ನಕಲಿ ಮತಚೀಟಿ ಹಾವಳಿ ತಡೆಗೆ ಎಎಪಿ ಹೆಲ್ಪ್ ಲೈನ್
ಬೆಂಗಳೂರು, ಮಾರ್ಚ್ 14: ಕೆ.ಆರ್ ಪುರಂ ವಿಧಾನಸಭಾ ಕ್ಷೇತ್ರದ ದೇವಸಂದ್ರ ವಾರ್ಡಿನಲ್ಲಿ ನಡೆದಿದೆ ಎನ್ನಲಾದ ನಕಲಿ ಮತಚೀಟಿ ಹಾವಳಿಯನ್ನು ಮಟ್ಟ ಹಾಕಿ, ಆರೋಪಿಗಳನ್ನು ಬಂಧಿಸುವಂತೆ ಆಮ್ ಆದ್ಮಿ ಪಕ್ಷ ಆಗ್ರಹಿಸಿದೆ.
ಅಲ್ಲಿನ ಸ್ಥಳೀಯ ಕಾರ್ಪೋರೇಟರ್ ಒಡೆತನದ ಸತ್ಯಸಾಯಿ ಆಸ್ಪತ್ರೆಯ ವಿಳಾಸ ನೀಡಿ 39 ಜನರು ನಕಲಿ ಮತದಾನ ಚೀಟಿ ಪಡೆದಿರುವುದು ಬೆಳಕಿಗೆ ಬಂದಿದೆ. ಕೆ.ಆರ್ ಪುರಂ ಕ್ಷೇತ್ರದ ಶಾಸಕ ಭೈರತಿ ಬಸವರಾಜ್ ರವರು ಇಂತಹ ಸಾವಿರಾರು ನಕಲಿ ವಿಳಾಸಗಳನ್ನು ನೀಡಿ ಮತಪಟ್ಟಿಗೆ ಮತದಾರರನ್ನು ಸೇರಿಸಿರುವ ಬಗ್ಗೆ ಸಾಕಷ್ಟು ಅನುಮಾನಗಳಿವೆ.
ಸಿದ್ದರಾಮಯ್ಯ ಪರಮಾಪ್ತರಿಂದ ವೋಟರ್ ಐಡಿ ಗೋಲ್ ಮಾಲ್ ?
ಏಕಾಏಕಿ 1.25 ಲಕ್ಷ ಮತದಾರರು ಈ ಸಾಲಿನಲ್ಲಿ ಸೇರಿಕೊಂಡಿರುವುದು ಇದಕ್ಕೆ ಪೂರಕವಾಗಿದೆ. ಸಾಲದ್ದಕ್ಕೆ ಭೈರತಿ ಬಸವರಾಜ್ ಬಂಟ, ದೇವಸಂದ್ರ ವಾರ್ಡಿನ ಪಾಲಿಕೆ ಸದಸ್ಯ ಶ್ರೀಕಾಂತ್ ಈಗಾಗಲೇ ಇಂತಹ ಅಕ್ರಮ ನಡೆಸಿ ಸಿಕ್ಕಿಬಿದ್ದಿದ್ದಾರೆ.
ಶಾಸಕರು ಹಾಗೂ ಅವರ ಬೆಂಬಲಿಗರ ಈ ಕುಕೃತ್ಯಗಳಿಂದಾಗಿ ಕ್ಷೇತ್ರಾದ್ಯಂತ ನಕಲಿ ಮತದಾರರು ಸೃಷ್ಟಿಯಾಗಿ, ಕಳ್ಳ ಮತದಾನವಾಗುವ ಸಾಧ್ಯತೆಗಳು ಜಾಸ್ತಿ ಇವೆ.
ಬೆಂಗಳೂರಿನಾದ್ಯಂತ ಸಮಸ್ಯೆ ಇದೆ: ಇದು ಕೇವಲ ಕೆ.ಆರ್ ಪುರಂಗೆ ಮಾತ್ರ ಸೀಮಿತವಾಗದೇ ಬೆಂಗಳೂರಿನಾದ್ಯಂತ ಈ ರೀತಿ ಅಕ್ರಮ ನಡೆದಿರುವ ಸಾಧ್ಯತೆ ಇದ್ದು, ಈ ಕೂಡಲೇ ಚುನಾವಣಾ ಅಯೋಗವು ಎಲ್ಲಾ 198 ವಾರ್ಡುಗಳಲ್ಲೂ ಮತದಾರರ ಪಟ್ಟಿಯನ್ನು ಪುನರ್ ಪರಿಶೀಲನೆಗೆ ಒಳಪಡಿಸಿ, ಮತ್ತೊಮ್ಮೆ ಪರಿಷ್ಕೃತ ಪಟ್ಟಿಯನ್ನು ಬಿಡುಗಡೆ ಮಾಡಬೇಕೆಂದು ಆಮ್ ಆದ್ಮಿ ಪಕ್ಷವು ಒತ್ತಾಯಿಸುತ್ತದೆ.
ಮತದಾರರ ಪಟ್ಟಿ: 39 ಸಾವಿರ ಅರ್ಜಿಗಳು ಬಾಕಿ
ಸರ್ಕಾರವು ಮಹಾನಗರಪಾಲಿಕೆ ಸದಸ್ಯ ಹಾಗೂ ಸಂಬಂಧಿಸಿದ ಅಧಿಕಾರಿಗಳನ್ನು ಕೂಡಲೇ ಬಂಧಿಸಿ ಸೂಕ್ತ ಕಾನೂನು ಕ್ರಮಗಳನ್ನು ಕೈಗೊಳ್ಳಲೇಬೇಕಾಗಿದೆ. ಪ್ರಜಾಪ್ರಭುತ್ವಕ್ಕೆ ಮಾರಕವಾಗಿರುವ ಶಾಸಕ ಬಸವರಾಜ್ ಮತ್ತು ಅವರ ಪಟಾಲಂಗಳ ವಿರುದ್ಧ ಸೂಕ್ತ ತನಿಖೆಯನ್ನು ನಡೆಸಬೇಕು ಮತ್ತು ಈಗಿನ ಮತದಾರರ ಪಟ್ಟಿಯಲ್ಲಿ ಅವ್ಯವಹಾರಗಳನ್ನು ನಡೆಸಿರುವ ಕಾರಣ ಸಂಪೂರ್ಣ ತನಿಖೆ ನಡೆಸಿ, ಮತ್ತೊಮ್ಮೆ ಬಿಡುಗಡೆ ಮಾಡಬೇಕೆಂದು ಆಗ್ರಹಿಸುತ್ತದೆ.
ಒಂದು ಪಕ್ಷ ಇವಿಎಂ ತಿರುಚುವ ಯತ್ನದಲ್ಲಿದ್ದರೆ, ಇನ್ನೊಂದು ಪಕ್ಷ ನಕಲಿ ಮತದಾರರನ್ನು ಸೃಷ್ಟಿ ಮಾಡುವ ಕೆಲಸ ಮಾಡುತ್ತಿದೆ. ಇದು ಪ್ರಜಾಪ್ರಭುತ್ವಕ್ಕೆ ಮಾರಕವಾದ ಕೆಲಸ.
ಆಮ್ ಆದ್ಮಿ ಪಕ್ಷ ಬೆಂಗಳೂರಿನ ಎಲ್ಲಾ 198 ವಾರ್ಡುಗಳಲ್ಲಿ ಮತದಾರರ ಪಟ್ಟಿಯನ್ನು ಪರಿಶೀಲಿಸಿ, ನಕಲಿ ಮತದಾರನ್ನು ಪತ್ತೆ ಹಚ್ಚುವ ಕೆಲಸ ಮಾಡಲಿದೆ ಮತ್ತು ಸಾರ್ವಜನಿಕರು ಕೂಡ ಈ ಕಾರ್ಯದಲ್ಲಿ ಕೈ ಜೋಡಿಸಬಹುದಾಗಿದ್ದು ಆಮ್ ಆದ್ಮಿ ಪಕ್ಷ ಶೀಘ್ರವೇ ಈ ಸಂಬಂಧ ಹೆಲ್ಪ್ಲೈನ್ ಕೂಡ ತೆರೆಯಲಿದೆ.