ಅಮ್ಮನ ಕೊಲೆಗೆ ಸಾಕ್ಷ್ಯವಾದ ಆ ಮಗುವಿನ ವಯಸ್ಸು 5 ವರ್ಷ
ಬೆಂಗಳೂರು, ಸೆಪ್ಟೆಂಬರ್ 21: ಬೆಂಗಳೂರಿನಲ್ಲಿ ನಡೆದ ಕೊಲೆ ಪ್ರಕರಣವೊಂದರಲ್ಲಿ ಮಗುವೊಂದು ಆಡಿದ ಮಾತುಗಳು ಆರೋಪಿಯ ಬಂಧನಕ್ಕೆ ಕಾರಣವಾಗಿದೆ. ಬೇಸರದ ವಿಚಾರ ಏನೆಂದರೆ ಕೊಲೆ ಆಗಿರುವುದು ಆ ಮಗುವಿನ ತಾಯಿಯದು. ಆರೋಪಿ ಸ್ಥಾನದಲ್ಲಿರುವುದು ಸ್ವತಃ ಆ ಮಗುವಿನ ತಂದೆ.
ಈಚೆಗೆ 29 ವರ್ಷದ ಸುಪ್ರೀತಾ ಎಂಬಾಕೆ ನಗರದ ತನ್ನ ಮನೆಯಲ್ಲೇ ಕೊಲೆಯಾಗಿದ್ದಳು. ಆಕೆಯ ಪತಿ ರವಿರಾಜ್ ಶೆಟ್ಟಿಯೇ ಕೊಲೆ ಮಾಡಿದ್ದರೂ ಪೊಲೀಸರಿಗೆ ಆ ಬಗ್ಗೆ ಯಾವುದೇ ಸಾಕ್ಷ್ಯಾಧಾರ ಸಿಕ್ಕಿರಲಿಲ್ಲ. ಈ ಹಂತದಲ್ಲಿ ಪ್ರಕರಣ ಭೇದಿಸಲು ಕಷ್ಟವಾಗಿತ್ತು. ನನ್ನ ಪತ್ನಿ ಮಾನಸಿಕ ರೋಗಿ. ಆಕೆ ಅತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ರವಿರಾಜ್ ಹೇಳಿಕೆ ನೀಡಿದ್ದ.[ಭಾಸ್ಕರ ಶೆಟ್ಟಿ ಶವ ಸುಡಲು 20 ಲೀಟರ್ ಪೆಟ್ರೋಲ್ ಬಳಕೆ!]
ಹೆಂಡತಿ ತೀರಿಕೊಂಡ ವೇಳೆ ನಾನು ಮನೆಯಿಂದ ಹೊರಗೆ ಹೋಗಿದ್ದೆ. ಮಗಳು ಮಲಗಿದ್ದಳು ಎಂದಿದ್ದ. ಆ ಹಂತದಲ್ಲಿ ಈ ದಂಪತಿಯ ಮಗಳು, ಐದು ವರ್ಷದ ರೀತುಳನ್ನು ಮಾತಾಡಿಸಲು ಪೊಲೀಸರು ನಿರ್ಧರಿದರು. ಸುಪ್ರೀತಾ ಸಾವಿನ ನಂತರ ಮಗ ತನ್ನ ತಾಯಿಯ ಪೋಷಕರ ಜತೆಗಿತ್ತು. ತನ್ನ ತಾಯಿ ಆಸ್ಪತ್ರೆಯಲ್ಲಿದ್ದಾಳೆ ಎಂದು ತಿಳಿದುಕೊಂಡಿತ್ತು.
'ನಾವು ಮಹಿಳಾ ಎಎಸ್ ಐ ಮೂಲಕ ಮಗವನ್ನು ಮಾತನಾಡಿಸಿದೆವು' ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ. ಆ ಇನ್ ಸ್ಪೆಕ್ಟರ್ ಮೊದಲಿಗೆ ಆ ಮಗುವಿನ ಇಷ್ಟಗಳ ಬಗ್ಗೆ ವಿಚಾರಿಸಿದ್ದಾರೆ. ರೀತೂಗೆ ಚಾಕೊಲೇಟ್, ಗೊಂಬೆಗಳಂದರೆ ಇಷ್ಟ. ಅದನ್ನು ತೆಗೆದುಕೊಂಡು, ಮಾಮೂಲಿ ದಿರಿಸಿನಲ್ಲಿ ತೆರಳಿದ್ದಾರೆ. ಆರಾಮವಾಗಿ ಮಾತಾಡಲು ಆ ಮಗು ಸ್ವಲ್ಪ ಸಮಯ ತೆಗೆದುಕೊಂಡಿದೆ.[ಚಿತ್ರದುರ್ಗ : ಪಿಎಸ್ಐ ಗಿರೀಶ್ ಪತ್ನಿ ಕೊಲೆ ಪ್ರಕರಣಕ್ಕೆ ತಿರುವು]
ಆ ನಂತರ ಆಕೆಯ ತಾಯಿ ಬಗ್ಗೆ ಕೇಳಿದಾಗ, 'ನನ್ನ ಅಮ್ಮ ಆಸ್ಪತ್ರೆಯಲ್ಲಿ ಟ್ರೀಟ್ ಮೆಂಟ್ ತಗೊಂಡ ಮೇಲೆ ವಾಪಸ್ ಬರ್ತಾರೆ' ಎಂದಿದೆ. 'ಅಮ್ಮನಿಗೆ ಗಾಯವಾದಾಗ ಮನೆಯಲ್ಲಿ ಯಾರಿದ್ದರು?' ಎಂದು ಕೇಳಿದ್ದಾರೆ. ಅದಕ್ಕೆ, ಅಮ್ಮನನ್ನ ತೋಳಿನ ಮೇಲೆ ಹಾಕಿಕೊಂಡು ಅಪ್ಪ ಅಡುಗೆಮನೆಗೆ ಹೋದರು. ವಾಪಸ್ ಬರುವಾಗ ಅವರ ಮೈ ತುಂಬ ರಕ್ತವಾಗಿತ್ತು ಎಂದಿದೆ.
ಮುಂದುವರಿಸಿ, ಅಮ್ಮ ಅಡುಗೆಮನೆಯಲ್ಲಿ ಬಿದ್ದುಹೋದರು. ಆಸ್ಪತ್ರೆಗೆ ಕರೆದುಕೊಂಡು ಹೋಗ್ತೀನಿ ಅಂತ ಅಪ್ಪ ಹೇಳಿದರು ಎಂದು ಅಧಿಕಾರಿಗೆ ಹೇಳಿದೆ. ಈ ಮಾತುಕತೆಯನ್ನೆಲ್ಲ ಮೊಬೈಲ್ ಫೋನ್ ನಲ್ಲಿ ರೆಕಾರ್ಡ್ ಮಾಡಿಕೊಂಡು, ಅಲಸೂರು ಪೊಲೀಸ್ ಠಾಣೆಗೆ ಹಿಂತಿರುಗಿದ್ದಾರೆ. ಅಲ್ಲಿಗೆ ರವಿರಾಜ್ ನನ್ನು ಕರೆಸಿ, ರೆಕಾರ್ಡ್ ಮಾಡಿದ್ದನ್ನ ತೋರಿಸಿದಾಗ ಆತ ತಪ್ಪೊಪ್ಪಿಕೊಂಡಿದ್ದಾನೆ. ಅದು ಕೂಡ ದಾಖಲು ಮಾಡಿಕೊಳ್ಳಲಾಗಿದೆ.[ಮೈಸೂರು : ಬಿಜೆಪಿ ಕಾರ್ಯಕರ್ತ ರಾಜು ಹತ್ಯೆ ರಹಸ್ಯ ಬಯಲು]
ಆರೋಪಿಗೆ ಶಿಕ್ಷೆ ಕೊಡಿಸುವಲ್ಲಿ ಈ ಫೂಟೇಜ್ ಗಳು ತುಂಬ ಮುಖ್ಯವಾದ ಸಾಕ್ಷ್ಯ. ಆ ಹೆಣ್ಣುಮಗಳ ಹೇಳಿಕೆ ಕೂಡ ಬಹಳ ಮುಖ್ಯವಾಗುತ್ತದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.