ಆರ್ಆರ್ನಗರ ಚುನಾವಣೆ: 300 ಭಿಕ್ಷುಕರಿಂದ ಮತದಾನ
ಬೆಂಗಳೂರು, ಮೇ 29: ನಗರದ ರಾಜರಾಜೇಶ್ವರಿನಗರ ವಿಧಾನಸಭೆ ಚುನಾವಣೆ ಇಂದು ನಡೆಯುತ್ತಿದೆ. ಈ ಕ್ಷೇತ್ರದಲ್ಲಿ ಈ ಬಾರಿ ವಿಶೇಷವಾಗಿ ಭಿಕ್ಷುಕರ ಪುನರ್ವಸತಿ ಕೇಂದ್ರದಲ್ಲಿರುವ 300 ಭಿಕ್ಷುಕರು ತಮ್ಮ ಹಕ್ಕನ್ನು ಚಲಾಯಿಸಿದರು.
ಇಲ್ಲಿಯವರೆಗೆ ಶೇ.41ರಷ್ಟು ಮತದಾನವಾಗಿದೆ. ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಶ್ರೀನಿವಾಸನಗರದಲ್ಲಿ ಭಿಕ್ಷುಕರು ಮತಚಲಾವಣೆ ಮಾಡಿದರು.
Live: ಆರ್.ಆರ್.ನಗರ ಚುನಾವಣೆ : ಶೇ 41 ರಷ್ಟು ಮತದಾನ
ಮೇ 12ರಂದು ರಾಜ್ಯಾದ್ಯಂತ ಸಾವ್ರತ್ರಿಕ ವಿಧಾನಸಭೆ ಚುನಾವಣೆ ನಡೆದಿದೆ. ಆದರೆ ರಾಜರಾಜೇಶ್ವರಿ ನಗರ, ಜಯನಗರದಲ್ಲಿ ಚುನಾವಣೆಯನ್ನು ಮುಂದೂಡಲಾಗಿತ್ತು. ಜಯನಗರದಲ್ಲಿ ಬಿಜೆಪಿ ಅಭ್ಯರ್ಥಿ ವಿಜಯಕುಮಾರ್ ಅವರು ಮೃತರಾದ ಕಾರಣ ಮುಂದೂಡಲಾದರೆ ಇನ್ನು ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಜಾಲಹಳ್ಳಿ ಅಪಾರ್ಟ್ಮೆಂಟ್ ಒಂದರಲ್ಲಿ 10 ಸಾವಿರಕ್ಕೂ ಹೆಚ್ಚು ಮತದಾರರ ಚೀಟಿ ಪತ್ತೆಯಾಗಿತ್ತು ಹೀಗಾಗಿ ಅಲ್ಲಿನ ಚುನಾವಣೆಯನ್ನು ಮುಂದೂಡಲಾಗಿತ್ತು. ಆರ್ಆರ್ ನಗರ ಚುನಾವಣೆ ಫಲಿತಾಂಶ 31ಕ್ಕೆ ಹೊರಬೀಳಲಿದೆ.
ಇನ್ನು ಜಯನಗರದಲ್ಲಿ ಜೂನ್ 11ರಂದು ಚುನಾವಣೆ ನಡೆಯಲಿದ್ದು, 16ರಂದು ಫಲಿತಾಂಶ ಬರಲಿದೆ. ಮೇ 12 ರಂದು ನಡೆದ ಚುನಾವಣೆ ಸಂದರ್ಭದಲ್ಲಿ ನಿಮ್ಹಾನ್ಸ್ನ ಏಳು ಮಂದಿ ರೋಗಿಗಳಿಗೆ ವೈದ್ಯರ ಸಮ್ಮತಿ ಮೇರೆಗೆ ಮತದಾನ ಮಾಡಲು ಅವಕಾಶ ಕಲ್ಪಿಸಲಾಗುರುವುದನ್ನು ಇಲ್ಲಿ ಸ್ಮರಿಸಬಹುದು.