ಧರಿದ್ದಾರೆ. ಅದೇ ಕಾರಣಕ್ಕೆ ನಾವು ಜನ ಸಾಮಾನ್ಯರ ಸಮಸ್ಯೆಗೆ ಪರಿಹಾರ ದೊರಕಿಸಿಕೊಡಲು ಚುನಾವಣೆಯಲ್ಲಿ ಭಾಗವಹಿಸುತ್ತಿದ್ದೇವೆ ಎಂದು ಸ್ಪಷ್ಟಪಡಿಸಿದರು.
ರಾಜಧಾನಿಯ ಸ್ಥಿತಿ ಶೋಚನೀಯ
ರಾಜಧಾನಿ ಬೆಂಗಳೂರು ಕುಸಿದು ಬೀಳುತ್ತಿದೆ. ನೀರು ಸರಬರಾಜು, ಕಸ ನಿರ್ವಹಣೆ, ಸಾರಿಗೆ, ವಸತಿ ಅಥವಾ ಇನ್ಯಾವುದೇ ವಿಷಯವಿರಲಿ , ರಾಜ್ಯ ಸರ್ಕಾರ ಮತ್ತು ಬಿಬಿಎಂಪಿ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ರಾಜ್ಯದ ಹಳ್ಳಿಗಳ ಚಿತ್ರಣವೂ ಇದಕ್ಕೆ ಹೊರತಾಗಿಲ್ಲ. ರಾಜ್ಯದೆಲ್ಲೆಡೆ ರೈತರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಸರ್ಕಾರಿ ಶಾಲೆಗಳು ಮುಚ್ಚಲ್ಪಡುತ್ತಿವೆ. ಮಕ್ಕಳನ್ನು ಕಳಪೆ ಶಿಕ್ಷಣ ಭವಿಷ್ಯವಿಲ್ಲದ ಜೀವನದೆಡೆಗೆ ಅನಿವಾರ್ಯವಾಗಿ ತಳ್ಳುವಂತಾಗಿದೆ ಎಂದು ಶಿವಕುಮಾರ್ ಹೇಳಿದರು.
ಕೋಮು ಆತಂಕ ವಾತಾವರಣ ಸೃಷ್ಟಿ
ಕೋಮುಗಳ ಮಧ್ಯೆ ಆತಂಕದ ವಾತಾವರಣ ಹೆಚ್ಚುತ್ತಿದೆ: ಕೋಮುಗಳ ಮಧ್ಯೆ ಆತಂಕ ವಾತಾವರಣ ಅತಿಯಾಗುತ್ತಿದೆ. ಜನರನ್ನು ಒಗ್ಗೂಡಿಸುವ ಬದಲಿಗೆ ಪಕ್ಷಗಳು ಒಡಕನ್ನು ತಮ್ಮ ಮತ ಪಟ್ಟಿ ಎಣಿಕೆಗೆ ಬಳಸಿಕೊಳ್ಳುತ್ತಿದ್ದಾರೆ. ತಮ್ಮ ಸಣ್ಣ ಪುಟ್ಟ ಕೆಲಸಗಳಿಗಾಗಿ ಚುನಾಯಿತ ಪ್ರತಿನಿಧಿಗಳು ತಮ್ಮ ಮತದಾರರನ್ನು ಕಚೇರಿಯಿಂದ ಕಚೇರಿಗೆ ಅಲೆಸುತ್ತಿದ್ದಾರೆ.
ಪ್ರತಿ ಚುನಾವಣೆ ಸಮಯದಲ್ಲೂ ಈ ಸಮಸ್ಯೆಗಳಿಗೆ ಪರಿಹಾರ ಕೊಡಿಸುವುದಾಗಿ ಪಾರಂಪರಿಕ ಪಕ್ಷಗಳು ಆಶ್ವಾಸನೆ ಕೊಡುತ್ತಲೇ ಬಂದಿದೆ. ಆದರೆ ಯಾವ ಪಕ್ಷವೂ ಬಗೆ ಹರಿಸಿಲ್ಲ. ಹಲವಾರು ಸರ್ಕಾರಿ ಸೇವೆಗಳು ಜನರ ಮನೆ ಬಾಗಿಲಿಗೇ ತಲುಪಿಸುವ ವ್ಯವಸ್ಥೆ ನಾವು ಕಲ್ಪಿಸಿದ್ದೇವೆ. ಬಿಜೆಪಿ, ಕಾಂಗ್ರೆಸ್ ಸರ್ಕಾರ ದಶಕಗಳಲ್ಲಿ ಸಾಧಿಸಲಾಗದ ಕೆಲಸ ನಾವು ಮೂರು ವರ್ಷಗಳಲ್ಲಿ ಮಾಡಿ ತೋರಿಸಿದ್ದೇವೆ ಎಂದರು.
ಕನ್ನಡಿಗರ ಎಲ್ಲ ಆಸ್ಮಸ್ಯೆಗಳಿಗೂ ಆಮ್ ಆದ್ಮಿ ಪಕ್ಷ ಸ್ಪಂದಿಸಲಿದೆ.
ಈ ಚಳವಳಿಯ ಭಾಗವಾಗಲು, ಒಳ್ಳೆಯ ರಾಜ್ಯ ಮತ್ತು ದೇಶ ಕಟ್ಟಲು ನೆರವಾಗಲು ನಾವು ರಾಜ್ಯದ ಜನತೆಯನ್ನು ಆಹ್ವಾನಿಸುತ್ತಿದ್ದೇವೆ. ರಾಜ್ಯದಲ್ಲಿ ಆಮ್ ಆದ್ಮಿ ಪಕ್ಷ ಸ್ಥಾಪನೆಯಾದ ದಿನದಿಂದಲೂ ಕರ್ನಾಟಕದ, ಕನ್ನಡಿಗರ ಧ್ವನಿಯಾಗಿ ನಿಂತಿದೆ ಮುಂದೆಯೂ ನಿಂತಿರುತ್ತದೆ ಎಂದು ಭರವಸೆ ನೀಡಿದರು.
ಪಂಜಾಬ್ ಚುನಾವಣೆಯಲ್ಲೂ ಮಹತ್ವದ ಪಾತ್ರ ವಹಿಸಿತ್ತು. ಆದರೆ ಇತ್ತೀಚೆಗೆ ನಡೆದ ಗುಜರಾತ್ ಚುನಾವಣೆಯಲ್ಲಿ ಯಾವುದೇ ಪ್ರಭಾವ ಬೀರುವಲ್ಲಿ ಯಶಸ್ವಿಯಾಗಿಲ್ಲ. ಹೀಗಾಗಿ ಅರವಿಂದ್ ಕೇಜ್ರಿವಾಲ್ ಕರ್ನಾಟಕದಲ್ಲಿ ಮುಂಬರುವ ಚುನಾವಣೆಯಲ್ಲಿ ಮಹತ್ವದ ಪಾತ್ರ ವಹಿಸಲು ಸಿದ್ಧತೆ ಆರಂಭಿಸಿದ್ದಾರೆ.
2013ರಲ್ಲಿ ದೇಶದಲ್ಲಿ ಆಮ್ ಆದ್ಮಿ ಪಕ್ಷ ಸೃಷ್ಟಿಸಿದ್ದ ಅಲ ಸದ್ಯದ ಸ್ಥಿತಿಯಲ್ಲಿ ಇಲ್ಲವಾದರೂ ಕರ್ನಾಟಕದಲ್ಲಿ ಆರಂಭದಲ್ಲಿ ತನ್ನ ಅಸ್ಥಿತ್ವ ಸ್ಥಾಪಿಸುವಲ್ಲಿ ವಿಫಲವಾಗಿತ್ತು. ಇದೀಗ ವಿಧಾನ ಸಭೆ ಚುನಾವಣೆ ಹಿನ್ನೆಲೆಯಲ್ಲಿ ಮತ್ತೆ ಹೊಸದಾಗಿ ಪಕ್ಷವೊಂದನ್ನು ಪುನಶ್ಚೇತನಗೊಳಿಸಲು ಆಮ್ ಆದ್ಮಿ ಪಕ್ಷ ಮುಂದಾಗಿದೆ. ಇದು ಎಷ್ಟರ ಮಟ್ಟಿಗೆ ಸಹಕಾರಿಯಾಗಲಿದೆ ಎಂದು ಕಾದು ನೋಡಬೇಕಿದೆ.