ಐದು ವರ್ಷಗಳಲ್ಲಿ 37 ಕೆರೆಗಳಿಗೆ ಮರುಜೀವ ನೀಡಿದ ಬಿಬಿಎಂಪಿ
ಬೆಂಗಳೂರು, ಏಪ್ರಿಲ್ 09: ಬಿಬಿಎಂಪಿ ವತಿಯಿಂದ ಕಳೆದ ಐದು ವರ್ಷಗಳಲ್ಲಿ 15 ಕೆರೆಗಳನ್ನು ಅಭಿವೃದ್ಧಿಪಡಿಸಲಾಗಿದ್ದು, 37 ಕೆರೆಯನ್ನು ಪುನರುಜ್ಜೀವನಗೊಳಿಸಲಾಗಿದೆ ಎಂದು ಬಿಬಿಎಂಪಿ ತಿಳಿಸಿದೆ.
ಕಳೆದ 2013 ರಿಂದ 5 ವರ್ಷಗಳ ಅವಧಿಯಲ್ಲಿ 15 ಕೆರೆಗಳನ್ನು ಅಭಿವೃದ್ಧಿ ಮಾಡಲಾಗಿದೆ ಇನ್ನು 37 ಕೆರೆಗಳನ್ನು ಪುನರುಜ್ಜೀವನಗೊಳಿಸಲಾಗಿದೆ ಇದೆಲ್ಲಕ್ಕೆ ಒಟ್ಟು 65 ಕೋಟಿ ರೂ ವೆಚ್ಚವಾಗಿದೆ. ಪಾಲಿಕೆಯು ಅನೇಕ ಎನ್ಜಿಓಗಳು, ಆರ್ಡಬ್ಲ್ಯೂಎ, ಕೆಲವು ಸಂಸ್ಥೆಗಳ ಜತೆಗೆ ಸೇರಿ ಕೆರೆಯಗಳನ್ನು ಅಭಿವೃದ್ಧಿ ಮಾಡಿದೆ. ಹಾಗೆಯೇ ರಾಸಾಯನಿಕಗಳು ಕೆರೆಗೆ ಬಂದು ಸೇರದಂತೆ ನಿಗಾ ವಹಿಸಲಾಗುತ್ತಿದೆ ಎಂದು ಬಿಬಿಎಂಪಿ ಅಧಿಕಾರಿ ತಿಳಿಸಿದ್ದಾರೆ.
ಬೆಳ್ಳಂದೂರು ಕೆರೆಯನ್ನು ಬಹುಪಾಲು ಕಸಮುಕ್ತವಾಗಿಸಿದ ಮಾಜಿ ಸೈನಿಕರು
ಚರಂಡಿ ನೀರು ಕೆರೆಗಳಿಗೆ ಸೇರದಂತೆ ನೋಡಿಕೊಳ್ಳಲಾಗುತ್ತಿದೆ ಹಾಗೆಯೇ ಕೆರೆಯ ಸುತ್ತಮುತ್ತ ಭದ್ರತೆಗಾಗಿ ಬೇಲಿ ಅಳವಡಿಸಲಾಗಿದೆ. ಇನ್ನು ಕೆಲವು ಕೆರೆಗಳನ್ನು ಪುನರುಜ್ಜೀವನಗೊಳಿಸುವುದು ಬಾಕಿ ಇದೆ. ಇತ್ತೀಚೆಗೆ 5 ಕೆರೆಗಳನ್ನು ಪುನರುಜ್ಜೀವನಗೊಳಿಸುವಂತೆ ಅನುಮತಿ ದೊರೆತಿತ್ತು. ನಂತರ ರಾಜ್ಯ ಸರ್ಕಾರವು ತಿದ್ದುಪಡಿಯನ್ನು ಮಾಡಿದ್ದು ಈ ಕೆರೆಗಳನ್ನು ಸಣ್ಣ ನೀರಾವರಿ ಇಲಾಖೆಗೆ ಹಸ್ತಾಂತರಿಸಿದೆ.
ಈ ಕೆರೆಗಳ ಸುತ್ತಮುತ್ತಲಿನ ಪ್ರದೇಶದಲ್ಲಿ ಸುಮಾರು 5 ಸಾವಿರಕ್ಕೂ ಹೆಚ್ಚು ಗಿಡಗಳನ್ನು ನೆಡಲಾಗಿದೆ ಹಾಗೂ ತ್ಯಾಜ್ಯವನ್ನು ಸುರಿಯದಂತೆ ಎಚ್ಚರಿಕೆವಹಹಿಸಲು ಸುತ್ತಲೂ ತಂತಿ ಬೇಲಿ ಅಳವಡಿಸಲಾಗಿದೆ. 2017-18 ನೇ ಸಾಲಿನಲ್ಲಿ ಮಹದೇವಪುರ, ಕೆಂಪಾಂಬುದಿ, ದೊಡ್ಡಬೊಮ್ಮಸಂದ್ರ, ರೆಸಿಡೆನ್ಸಿ ರಸ್ತೆ, ಅವಲಹಳ್ಳಿ, ಮಂಗಮ್ಮನ ಪಾಳ್ಯದಲ್ಲಿರುವ ಕೆರೆಗಳನ್ನು ಅಭಿವೃದ್ಧಿಪಡಿಸಲಾಗಿದೆ.