ಯಡಿಯೂರಪ್ಪನವರಿಗೆ ಸಿದ್ದರಾಮಯ್ಯ 10 ಪ್ರಶ್ನೆಗಳು
ಬೆಂಗಳೂರು, ಏಪ್ರಿಲ್ 12: ಕರ್ನಾಟಕವನ್ನು ಅತಿ ಭ್ರಷ್ಟ ರಾಜ್ಯವನ್ನಾಗಿ ಮಾಡಿದ ವ್ಯಕ್ತಿಯಿಂದ ದೊಡ್ಡ ಮಾತು. ಬೆಂಗಳೂರಿನ ಕಸದ ನಗರಿ ಮಾಡಿದವರು, ರೈತರ ಮೇಲೆ ಗೋಲಿಬಾರ್ ಗೆ ಆದೇಶಿಸಿದವರು. ಆಧಾರರಹಿತ ಆರೋಪಗಳನ್ನು ಬಿಟ್ಟು ಆರೂವರೆ ಕೋಟಿ ಕನ್ನಡಿಗರಿಗೆ ನೀವು ಕೊಟ್ಟಿದ್ದೇನು ಎಂದು ಸಿದ್ದರಾಮಯ್ಯ ಅವರು ಯಡಿಯೂರಪ್ಪನವರನ್ನು ಪ್ರಶ್ನೆ ಮಾಡಿದ್ದಾರೆ.
ಅಭಿವೃದ್ಧಿ ಬಗ್ಗೆ ನೀವು ಚರ್ಚೆ ಮಾಡ್ತೀರಾ? ನಮ್ಮ ಹತ್ತು ಪ್ರಶ್ನೆಗಳಿಗೆ ಉತ್ತರಿಸಿ ಎಂದು ಸಿದ್ದರಾಮಯ್ಯ ಅವರು ಟ್ವಿಟ್ಟರ್ ನಲ್ಲಿ ಪ್ರಶ್ನೆ ಮಾಡಿದ್ದಾರೆ. ಆ 10 ಪ್ರಶ್ನೆಗಳು ಇಲ್ಲಿವೆ.
ಬಿಜೆಪಿ ಪಾಲಿಗೆ ಈ ಬಾರಿ ಕರ್ನಾಟಕದ ಚುನಾವಣೆ ಎಂಥ ಚದುರಂಗದಾಟ!
ಇದೇ ವೇಳೆ ಅವರು 'ಮತದಾರರ ಜತೆಗೆ ನಿಮ್ಮ ಭವಿಷ್ಯದ ದೃಷ್ಟಿ ಬಗ್ಗೆ ಮಾತನಾಡಿ ಮತ್ತು ಆಧಾರರಹಿತ ಆರೋಪ ನಿಲ್ಲಿಸಿ' ಎಂದು ಹೇಳಿದ್ದಾರೆ.
|
ಕನ್ನಡ ಧ್ವಜಕ್ಕಿದೆಯಾ ನಿಮ್ಮ ಬೆಂಬಲ
ಕನ್ನಡಿಗರ ಆಕಾಂಕ್ಷೆಯಂತೆ ನಾಡಿಗೆ ತನ್ನದೇ ಆದ ಪ್ರಮುಖ ಗುರುತು ಒದಗಿಸುವ ನಾಡ ಧ್ವಜ ಹೊಂದಲು ನೀವು ಬೆಂಬಲಿಸುತ್ತೀರಾ?
ಹೀಗೊಂದು ಪ್ರಶ್ನೆಯನ್ನು ಸಿದ್ದರಾಮಯ್ಯ ಎತ್ತಿದ್ದಾರೆ. 6.5 ಕೋಟಿ ಕನ್ನಡಿಗರ ಆಕಾಂಕ್ಷೆಗಳನ್ನು ಇಡೇರಿಸುವ ಸರಕಾರ ರಾಜ್ಯಕ್ಕೆ ಬೇಕಾಗಿದೆ ಎಂದು ಯಡಿಯೂರಪ್ಪ ಟ್ಟೀಟ್ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯೆ ರೂಪದಲ್ಲಿ ಟ್ಟೀಟ್ ಮಾಡಿರುವ ಸಿದ್ದರಾಮಯ್ಯ 10 ಪ್ರಶ್ನೆಗಳನ್ನು ಎತ್ತಿದ್ದಾರೆ.
Array |
ಸ್ವತಂತ್ರ ಧರ್ಮಕ್ಕಿದೆಯೇ ಬೆಂಬಲ?
"ಸ್ವತಂತ್ರ ಧರ್ಮಕ್ಕಾಗಿ ಬಸವೇಶ್ವರ ಅನುಯಾಯಿಗಳ ಆಕಾಂಕ್ಷೆಗಳನ್ನು ನೀವು ಬೆಂಬಲಿಸುತ್ತೀರಾ?" ಎನ್ನುವ ಪ್ರಶ್ನೆಯನ್ನು ಮುಖ್ಯಮಂತ್ರಿಗಳು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪನವರಿಗೆ ಕೇಳಿದ್ದಾರೆ.
ಚುನಾವಣೆ ಘೋಷಣೆಗೆ ಕೆಲವೇ ದಿನಗಳಿಗಿಂತ ಮೊದಲು ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ರಾಜ್ಯ ಸರಕಾರ ಶಿಫಾರಸ್ಸು ಮಾಡಿತ್ತು. ಕರ್ನಾಟಕದಲ್ಲಿ ಲಿಂಗಾಯತರಿಗೆ ಅಲ್ಪಸಂಖ್ಯಾತ ಸ್ಥಾನಮಾನ ನೀಡಿ, ದೇಶದಲ್ಲೂ ಅಲ್ಪಸಂಖ್ಯಾತ ಸ್ಥಾನಮಾನ ನೀಡಲು ಕೇಂದ್ರಕ್ಕೆ ಶಿಫಾರಸ್ಸು ಕಳುಹಿಸಿತ್ತು.
ಇದು ಸಿದ್ದರಾಮಯ್ಯನವರ ಒಡೆದು ಆಳುವ ನೀತಿ ಎಂದು ಬಿಜೆಪಿ ಮೊದಲಿನಿಂದಲೂ ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ವಿರೋಧ ವ್ಯಕ್ತಪಡಿಸುತ್ತಲೇ ಬಂದಿದೆ.
ಬಿಜೆಪಿ & ಜೆಡಿಎಸ್ 25 ಸೀಟುಗಳಿಗಿಂತ ಹೆಚ್ಚು ಗೆಲ್ಲಲ್ಲ: ಸಿದ್ದರಾಮಯ್ಯ
ಪ್ರಧಾನಿ ಮಧ್ಯಸ್ಥಿಕೆ ಬೆಂಬಲ?
ಮಹಾದಾಯಿ ಸಮಸ್ಯೆ ಈ ಚುನಾವಣೆಯಲ್ಲಿ ತುಂಬಾ ಚರ್ಚೆಗೆ ಒಳಗಾಗಿದೆ. ಇದೇ ಸಂದರ್ಭದಲ್ಲಿ ಸಿದ್ದರಾಮಯ್ಯ, "ಮಹದಾಯಿ ಸಮಸ್ಯೆಯನ್ನು ಶೀಘ್ರ ಪರಿಹರಿಸಲು ಪ್ರಧಾನಮಂತ್ರಿಯವರ ಮಧ್ಯಸ್ಥಿಕೆಯನ್ನು ನೀವು ಬೆಂಬಲಿಸುತ್ತೀರಾ?" ಎಂಬ ಪ್ರಶ್ನೆ ಕೇಳಿದ್ದಾರೆ.
ಮೊದಲಿನಿಂದಲೂ ಕರ್ನಾಟಕ ಪ್ರಧಾನಿ ನರೇಂದ್ರ ಮೋದಿ ಈ ವಿಚಾರದಲ್ಲಿ ಮಧ್ಯಸ್ಥಿಕೆ ವಹಿಸಬೇಕು ಎಂಬ ಬೇಡಿಕೆ ಮುಂದಿಡುತ್ತಲೇ ಬಂದಿದೆ. ಆದರೆ ಮೋದಿ ಮಧ್ಯಸ್ಥಿಕೆ ಹಿಂದೇಟು ಹಾಕುತ್ತಲೇ ಬಂದಿದ್ದಾರೆ.
ವಾಣಿಜ್ಯ ಬ್ಯಾಂಕುಗಳ ಸಾಲ ಮನ್ನಾಕ್ಕಿದೆಯಾ ಬೆಂಬಲ?
ಸಹಕಾರಿ ಬ್ಯಾಂಕ್ ಗಳಲ್ಲಿದ್ದ ರಾಜ್ಯದ ರೈತರ ಸುಮಾರು 8,000 ಕೋಟಿ ಸಾಲ ಮನ್ನಾ ಮಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಆರಂಭದಿಂದಲೂ ಕೇಂದ್ರ ಸರಕಾರ ವಾಣಿಜ್ಯ ಮತ್ತು ರಾಷ್ಟ್ರೀಯ ಬ್ಯಾಂಕ್ ಗಳಲ್ಲಿನ ಸಾಲವನ್ನು ಮನ್ನಾ ಮಾಡಬೇಕು ಎಂದು ಒತ್ತಾಯಿಸುತ್ತಲೇ ಬಂದಿದ್ದರು.
ಅದರಂತೆ, "ಕೇಂದ್ರ ಸರ್ಕಾರವು ವಾಣಿಜ್ಯ ಬ್ಯಾಂಕುಗಳಲ್ಲಿರುವ ರಾಜ್ಯದ ರೈತರ ಸಾಲ ಮನ್ನಾ ಮಾಡಬೇಕು ಎನ್ನುವುದನ್ನು ನೀವು ಬೆಂಬಲಿಸುತ್ತೀರಾ?" ಎನ್ನುವ ಪ್ರಶ್ನೆ ಎಸೆದಿದ್ದಾರೆ.
ಸಿಎಂ ಪಟ್ಟಕ್ಕೆ ಸಿದ್ದರಾಮಯ್ಯ ಹೆಸರು ಘೋಷಣೆ, ಕಾಂಗ್ರೆಸ್ಸಿಗೆ ಹಿನ್ನಡೆಯೆ?
ರೈತರ ಆತ್ಮಹತ್ಯೆ ವಿಚಾರದಲ್ಲಿ ನೀವೇನು ಮಾಡುವಿರಿ
"ಮಹಾರಾಷ್ಟ್ರದ ಯಾವತ್ಮಲ್ ನಲ್ಲಿ ರೈತನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಮತ್ತು ಅದಕ್ಕೆ ಪ್ರಧಾನಮಂತ್ರಿಗಳೆ ಹೊಣೆ ಎಂದು ದೂರಿದ್ದ. ಇದರ ಬಗ್ಗೆ ಬಿಜೆಪಿ ಸರ್ಕಾರ ಏನು ಮಾಡುತ್ತಿದೆ? ರೈತರ ಆತ್ಮಹತ್ಯೆಗಳಿಗೆ ನೀವು ನಮ್ಮನ್ನು ದೂಷಿಸುತ್ತೀರ ಎಂದಾದರೆ ಈ ವಿಚಾರದಲ್ಲಿ ನೀವೇನು ಮಾಡುವಿರಿ?" ಎಂದು ನೇರವಾಗಿ ಬ್ಯಾಟ್ ಬೀಸಿದ್ದಾರೆ ಸಿದ್ದರಾಮಯ್ಯ.
ಬೆಂಗಳೂರಿಗರು ನಿಮ್ಮನ್ನು ಹೇಗೆ ನಂಬುತ್ತಾರೆ?
"ನೀವು ನೂರಾರು ಎಕರೆಗಳಷ್ಟು ಬಿಡಿಎ ಭೂಮಿಯನ್ನು ಡಿನೋಟಿಫೈ ಮಾಡಿದ್ದರಿಂದ ಹಲವಾರು ಮಂದಿ ಮನೆಗಳನ್ನು ಕಳೆದುಕೊಂಡಿದ್ದಾರೆ. ನೀವು ಏಕೆ ಹಾಗೆ ಮಾಡಿದ್ದು? ಬೆಂಗಳೂರಿನವರು ಮತ್ತೆ ನಿಮ್ಮನ್ನು ಹೇಗೆ ನಂಬುತ್ತಾರೆ?" ಎಂದು ಬೆಂಗಳೂರಿಗೆ ಸಂಬಂಧಿಸಿದ ಪ್ರಶ್ನೆಯನ್ನೂ ಸಿದ್ದರಾಮಯ್ಯ ಕೇಳಿದ್ದಾರೆ.
ಗಣಿ ಹಗರಣ
2013ರ ಚುನಾವಣೆಯಲ್ಲಿ ಪ್ರಮುಖವಾಗಿ ಚರ್ಚೆಗೆ ಬಂದಿದ್ದ ಗಣಿ ಹಗರಣವನ್ನು ಸಿದ್ದರಾಮಯ್ಯ ಇನ್ನೂ ಮರೆತಿಲ್ಲ.
"ರೆಡ್ಡಿ ಸಹೋದರರು ರೂ.25,000 ಕೋಟಿ ಖನಿಜ ಸಂಪತ್ತನ್ನು ಲೂಟಿ ಮಾಡಲು ನೀವು ಬಿಟ್ಟದ್ದು ಏಕೆ? ಆ ಸಂದರ್ಭದಲ್ಲಿ ನೀವೇಕೆ ಅಸಹಾಯಕರಾದದ್ದು?," ಅವರು ಯಡಿಯೂರಪ್ಪನವರನ್ನು ಕುಟುಕಿದ್ದಾರೆ.
ಅನ್ನಭಾಗ್ಯಕ್ಕಿಂತ ನಿಮ್ಮದೇನು ಭಿನ್ನ?
ತಮ್ಮ ಜನಪ್ರಿಯ ಅನ್ನಭಾಗ್ಯ ಯೋಜನೆಯನ್ನು ಸಿದ್ದರಾಮಯ್ಯ ಇಲ್ಲೂ ಬಿಟ್ಟಿಲ್ಲ. "ನಾವು ಅನ್ನಭಾಗ್ಯ ಯೋಜನೆಯಡಿ ಸುಮಾರು 4 ಕೋಟಿಗೂ ಅಧಿಕ ಜನರಿಗೆ ಮಾಸಿಕ 7 ಕೆ.ಜಿ ಉಚಿತ ಅಕ್ಕಿ ಹಾಗೂ 1 ಕೋಟಿ ಮಕ್ಕಳಿಗೆ ಹಾಲು ನೀಡುತ್ತಿದ್ದೇವೆ. ನೀವು ಇದಕ್ಕಿಂತ ಭಿನ್ನವಾಗಿ ಏನು ಮಾಡುತ್ತೀರಿ?" ಹೇಳಿ ನೋಡೋಣ ಎನ್ನುವ ಪ್ರಶ್ನೆಯನ್ನು ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿಗೆ ಹಾಕಿದ್ದಾರೆ.
ಮೆಟ್ರೋ ಅಭಿವೃದ್ಧಿ ಬಗ್ಗೆ ಪ್ರಶ್ನೆ
ಬಿಜೆಪಿಯ ಮೂರು ಮುಖ್ಯಮಂತ್ರಿಗಳು 5 ವರ್ಷಗಳಲ್ಲಿ 6 ಕಿ.ಮೀ ಮೆಟ್ರೋ ಮಾರ್ಗವನ್ನು ನಿರ್ಮಿಸಿದ್ದರು. ನಾವು 5 ವರ್ಷಗಳಲ್ಲಿ 36 ಕಿ.ಮೀ ಮೆಟ್ರೋ ಮಾರ್ಗವನ್ನು ನಿರ್ಮಿಸಿದ್ದೇವೆ. ಹಂತ-2 ಅನ್ನು ನಿರ್ಮಿಸುತ್ತಿದ್ದೇವೆ ಮತ್ತು ಹಂತ-3 ಅನ್ನು ಸಿದ್ಧಪಡಿಸುತ್ತಿದ್ದೇವೆ ಎಂಬ ವಿವರಣೆಯನ್ನು ಸಿದ್ದರಾಮಯ್ಯನವರು ಟ್ವಿಟ್ಟರ್ ನಲ್ಲಿ ನೀಡಿದ್ದಾರೆ.
ನಮ್ಮ ಪರಿಹಾರ ಇದು, ನಿಮ್ಮದೇನು?
ಬೆಂಗಳೂರಿನ ವಾಹನ ದಟ್ಟಣೆ ನಿಯಂತ್ರಿಸಲು ಸರಕಾರ ಕೈಗೊಂಡಿರುವ ಕ್ರಮಗಳನ್ನು ವಿವರಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ "ನಾವು ಭಾರತ ಸರ್ಕಾರದಿಂದ ಉಪನಗರ ರೈಲು ಯೋಜನೆಗೆ ಅನುದಾನ ದೊರೆಯುವಂತೆ ಮಾಡಿದ್ದೇವೆ, ಎಲೆಕ್ಟ್ರಿಕ್ ಬಸ್ ಗಳನ್ನು ಜಾರಿಗೊಳಿಸುತ್ತಿದ್ದೇವೆ, ಬಿಎಂಟಿಸಿ ಬಸ್ ಗಳ ಸಂಖ್ಯೆಯನ್ನು ಹೆಚ್ಚಿಸುತ್ತೇವೆ. ಸಂಚಾರ ದಟ್ಟಣೆ ನಿವಾರಣೆಗೆ ನಿಮ್ಮ ಪ್ರಕಾರ ಪರಿಹಾರವೇನು?," ಎಂದು ಯಡಿಯೂರಪ್ಪನವರನ್ನು ಪ್ರಶ್ನಿಸಿದ್ದಾರೆ.