ಬೊಮ್ಮಸಂದ್ರ-ಆರ್.ವಿ.ರಸ್ತೆ ಮೆಟ್ರೋ ಮಾರ್ಗಕ್ಕೆ 200 ಮರಗಳಿಗೆ ಕತ್ತರಿ
ಬೆಂಗಳೂರು, ಜುಲೈ 19 : ನಮ್ಮ ಮೆಟ್ರೋ 2ನೇ ಹಂತದ ರೀಚ್ -5 ಕಾಮಗಾರಿಗೆ 213 ಮರಗಳನ್ನು ಕಡಿಯಲಾಗುತ್ತದೆ. ಬಿಬಿಎಂಪಿಯ ಅರಣ್ಯ ವಿಭಾಗವೂ ಮರ ಕಡಿಯಲು ಅನುಮತಿ ನೀಡಿದ್ದು, ಪರಿಸರ ಪ್ರೇಮಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್ಸಿಎಲ್) ಗೆ ಮರಗಳನ್ನು ಕಡಿಯಲು ಒಪ್ಪಿಗೆ ನೀಡಿದೆ. ಹೈಕೋರ್ಟ್ ಆದೇಶವನ್ನು ಪಾಲನೆ ಮಾಡದೇ ಮರಗಳನ್ನು ಕಡಿಯಲು ಅನುಮತಿ ನೀಡಲಾಗಿದೆ ಎಂದು ಆರೋಪಿಸಲಾಗುತ್ತಿದೆ.
ದೇಶಿ ತಳಿ ಸಸಿ ನೆಡಲು ಬಿಬಿಎಂಪಿ ನಿರ್ಧಾರ
ವೃಕ್ಷ ಸಮಿತಿ ಗಮನಕ್ಕೆ ತಾರದೇ, ಸಾರ್ವಜನಿಕರಿಂದ ಆಕ್ಷೇಪಣೆ ಆಹ್ವಾನಿಸದೇ ಮರಗಳನ್ನು ಕಡಿಯಲು ತಯಾರಿ ನಡೆಸಲಾಗಿದೆ. 50ಕ್ಕಿಂತ ಹೆಚ್ಚಿನ ಮರಗಳನ್ನು ಕಾಮಗಾರಿಗೆ ಕಡಿಯುವ ಮುನ್ನ ಸಾರ್ವನಿಕರ ಆಕ್ಷೇಪಣೆ ಆಹ್ವಾನಿಸಬೇಕು ಎಂದು ಹೈಕೋರ್ಟ್ 2014ರಲ್ಲಿ ತೀರ್ಪು ನೀಡಿತ್ತು. ಆದರೆ, ಅದನ್ನು ಪಾಲನೆ ಮಾಡಿಲ್ಲ ಎಂದು ಪರಿಸರ ಪ್ರೇಮಿಗಳು ದೂರಿದ್ದಾರೆ.
ವೃಕ್ಷ ಸಮಿತಿ ಸದಸ್ಯರಾದ ಟಿ.ದತ್ತಾತ್ರೇಯ ಅವರು ಬಿಎಂಆರ್ಸಿಎಲ್ ಪಡೆದಿರುವ ಅನುಮತಿಯನ್ನು ಮಾಹಿತಿ ಹಕ್ಕಿನಡಿ ಪಡೆದಿದ್ದಾರೆ. ಅನುಮತಿ ಪಡೆಯುವಾಗ ಹೈಕೋರ್ಟ್ ತೀರ್ಪನ್ನು ಪಾಲನೆ ಮಾಡದಿರುವುದು ಸ್ಪಷ್ಟವಾಗಿದೆ.
ಈ ಮಾರ್ಗದಲ್ಲಿ ಮರಗಳನ್ನು ಕಡಿಯುವ ಬಗ್ಗೆ ಬಿಎಂಆರ್ಸಿಎಲ್ 8 ಅರ್ಜಿಗಳನ್ನು ಸಲ್ಲಿಸಿದೆ. ಇವುಗಳಲ್ಲಿ 5 ರಿಂದ 45 ಮರಗಳನ್ನು ಕಡಿಯಲು ಅನುಮತಿ ಕೇಳಿದೆ. ಈ ಅರ್ಜಿಗಳನ್ನು ಬಿಬಿಎಂಪಿ ಅರಣ್ಯ ವಿಭಾಗ 2016ರ ಮೇ 25 ರಿಂದ 2017ರ ಜೂನ್ 21ರ ನಡುವೆ ವಿಲೇವಾರಿ ಮಾಡಿದೆ.
ಬೆಂಗಳೂರು-ಮೈಸೂರು ಮಾರ್ಗಕ್ಕಾಗಿ 200 ಮರಗಳಿಗೆ ಕೊಡಲಿ?
200ಕ್ಕೂ ಹೆಚ್ಚು ಮರಗಳನ್ನು ಕಡಿಯಲು ಬಿಬಿಎಂಪಿ ಒಪ್ಪಿಗೆ ನೀಡಿದ್ದು ಹೇಗೆ?, ಹೈಕೋರ್ಟ್ ಆದೇಶವನ್ನು ಏಕೆ ಪಾಲನೆ ಮಾಡಿಲ್ಲ? ಎಂದು ಪರಿಸರ ಪ್ರೇಮಿಗಳು ಪ್ರಶ್ನಿಸಿದ್ದಾರೆ.
26,405 ಕೋಟಿ ವೆಚ್ಚ : ಬೊಮ್ಮಸಂದ್ರ-ಆರ್.ವಿ.ರಸ್ತೆ ನಡುವಿನ ಮಾರ್ಗದ ನಮ್ಮ ಮೆಟ್ರೋ ಯೋಜನೆಯ ರೀಚ್ -5 ಅಡಿಯಲ್ಲಿ ಬರುತ್ತದೆ. 13 ನಿಲ್ದಾಣಗಳನ್ನು ಈ ಮಾರ್ಗ ಒಳಗೊಂಡಿದ್ದು, ಬಿಟಿಎಂ, ಎಚ್ಎಸ್ಆರ್ ಬಡಾವಣೆ, ಎಲೆಕ್ಟ್ರಾನಿಕ್ ಸಿಟಿ, ಹೆಬ್ಬಗೋಡಿ ಮೂಲಕ ಮಾರ್ಗ ಹಾದು ಹೋಗಲಿದೆ.