ಯಲಹಂಕ: ಬೆಂಕಿ ಹಚ್ಚಿಕೊಂಡು ಬಾಲಕಿ ಆತ್ಮಹತ್ಯೆ
ಬೆಂಗಳೂರು, ಡಿ. 2: ಯಲಹಂಕ ಸಮೀಪದ ನ್ಯೂ ಟೌನ್ ಪ್ರದೇಶದ ಮನೆಯೊಂದರಲ್ಲಿ ಬಾಲಕಿಯೋರ್ವಳು ಮಂಗಳವಾರ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ. ರಾಜ್ಯಾದ್ಯಂತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಯುತ್ತಿರುವುದು ವರದಿಯಾಗುತ್ತಿರುವ ಹಿನ್ನೆಲೆಯಲ್ಲಿ ಈ ಘಟನೆ ನಗರದಲ್ಲಿ ಮತ್ತೆ ಆತಂಕ ಸೃಷ್ಟಿಸಿದೆ.
ಆತ್ಮಹತ್ಯೆ ಮಾಡಿಕೊಂಡ ಬಾಲಕಿ ಸನ್ಶೈನ್ ಶಾಲೆಯಲ್ಲಿ ಐದನೇ ತರಗತಿ ವಿದ್ಯಾರ್ಥಿನಿ. ಬಾಲಕಿ ಮೋನಿಶಾ ಶಾಲೆಗೆ ರಜೆ ಹಾಕಿದ್ದಕ್ಕೆ ಪಾಲಕರು ತರಾಟೆಗೆ ತೆಗೆದುಕೊಂಡಿದ್ದರು. ಇದನ್ನೇ ಮನಸ್ಸಿಗೆ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾಗಿರಬಹುದೆಂದು ಪೊಲೀಸರು ಅಂದಾಜಿಸಿದ್ದಾರೆ. [ನಂದಿತಾ ಪ್ರಕರಣ ಸಿಐಡಿ ತನಿಖೆಗೆ]
ಆತ್ಮಹತ್ಯೆಗೆ ಮೊದಲು ಮೊನಿಷಾ ಪತ್ರ ಬರೆದಿದ್ದು, ಅದರಲ್ಲಿ ನನ್ನ ಸಾವಿಗೆ ಯಾರೂ ಕಾರಣರಲ್ಲ ಎಂದು ತಿಳಿಸಿದ್ದಾಳೆ. ಈ ಕುರಿತು ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
ಆತ್ಮಹತ್ಯೆಗೆ ಕಾರಣ ಗೊತ್ತಾಗಿಲ್ಲ: ಪ್ರತಿಕ್ರಿಯೆ ನೀಡಿರುವ ಬೆಂಗಳೂರಿನ ಹೆಚ್ಚುವರಿ ಪೊಲೀಸ್ ಆಯುಕ್ತ (ಕಾನೂನು ಮತ್ತು ಸುವ್ಯವಸ್ಥೆ) ಅಲೋಕ್ ಕುಮಾರ್, ಬಾಲಕಿ ಬರೆದಿರುವ ಪತ್ರದಲ್ಲಿ ಯಾರನ್ನೂ ದೂಷಿಸಿಲ್ಲ. ಆಕೆಯ ಪಾಲಕರು ಆಘಾತಕ್ಕೊಳಗಾಗಿದ್ದಾರೆ. ಶಾಲೆಯ ಕುರಿತು ಪತ್ರದಲ್ಲಿ ಬರೆದಿಲ್ಲ. ಆದರೂ, ಈ ನಿಟ್ಟಿನಲ್ಲಿ ತನಿಖೆ ಮುಂದುವರಿಸುತ್ತೇವೆ ಎಂದು ತಿಳಿಸಿದ್ದಾರೆ.
ಬಾಲಕಿ ಮೇಲೆ ಅತ್ಯಾಚಾರ: 3 ದಿನಗಳ ನಂತರ ಬೆಳಕಿಗೆ
ಅಡುಗೆ ಭಟ್ಟನೋರ್ವ 8ನೇ ತರಗತಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ನಡೆಸಿದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಹನುಮಂತನಗರ ಠಾಣೆ ವ್ಯಾಪ್ತಿಯಲ್ಲಿ ವಾಸಿಸುತ್ತಿರುವ ವಿದ್ಯಾರ್ಥಿನಿ ಮೂರು ದಿನಗಳ ಹಿಂದೆ ಆರೋಗ್ಯ ಸರಿಯಿಲ್ಲದ ಕಾರಣ ಶಾಲೆಗೆ ಹೋಗದೆ ಮನೆಯಲ್ಲಿಯೇ ಉಳಿದಿದ್ದಳು. ಬಾಲಕಿ ಒಬ್ಬಳನ್ನೇ ಮನೆಯಲ್ಲಿ ಬಿಟ್ಟು ಪಾಲಕರು ಕೆಲಸಕ್ಕೆ ಹೋಗಿದ್ದರು. ಆಗ ಅಡುಗೆ ಕೆಲಸ ಮಾಡುವ ಅರುಣ್ ಎಂಬಾತ ಬಾಲಕಿಗೆ 50 ರೂ. ನೀಡಿ, ತನ್ನ ಮನೆಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದ.
ಬಾಲಕಿ ಈ ಕುರಿತು ಎಲ್ಲಿಯೂ ಬಾಯಿಬಿಟ್ಟಿರಲಿಲ್ಲ. ಆದರೆ, ತಾವು ಹಣ ನೀಡದಿದ್ದರೂ ಮಗಳು ಬೇಕರಿಯಲ್ಲಿ ತಿಂದಿ ಖರೀದಿಸಿ ತಿನ್ನುತ್ತಿರುವುದನ್ನು ನೋಡಿದ ಪಾಲಕರು ಹಣ ಎಲ್ಲಿಂದ ಬಂತು ಎಂದು ವಿಚಾರಿಸಿದ್ದಾರೆ. ಆಗ ಅಂಕಲ್ ಕೊಟ್ಟರು ಎಂದು ಬಾಲಕಿ ಉತ್ತರಿಸಿದ್ದಾಳೆ. ಏಕೆ ಕೊಟ್ಟರು ಎಂದು ವಿಚಾರಿಸಿದಾಗ ಬಾಲಕಿ ಬಾಯಿಬಿಟ್ಟಳು. ಆಗ ಕಂಗಾಲಾದ ಪಾಲಕರು ತಕ್ಷಣ ಹನುಮಂತನಗರ ಠಾಣೆಗೆ ದೂರು ನೀಡಿದರು. [ಕಾಮುಕರಿಂದ ಮಕ್ಕಳ ರಕ್ಷಿಸಲು ಹೋರಾಟ]
ಪೊಕ್ಸೋ ಅಡಿ ಪ್ರಕರಣ ದಾಖಲಿಸಲಾಗಿದ್ದು, ಆರೋಪಿ ಅರುಣ್ನನ್ನು ಬಂಧಿಸಲಾಗಿದೆ. ಎಷ್ಟೇ ಪ್ರತಿಭಟನೆ ನಡೆದರೂ, ಕಠಿಣ ಕಾನೂನುಗಳನ್ನು ಜಾರಿಗೆ ತಂದಿದ್ದರೂ ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಿರುವುದು ಜನರಲ್ಲಿ ಆತಂಕ ಮೂಡಿಸಿದೆ.