ಜುಲೈ 16ಕ್ಕೆ ಚಿಕೇನಕೊಪ್ಪದ ಚನ್ನವೀರ ಶರಣರ 22ನೇ ಪುಣ್ಯಸ್ಮರಣೋತ್ಸವ
ಬೆಂಗಳೂರು, ಜುಲೈ 14 : ಇದೇ ತಿಂಗಳ ಹದಿನಾರರ ಭಾನುವಾರ ಬೆಳಗ್ಗೆ ಹತ್ತು ಗಂಟೆಗೆ ಆನಂದ ರಾವ್ ವೃತ್ತದಲ್ಲಿರುವ ಜಗದ್ಗುರು ರೇಣುಕಾಚಾರ್ಯ ವಿದ್ಯಾಸಂಸ್ಥೆಯಲ್ಲಿ ಚಿಕೇನಕೊಪ್ಪದ ಚನ್ನವೀರ ಶರಣರ ಇಪ್ಪತ್ತೆರಡನೇ ಪುಣ್ಯಸ್ಮರಣೋತ್ಸವ ಆಯೋಜಿಸಲಾಗಿದೆ.
ಮಲಯ ಶಾಂತಮುನಿ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಶಿವಶಾಂತವೀರ ಶರಣರು ಅಧ್ಯಕ್ಷತೆ ವಹಿಸಲಿದ್ದಾರೆ. ಬಿವೈ ಡೊಳ್ಳಿನ ಅವರು ಪ್ರಾಸ್ತಾವಿಕ ನುಡಿಗಳನ್ನು ಆಡಲಿದ್ದಾರೆ. ಈ ಸಂದರ್ಭದಲ್ಲಿ ಅಕಾಡೆಮಿ ಆಫ್ ಕ್ರಿಯೇಟಿವ್ ಟೀಚಿಂಗ್ ನ ಗುರುರಾಜ ಕರ್ಜಗಿ ಅವರು ಉಪನ್ಯಾಸ ನೀಡಲಿದ್ದಾರೆ.
ಗೀತಾ ಭತ್ತದ ಅವರು ಪ್ರಾರ್ಥನೆ ಮಾಡಲಿದ್ದಾರೆ. ಬೆಂಗಳೂರಿನ ವಚನ ಜ್ಯೋತಿ ಬಳಗದಿಂದ ವಚನಗಾಯನ ಮತ್ತು ವಚನ ನೃತ್ಯ ಇದೆ. ಕೋಡಿಗೆಹಳ್ಳಿಯ ರೇಣುಕಾರಾಧ್ಯ ತಂಡದವರಿಂದ ವೀರಗಾಸೆ ಇದ್ದು, ಆಕಾಶವಾಣಿ ಕಲಾವಿದೆ ಸವಿತಾ ಶಿವಕುಮಾರ ನಿರೂಪಣೆ ಮಾಡಲಿದ್ದಾರೆ.
ಚಿಕೇನಕೊಪ್ಪದ ಶ್ರೀ ಚನ್ನವೀರ ಶರಣರ ಬಳಗವು ಈ ಪುಣ್ಯಸ್ಮರಣೆ ಕಾರ್ಯಕ್ರಮವನ್ನು ಆಯೋಜಿಸಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಲಾಗಿದೆ.