ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಗೆ ಬಿಜೆಪಿಯ 5 ಪ್ರಶ್ನೆಗಳು
ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ರಾಜಕೀಯ ಕಾಲಿಟ್ಟ ಹೊಸತರಲ್ಲಿ ಭಾರತ್ ಖೋಜ್ ಎಂಬ ಅಭಿಯಾನ ಆರಂಭಿಸಿದ್ದರು. ಅದರ ಅಡಿಯಲ್ಲಿ ನಾನಾ ರಾಜ್ಯಗಳ ಪ್ರವಾಸ ಮಾಡಿದ್ದರು. ಇದೀಗ ಅದು ಕಾಂಗ್ರೆಸ್ ಖೋಜ್ ಆಗಿದೆ ಎಂದು ಕೇಂದ್ರ ಸಚಿವ, ಬಿಜೆಪಿ ನಾಯಕ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ವ್ಯಂಗ್ಯವಾಡಿದ್ದಾರೆ.
ಕಾಂಗ್ರೆಸ್ ಎಲ್ಲ ಕಡೆ ಅಧಿಕಾರ ಕಳೆದುಕೊಂಡಿದೆ. ಈಚೆಗೆ ನನಗೆ ಪುದುಚೆರಿಯ ನಾರಾಯಣಸ್ವಾಮಿ ಸಿಕ್ಕಿದ್ದರು. ಅವರು ನನ್ನ ಗೆಳೆಯರು. ಆಗ ಅವರಿಗೆ ಹೇಳುತ್ತಿದ್ದೆ. ಮೇ ಹದಿನೈದರ ನಂತರ ಕಾಂಗ್ರೆಸ್ ನಲ್ಲಿ ನಿಮಗೆ ಇನ್ನೂ ಗೌರವ-ಮರ್ಯಾದೆ ಹೆಚ್ಚಾಗುತ್ತದೆ. ಏಕೆಂದರೆ, ಪಂಜಾಬ್ ನ ಕ್ಯಾಪ್ಟನ್ ಅಮರಿಂದರ್ ಸಿಂಗ್ ಬಿಟ್ಟರೆ ಅಧಿಕಾರದಲ್ಲಿರುವ ಮುಖ್ಯಮಂತ್ರಿ ನೀವೊಬ್ಬರೇ ಆಗಿರುತ್ತೀರಿ ಎಂದಿದ್ದೆ ಎಂಬುದಾಗಿ ಅನಂತಕುಮಾರ್ ಹೇಳಿದರು.
ನಾಳೆ ಉತ್ತರಕನ್ನಡದಲ್ಲಿ ರಾಹುಲ್ ಗಾಂಧಿ ರೋಡ್ ಶೋ
ಕಾಂಗ್ರೆಸ್ ಖೋಜ್ ನ ಕೊನೆ ಹಂತವಾಗಿ ರಾಹುಲ್ ಗಾಂಧಿ ಅವರು ಕರ್ನಾಟಕದ ಪ್ರವಾಸ ಮಾಡುತ್ತಿದ್ದಾರೆ. ಅವರ ಈ ಪ್ರವಾಸದ ಸಂದರ್ಭದಲ್ಲಿ ನಮ್ಮದು ಐದು ಪ್ರಶ್ನೆಗಳಿವೆ. ಅದಕ್ಕೆ ಅವರು ಉತ್ತರ ಹೇಳುತ್ತಾರಾ ಎಂಬ ನಿರೀಕ್ಷೆಯಿಂದ ಇವುಗಳನ್ನು ಕೇಳುತ್ತಿದ್ದೇವೆ ಎಂದು ಪ್ರಶ್ನೆಗಳನ್ನು ಕೇಳಿದರು. ಅವುಗಳು ಇಲ್ಲಿವೆ. ಅಂದ ಹಾಗೆ ಪತ್ರಿಕಾಗೋಷ್ಠಿಯಲ್ಲಿ ಶೋಭಾ ಕರಂದ್ಲಾಜೆ ಕೂಡ ಹಾಜರಿದ್ದರು.
ಪ್ರಶ್ನೆ 1 ರೈತರ ಆತ್ಮಹತ್ಯೆ ವರದಿ ಬಗ್ಗೆ ಏನು ಕ್ರಮ?
ಅತಿ ಹೆಚ್ಚು ರೈತರ ಆತ್ಮಹತ್ಯೆ ಆಗಿರುವ ರಾಜ್ಯ ಕರ್ನಾಟಕ. ಬಿಜೆಪಿ ಆಡಳಿತ ಇರುವ ರಾಜ್ಯಗಳಲ್ಲಿ ರೈತರ ಆತ್ಮಹತ್ಯೆ ಪ್ರಮಾಣ ಕಡಿಮೆ ಅಥವಾ ಕೆಲವು ಕಡೆ ಆತ್ಮಹತ್ಯೆ ಪ್ರಕರಣಗಳೇ ಇಲ್ಲ. ಕರ್ನಾಟಕದಲ್ಲಿ ಕಳೆದ ನಾಲ್ಕೂವರೆ ವರ್ಷದಲ್ಲಿ 3718 ರೈತರ ಅತ್ಮಹತ್ಯೆ ವರದಿ ಆಗಿದೆ. ಈ ಬಗ್ಗೆ ಅವರೇನು ಕ್ರಮ ಕೈಗೊಂಡಿದ್ದಾರೆ?
ಪ್ರಶ್ನೆ 2 ಬಿಜೆಪಿ ಸರಕಾರ ನೀಡಿದ ಅನುದಾನ ಎಷ್ಟು, ಅದು ಹೇಗೆ ಖರ್ಚಾಗಿದೆ?
ಮನಮೋಹನ್ ಸಿಂಗ್ ಅವರು ಪ್ರಧಾನಿಗಳಾಗಿದ್ದಾಗ, ಸೋನಿಯಾ- ರಾಹುಲ್ ಮಾರ್ಗದರ್ಶನ ಮಾಡುತ್ತಿದ್ದಾಗ, ಅನೇಕ ಸಲ ಪ್ರಕೃತಿ ವಿಕೋಪಕ್ಕೆ ಒಳಗಾದ ಕರ್ನಾಟಕಕ್ಕೆ 4822.13 ಕೋಟಿ ಕೊಟ್ಟಿದ್ದರು. ಮೋದಿ ಸರಕಾರ 2014ರಲ್ಲಿ ಅಧಿಕಾರಕ್ಕೆ ಬಂತು. 2014-17ರ 3 ವರ್ಷದಲ್ಲಿ 5,693.69 ಕೋಟಿ ಕೊಟ್ಟಿದ್ದಾರೆ. ಈ ಬಗ್ಗೆ ರಾಹುಲ್ ಏನಂತಾರೆ? ಈ ಹಣ ಹೇಗೆ ಖರ್ಚಾಗಿದೆ?
ಪ್ರಶ್ನೆ 3 800ಕ್ಕೂ ಹೆಚ್ಚು ಮಹಿಳೆಯರ ಮೇಲೆ ಅತ್ಯಾಚಾರ, ಇಲ್ಲೂ ಕ್ಯಾಂಡಲ್ ಲೈಟ್ ಮೆರವಣಿಗೆ ಮಾಡ್ತೀರಾ?
ರಾಹುಲ್ ಗಾಂಧಿ ಅವರು ವುಮೆನ್ ಎಂಪವರ್ ಮೆಂಟ್ ಬಗ್ಗೆ ವಿಶೇಷ ಕಾಳಜಿ ಹೊಂದಿದ್ದಾರೆ. ಕರ್ನಾಟಕದಲ್ಲಿ ಕಳೆದ ನಾಲ್ಕೂವರೆ ವರ್ಷದಲ್ಲಿ 3857 ಲೈಂಗಿಕ ದೌರ್ಜನ್ಯ ಪ್ರಕರಣ ವರದಿಯಾಗಿದೆ. ಕರ್ನಾಟಕದಲ್ಲಿ ಎಂಟು ನೂರಕ್ಕೂ ಹೆಚ್ಚು ಮಹಿಳೆಯರ ಮೇಲೆ ಅತ್ಯಾಚಾರ ಆಗಿದೆ. 7523 ಮಹಿಳೆಯರ ಹತ್ಯೆ ಆಗಿದೆ. ರಾಹುಲ್ ಗಾಂಧಿ ಇಂಡಿಯಾ ಗೇಟ್ ನಲ್ಲಿ ಬೇಟಿ ಬಚಾವೋ ಎಂದು ಕ್ಯಾಂಡಲ್ ಲೈಟ್ ಮೆರವಣಿಗೆ ಮಾಡಿದರು. ರಾಹುಲ್ ಗಾಂಧಿ ಕರ್ನಾಟಕಕ್ಕೆ ಬಂದಾಗ ಇಲ್ಲಿಯೂ ಕ್ಯಾಂಡಲ್ ಲೈಟ್ ಮೆರವಣಿಗೆ ಮಾಡ್ತಾರಾ?
ಪ್ರಶ್ನೆ 4 ಕ್ರಿಮಿನಲ್ ಕೇಸ್ ವಾಪಸ್ ಬಗ್ಗೆ ಏನಂತಾರೆ?
ಪಿಎಫ್ ಐ, ಎಸ್ ಡಿಪಿಐ ಮೇಲೆ ಹಾಕಿದಂಥ ನೂರಾ ಎಪ್ಪತ್ತೈದು ಕಟ್ಲೆಯನ್ನು ಸಿದ್ದರಾಮಯ್ಯ ನೇತೃತ್ವದ ಸರಕಾರ ವಾಪಸ್ ತೆಗೆದುಕೊಂಡಿದೆ. ಇದಕ್ಕೆ ರಾಹುಲ್ ಗಾಂಧಿ ಹೇಗೆ ಪ್ರತಿಕ್ರಿಯಿಸುತ್ತಾರೆ?
ಪ್ರಶ್ನೆ 5 ಮಂಗಳಯಾನಕ್ಕಿಂತ ರಸ್ತೆ ನಿರ್ಮಾಣದ ಖರ್ಚು ಹೆಚ್ಚೆ?
ಮೂಲಸೌಕರ್ಯದಲ್ಲಿ ಒಂದಕ್ಕಿಂತ ಒಂದು ದೊಡ್ಡ ಹಗರಣಗಳು ಕರ್ನಾಟಕದಲ್ಲಿ, ಬೆಂಗಳೂರಿನಲ್ಲಿ ಆಗಿದೆ. ಅದರಲ್ಲಿ ದೊಡ್ಡ ಹಗರಣ ಅಂದರೆ 10.7 ಕಿ.ಮೀ. ಆರ್ಟಿರಿಯಲ್ ರಿಂಗ್ ರೋಡ್, ಅದಕ್ಕೆ 468 ಕೋಟಿ ನಿಗದಿ ಪಡಿಸಿದ್ದಾರೆ. ಮಂಗಳ ಯಾನಕ್ಕೆ ಖರ್ಚಾಗಿದ್ದು 450 ಕೋಟಿ. ಅದು ಎಷ್ಟು ಲಕ್ಷ ಕಿಲೋಮೀಟರ್, ಕಾಂಗ್ರೆಸ್ ಅಧ್ಯಕ್ಷರು 10.7 ಕಿ.ಮೀ. ರಸ್ತೆ ಹಾಗೂ ಮಂಗಳಯಾನವನ್ನು ಹೋಲಿಸಿ, ಸಿದ್ದರಾಮಯ್ಯ ಅವರನ್ನು ಪ್ರಶ್ನೆ ಕೇಳುತ್ತಾರಾ?