ಕೆಂಪೇಗೌಡರ ಸ್ಮರಣೆಗೆ 5 ಕಾರಣಗಳು (ಕೆಂಪೇಗೌಡ ಜಯಂತಿ ವಿಶೇಷ)
ಅದ್ಭುತ ಕನಸುಗಾರರಾಗಿದ್ದ ಕೆಂಪೇಗೌಡರು, ಒಂದಾನೊಂದು ಕಾಲದಲ್ಲಿ ನಿರ್ಮಿಸಿದ ಬೆಂಗಳೂರು ಇಂದು ಕೋಟ್ಯಂತರ ಜನರಿಗೆ ಆಶ್ರಯತಾಣವಾಗಿದೆ. ಇಂಥ ಕನಸುಗಾರನ ಜನ್ಮದಿನವಾದ ಜೂನ್ 27ರಂದು ಅವರನ್ನು ಸ್ಮರಿಸಲು ಇರುವ ಐದು ಪ್ರಮುಖ ಕಾರಣಗಳನ್ನು ಇಲ್ಲಿ ಕೊಡಲಾ
1537ರಲ್ಲಿ ಬೆಂದಕಾಳೂರು ಎಂಬ ನಗರವನ್ನು ಕಟ್ಟುವ ಮೂಲಕ ಬೆಂಗಳೂರು ಎಂಬ ಹೆಸರಿನ ನಗರವಿಂದು ಜಗತ್ಪ್ರಸಿದ್ಧ ನಗರವಾಗಿ ಬೆಳೆಯಲು ಕಾರಣರಾದವರು ಈ ಪ್ರಾಂತ್ಯದ ಅರಸ ಕೆಂಪೇಗೌಡ ಅವರ ಸಂಸ್ಮರಣಾ ದಿವಸವಿದು. ಹಾಗಾಗಿಯೇ, ಜೂನ್ 27ರಂದು ಕೆಂಪೇಗೌಡ ಜಯಂತ್ಯೋತ್ಸವವನ್ನು ಆಚರಿಸಲಾಗುತ್ತಿದೆ.
ರಾಜ್ಯ ಸರ್ಕಾರವು ಇದೇ ಮೊದಲಿಗೆ ಕೆಂಪೇಗೌಡರ ಜಯಂತಿಯನ್ನು ನಾಡಿನಾದ್ಯಂತ ಆಚರಿಸಲು ನಿರ್ಧರಿಸಿದೆ. ಹಾಗಾಗಿ, ಈ ಬಾರಿಯ ಕೆಂಪೇಗೌಡರ ಜಯಂತಿಗೆ ಮತ್ತಷ್ಟು ಮಹತ್ವ ಬಂದಿದೆ.
ಉದ್ಯಾನ ನಗರಿ, ಉದ್ಯೋಗಿಗಳ, ಉದ್ಯೋಗದಾತರ ಆಶ್ರಯ ತಾಣ, ಅಭಿವೃದ್ಧಿಯ ಅವಕಾಶಗಳ ಆಗರ ಎಂಬಿತ್ಯಾದಿ ಹೆಸರುಗಳನ್ನು ಈ ಆಧುನಿಕ ಕಾಲದಲ್ಲಿ ಗಳಿಸಿಕೊಂಡು ತನ್ನದೇ ಆದ ವಿಶಿಷ್ಟ ವೇಗದಲ್ಲಿ ಬೆಳೆಯುತ್ತಿರುವ ಈ ನಗರವು ಹಲವಾರು ಸಾಧನೆಗಳ ಮೂಲಕ ವಿಶ್ವಮಟ್ಟದಲ್ಲಿ ಗಮನ ಸೆಳೆದಿದೆ.
ಜಾಗತಿಕ ಐಟಿ ಕ್ಷೇತ್ರದಲ್ಲಂತೂ ಬ್ರಾಂಡ್ ಬೆಂಗಳೂರು ಎಂಬ ಮಹಾಛಾಪನ್ನೂ ಮೂಡಿಸಿರುವ ಈ ಊರಿನ ಮತ್ತೊಂದು ಹೆಗ್ಗಳಿಕೆ. ಉದ್ಯೋಗ ಅರಸಿ ಬರುವವರಿಗೆ ತನ್ನೊಡಲಲ್ಲಿ ಜಾಗ ನೀಡಿ ಅವರ ಜೀವನಕ್ಕೆ ದಾರಿ ತೋರುತ್ತಿರುವ, ರಾಜ್ಯದ ವಿವಿಧ ಜಿಲ್ಲೆಗಳ ಯುವ ಪೀಳಿಗೆಯ ಆಶಾಕಿರಣವಾಗಿರುವ ಈ ಬೆಂಗಳೂರು ಕಟ್ಟಿದ ಪುಣ್ಯಾತ್ಮ ಕೆಂಪೇಗೌಡರಿಗೆ ಬೆಂಗಳೂರಿಗರು, ಕನ್ನಡಿಗರು ಚಿರಋಣಿಗಳಾಗಿರಲೇಬೇಕು. ಈ ಮಹಾಶಯರ ಜನ್ಮದಿನದಂದು ಅವರನ್ನು ಮರೆಯದೇ ಸ್ಮರಿಸಲು ಇರುವ ಐದು ಕಾರಣಗಳನ್ನು ಇಲ್ಲಿ ಪಟ್ಟಿ ಮಾಡಿಕೊಡಲಾಗಿದೆ.
ನಗರ ಕಟ್ಟುವ ಕನಸು ಕಂಡ ಕೆಂಪೇಗೌಡರು
ಬೆಂದಕಾಳೂರಿನ ನಿರ್ಮಾಣವಾಗುವ ಮೊದಲು ಕೆಂಪೇಗೌಡರು, ವಿಜಯ ನಗರದ ಅರಸರಿಗೆ ಸಾಮಂತರಾಗಿದ್ದರು. ಶ್ರೀ ಕೃಷ್ಣದೇವರಾಯ ಮಡಿದ ನಂತರ ಅವರ ದಾಯಾದಿ ಅಚ್ಯುತರಾಯರಿಗೆ ವಿಧೇಯರಾಗಿದ್ದ ಕೆಂಪೇಗೌಡರಿಗೆ ಬೆಂದಕಾಳೂರೆಂಬ ನಗರ ಕಟ್ಟುವ ಮನಸ್ಸಾಯಿತು. ಇದನ್ನು ಅರಸರ ಬಳಿ ತೋಡಿಕೊಂಡರು. ತಕ್ಷಣವೇ ಅಚ್ಯುತರಾಯರು ಕೆಂಪೇಗೌಡರಿಗೆ ಬೇಕಾದ ಸವಲತ್ತುಗಳನ್ನು ನೀಡಿ, ಕೆಂಗೇರಿ, ಹಲಸೂರು, ಕುಂಬಳಗೋಡು ಸೇರಿದಂತೆ 12 ಹೋಬಳಿಗಳನ್ನು ಕೆಂಪೇಗೌಡರಿಗೆ ಬಳುವಳಿಯಾಗಿ ನೀಡಿ ನಗರ ಕಟ್ಟಲು ಪ್ರೋತ್ಸಾಹ ನೀಡಿದರು. ಅದೇ ಬೆಂಗಳೂರು ನಿರ್ಮಾಣಕ್ಕೆ ಶ್ರೀಕಾರ.
ಉತ್ತಮ ಹವಾಮಾನ
ಅಷ್ಟಕ್ಕೂ ಕೆಂಪೇಗೌಡರು ಬೆಂಗಳೂರನ್ನು ಆಯ್ಕೆ ಮಾಡಿಕೊಂಡಿದ್ದರ ಹಿಂದೆ ವೈಜ್ಞಾನಿಕ ಕಾರಣಗಳಿವೆ. ಮುಖ್ಯವಾಗಿ ಸಮುದ್ರ ಮಟ್ಟಕ್ಕಿಂತ ಸುಮಾರು 900 ಮೀ. ಎತ್ತರವಿರುವ ಈ ಪ್ರದೇಶವು ತಂಪಾಗಿದ್ದು, ಮಲೆನಾಡಿನ ಸೊಬಗನ್ನು ಹೋಲುವ ಹವಾಮಾನವನ್ನು ಸೂಸುತ್ತಿತ್ತು. ನಾನಾ ಕೆರೆಗಳು, ವೃಷಭಾವತಿ, ನಂದಿ ತೀರ್ಥ ಎಂಬಿತ್ಯಾದಿ ಚಿಲುಮೆಗಳು ಜನರಿಗೆ ಕುಡಿಯಲು ಹಾಗೂ ವ್ಯವಸಾಯಕ್ಕೆ ಯೋಗ್ಯವಾದ ನೀರನ್ನು ಒದಗಿಸುತ್ತಿದ್ದವು.
ವಾಸಯೋಗ್ಯ ಪ್ರದೇಶದ ಗುರುತು
ಹವಾಮಾನ, ಭೂಮಿಯ ಫಲವತ್ತತೆ, ಎಲ್ಲೆಲ್ಲೂ ಹಸಿರುಗಳು ತುಂಬಿದ್ದು, ನೋಡುವ ನೋಟದಲ್ಲೇ ನೋಡುಗರ ಆಯಾಸ ಪರಿಹರಿಸುವಂಥ ಶಕ್ತಿಯಿತ್ತು ಇಲ್ಲಿನ ರಮಣೀಯತೆಯಿತ್ತು. ಈ ಪ್ರದೇಶಕ್ಕೆ ಮರುಳಾದ ಕೆಂಪೇಗೌಡರು ಇದನ್ನು ಜನರ ವಾಸಕ್ಕೆ ಯೋಗ್ಯವಾದ ನಗರವನ್ನಾಗಿಸುವ ಉದ್ದೇಶದಿಂದ ಇಲ್ಲಿ ನಗರ ನಿರ್ಮಾಣಕ್ಕೆ ಕೈ ಹಾಕಿದರು.
ಇವೆಲ್ಲಾ ಕೆಂಪೇಗೌಡರ ಕೊಡುಗೆ
ಬೆಂಗಳೂರು ಕಟ್ಟುವ ನಿಟ್ಟಿನಲ್ಲಿ ಕೆಂಪೇಗೌಡರು ಅದೆಷ್ಟು ಮಹತ್ವಾಕಾಂಕ್ಷಿಯಾಗಿದ್ದರೆಂದರೆ, ಈ ಪ್ರದೇಶದ ಸಂಪನ್ಮೂಲಗಳನ್ನು ಅರಿತು ಮುಂದಿನ ಜನಾಂಗಕ್ಕೆ ಬೇಕಾದ ಎಲ್ಲಾ ಸೌಕರ್ಯಗಳನ್ನು ಅವರು ಆಗಲೇ ನಿರ್ಮಿಸಿದ್ದರು. ಉದಾಹರಣೆಗೆ, ಆಗ ಈ ಪ್ರದೇಶದಲ್ಲಿದ್ದ ಕೆರೆಗಳಿಗೆ ಹೆಚ್ಚುವರಿಯಾಗಿ ಮತ್ತಷ್ಟು ಕೆರೆಗಳನ್ನು ಕಟ್ಟಿಸಿದ ಕೆಂಪೇಗೌಡರು, ಒಂದು ಕೆರೆ ತುಂಬಿದರೆ ಮತ್ತೊಂದು ಕೆರೆಗೆ ನೀರು ಹೋಗುವಂಥ ಸೌಕರ್ಯಗಳನ್ನು ಆಗಲೇ ಕಲ್ಪಿಸಿದ್ದರು. ಬೆಂಗಳೂರಿಗೆ ಯಾವುದೇ ನದಿಯ ಆಸರೆಯಿಲ್ಲ. ಹಾಗಾಗಿ, ಮುಂದಿನ ಪೀಳಿಗೆಗೆ ನೀರಿನ ತೊಂದರೆಯಾಗಬಾರದೆಂಬ ಸದುದ್ದೇಶ ಅದರ ಹಿಂದಿತ್ತು. ಅವರ ದೂರದೃಷ್ಟಿತ್ವಕ್ಕೆ ಅದೇ ಸಾಕ್ಷಿ.
ದೂರದೃಷ್ಟಿತ್ವ, ಮಹತ್ವಾಂಕ್ಷೆಗಳ ಸಾಕಾರ
ಬೆಂಗಳೂರಿನ ಸೌಕರ್ಯಗಳು, ಸಂಪನ್ಮೂಲಗಳು, ಇಲ್ಲಿನ ಹವಾಮಾನ - ಈ ಎಲ್ಲಾ ವಿಚಾರಗಳು ಭರತ ಖಂಡದ ಇತರ ಪ್ರದೇಶಗಳ ಜನರನ್ನು ಆಕರ್ಷಿಸಬಹುದು. ಇದರ ಪರಿಣಾಮವಾಗಿ, ಎಲ್ಲರೂ ಇಲ್ಲೇ ನೆಲೆಸಲು ಬಂದರೆ ಮುಂದಾಗಬಹುದಾದ ತೊಂದರೆಗಳೇನು ಎಂಬುದನ್ನು ಮನಗಂಡಿದ್ದ ಕೆಂಪೇಗೌಡರು, ನಾಲ್ಕು ದಿಕ್ಕುಗಳಲ್ಲಿಯೂ ಹೆಬ್ಬಾಗಿಲುಗಳನ್ನು (ಹಲಸೂರು, ಕೆಂಗೇರಿ, ಯಶವಂತಪುರ ಹಾಗೂ ಯಲಹಂಕ ಹೆಬ್ಬಾಗಿಲುಗಳು) ನಿರ್ಮಿಸಿ, ಈ ನಗರದ ಜನವಸತಿಯು ಈ ಹೆಬ್ಬಾಗಿಲುಗಳನ್ನು ದಾಟಬಾರದೆಂದು ಸೂಚ್ಯವಾಗಿ ಹೇಳಿದ್ದರು. ಹೀಗೆ, ತಮ್ಮದೇ ಆದ ಕನಸುಗಳು, ದೂರದೃಷ್ಟಿತ್ವದಡಿ ಈ ನಗರ ನಿರ್ಮಿಸಿದ ಕೆಂಪೇಗೌಡರಿಗೆ ನಮೋ ನಮಃ.