ಆಹೋರಾತ್ರಿ ಧರಣಿ, ಮೂವರು ಅಂಗನವಾಡಿ ಕಾರ್ಯಕರ್ತೆಯರು ಅಸ್ವಸ್ಥ
ಬೆಂಗಳೂರು, ಮಾರ್ಚ್ 21: ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಆಹೋ ರಾತ್ರಿ ಧರಣಿ ನಡೆಸುತ್ತಿರುವ ಅಂಗನವಾಡಿ ಕಾರ್ಯಕರ್ತರಲ್ಲಿ ಮೂವರು ಅಸ್ವಸ್ಥರಾಗಿದ್ದಾರೆ.
ಅಸ್ವಸ್ಥರನ್ನು ಮಂಜುಳಾ, ಸುನಂದಾ ಮತ್ತು ಮಂಜುಳಾ ರಾಜ್ ಎಂದು ಗುರುತಿಸಲಾಗಿದೆ. ಅಸ್ವಸ್ಥರನ್ನು ಕೆ.ಸಿ ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಈಗಾಗಲೇ ಅಸ್ವಸ್ಥರಾಗಿ ಇಬ್ಬರು ಮಹಿಳೆಯರು ಆಸ್ಪತ್ರೆ ಸೇರಿದ್ದು ಒಟ್ಟು ಅಸ್ವಸ್ಥರ ಸಂಖ್ಯೆ 5 ಕ್ಕೆ ಏರಿಕೆಯಾಗಿದೆ. ಹೀಗಿದ್ದೂ ಸರಕಾರ ಮಹಿಳೆಯರ ಪ್ರತಿಭಟನೆಗೆ ಮಾತ್ರ ಕಿವಿಗೊಡುತ್ತಿಲ್ಲ.[ಅನ್ನ, ನೀರು ಇಲ್ಲದೆ ಪರದಾಡಿದ ಅಂಗನವಾಡಿ ಕಾರ್ಯಕರ್ತೆಯರು!]
ಪ್ರತಿಭಟನಾ ಸ್ಥಳಕ್ಕೆ ವಿಪಕ್ಷ ನಾಯಕ ಜಗದೀಶ್ ಶೆಟ್ಟರ್, ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಭೇಟಿ ನೀಡಿ ಪ್ರತಿಭಟನಾ ನಿರತರ ಜತೆ ಚರ್ಚೆ ನಡೆಸಿದ್ದಾರೆ.
ಸದ್ಯ ಅಂಗನವಾಡಿ ಕಾರ್ಯಕರ್ತರಿಗೆ 3,000 ರೂಪಾಯಿ ಗೌರವಧನ ನೀಡಲಾಗುತ್ತಿದೆ. ಇದನ್ನು 7,500 ರೂಪಾಯಿಗೆ ಏರಿಸಿ ಎಂದು ಮಹಿಳೆಯರು ಒತ್ತಾಯಿಸುತ್ತಿದ್ದಾರೆ. ಆದರೆ ಸರಕಾರ ಮಾತ್ರ ಪ್ರತಿಭಟನೆಯನ್ನು ಕಿವಿಗೇ ಹಾಕಿಕೊಂಡಿಲ್ಲ.
ನಿನ್ನೆಯಿಂದ ಸಾವಿರಾರು ಅಂಗನವಾಡಿ ಕಾರ್ಯಕರ್ತರು ಫ್ರೀಡಂ ಪಾರ್ಕಿನಲ್ಲಿ ನೆರೆದಿದ್ದು ರಾತ್ರಿಯನ್ನೂ ಅಲ್ಲೇ ಕಳೆದಿದ್ದಾರೆ.