'ಎ ಮಿಡ್ ಸಮ್ಮರ್ ಡೇ ಡ್ರೀಮ್ಸ್' ನಾಟಕ ನಾಳೆ ಪ್ರದರ್ಶನ
ಸೈಡ್ ವಿಂಗ್ ಬೆಂಗ್ಳೂರು ರಂಗ ತಂಡವು ತನ್ನ ಯಶಸ್ವಿ ನಾಟಕಗಳಲ್ಲಿ ಒಂದಾದ 'ಎ ಮಿಡ್ ಸಮ್ಮರ್ ಡೇ ಡ್ರೀಮ್ಸ್' ನಾಟಕವನ್ನು ಬಹಳ ದಿನಗಳ ನಂತರ ಪ್ರದರ್ಶಿಸುತ್ತಿದೆ. ನಾಟಕದ ಹೆಸರು ಕೇಳಿದೊಡನೆ ವಿಲಿಯಂ ಷೇಕ್ಸ್ ಪಿಯರ್ ನೆನಪಾಗುತ್ತದೆ. ಆದರೆ ಅವರದು 'ಎ ಮಿಡ್ ಸಮ್ಮರ್ ನೈಟ್ಸ್ ಡ್ರೀಮ್', ಇದು 'ಡೇ ಡ್ರೀಮ್ಸ್'.
ಶಿವಮೊಗ್ಗದ ರಂಗತಂಡದಿಂದ ಬೆಂಗಳೂರಿನಲ್ಲಿ ನಾಟಕೋತ್ಸವ
ನಾಟಕ : 'ಎ ಮಿಡ್ ಸಮ್ಮರ್ ಡೇ ಡ್ರೀಮ್ಸ್'
ರಚನೆ ಮತ್ತು ನಿರ್ದೇಶನ: ಶೈಲೇಶ್ ಕುಮಾರ್ ಎಂ.ಎಂ
ದಿನಾಂಕ : ಅಕ್ಟೋಬರ್ 7
ಸಮಯ: ಸಂಜೆ 4.30 ಹಾಗೂ 7.30 (ಎರಡು ಪ್ರದರ್ಶನ)
ಸ್ಥಳ : ಕೆ ಹೆಚ್ ಕಲಾಸೌಧ, ಹನುಮಂತನಗರ, ಬೆಂಗಳೂರು.
ತಂಡ: ಸೈಡ್ ವಿಂಗ್ ಬೆಂಗ್ಳೂರು
'ಕನಸುಗಳನ್ನು ಕಾಣಬಾರದಂತೆ, ಕನಸುಗಳು ಕಾಡಬೇಕಂತೆ!' ಬೆಳಕಿಲ್ಲದ ದಾರಿಯಲ್ಲಿ ನಡೆದೇನು, ಆದರೆ ಕನಸಿಲ್ಲದ ದಾರಿ ನಾನೊಲ್ಲೆ!' ಹೀಗೆ ಕನಸುಗಳ ಪ್ರಾಮುಖ್ಯತೆ ಸಾರುವ ಹಲವಾರು ಸಾಲುಗಳಿವೆ. ಆದರೆ, ಇಂದಿನ ಯುವ ಪೀಳಿಗೆ ಒಂದು ಬಗೆಯ ಕನಸನ್ನು ಸೃಷ್ಟಿಸಿಕೊಂಡು ಒದ್ದಾಡುತ್ತಿದೆ, ಅದೇ 'ಹಗಲುಗನಸು'.
ಯುವಕರು ತಮ್ಮ ಸಾಧನೆಯ ಹಾದಿಯಲ್ಲಿ ಹಗಲುಗನಸುಗಳ ಬೇಲಿಯನ್ನು ತಾವೇ ತಂದಿಟ್ಟುಕೊಂಡು ಅದರೊಳಗೆ ತಮಗೇ ಅರಿವಿಲ್ಲದಂತೆ ಬಂಧಿಗಳಾಗುತ್ತಿರುವುದು ಒಂದು ವಿಪರ್ಯಾಸ. ಈ ರೀತಿಯ ಹಗಲುಗನಸಿನ ಬಂಗಲೆಯೊಳಗೆ ಬಂಧಿಯಾಗಿರುವ ಯುವಕನ ಕಥೆಯೇ ಶೈಲೇಶ್ ಕುಮಾರ್ ಎಂ.ಎಂ. ಅವರು ರಚಿಸಿ ನಿರ್ದೇಶಿಸಿರುವ ನಾಟಕ 'ಎ ಮಿಡ್ ಸಮ್ಮರ್ ಡೇ ಡ್ರೀಮ್ಸ್'!
ಗಂಭೀರ ಸಮಸ್ಯೆಗಳನ್ನು ಹಾಸ್ಯಲೇಪನದೊಂದಿಗೆ ಬೆರೆಸಿ, ಜನರ ಮನಮುಟ್ಟುವಂತೆ ಹೇಳುವುದು ಶೈಲೇಶ್ ಕುಮಾರ್ ಅವರ ನಾಟಕಗಳ ವಿಶೇಷತೆ. ಈ ನಾಟಕವೂ ಪ್ರೇಕ್ಷಕರಿಗೆ ಹೊಟ್ಟೆ ಹುಣ್ಣಾಗುವಂತೆ ನಗಿಸುತ್ತಲೇ ಯೋಚನೆಗೆ ಹೆಚ್ಚುತ್ತದೆ. ಈಗಾಗಲೇ 5 ಯಶಸ್ವಿ ಪ್ರದರ್ಶನಗಳನ್ನು ಕಂಡಿರುವ ಈ ನಾಟಕ, ಇದೇ ಅಕ್ಟೋಬರ್ 7ರ ಭಾನುವಾರದಂದು ಹನುಮಂತನಗರ ದ ಕೆ.ಎಚ್. ಕಲಾಸೌಧದಲ್ಲಿ ಸಂಜೆ 4:30 ಹಾಗೂ 7:30ಕ್ಕೆ ಎರಡು ಪ್ರದರ್ಶನಗಳನ್ನು ಕಾಣಲಿದೆ.