ಪ್ರಿಯಕರನ ಹಿಂಸೆಗೆ ಬೇಸತ್ತ 15 ವರ್ಷದ ಹುಡುಗಿ ಆತ್ಮಹತ್ಯೆ
ಬೆಂಗಳೂರು,ಮಾರ್ಚ್,21: ಹುಚ್ಚು ಪ್ರೇಮಿಯ ಹುಚ್ಚಾಟಕ್ಕೆ ಮೇಘನಾ ಎಂಬ ಪ್ರಿಯತಮೆ ಬಲಿಯಾಗಿ ಒಂದೆರಡು ದಿನಗಳು ಕಳೆದಿವೆ. ಅಷ್ಟರಲ್ಲೇ ಪ್ರಿಯಕರನ ಕಿರುಕುಳಕ್ಕೆ ಬೇಸತ್ತ ಪ್ರಿಯತಮೆಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಮತ್ತೊಂದು ಘಟನೆ ಜಗ ಜೀವನ್ ರಾಮ ನಗರದ ಸಮೀಪದ ಜನತಾ ಕಾಲೋನಿಯಲ್ಲಿ ಭಾನುವಾರ ನಡೆದಿದೆ.
ಸೌಂದರ್ಯ ಎಂಬಾಕೆ ಆತ್ಮಹತ್ಯೆ ಮಾಡಿಕೊಂಡ ಪ್ರಿಯತಮೆ. ಈ ಸಂಬಂಧ ಈಕೆಯ ಪ್ರಿಯಕರ ಪ್ರವೀಣ್ ನನ್ನು ಪೊಲೀಸರು ಬಂಧಿಸಿದ್ದು, ಐಪಿಸಿ ಸೆಕ್ಷನ್ 306(ಆತ್ಮಹತ್ಯೆಗೆ ಪ್ರಚೋದನೆ) ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.[ನಿರೋಶಾ ಭಾವಿ ಪತಿ ಜತೆ ಚಾಟ್ ಕಾಲ್ ಮಾಡುತ್ತಾ ನೇಣಿಗೆ ಶರಣು]
ಓದನ್ನು ನಿಲ್ಲಿಸಿ ಮನೆಯಲ್ಲಿದ್ದ ಸೌಂದರ್ಯ ಪ್ರವೀಣ್ ಕಾಟಕ್ಕೆ ಗುರುವಾರ ಮೈಮೇಲೆ ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಶರಣಾದ ಈಕೆ ಮೂರು ದಿನಗಳ ಕಾಲ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಭಾನುವಾರ ಕೊನೆಯುಸಿರೆಳಿದ್ದಾಳೆ. ಈ ಪ್ರಕರಣದ ಸಂಪೂರ್ಣ ವಿವರ ಇಲ್ಲಿದೆ.
ಸೌಂದರ್ಯ ಮತ್ತು ಪ್ರವೀಣ್ ಬಾಲ್ಯದ ಗೆಳೆಯರು.
ಸೌಂದರ್ಯ ಮತ್ತು ಪ್ರವೀಣ್ ಬಾಲ್ಯದ ಗೆಳೆಯರು. 9ನೇ ತರಗತಿ ಓದಿದ ಸೌಂದರ್ಯ ಶಾಲೆ ತೊರೆದಿದ್ದಳು. ಪ್ರವೀಣ್ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದನು. ಆರು ತಿಂಗಳ ಹಿಂದೆ ಈತ ಸೌಂದರ್ಯಳ ಮುಂದೆ ತನ್ನ ಪ್ರೇಮವನ್ನು ವ್ಯಕ್ತಪಡಿಸಿದ್ದು, ಈಕೆಗೆ ಸೌಂದರ್ಯಳು ಸಮ್ಮತಿ ಸೂಚಿಸಿದ್ದಳು. ಮೂರು ತಿಂಗಳ ಹಿಂದೆ ಮನೆಬಿಟ್ಟು ಹೋಗಿದ್ದರು.[ಸಮೀಕ್ಷೆ: ಆತ್ಮಹತ್ಯೆ ಪ್ರಕರಣಗಳಲ್ಲಿ ಕರ್ನಾಟಕಕ್ಕೆ 4ನೇ ಸ್ಥಾನ]
ಸೌಂದರ್ಯಳ ತಂದೆ ತಾಯಿ ಹೇಳಿದ್ದೇನು?
ಮೂರು ತಿಂಗಳ ಹಿಂದೆ ಮನೆಬಿಟ್ಟು ಹೋದ ಇವರಿಬ್ಬರನ್ನು ಮದುವೆ ಮಾಡುವುದಾಗಿ ಹೇಳಿ ಮನೆಗೆ ಕರೆದುಕೊಂಡು ಬಂದಿದ್ದರು. ಕೆಲ ದಿನಗಳ ಹಿಂದೆ ಪ್ರವೀಣ್ ಮನೆಯವರು ಮದುವೆಯ ಪ್ರಸ್ತಾಪ ಮಾಡಿದ್ದಾರೆ. ಆದರೆ ಸೌಂದರ್ಯಳ ತಂದೆ ಕುಮಾರ್ ಮತ್ತು ತಾಯಿ ಮೀನಾಕ್ಷಿ ಸೌಂದರ್ಯಳಿಗೆ 18 ವರ್ಷ ತುಂಬಿದ ಬಳಿಕ ಮದುವೆಗೆ ಸಮ್ಮತಿ ಸೂಚಿಸುವುದಾಗಿ ಹೇಳಿದ್ದಾರೆ. ಈ ವಿಚಾರ ಪ್ರವೀಣ್ ಗೆ ತಿಳಿದಿದೆ.[ಪ್ರಿಯಕರನ ಹುಚ್ಚಾಟಕ್ಕೆ ಪ್ರಾಣತೆತ್ತ ಪ್ರಿಯತಮೆ ಮೇಘನಾ]
ಸೌಂದರ್ಯಳ ಪೋಷಕರ ಮಾತು ತಿಳಿದ ಪ್ರವೀಣ್ ಮಾಡಿದ್ದೇನು?
ಈ ವಿಚಾರದಿಂದ ಕುಪಿತಗೊಂಡ ಪ್ರವೀಣ್ ಪ್ರಿಯತಮೆ ಸೌಂದರ್ಯಳಿಗೆ ಮನೆ ಬಿಟ್ಟು ಬರುವಂತೆ ಒತ್ತಡ ಹೇರಿದ್ದಾನೆ. ನೀನು ನನ್ನೊಡನೆ ಬರಲಿಲ್ಲವೆಂದರೆ ನನ್ನೊಟ್ಟಿಗೆ ನೀನು ತೆಗೆಸಿಕೊಂಡ ಫೋಟೋಗಳನ್ನು ಸ್ನೇಹಿತರಿಗೆ ಕಳುಹಿಸಿಕೊಡುತ್ತೇನೆ. ನಿನ್ನ ಬಗ್ಗೆ ಅಪಪ್ರಚಾರ ಮಾಡುತ್ತೇನೆ. ನಿನ್ನ ಮರ್ಯಾದೆ ಕಳೆಯುತ್ತೇನೆ ಎಂದು ಬೆದರಿಸಿದ್ದಾನೆ.[ಪ್ರೇಯಸಿಯ ಮನೆಗೆ ಬೆಂಕಿ ಹಚ್ಚಿದ ಹುಚ್ಚು ಪ್ರೇಮಿ]
ಪ್ರವೀಣ್ ಮಾತಿಗೆ ಸೌಂದರ್ಯ ಏನೆಂದು ಉತ್ತರಿಸಿದ್ದಳು?
ಪ್ರಿಯಕರ ಪ್ರವೀಣನ ಹಿಂಸೆಯಿಂದ ಬೇಸತ್ತ ಪ್ರಿಯತಮೆ ಸೌಂದರ್ಯ ನಾನು ನನ್ನ ಮನೆಯವರಿಗೆ ವಿರುದ್ಧವಾಗಿ ನಡೆದುಕೊಳ್ಳುವುದಿಲ್ಲ. ನನ್ನನ್ನು ನನ್ನ ಪಾಡಿಗೆ ಬಿಟ್ಟು ಬಿಡು ಎಂದು ಹೇಳಿದ್ದಾಳೆ. ಆದರೂ ಪ್ರವೀಣ್ ನ ಕಾಟ ಮುಂದುವರಿದೇ ಇತ್ತು.
ಕೊನೆಗೆ ಸೌಂದರ್ಯ ಮಾಡಿಕೊಂಡಿದ್ದೇನು?
ಈತನ ಮಾತಿಗೆ ಹೆದರಿದ ಸೌಂದರ್ಯ ತಂದೆ ತಾಯಿ ಕೆಲಸಕ್ಕೆ ಹೋದ ಸಂದರ್ಭದಲ್ಲಿ ಮೈ ಮೇಲೆ ಸೀಮೆಎಣ್ಣೆ ಸುರಿದುಕೊಂಡು ಗುರುವಾರ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈಕೆಯ ಚೀರಾಟ, ಕೂಗಾಟ ಕೇಳಿದ ನೆರೆಹೊರೆಯವರು ಬೆಂಕಿಯನ್ನು ಆರಿಸಿ ಸಮೀಪದ ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಸೌಂದರ್ಯಳ ದೇಹ ಶೇ.೯೦ರಷ್ಟು ಸುಟ್ಟು ಹೋಗಿದ್ದು, ಮೂರುದಿನಗಳ ಬಳಿಕ ಸಾವನ್ನಪ್ಪಿದ್ದಾಳೆ.
ಕೊನೆಘಳಿಗೆಯಲ್ಲಿ ಸೌಂದರ್ಯ ಹೇಳಿದ್ದೇನು?
ನಾನು ನೀನು ಜತೆಯಾಗಿ ತೆಗೆಸಿಕೊಂಡ ಫೋಟೋಗಳು ನನ್ನ ಮೊಬೈಲಿನಲ್ಲಿ ಇದೆ. ನೀನು ಮದುವೆಗೆ ಒಪ್ಪದಿದ್ದರೆ ಆ ಎಲ್ಲಾ ಫೋಟೋಗಳನ್ನು ವಾಟ್ಸಪ್ ಮೂಲಕ ನನ್ನ ಸ್ನೇಹಿತರಿಗೆ ಕಳುಹಿಸುತ್ತೇನೆ. ನಮ್ಮಿಬ್ಬರ ಸಂಬಂಧದ ಬಗ್ಗೆ ಅಪಪ್ರಚಾರ ಮಾಡುತ್ತೇನೆ ಎಂದು ಕೆಲವು ದಿನಗಳಿಂದ ಪ್ರವೀಣ್ ಬೆದರಿಸುತ್ತಿದ್ದ. ಇದರಿಂದ ಬೇಸರಗೊಂಡು ಆತ್ಮಹತ್ಯೆ ಮಾಡಿಕೊಂಡೆ ಎಂದು ಪೊಲೀಸರಿಗೆ ಹೇಳಿಕೆ ನೀಡಿದ್ದಾಳೆ.