ಬಳ್ಳಾರಿಯಲ್ಲಿ ಸೆಲ್ಫೀ ವಿಡಿಯೋ ಮಾಡಿಟ್ಟು ಯುವ ವಕೀಲ ಆತ್ಮಹತ್ಯೆ; ಡೆತ್ ನೋಟ್ ನಲ್ಲೇನಿದೆ?
ಬಳ್ಳಾರಿ, ಆಗಸ್ಟ್ 25: ಮೇಲಧಿಕಾರಿಗಳ ಕಿರುಕುಳ ತಾಳಲಾರದೇ, ಬ್ಯಾಂಕ್ ನಲ್ಲಿ ಕಾನೂನು ಸಲಹೆಗಾರನಾಗಿ ಕೆಲಸ ಮಾಡುತ್ತಿದ್ದ ವ್ಯಕ್ತಿ ಸೆಲ್ಫೀ ವಿಡಿಯೋ ಮಾಡಿಟ್ಟು ಬ್ಯಾಂಕ್ ನಲ್ಲಿಯೇ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬಳ್ಳಾರಿ ಜಿಲ್ಲೆಯ ಹೊಸಪೇಟೆಯಲ್ಲಿ ನಡೆದಿದೆ.
ಹೊಸಪೇಟೆಯ ಬಳ್ಳಾರಿ ಸರ್ಕಲ್ ಬಳಿ ಇರುವ ಇಕ್ವಿಟಾಸ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಉದ್ಯೋಗಿ ಮಹೇಶ್ (28) ಆತ್ಮಹತ್ಯೆಗೆ ಶರಣಾದ ಯುವಕ. ಬ್ಯಾಂಕ್ ನಲ್ಲಿ ಲೀಗಲ್ ಅಡ್ವೈಸರ್ ಆಗಿ ಕೆಲಸ ಮಾಡುತ್ತಿದ್ದ ಮಹೇಶ್, ಬ್ಯಾಂಕ್ ನಲ್ಲಿ ನಡೆಯುತ್ತಿದ್ದ ಅವ್ಯವಹಾರವನ್ನು ವಿರೋಧ ಮಾಡಿದ ಹಿನ್ನೆಲೆಯಲ್ಲಿ ಮೇಲಧಿಕಾರಿಗಳು ಕಿರುಕುಳ ನೀಡುತ್ತಿದ್ದು, ಕಿರುಕುಳ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದುಬಂದಿದೆ. ಈ ಕುರಿತ ಇನ್ನಷ್ಟು ಮಾಹಿತಿ ಇಲ್ಲಿದೆ.
ಡೆತ್ ನೋಟ್ ನಲ್ಲಿ ಏನಿದೆ?
ಬ್ಯಾಂಕ್ ನಲ್ಲಿ ನಕಲಿ ದಾಖಲೆ ಸೃಷ್ಟಿ ಮಾಡಿ ಸಾಲ ನೀಡುತ್ತಿದ್ದು, ಇದನ್ನು ವಿರೋಧ ಮಾಡಿದ ಹಿನ್ನೆಲೆಯಲ್ಲಿ ಮೇಲಿನ ಅಧಿಕಾರಿಗಳು ತಾವು ಹೇಳಿದ ಕೆಲಸ ಮಾಡುವಂತೆ ಬಾಯಿಗೆ ಬಂದ ಹಾಗೆ ಬೈದಿದ್ದರು. ಇದೇ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಮಹೇಶ್ ಡೆತ್ ನೋಟ್ ಬರೆದಿಟ್ಟಿದ್ದಾನೆ.
ಬಿಸಿನೆಸ್ ಹೆಡ್ ಹೆಸರಿನಲ್ಲಿ ಡೆತ್ ನೋಟ್
ಬ್ಯಾಂಕ್ ನ ಸ್ಟೇಟ್ ಬಿಸಿನೆಸ್ ಹೆಡ್ ಹೆಸರಿನಲ್ಲಿ ಡೆತ್ ನೋಟ್ ಬರೆದಿಟ್ಟಿರುವ ಮಹೇಶ್, ಮುಖ್ಯಸ್ಥ ತನಗೆ ನಕಲಿ ದಾಖಲೆಯನ್ನು ಅಸಲಿ ಎಂದು ಹೇಳುವಂತೆ ನಿರಂತರ ಒತ್ತಡ ಹೇರುತ್ತಿದ್ದರು. ನಕಲಿ ದಾಖಲೆ ಹೊಂದಿದವರಿಗೆ ಬ್ಯಾಂಕ್ ಸಾಲ ನೀಡುವಂತೆ ಒತ್ತಡ ಹೇರುತ್ತಿದ್ದರು. ಬಳ್ಳಾರಿಯ ಬ್ರಾಂಚ್ ನಿಂದ ಹಲವಾರು ಖಾತೆದಾರರು ನೀಡಿದ ದಾಖಲೆ ನಕಲಿಯಾಗಿತ್ತು. ದಾಖಲೆಯನ್ನು ಪರಿಶೀಲನೆ ಮಾಡಲು ಬಳ್ಳಾರಿ ಮಹಾನಗರ ಪಾಲಿಕೆಗೆ ಬಂದಾಗ ನಕಲಿ ಎಂಬುದು ಬಹಿರಂಗವಾದವು. ನಕಲಿ ದಾಖಲೆಯನ್ನು ಅಸಲಿ ಎಂದು ಸರ್ಟಿಫೈ ಮಾಡುವಂತೆ ಒತ್ತಡ ಹೇರುತ್ತಿದ್ದರು ಎಂದು ಡೆತ್ ನೋಟ್ ನಲ್ಲಿ ಬರೆದಿದ್ದಾರೆ.
ಮೈಸೂರು: ನಂಜನಗೂಡು ತಾಲೂಕು ಆರೋಗ್ಯಾಧಿಕಾರಿ ಆತ್ಮಹತ್ಯೆಗೆ ಶರಣು
ಮನೆಯಲ್ಲೂ ಒತ್ತಡದ ಬಗ್ಗೆ ಹೇಳಿಕೊಂಡಿದ್ದ ಮಹೇಶ್
ಮನೆಯಲ್ಲಿಯೂ ಬ್ಯಾಂಕ್ ನಲ್ಲಿ ನಡೆಯುತ್ತಿರುವ ಅವ್ಯವಹಾರದ ಬಗ್ಗೆ ಪದೇ ಪದೇ ಮಹೇಶ್ ಹೇಳುತ್ತಿದ್ದು, ಕೆಲಸ ಬಿಡುವಂತೆ ಮನೆಯವರು ಒತ್ತಡ ಹೇರಿದ್ದರು. ಹೀಗಿದ್ದರೂ ಮಹೇಶ್ ಕೆಲಸ ಮಾಡುತ್ತಿದ್ದರು. ಬಿಸಿನೆಸ್ ಹೆಡ್ ಹಾಗೂ ಬಳ್ಳಾರಿ ಬ್ಯಾಂಕ್ ಮ್ಯಾನೇಜರ್ ಹೇಳಿದ ಹಾಗೆ ಕೇಳದ ಹಿನ್ನೆಲೆ ಕರೆ ಮಾಡಿ ಬಾಯಿಗೆ ಬಂದ ಹಾಗೆ ಬೈದಿದ್ದರು ಎಂದು ತಿಳಿದುಬಂದಿದೆ.
ಅನ್ಯಾಯ ವಿರೋಧಿಸಿದ್ದೇ ಸಾವಿಗೆ ಕಾರಣವೇ?
ಮಾನಸಿಕ ಖಿನ್ನತೆಗೆ ಒಳಗಾಗಿ ಮಹೇಶ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮಹೇಶ್ ಸಹೋದರ ಆರೋಪಿಸಿದ್ದಾರೆ. ಬ್ಯಾಂಕ್ ನಲ್ಲಿ ಸರಿಯಾದ ದಾಖಲೆ ಇಲ್ಲದೇ ಇದ್ದರು ಲೋನ್ ನೀಡುವಂತೆ ಒತ್ತಾಯ ಹೇರುತ್ತಿದ್ದರು. ಲಾಕ್ ಡೌನ್ ಹಿನ್ನೆಲೆಯಲ್ಲಿ ಬಿಸಿನೆಸ್ ಇಲ್ಲದ ಕಾರಣ ಕೆಲಸಗಾರರ ಮೇಲೆ ಒತ್ತಡ ಹೆಚ್ಚಾಗಿತ್ತು. ಮೇಲಧಿಕಾರಿಗಳ ಕಿರುಕುಳವೂ ಹೆಚ್ಚಾಗಿತ್ತು ಎನ್ನಲಾಗಿದೆ.