ಫೋರ್ಟಿಸ್ ಆಸ್ಪತ್ರೆಯ ಮೂವರು ವೈದ್ಯರಿಗೆ ರೂ.23.5 ಲಕ್ಷ ದಂಡ
ಬೆಂಗಳೂರು, ನವೆಂಬರ್, 1: ಬೆಂಗಳೂರಿನ ಶೇಷಾದ್ರಿಪುರಂನಲ್ಲಿರುವ ಫೋರ್ಟಿಸ್ ಆಸ್ಪತ್ರೆಯ ಮೂವರು ವೈದ್ಯರಿಗೆ ಚಿಕಿತ್ಸೆ ನೀಡುವಲ್ಲಿ ನಿರ್ಲಕ್ಷ್ಯ ವಹಿಸಿದ ಆರೋಪದ ಮೇಲೆ ಒಟ್ಟು 23.5ಲಕ್ಷ ರೂ. ದಂಡ ವಿಧಿಸಲಾಗಿದೆ.
ಫೋರ್ಟಿಸ್ ಆಸ್ಪತ್ರೆಯ ಇಬ್ಬರು ಶಸ್ತ್ರ ಚಿಕಿತ್ಸಕರು ಮತ್ತು ಒಬ್ಬ ಅರವಳಿಕೆ ತಜ್ಞರಿಗೆ ಕರ್ನಾಟಕ ಗ್ರಾಹಕ ವಿವಾದಗಳ ಪರಿಹಾರ ಆಯೋಗ ದಂಡ ವಿಧಿಸಿ ಆದೇಶ ಹೊರಡಿಸಿದೆ.
2010 ಫೆಬ್ರುವರಿಯಲ್ಲಿ 45 ವರ್ಷದ ವಿದ್ಯಾ ಎಂಬ ಮಹಿಳೆಯೊಬ್ಬರು ಶಸ್ತ್ರಚಿಕಿತ್ಸೆಗಾಗಿ ಫೋರ್ಟಿಸ್ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದರು. ವೈದ್ಯರ ನಿರ್ಲಕ್ಷ್ಯದಿಂದಲೇ ಮಹಿಳೆ ಸಾವನ್ನಪ್ಪಿದ್ದಾರೆ ಎಂದು ಆರೋಪಿಸಿ ಮಹಿಳೆಯ ಸಂಬಂಧಿಕರು ಪರಿಹಾರಧನಕ್ಕಾಗಿ ಮನವಿ ಮಾಡಿದ್ದರು.
ಮೃತ ಮಹಿಳೆಯ ಪತಿ ಮತ್ತು ಮಕ್ಕಳು "ವೈದ್ಯರ ನಿರ್ಲಕ್ಷ್ಯದಿಂದಲೇ ನಾವು ನಮ್ಮ ಕುಟುಂಬದ ಪ್ರಮುಖ ಸದಸ್ಯರನ್ನು ಕಳೆದುಕೊಂಡಿದ್ದು, ಪರಿಹಾರ ಒದಗಿಸುವಂತೆ ಆಯೋಗಕ್ಕೆ ಮನವಿ ಸಲ್ಲಿಸಿದ್ದರು ಎಂದು ಆಯೋಗ ತಿಳಿಸಿದೆ.
ಈ ಕುರಿತಂತೆ ಮೃತ ಮಹಿಳೆ ವಿದ್ಯಾ ಅವರ ಪತಿ ಕರ್ನಾಟಕ ಹೈಕೋರ್ಟ್ ವಕೀಲ ಹೆಚ್.ಎನ್.ಎಂ. ಪ್ರಸಾದ್ ಮತ್ತು ಅವರ ಇಬ್ಬರು ಮಕ್ಕಳು ಗ್ರಾಹಕರ ಆಯೋಗಕ್ಕೆ ವೈದ್ಯರ ನಿರ್ಲಕ್ಷ್ಯದ ಕುರಿತು ದೂರು ನೀಡಿದ್ದರು.
ಅಷ್ಟೇ ಅಲ್ಲದೇ ಫೆಬ್ರವರಿ 2011ರಲ್ಲಿ ವೈದ್ಯರು ಶಸ್ತ್ರ ಚಿಕಿತ್ಸೆ ನಡೆಸಿ ಚಿಕಿತ್ಸೆ ಯಶಸ್ವಿಯಾಗಿದೆ ಎಂದು ನನ್ನ ಬಳಿ ಹೇಳಿದ್ದರು, ಒಂದು ಗಂಟೆಯ ನಂತರ ಬಂದು "ನಿಮ್ಮ ಪತ್ನಿಯನ್ನು ದೇವರೇ ಕಾಪಾಡಬೇಕು" ಎಂದು ವೈದ್ಯರು ತಿಳಿಸಿದ್ದರು ಎಂದು ಪ್ರಸಾದ್ ಅವರು ದೂರಿನಲ್ಲಿ ದಾಖಲಿಸಿದ್ದರು.