ಬೆಂಗಳೂರಿನಲ್ಲಿರುವ ರಸ್ತೆ ಗುಂಡಿಗಳ ಸಂಖ್ಯೆ 9 ಸಾವಿರ!
ಬೆಂಗಳೂರು, ಸೆಪ್ಟೆಂಬರ್ 21: ಬೆಂಗಳೂರಿನ ರಸ್ತೆಗಳಲ್ಲಿ ಎಷ್ಟು ಗುಂಡಿಗಳಿವೆ ಎಂಬುದನ್ನು ಪತ್ತೆ ಮಾಡುವ ಶಕ್ತಿ ಕೇವಲ ಮಳೆರಾಯನಿಗೆ ಮಾತ್ರ ಇದೆಯೇನೋ! ಏಕೆಂದರೆ, ಮಳೆ ಬಂತೆಂದರೆ ಸಾಕು ಬೆಂಗಳೂರಿನ ರಸ್ತೆಗಳಲ್ಲಿರುವ ಗುಂಡಿಗಳಲ್ಲಿ ನೀರು ತುಂಬಿ ಅವು ಕಣ್ಣಿಗೆ ರಾಚುವಂತೆ ಕಾಣುತ್ತವೆ.
ಬೆಂಗಳೂರಲ್ಲಿ ಪುನಃ ಜೆಸಿಬಿ ಘರ್ಜನೆ, ರಾಜಕಾಲುವೆ ಒತ್ತುವರಿ ತೆರವು
ಹೀಗಾದಾಗಲೇ ಬಿಬಿಎಂಪಿಯೂ ಎಚ್ಚೆತ್ತುಕೊಳ್ಳುತ್ತದೆ. ತಕ್ಷಣವೇ ರಸ್ತೆಗಳಲ್ಲಿರುವ ಗುಂಡಿಗಳನ್ನು ಮುಚ್ಚುತ್ತೇವೆ ಎಂದು ಹೇಳುತ್ತದೆ. ಕೆಲಸವನ್ನೂ ಆರಂಭಿಸುತ್ತದೆ. ಆದರೆ, ಅಷ್ಟರಲ್ಲಿ ಮಳೆಗಾಲವೂ ಮಾಯವಾಗುತ್ತದೆ. ಗುಂಡಿಗಳೂ 'ಸದ್ಯ ಬಚಾವಾದೆವು' ಎಂದುಕೊಂಡು ಒಳಗೊಳಗೇ ನಕ್ಕು ಸುಮ್ಮನಾಗುತ್ತವೆ! ಆದರೆ, ಮತ್ತೆ ಮಳೆಗಾಲ ಬಂದಾಗ ಅದೇ ಹಾಡು, ಅದೇ ರಾಗ!
ಬೆಂಗಳೂರಿಗೆ ಮತ್ತೆರಡು ಫ್ಲೈಓವರ್, ಅಂಡರ್ ಪಾಸ್
ಆದರೆ, ಈ ಬಾರಿ ಇದು ಚುನಾವಣಾ ವರ್ಷವಾಗಿರುವುದರಿಂದ ಬಿಬಿಎಂಪಿಯೂ ರಸ್ತೆ ಗುಂಡಿ ಮುಚ್ಚುವ ಕೆಲಸವನ್ನು ಗಂಭೀರವಾಗಿ ತೆಗೆದುಕೊಂಡಂತಿದೆ. ಹಾಗಾಗಿ, ಈ ಬಾರಿ ಅದು ಗುಂಡಿಗಳನ್ನು ಮುಚ್ಚುವ ಮೊದಲು ಬೆಂಗಳೂರಿನಲ್ಲಿ ಒಟ್ಟು ಎಷ್ಟು ಗುಂಡಿಗಳಿವೆ ಎಂಬುದನ್ನು ಲೆಕ್ಕ ಹಾಕಿದೆ!
ಬಿಬಿಎಂಪಿ ಲೆಕ್ಕಾಚಾರ
ಸದ್ಯಕ್ಕೆ ಬೆಂಗಳೂರಿನಲ್ಲಿ ಸುಮಾರು 9 ಸಾವಿರ ಗುಂಡಿಗಳಿವೆ ಎಂದು ಬಿಬಿಎಂಪಿ ಲೆಕ್ಕ ಹಾಕಿದೆ. ಇವುಗಳನ್ನು ಬೇಗನೇ ಮುಚ್ಚಲೇಬೇಕು. ಇದಕ್ಕಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಬಿಬಿಎಂಪಿ ಹೇಳಿದೆ.
ಕೇವಲ 4 ತಿಂಗಳಲ್ಲಿ ಹೆಚ್ಚಾದ ಗುಂಡಿಗಳು
ಇದೇ ವರ್ಷ ಮೇ ತಿಂಗಳಿನಲ್ಲಿ ಬಿಬಿಎಂಪಿಯು ಸುಮಾರು 5,067 ರಸ್ತೆ ಗುಂಡಿಗಳನ್ನು ಪತ್ತೆ ಹಚ್ಚಿತ್ತು. ಅದಾಗಿ, ನಾಲ್ಕೈದು ತಿಂಗಳುಗಳಲ್ಲೇ ಈ ಲೆಕ್ಕ 9 ಸಾವಿರಕ್ಕೆ ಮುಟ್ಟಿರುವದುು ಆತಂಕಕಾರಿ ಎಂದು ಖುದ್ದು ಬಿಬಿಎಂಪಿಯೇ ಹೇಳಿದೆ.
ಈ ಬಾರಿ ಬೇರೆ ತಂತ್ರಗಾರಿಕೆಗೆ ಮೊರೆ?
ರಸ್ತೆ ಗುಂಡಿಗಳನ್ನು ಮುಚ್ಚುವ ನಿಟ್ಟಿನಲ್ಲಿ ಬಿಬಿಎಂಪಿ ಈ ಹಿಂದೆ ಮಾಡಿರುವ ಕೆಲಸಗಳು ದೀರ್ಘಕಾಲಿಕ ಪರಿಹಾರ ಮಾದರಿಯದ್ದಲ್ಲ. ಇಂದು ರಸ್ತೆ ಗುಂಡಿಯನ್ನು ಸರಿಪಡಿಸಿದರೆ, ಇನ್ನು ಮೂರೇ ತಿಂಗಳುಗಳಲ್ಲಿ ಅವು ಮತ್ತೆ ಬಾಯಿ ತೆರೆಯುತ್ತವೆ. ಹಾಗಾಗಿಯೇ, ಈ ಬಾರಿ ಬೇರೆಯದ್ದೇ ತಂತ್ರಗಾರಿಕೆ ಬಳಸಲು ಬಿಬಿಎಂಪಿ ನಿರ್ಧರಿಸಿದೆ.
ತೇವಾಂಶದಿಂದ ತೊಂದರೆ
ರಸ್ತೆ ಗುಂಡಿಗಳನ್ನು ಈವರೆಗೆ ಆಸ್ಫಾಲ್ಟ್ ಹಾಗೂ ಕಾಂಕ್ರೀಟ್ ಗಳನ್ನು ಹಾಕಿ ಮುಚ್ಚಲಾಗುತ್ತಿತ್ತು. ಆದರೆ, ಬೆಂಗಳೂರಿನಲ್ಲಿ ವರ್ಷದಲ್ಲಿ ಹಲವಾರು ತಿಂಗಳು ಮಳೆ ಸುರಿಯುವುದರಿಂದ ತೇವಾಂಶವು ಅಸ್ಫಾಲ್ಟ್ ಅನ್ನು ಸಡಿಲಗೊಳ್ಳುವಂತೆ ಮಾಡುತ್ತದೆ. ಹಾಗಾಗಿಯೇ, ರಸ್ತೆಗಳು ಪುನಃ ಹಾಳಾಗುತ್ತವೆ ಎನ್ನುತ್ತಾರೆ ಬಿಬಿಎಂಪಿ ಎಕ್ಸಿಕ್ಯೂಟಿವ್ ಇಂಜಿನಿಯರ್ ಬಿ.ಎಸ್. ಪ್ರಹ್ಲಾದ್.
ಬೇಸಿಗೆ ಬರಲಿ ಎನ್ನುತ್ತಿರುವ ಬಿಬಿಎಂಪಿ
ಹಾಗಾಗಿ, ಬದಲಿ ತಂತ್ರಜ್ಞಾನವೊಂದಕ್ಕೆ ಮೊರೆಹೋಗಲು ಬಿಬಿಎಂಪಿ ನಿರ್ಧರಿಸಿದೆ. ರಸ್ತೆ ರಿಪೇರಿಗಳನ್ನು ರಾತ್ರಿ ವೇಳೆಯೇ ನಡೆಸಬೇಕು. ಆದರೆ, ಇತ್ತೀಚೆಗೆ ರಾತ್ರಿಯಿಡೀ ಮಳೆ ಹಿಡಿದುಕೊಳ್ಳುತ್ತಿರುವುದರಿಂದ ಬರುವ ಬೇಸಿಗೆಯಲ್ಲಿ ರಸ್ತೆ ಕಾಮಗಾರಿ ನಡೆಸುವಂತೆ ಬಿಬಿಎಂಪಿಯ ಹಿರಿಯ ಇಂಜಿನಿಯರ್ ಗಳು ಸಲಹೆ ನೀಡುತ್ತಿದ್ದಾರೆ. ಆದರೆ, ಸಾರ್ವಜನಿಕರ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳಲು ಏನಾದರೂ ಕಸರತ್ತು ನಡೆಸಿ ರಸ್ತೆ ಗುಂಡಿಗಳನ್ನು ಮುಚ್ಚಲು ಬಿಬಿಎಂಪಿ ಆಲೋಚನೆಯಲ್ಲಿ ಮಗ್ನವಾಗಿದೆ.