ಕಬ್ಬನ್ ಉದ್ಯಾನದಲ್ಲಿ ಇನ್ನು ಪುಷ್ಪರಾಶಿಯ ನೆರಳು ಬೆಳಕಿನಾಟ!
ಬೆಂಗಳೂರು, ಏಪ್ರಿಲ್ 24: ಕಳೆದ ಐದು ವರ್ಷಗಳಿಂದ ಮರೀಚಿಕೆಯಾಗಿದ್ದ ಕಬ್ಬನ್ ಉದ್ಯಾನದ ಅಭಿವೃದ್ಧಿ ಕಾರ್ಯಕ್ಕೆ ಈಗ ಜೀವ ಬಂದಿದೆ. ಪ್ರೆಸ್ ಕ್ಲಬ್ ಎದುರು ಇರುವ ಕಬ್ಬನ್ ಉದ್ಯಾನದಲ್ಲಿ ನೆರಳು ಉದ್ಯಾನವನ್ನು ನಿರ್ಮಿಸಲು ತೋಟಗಾರಿಕೆ ಇಲಾಖೆ ಮುಂದಾಗಿದೆ.
ನೆರಳಿನಲ್ಲಿ ಬೆಳೆಯಬಹುದಾದ ಆಕರ್ಷಕ ಹೂವಿನ ಗಿಡಗಳು ಹಾಗೂ ಲ್ಯಾಂಡ್ ಸ್ಕೇಪಿಂಗ್ ಮಾಡಲು ತೋಟಗಾರಿಕೆ ಇಲಾಖೆ ಮುಂದಾಗಿದೆ. ಈ ಭಾಗದ ಉದ್ಯಾನದ ಅಭಿವೃದ್ಧಿಗೆ ಟೆಂಡರ್ ಪ್ರಕ್ರಿಯೆ ಬಗೆಗಿನ ವಿವಾದ ನ್ಯಾಯಾಲಯದಲ್ಲಿ ಇದ್ದ ಕಾರಣ ಇಲಾಖೆ ಈ ಭಾಗದಲ್ಲಿ ಐದು ವರ್ಷಗಳಿಂದ ಯಾವುದೇ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲು ಸಾಧ್ಯವಾಗಿರಲಿಲ್ಲ. ಇದೀಗ ತಡೆಯಾಜ್ಞೆ ತೆರವುಗೊಂಡಿದೆ. ಇದರ ಬೆನ್ನಲ್ಲೇ ತೋಟಗಾರಿಕೆ ಇಲಾಖೆಯು ನೆರಳು ಉದ್ಯಾನದ ಯೋಜನೆಗೆ ಚಾಲನೆ ನೀಡಿದೆ.
ಕಬ್ಬನ್ ಉದ್ಯಾನದಲ್ಲಿ ಅಂಧರಿಗಾಗಿ ಆಕರ್ಷಕ ಸ್ಥಳಗಳ ಕುರಿತ 'ಸ್ಪರ್ಶ ಫಲಕ'
ನೆರಳು ಉದ್ಯಾನ ನಿರ್ಮಿಸುತ್ತಿರುವ ಭಾಗದಲ್ಲಿ ಸಾಕಷ್ಟು ಮರಗಳಿದ್ದು, ಬಹುತೇಕ ನೆರಳು ಆವರಿಸಿದೆ. ಈ ಭಾಗದಲ್ಲಿ ಸಾಮಾನ್ಯ ಗಿಡಗಳು ಬೆಳೆಯುವುದಿಲ್ಲ. ನೆಟ್ಟರೂ ನಾಶವಾಗಲಿದೆ. ಹಾಗಾಗಿ ನೆರಳಿನಲ್ಲಿ ಮಾತ್ರ ಬೆಳೆಯಬಹುದಾದ ಹೂವಿನ ಗಿಡಗಳು ಮತ್ತು ಸಣ್ಣ ಪ್ರಮಾಣದ ಹುಲ್ಲು ಹಾಸು ನಿರ್ಮಿಸಲಾಗುತ್ತಿದೆ. ಅಲ್ಲದೆ, ದೇಶದ ವಿವಿಧ ಭಾಗಗಳಿಂದ ನಾನಾ ಜಾತಿಯ ಗಿಡಗಳನ್ನು ತರಿಸಿಕೊಳ್ಳಲಾಗುತ್ತಿದೆ.
ಜತೆಗೆ ಗಿಡಗಳು ಹಾಗೂ ಹುಲ್ಲುಉ ಹಾಸಿಗೆ ಸಾರ್ವಜನಿಕರಿಗೆ ತೊಂದರೆಯಾಗದಂತೆ ನಡೆದಾಡುವುದಕ್ಕಾಗಿ ಪಾದಚಾರಿ ಮಾರ್ಗ ನಿರ್ಮಿಸಲಾಗುತ್ತಿದೆ. ಅಭಿವೃದ್ಧಿಯಾಗುತ್ತಿರುವ ಉದ್ಯಾನದ ಭಾಗದಲ್ಲಿ ಶರ್ಬ್ಸ್, ಉದ್ಯಾನದ ಸೌಂದರ್ಯ ಹೆಚ್ಚಳ ಮಾಡುವ ಆಕರ್ಷಕವಾದ ಅಲಂಕಾರಿಕ ವಸ್ತುಗಳನ್ನು ಇಡಲಾಗುವುದು ಎಂದು ತೋಟಗಾರಿಕೆ ಇಲಾಖೆ ನಿರ್ದೇಶಕ ಮಹಂತೇಶ್ ಮುರಗೋಡ ತಿಳಿಸಿದ್ದಾರೆ.