ಆಸ್ತಿ ವಿವರ ಸಲ್ಲಿಸದ ಬಿಬಿಎಂಪಿಯ 96 ಕಾರ್ಪೊರೇಟರ್ ಗಳು
ಬೆಂಗಳೂರು, ಅಕ್ಟೋಬರ್ 23: ಆಸ್ತಿ ಹಾಗೂ ಸಾಲದ ವಿವರಗಳನ್ನು ಘೋಷಿಸದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ 96 ಕಾರ್ಪೊರೇಟರ್ ಗಳು ಅನರ್ಹತೆಯ ಭೀತಿ ಎದುರಿಸುತ್ತಿದ್ದಾರೆ. ಕರ್ನಾಟಕ ಮುನ್ಸಿಪಲ್ ಕಾರ್ಪೊರೇಷನ್ ಕಾಯ್ದೆ 1976ರ ಸೆಕ್ಷನ್ 19ರ ಪ್ರಕಾರ ಕಾರ್ಪೊರೇಟರ್ ಗಳು ಮೇಯರ್ ಬಳಿ ತಮ್ಮ ಆಸ್ತಿ ಹಾಗೂ ಸಾಲದ ವಿವರಗಳನ್ನು ನೀಡಬೇಕು.
ಇಂದಿರಾ ಕ್ಯಾಂಟೀನ್ ಉಪಹಾರದಲ್ಲಿ ಜಿರಳೆ, ದೂರು ದಾಖಲು
ಆದರೆ, ಬಿಬಿಎಂಪಿ ಮೂಲಗಳ ಪ್ರಕಾರ ಈವರೆಗೆ ನೂರಾ ಎರಡು ಕಾರ್ಪೊರೇಟರ್ ಗಳು ಮಾತ್ರ ತಮ್ಮ ಆಸ್ತಿ ವಿವರ ನೀಡಿದ್ದಾರೆ. ಉಳಿದವರು ಆ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ಈ ಅವಧಿಯ ಕಾರ್ಪೊರೇಟರ್ ಗಳು ಕಾರ್ಯಾರಂಭ ಮಾಡಿದ್ದು ಸೆಪ್ಟೆಂಬರ್ 13, 2015ರಲ್ಲಿ.
ಅಲ್ಲಿಂದ 30 ದಿನದೊಳಗೆ ಎಲ್ಲ 198 ಕಾರ್ಪೊರೇಟರ್ ಗಳು ಆಸ್ತಿ ವಿವರ ಸಲ್ಲಿಸಬೇಕಿತ್ತು. ಆ ನಂತರ ಪ್ರತಿ ವರ್ಷ ಅಕ್ಟೋಬರ್ 12ನೇ ತಾರೀಕಿಗೂ ಮುಂಚೆ ಆಸ್ತಿ ವಿವರಗಳಗಳನ್ನು ನೀಡಬೇಕು.
ಬಿಜೆಪಿಯ ನಗರಾಧ್ಯಕ್ಷ ಎನ್.ಆರ್.ರಮೇಶ್ ಮಾತನಾಡಿ, ಚುನಾಯಿತ ಪ್ರತಿನಿಧಿಗಳು ಮೇಯರ್ ಗೆ ಆಸ್ತಿ ವಿವರ ಸಲ್ಲಿಸಬೇಕು. ಅವರು ಬಿಬಿಎಂಪಿ ಆಯುಕ್ತರಿಗೆ ನೀಡಿದರೆ, ಆ ನಂತರ ಅವರು ಪ್ರಾದೇಶಿಕ ಆಯುಕ್ತರಿಗೆ ನೀಡಬೇಕಿತ್ತು.
ಬೆಂಗಳೂರು 'ರಸ್ತೆಗುಂಡಿ'ಗಳ ವಿರುದ್ದ ತಡರಾತ್ರಿ ಭಾರೀ ಕಾರ್ಯಾಚರಣೆ!
"ಯಾರಾದರೂ ಸಾಮಾಜಿಕ ಕಾರ್ಯಕರ್ತರು ಬಿಬಿಎಂಪಿಯಿಂದ ಮಾಹಿತಿ ಸಂಗ್ರಹಿಸಿ, ಕೋರ್ಟ್ ಮೆಟ್ಟಿಲೇರಿದರೆ ಆಸ್ತಿ ವಿವರ ಸಲ್ಲಿಸದವರನ್ನು ಪ್ರಾದೇಶಿಕ ಆಯುಕ್ತರು ಅನರ್ಹಗೊಳಿಸಬಹುದು" ಎಂದು ರಮೇಶ್ ಹೇಳಿದ್ದಾರೆ.
ಮೇಯರ್ ಸಂಪತ್ ರಾಜ್, ಅಕ್ಟೋಬರ್ 12ನೇ ತಾರೀಕಿನವರೆಗೂ ಅರವತ್ತು ಕಾರ್ಪೊರೇಟರ್ ಗಳು ಆಸ್ತಿ ವಿವರ ಸಲ್ಲಿಸಿದ್ದಾರೆ. ಬೆಂಗಳೂರಿನ ರಸ್ತೆಗಳು ಹಾಗೂ ಮಳೆ ಹಾನಿ ಬಗ್ಗೆ ಕೆಲಸಗಳಲ್ಲಿ ತಲ್ಲೀನನಾಗಿದ್ದೆ. ಆ ನಂತರ ಎಷ್ಟು ಮಂದಿ ಸಲ್ಲಿಸಿದ್ದಾರೋ ಗೊತ್ತಿಲ್ಲ. ಕೆಲವರಿಗೆ ದಾಖಲೆಗಳು ಬೇಕೆಂದು ವಾಪಸ್ ಕಳುಹಿಸಲಾಗಿದೆ ಎಂದು ತಿಳಿಸಿದ್ದಾರೆ.
ಆದರೆ, ಈ ಕಾರಣಕ್ಕೆ ಯಾರೂ ಅನರ್ಹ ಆಗುವುದಿಲ್ಲ ಎಂದು ಅವರು ಹೇಳಿದ್ದಾರೆ. ಆದರೆ ಈ ಬಗ್ಗೆ ಕಾನೂನು ತಜ್ಞರ ಅಭಿಪ್ರಾಯವನ್ನು ಪಡೆದು, ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.