ಕೇಬಲ್ ವೈರ್ ಕದ್ದ ಗುಮಾನಿ, ವಿದ್ಯುತ್ ಶಾಕ್ ನೀಡಿ ಯುವಕನ ಕೊಲೆ
ಬೆಂಗಳೂರು, ಆಗಸ್ಟ್ 22: ಇಲ್ಲಿನ ಕುಂದನಹಳ್ಳಿಯಲ್ಲಿ ಇಪ್ಪತ್ತು ವರ್ಷದ ಯುವಕನಿಗೆ ವಿದ್ಯುತ್ ಶಾಕ್ ಕೊಟ್ಟು ಕೊಲೆ ಮಾಡಿದ ಘಟನೆ ನಡೆದಿದೆ. ಈ ಘಟನೆಗೆ ಇರುವ ಕಾರಣ ಹುಬ್ಬೇರುವಂತೆ ಮಾಡುತ್ತದೆ. ಕೇಬಲ್ ವೈರ್ ಕದ್ದಿದ್ದಾರೆ ಎಂದು ಆರೋಪ ಮಾಡಿ, ಮೂವರು ಯುವಕರನ್ನು ಚೆನ್ನಾಗಿ ಬಡಿದಿದ್ದಾರೆ.
ಅಕ್ರಮ ಸಂಬಂಧದ ಶಂಕೆ, ಪತ್ನಿಯನ್ನು ಕತ್ತಿಯಿಂದ ಕಡಿದು ಕೊಂದ ಪತಿ
ಆ ಪೈಕಿ ಒಬ್ಬನಿಗೆ ವಿದ್ಯುತ್ ಶಾಕ್ ಕೊಟ್ಟು ಕೊಲೆ ಮಾಡಲಾಗಿದೆ. ಪಶ್ಚಿಮ ಬಂಗಾಲದ ಬಷೀರ್ ಹತ್ಯೆಯಾದ ಯುವಕ. ಅಂದಹಾಗೆ ಬಷೀರ್ ವರ್ಷದ ಹಿಂದಷ್ಟೇ ಮದುವೆಯಾಗಿದ್ದ. ಕೆಲಸ ಹುಡುಕಿಕೊಂಡು ಬೆಂಗಳೂರಿಗೆ ಬಂದಿದ್ದ. ಬಸುರೆಡ್ಡಿ ಎಂಬುವರ ಜಮೀನಿನಲ್ಲಿ ಗುಡಿಸಲು ಕಟ್ಟಿಕೊಂಡು ಈ ಮೂವರು ಇದ್ದರು.
ಮೂರು ದಿನದ ಹಿಂದೆ ಜಮೀನಿನಲ್ಲಿ ಕೇಬಲ್ ವೈರ್ ಕಳ್ಳತನವಾಗಿತ್ತು. ಈ ಮೂವರೇ ಕಳವು ಮಾಡಿರಬೇಕು ಎಂದು ಅನುಮಾನ ಪಟ್ಟು, ಕಟ್ಟಿಹಾಕಿ ಹೊಡೆದಿದ್ದಾರೆ. ಬಷೀರ್ ಸ್ಥಳದಲ್ಲೇ ಸಾವನ್ನಪ್ಪಿದರೆ, ಹಫೀಸ್ ಉಲ್ಲಾ, ಅಜ್ಮೈಲ್ ನನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಮಾರತ್ ಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ನಾಲ್ವರು ಸೇರಿ ಈ ಕೃತ್ಯ ಎಸಗಿದ್ದು, ಆರೋಪಿಗಳ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.