'ಬದುಕಿದ್ದಾಗ ಹಿಂದೂ ಧರ್ಮ ಬೇಡ, ಸತ್ತಾಗ ಮಾತ್ರ ಬೇಕೆ?'
ಬೆಂಗಳೂರು , ಡಿಸೆಂಬರ್, 10 : ಸನಾತನ ಪರಂಪರೆಯ ಅನಾವರಣ, ಹಿಂದೂ ಧರ್ಮದ ಸಂಸ್ಕೃತಿ, ಸಾವಯವ ಪದ್ಧತಿಯ ಇಂದಿನ ಅಗತ್ಯ, ನಿಜವಾದ ನಾಗರಿಕ ಜೀವನ ಎಂದರೇನು ಎಂಬುದಕ್ಕೆ ಉತ್ತರ ಎಲ್ಲವೂ ಬೆಂಗಳೂರು ಬಸವನಗುಡಿ ನ್ಯಾಶನಲ್ ಕಾಲೇಜು ಮೈದಾನದಲ್ಲಿ ನಡೆಯುತ್ತಿರುವ ಹಿಂದು ಆಧ್ಯಾತ್ಮಿಕ ಮತ್ತು ಸೇವಾಮೇಳದಲ್ಲಿದೆ.
ಹಿಂದೂ ಧರ್ಮ ಅತ್ಯಂತ ಪವಿತ್ರವಾದದ್ದು, ಸೇವೆಯೇ ಹಿಂದೂ ಧರ್ಮದ ಮೂಲ ಧ್ಯೇಯವಾಗಿದೆ, ಸೇವೆಯನ್ನು ನಿಸ್ವಾರ್ಥದಿಂದ ಮಾಡಬೇಕೆಂದು ಜಗದ್ಗುರುಶ್ರೀ ಶಿವರಾತ್ರಿ ದೇಶಿಕೆಂದ್ರ ಮಹಾಸ್ವಾಮೀಜಿ ಹೇಳಿದರು.[ಭಾರತದಲ್ಲಿ ಹಿಂದೂಗಳಿಗಿರುವಷ್ಟೇ ಹಕ್ಕು ಕ್ರೈಸ್ತರಿಗಿದೆ: ಸೂಲಿಬೆಲೆ]
ಸೇವಾ ಮೇಳದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಭಾರತದಲ್ಲಿ ಧಾರ್ಮಿಕ ಆಚರಣೆ ಮತ್ತು ಸೇವೆಯನ್ನು ಪ್ರತ್ಯೇಕವಾಗಿ ನೋಡಲ್ಲ, ಸೇವೆಯಲ್ಲೇ ಧರ್ಮವನ್ನು ಕಾಣುವವರು ಭಾರತೀಯರು ಎಂದು ಹೇಳಿದರು.
ಕೆಲ ಸಾಹಿತಿಗಳು ಬದುಕಿರುವಾಗ ಹಿಂದೂ ಧರ್ಮವನ್ನು ಟೀಕಿಸಿ, ಸತ್ತಾಗ ಮಾತ್ರ ಹಿಂದೂ ಧರ್ಮವನ್ನು ಅನುಸರಿಸುತ್ತಿರುವ ಸಾಹಿತಿಗಳು ಹಲವರಿದ್ದಾರೆ. ಹಿಂದೂ ಧರ್ಮದ ಬಗ್ಗೆ ಕೀಳಾಗಿ ಮಾತನಾಡುವವರು ಒಮ್ಮೆ ಈ ಆಧ್ಯಾತ್ಮಿಕ ಮೇಳವನ್ನು ಭೇಟಿ ನೀಡಿ ಹಿಂದೂ ಧರ್ಮದ ಬಗ್ಗೆ ತಮ್ಮ ಅಭಿಪ್ರಾಯವನ್ನು ತಿಳಿಸಲಿ ಎಂದು ಹೇಳಿದರು. ರಾಜ್ಯಪಾಲ ವಜೂಭಾಯಿ ವಾಲಾ ಮತ್ತು ಎಲ್ಲ ಪ್ರಮುಖ ಮಠಗಳ ಮಠಾಧೀಶರು ಕಾರ್ಯಕ್ರಮದಲ್ಲಿ ಹಾಜರಿದ್ದರು.
ಸಾಮಾಜಿಕ ಕಾರ್ಯಗಳ ಸಕಲ ಮಾಹಿತಿ
ಶ್ರೀ ಸಿದ್ದಗಂಗಾ ಮಠ, ಆದಿಚುಂಚನಗಿರಿ ಮಠ, ಶ್ರೀ ಕ್ಷೇತ್ರ ಧರ್ಮಸ್ಥಳ, ಸೊಂದಾ ಸ್ವರ್ಣವಲ್ಲಿ ಮಠ, ಶ್ರೀ ಗುರುರಾಘವೇಂದ್ರ ಮಠ, ಯೋಗಿ ನಾರೇಯಣ ಮಠ ಕೈವಾರ, ರಾಮಕೃಷ್ಣ ಮಠ, ಇಸ್ಕಾನ್ ಸೇರಿದಂತೆ ಅನೇಕ ಧಾರ್ಮಿಕ ಮಠಗಳ ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ, ಆರೋಗ್ಯ ಕ್ಷೇತ್ರಗಳಲ್ಲಿ ನಡೆಯುತ್ತಿರುವ ಸೇವಾ ಕಾರ್ಯಗಳ ಬಗ್ಗೆ ಮೇಳದಲ್ಲಿ ಸಕಲ ಮಾಹಿತಿ ಸಿಗುತ್ತಿದೆ.
ಹಿಂದೂ ಧರ್ಮದ ಬಗ್ಗೆ ತಿಳಿಸಬೇಕಿದೆ
ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರಾದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಮಾತನಾಡಿ, ಇಂದಿನ ಆಧುನಿಕ ಜಗತ್ತಿನಲ್ಲಿ ಆಧುನಿಕ ಮಕ್ಕಳಿಗೆ ಪ್ರಾಚೀನ ಹಿಂದೂ ಧರ್ಮದ ಬಗ್ಗೆ ತಿಳಿಸಬೇಕಿದೆ. ಧರ್ಮದ ವಿಚಾರಗಳು ತಿಳಿಯದೆ ಮಕ್ಕಳು ತಪ್ಪು ಹಾದಿ ತುಳಿಯುವ ಸಾಧ್ಯತೆ ಕಂಡುಬರುತ್ತಿದೆ ಎಂದು ಹೇಳಿದರು.
ಒಳ್ಳೆಯ ವಿಚಾರ ತಿಳಿಸಿ
ನಮ್ಮ ದೇಶದ, ಗ್ರಂಥಗಳ ಬಗ್ಗೆ ವಿದೇಶಿಯರು ಅಭಿಪ್ರಾಯಪಟ್ಟಿರುವ ಒಳ್ಳೆಯ ವಿಚಾರಗಳನ್ನು ಎಲ್ಲರಿಗೂ ತಿಳಿಸಬೇಕು, ಇತರರು ಮೆಚ್ಚುವಂತಹ ಸಂಸ್ಕೃತಿ ನಮ್ಮದಾಗಿದೆ ಎಂದರು, ಜಾಗತೀಕರಣದ ಈ ಯುಗದಲ್ಲಿ ಧರ್ಮವನ್ನು ಪ್ರಚಾರ ಪಡಿಸಬೇಕಾದ ಅನಿವಾರ್ಯತೆ ಇದೆ ಎಂದು ಆದಿಚುಂಚನಗಿರಿ ಸ್ವಾಮೀಜಿ ತಿಳಿಸಿದರು.
ಪರಿಸರ ಸಂರಕ್ಷಣೆ ಎಲ್ಲರ ಹೊಣೆ
ಸ್ವರ್ಣವಲ್ಲಿ ಮಹಾಸಂಸ್ಥಾನದ ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮೀಜಿ ಮಾತನಾಡಿ ಭಾರತದ ಆಧ್ಯಾತ್ಮಿಕತೆಯು ಅತ್ಯಂತ ಶೇಷ್ಠವಾದದು, ಪ್ರಮುಖ ಐದು ವಿಚಾರಗಳಾದ ಆಧ್ಯಾತ್ಮಿಕತೆ, ಪರಿಸರ ಸಂರಕ್ಷಣೆ, ಮಾಲಿನ್ಯ ನಿಯಂತ್ರಣ, ವನ್ಯ ಸಂರಕ್ಷಣೆ ಕುರಿತು ಈ ಮೇಳದಲ್ಲಿ ಚರ್ಚಿಸುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದು ಹೇಳಿದರು.
ಭಾರತೀಯ ಸಂಸ್ಕೃತಿಗೆ ಸಾಟಿ ಬೇರೊಂದಿಲ್ಲ
ಇಂದು ಆಧುನಿಕ ವಿಜ್ಞಾನ ಎಷ್ಟೇ ಬೆಳೆದರು ಅವೆಲ್ಲವನ್ನು ಗಟ್ಟಿಯಾಗಿ ನಿಲ್ಲುವ ಸಂಸ್ಕೃತಿ ಎಂದರೆ ಭಾರತೀಯ ಆಧ್ಯಾತ್ಮಿಕ ಸಂಸ್ಕೃತಿ ವಿವಿಧತೆಯಲ್ಲಿ ಏಕತೆಯನ್ನು ಕಾಣುವ ಸಂಸ್ಕೃತಿ ನಮ್ಮ ಭಾರತೀಯ ಸಂಸ್ಕೃತಿ. ಇದಕ್ಕೆ ಸಾಟಿ ಬೇರೆ ಯಾವುದು ಇಲ್ಲ ಎಂದು ಸ್ವರ್ಣವಲ್ಲಿ ಸ್ವಾಮೀಜಿ ಹೇಳಿದರು.
ದೇವಸ್ಥಾನ ಸರ್ಕಾರಿಕರಣ ಸರಿ ಅಲ್ಲ
ಹಿಂದೂ ದೇವಸ್ಥಾನಗಳನ್ನು ಸರ್ಕಾರಿಕರಣ ವಿರುದ್ಧ ನ್ಯಾಯಾಲಯದಲ್ಲಿ ಹೋರಾಟ ನಡೆಸಿ ಜಯ ಸಾಧಿಸಿದ್ದೇವೆ, ದೇವಸ್ಥಾನಗಳ ವಿಚಾರಗಳಲ್ಲಿ ಕಾನೂನು ಅವಶ್ಯಕ ,ಆದರೆ ಎಲ್ಲಾ ಧಾರ್ಮಿಕ ಮುಖಂಡರ ಸಲಹೆ ಪಡೆದು ಸ್ವಾಯತ್ಥ ಸಂಸ್ಥೆ ರಚಿಸಬೇಕು ಎಂದು ಸ್ವರ್ಣವಲ್ಲಿ ಸ್ವಾಮೀಜಿ ಒತ್ತಾಯಿಸಿದರು.
ಸಾಧು ಸಂತರ ರಕ್ಷಣೆ ಅಗತ್ಯ
ರಾಜ್ಯಪಾಲ ವಜುಭಾಯಿ ವಾಲಾ ಮಾತನಾಡುತ್ತ ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ವಸುಧೈವ ಕುಟುಂಬಂ ಎಂಬ ಪದ್ಧತಿ ಇದೆ, ಹಿಂದೂ ಸಂಸ್ಕೃತಿಯಲ್ಲಿ ವಿಶಾಲ ಮನೋಭಾವವಿದೆ, ಹಿಂಸೆಯನ್ನು ನಮ್ಮ ಸಂಸ್ಕೃತಿ ವಿರೋಧಿಸುತ್ತದೆ, ಸಾಧು ಸಂತರನ್ನು ರಕ್ಷಿಸಿ ದುಷ್ಟರನ್ನು ಶಿಕ್ಷಿಸಬೇಕಾಗಿದೆ ಎಂದು ಹೇಳಿದರು.
ಹಾಜರಿದ್ದ ಗಣ್ಯರು
ಕಾರ್ಯಕ್ರಮದಲ್ಲಿ ಇಸ್ಕಾನ್ನ ಅಧ್ಯಕ್ಷ ಮಧುಪಂಡಿತ ದಾಸ್, ಕನಕಗಿರಿ ಮಠದ ಭುವನಕೀರ್ತಿ ಭಟ್ಟಾರಕ ಸ್ವಾಮೀಜಿ, ಕಲ್ಬುರ್ಗಿ ಭೌದ್ದ ವಿಹಾರದ ಸಂಗಾನಂದ ಬಂತೆ, ಸ್ವಾಗತ ಸಮಿತಿ ಅಧ್ಯಕ್ಷರಾದ ವಿಜಯ ಸಂಕೇಶ್ವರ, ಕಾರ್ಯಾಧ್ಯಕ್ಷರಾದ ನಾಗನಂದ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಗಮನ ಸೆಳೆಯುತ್ತಿರುವ ಮಳಿಗೆಗಳು
ಮೇಳದಲ್ಲಿದ್ದ ಮಠಗಳ ಮಳಿಗೆಗಳು ಜನರ ಗಮನ ಸೆಳೆಯುತ್ತಿವೆ, ರಾಜ್ಯದ ಪ್ರಮುಖ ಧಾರ್ಮಿಕ ಮಠಗಳಾದ ಶ್ರೀ ಸಿದ್ದಗಂಗಾ ಮಠ, ಆದಿಚುಂಚನಗಿರಿ ಮಠ, ಶ್ರೀ ಕ್ಷೇತ್ರ ಧರ್ಮಸ್ಥಳ, ಸೊಂದ ಸ್ವರ್ಣವಲ್ಲಿ ಮಠ, ಶ್ರೀ ಗುರುರಾಘವೇಂದ್ರ ಮಠ, ಯೋಗಿ ನಾರೇಯಣ ಮಠ ಕೈವಾರ, ರಾಮಕೃಷ್ಣ ಮಠ, ಇಸ್ಕಾನ್ ನಡೆಸುತ್ತಿರುವ ಸೇವಾ ಕಾರ್ಯಗಳ ಅರಿವಾಗುತ್ತಿದೆ.
ಧರ್ಮದ ಕತೆ ಹೇಳುವ ಸನಾತನ ಮರ
ಮೇಳದ ಆವರಣದ ಮಧ್ಯದಲ್ಲಿ ಸಾನತನ ಮರವೊಂದನ್ನು ಪ್ರತಿಷ್ಠಾಪಿಸಿದ್ದು, ವನ ಹಾಗೂ ವನ್ಯ ಜೀವಿ ಸಂರಕ್ಷಣೆ, ಪರಿಸರ ಕಾಳಜಿ, ರಾಷ್ಟ್ರ ಭಕ್ತಿ, ಸ್ತ್ರೀ ಗೌರವ, ಮಾಲಿನ್ಯ ನಿಯಂತ್ರಣ ತಡೆಗಟ್ಟುವುದು, ಕುಟುಂಬ ಮಾನವೀಯ ಮೌಲ್ಯಗಳನ್ನು ಬಿಂಬಿಸುತ್ತಿದೆ.
ಮಂಟಪದಲ್ಲಿ ಕುಳಿತ ಆಚಾರ್ಯರು
ಸಾಧನ ಮಂಟಪದಲ್ಲಿ ಆರ್ಯಭಟ, ಭಾಸ್ಕರಚಾರ್ಯ, ಯೋಗ ಪಿತಾಮಹ ಪತಂಜಲಿ ಮಹರ್ಷಿ ಹಾಗೂ ಭಾರತದ ಅದ್ಬುತ ವಾಸ್ತು ಶಿಲ್ಪಗಳಾದ ಅಜಂತಾ ಎಲ್ಲೋರ ಗುಹಾಂತರ ದೇವಾಲಯ, ಹಂಪಿ ಬಗ್ಗೆ ವಿಸ್ತೃತ ಮಾಹಿತಿ ದೊರೆಯುತ್ತಿದೆ.
ಸ್ವಾತಂತ್ರ್ಯ ಹೋರಾಟಗಾರರಿಗೆ ನಮನ
ಸ್ವಾತಂತ್ರ್ಯ ಹೋರಾಟಗಾರರಾದ ಭಗತ್ ಸಿಂಗ್, ಸಂಗೊಳ್ಳಿರಾಯಣ್ಣ, ಮಹಾತ್ಮ ಗಾಂಧಿಜಿ, ಸುಭಾಷ್ ಚಂದ್ರ ಬೋಸ್, ಮಹಿಳಾ ಸಾಧಕಿಯರಾದ ರಾಣಿ ಅಬ್ಬಕ್ಕ, ಕೆಳದಿ ಚೆನ್ನಮ್ಮ, ಮಹಿಳಾ ಸಂತರಾದ ಮೀರಾ ಬಾಯಿ, ಶಾರದಾ ದೇವಿ ಜೀವನಗಾಥೆಯನ್ನು ಕಾಣಬಹುದು.
ಸಾವಯವ ಕೃಷಿಯಿಂದ ಸಾಧನೆ
ಮೇಳದಲ್ಲಿ ಸಾವಯವ ಆರೋಗ್ಯ ಪದ್ಧತಿ, ಕೃಷಿ, ಸಾವಯವ ಪಧಾರ್ಥ ಮತ್ತು ಗೋ ಉತ್ಪನ್ನಗಳನ್ನು ಒಳಗೊಂಡ ಮಳಿಗೆಗಳು ಇದ್ದು ಜಂಟಾಟದ ಬದುಕಿಂದ ನೆಮ್ಮದಿ ಕಾಣುವುದು ಹೇಗೆ ಎಂಬುದಕ್ಕೆ ಉತ್ತರ ನೀಡುತ್ತಿವೆ.