ಈಗಲ್ ಟನ್ ರೆಸಾರ್ಟ್ ಗೆ 989 ಕೋಟಿ ದಂಡ ಪಾವತಿಸಿ ಎಂದ ಸುಪ್ರೀಂ
ಬೆಂಗಳೂರು, ಸೆಪ್ಟೆಂಬರ್ 20: 989 ಕೋಟಿ ದಂಡ ಪಾವತಿಸಿ ಎಂದು ಈಗಲ್ ಟನ್ ರೆಸಾರ್ಟ್ ಗೆ ಸುಪ್ರೀಂ ಕೋರ್ಟ್ ಸೂಚಿಸಿದೆ. ರೆಸಾರ್ಟ್ ಮಾಲೀಕರು ಸರಕಾರದ ಎಪ್ಪತ್ತೇಳು ಎಕರೆ ಜಮೀನು ಒತ್ತುವರಿ ಮಾಡಿದ್ದಾರೆ ಎಂದು ಸಾಬೀತಾಗಿದ್ದರಿಂದ ದಂಡ ಪಾವತಿಸಲು ಕೋರ್ಟ್ ಹೇಳಿದೆ ಎಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಹೇಳಿದ್ದಾರೆ.
ರಾಮನಗರದ ಸಮೀಪದಲ್ಲಿ ಇರುವ ಈಗಲ್ ಟನ್ ರೆಸಾರ್ಟ್ ಒಟ್ಟಾರೆ 105 ಎಕರೆ ಜಮೀನನ್ನು ಒತ್ತುವರಿ ಮಾಡಿತ್ತು. ಆ ಪೈಕಿ ಇಪ್ಪತ್ತೆಂಟು ಎಕರೆ ಜಾಗವನ್ನು ಈಗಾಗಲೇ ವಶಪಡಿಸಿಕೊಳ್ಳಲಾಗಿದೆ. ಇನ್ನು ಬಾಕಿ ಎಪ್ಪತ್ತೇಳು ಎಕರೆಗೆ ಚದರಡಿ ಲೆಕ್ಕದಲ್ಲಿ ಮಾರುಕಟ್ಟೆ ದರವನ್ನು ಆಧರಿಸಿ ದಂಡದ ಮೊತ್ತವನ್ನು ನಿರ್ಧಾರ ಮಾಡಲಾಗಿದೆ.[ಒತ್ತುವರಿ ತೆರವು, ಮುಲಾಜಿಲ್ಲದೆ ಕ್ರಮ ಕೈಗೊಳ್ಳಿ: ಸಿಎಂ]
ಅಷ್ಟು ಹಣ್ವನ್ನು ಈಗಲ್ ಟನ್ ರೆಸಾರ್ಟ್ ನವರು ಕೊಟ್ಟು, ಜಮೀನು ಉಳಿಸಿಕೊಳ್ಳಬಹುದು ಎಂದು ಕೋರ್ಟ್ ಹೇಳಿರುವುದಾಗಿ ಕಾಗೋಡು ತಿಮ್ಮಪ್ಪ ತಿಳಿಸಿದ್ದಾರೆ. ಅಷ್ಟು ಹಣವನ್ನು ಕಟ್ಟುತ್ತೇವೆ ಎಂದು ರೆಸಾರ್ಟ್ ಪರವಾಗಿ ವಾದ ಮಂಡಿಸಿದ ವಕೀಲರು ಕೋರ್ಟ್ ನಲ್ಲಿ ಒಪ್ಪಿಗೆ ಸೂಚಿಸಿದ್ದಾರೆ. ಇದಕ್ಕೆ ಯಾವುದೇ ಕಾಲಮಿತಿ ನೀಡಿಲ್ಲ ಎಂದು ಅವರು ಹೇಳಿದ್ದಾರೆ.[ಹಿಂದೆ ಕೆರೆ ಪ್ರದೇಶ ಗುಳಂ, ಈಗ ಕೆರೆ ಒತ್ತುವರಿ ವರದಿಯೇ ಗುಳುಂ?]
ಕಳೆದ ಬಾರಿ ನಡೆದ ಸಂಪುಟ ಸಭೆಯಲ್ಲಿ ಈ ಬಗ್ಗೆ ಚರ್ಚೆ ಆಗಿದೆ. ಇಷ್ಟು ಹಣವನ್ನು ರಸ್ತೆ, ಮೇಲುಸೇತುವೆ ಇತರ ಅಭಿವೃದ್ಧಿ ಕಾರ್ಯಗಳಿಗೆ ಬಳಸುವುದಕ್ಕೆ ಸರಕಾರ ತೀರ್ಮಾನ ಕೈಗೊಂಡಿದೆ. ಮುಂದಿನ ಸಂಪುಟ ಸಭೆಯಲ್ಲಿ ಈ ವಿಚಾರವನ್ನು ಮತ್ತೊಮ್ಮೆ ಚರ್ಚಿಸುತ್ತೇವೆ. ರೇಸಾರ್ಟ್ ಮಾಲೀಕರಿಗೆ ದಂಡ ಪಾವತಿಸಲು ನೋಟಿಸ್ ಕೊಡ್ತೀವಿ. ಒಂದು ವೇಳೆ ಹಣ ಕಟ್ಟಲು ಅವರು ವಿಫಲರಾದರೆ ಒತ್ತುವರಿ ಜಮೀನನ್ನು ಸರಕಾರ ವಶಕ್ಕೆ ಪಡೆಯುತ್ತದೆ ಎಂದು ಸಚಿವರು ತಿಳಿಸಿದ್ದಾರೆ.