ಬೆಂಗಳೂರು: ಅತ್ಯಾಚಾರ ಎಸಗಿ ಹತ್ಯೆ, ಆರೋಪಿ ಬಂಧನ
ಬೆಂಗಳೂರು, ಮೇ 16 : ನೇಪಾಳ ಮೂಲದ ಯುವತಿ ಮೇಲೆ ನೇಪಾಳಿ ಯುವಕನೇ ಅತ್ಯಾಚಾರವೆಸಗಿ ಕೊಲೆಮಾಡಿರುವ ಘಟನೆ ನಗರದ ಹೊರವಲಯ ಆನೇಕಲ್ ತಾಲೂಕಿನ ಸರ್ಜಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ನೇಪಾಳ ಮೂಲದ 26 ವರ್ಷದ ತಿಲಕ್ ಎನ್ನುವಾತ 20 ವರ್ಷದ ಪವಿತ್ರಳ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿ ಹೂತಿಟ್ಟು ಪರಾರಿಯಾಗಿದ್ದ. ಮೇ 4ರಿಂದ ಪವಿತ್ರಾ ಕಾಣೆಯಾಗಿದ್ದಾರೆಂದು ಪತಿ ಕರುಣ್ ಸರ್ಜಾಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.
ಪವಿತ್ರಾ ಪತಿ ಕರುಣ್ ಹಾಗು ತಿಲಕ್ ನೇಪಾಳದಲ್ಲಿ ಪಕ್ಕದ ಊರಿನವರಾಗಿದ್ದು, ಒಂದೇ ಕಡೆ ಇಬ್ಬರೂ ಕೆಲಸ ಮಾಡಿಕೊಂಡಿದ್ದರು. ಆದರೆ, ಮೇ 4ರಂದು ಪವಿತ್ರಾ ಅವರು ಕಾಣೆಯಾದ ದಿನಗಳಿಂದ ತಿಲಕ್ ಸಹ ನಾಪತ್ತೆಯಾಗಿದ್ದ.
ಪ್ರಕರಣ ದಾಖಲಿಸಿಕೊಂಡ ಸರ್ಜಾಪುರ ಪೊಲೀಸರು ತನಿಖೆಯಲ್ಲಿ ಸಂಶಯಾಸ್ಪದವಾಗಿ ನಾಪತ್ತೆಯಾಗಿದ್ದ ತಿಲಕ್ ನನ್ನು ಸೋಮವಾರ ಕೋರಮಂಗಲದಲ್ಲಿ ಬಂಧಿಸಿ ವಿಚಾರಣೆ ನಡೆಸಿದಾಗ ಈ ಪ್ರಕರಣ ಬೆಳಕಿಗೆ ಬಂದಿದೆ.
ಪವಿತ್ರಾ ಒಂಟಿಯಾಗಿದ್ದ ವೇಳೆ ತಿಲಕ್ ಮನೆಗೆ ನುಗ್ಗಿ ಅತ್ಯಾಚಾರವೆಸಗಿ ಕೊಲೆ ಮಾಡಿದ್ದಾನೆ. ನಂತರ ಪವಿತ್ರಾರ ಮನೆಯ ಸಮೀಪ ಶವವನ್ನು ಹೂತಿಟ್ಟು ಪರಾರಿಯಾಗಿದ್ದ.