ಸೋಮಶೇಖರ ರೆಡ್ಡಿ ಮನೆ ಮುಂದೆ ಪ್ರತಿಭಟನೆ: ಜಮೀರ್ ಅಹ್ಮದ್ ಬಂಧನ
ಬಳ್ಳಾರಿ, ಜನವರಿ 13: ಮುಸ್ಲೀಮರ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿ ಬಳ್ಳಾರಿಗೆ ಬರುವಂತೆ ಜಮೀರ್ ಗೆ ಸವಾಲು ಹಾಕಿದ್ದ ಸೋಮಶೇಖರ ರೆಡ್ಡಿ ಸವಾಲು ಸ್ವೀಕರಿಸಿದ ಜಮೀರ್ ಅಹ್ಮದ್ ಖಾನ್ ಇಂದು ಬಳ್ಳಾರಿಗೆ ತೆರಳಿ ಪ್ರತಿಭಟನೆ ನಡೆಸಿದರು.
'ಬಳ್ಳಾರಿ ಕೋ ಆವೋ ಆವೋ' ಎಂದಿದ್ದ ಸೋಮಶೇಖರ ರೆಡ್ಡಿ ಮನೆಯ ಮುಂದೆಯೇ ಪ್ರತಿಭಟನೆ ನಡೆಸಲೆಂದು ಜಮೀರ್ ಅಹ್ಮದ್ ಅವರು ಇಂದು ಬೆಂಬಲಿಗರ ಜೊತೆಗೆ ಬಳ್ಳಾರಿಗೆ ಆಗಮಿಸಿದ್ದರು.
ಜಮೀರ್ ಅಹ್ಮದ್ ವಿರುದ್ಧ ಅವಹೇಳನಕಾರಿ ಪೋಸ್ಟ್: ಎಫ್ಐಆರ್ ದಾಖಲು
ಬಳ್ಳಾರಿಗೆ ಆಗಮಿಸಿ ಬೆಂಬಲಿಗರೊಂದಿಗೆ ಸಭೆ ನಡೆಸಿದ ಜಮೀರ್ ಅಹ್ಮದ್ ಖಾನ್ ಅವರನ್ನು ಪೊಲೀಸರು ಬಂಧಿಸಿ ಕರೆದೊಯ್ದಿದ್ದಾರೆ. ಜಮೀರ್ ಅವರನ್ನು ಪೊಲೀಸರು ವಾಹನದಲ್ಲಿ ಕೂರಿಸಿಕೊಳ್ಳುತ್ತಿದ್ದಂತೆ ಪ್ರತಿಭಟನಾಕಾರರು ವಾಹನಕ್ಕೆ ಮುತ್ತಿಗೆ ಹಾಕಿ ಜಮೀರ್ ಅವರನ್ನು ಬಿಡುಗಡೆ ಮಾಡಬೇಕೆಂದು ಒತ್ತಾಯ ಮಾಡಿದರು.
ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ಮಾತಿನ-ಚಕಮಕಿ ಏರ್ಪಟ್ಟ ಕಾರಣ ಸ್ಥಳದಲ್ಲಿ ಕೆಲ ಕಾಲ ಉದ್ವಿಜ್ಞ ವಾತಾವರಣ ನಿರ್ಮಾಣವಾಯಿತು.
ಜಮೀರ್ ಅಹ್ಮದ್ ಪ್ರತಿಭಟನೆಗೆ ಅನುಮತಿ ನಿರಾಕರಿಸಿದ ಬಳ್ಳಾರಿ ಪೊಲೀಸ್
ಈ ವೇಳೆ ಮಾತನಾಡಿದ ಜಮೀರ್ ಅಹ್ಮದ್ ಖಾನ್, 'ನಾನು ಶಾಂತಿಯುತವಾಗಿ ಪ್ರತಿಭಟಿಸಲೆಂದು ಬಳ್ಳಾರಿಗೆ ಬಂದಿದ್ದೇನೆ. ಸೋಮಶೇಖರ ರೆಡ್ಡಿ ಮನೆ ಮೂರು ಕಿ.ಮೀ ಇರುವಾಗಲೇ ನನ್ನನ್ನು ಬಂಧಿಸಿದ್ದಾರೆ' ಎಂದರು.
ಸಿದ್ದರಾಮಯ್ಯ ಸಹ ಜಮೀರ್ ಅಹ್ಮದ್ ಬಂಧನಕ್ಕೆ ವಿರೋಧ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದಾರೆ. 'ಸಂವಿಧಾನ ವಿರೋಧಿ ಹೇಳಿಕೆಯಿಂದ ಕೋಮುದ್ವೇಷವನ್ನು ಕೆರಳಿಸಿದ್ದ ಶಾಸಕ ಸೋಮಶೇಖರ ರೆಡ್ಡಿಯವರನ್ನು ಬಂಧಿಸಬೇಕಾಗಿದ್ದ ಬಿಜೆಪಿ ಸರ್ಕಾರ, ಶಾಂತಿಯುತವಾಗಿ ಪ್ರತಿಭಟಿಸಲು ಹೋಗಿದ್ದ ನಮ್ಮ ಶಾಸಕ ಜಮೀರ್ ಅಹ್ಮದ್ ವರನ್ನು ಬಂಧಿಸಿರುವುದು ಖಂಡನೀಯ. ಯಡಿಯೂರಪ್ಪ ಅವರೇ ಜಮೀರ್ ಅವರನ್ನು ತಕ್ಷಣ ಬಿಡುಗಡೆ ಮಾಡಿ ಎಂದು ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.
ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಬಿಜೆಪಿ ಶಾಸಕ ಸೋಮಶೇಖರ ರೆಡ್ಡಿ ಮುಸ್ಲಿಂ ಸಮುದಾಯದ ವಿರುದ್ಧ ದ್ವೇಷಪೂರ್ವಕ ಮಾತನ್ನಾಡಿದ್ದರು. 'ಅವರು (ಮುಸ್ಲಿಂ) ಹತ್ತು ಮಕ್ಕಳನ್ನು ಹೆತ್ತರೆ ನಾವು (ಹಿಂದೂ) ಐವತ್ತು ಮಕ್ಕಳನ್ನು ಹುಟ್ಟಿಸೋಣ' ಎಂದೆಲ್ಲಾ ವಿವಾದಾತ್ಮಕವಾಗಿ ಮಾತನಾಡಿದ್ದರೂ, ನಂತರ ಜಮೀರ್ ಅವರಿಗೂ ಸವಾಲು ಹಾಕಿ ಬಳ್ಳಾರಿಗೆ ಬರಲು ಹೇಳಿದ್ದರು.