ಉಪಚುನಾವಣೆ ಘೋಷಣೆ; ಬೀಸೋ ದೊಣ್ಣೆಯಿಂದ ತಪ್ಪಿಸಿಕೊಂಡ ಸಿಎಂ
ಬಳ್ಳಾರಿ, ಸೆಪ್ಟೆಂಬರ್ 21: ಸದ್ಯ ರಾಜ್ಯದಲ್ಲಿ ವಿಜಯನಗರ ಜಿಲ್ಲಾ ಕೇಂದ್ರವಾಗಿಸುವ ವಿಚಾರ ತೀವ್ರ ಚರ್ಚೆಯಲ್ಲಿದೆ. ಹೊಸಪೇಟೆಯನ್ನು ವಿಜಯನಗರ ಜಿಲ್ಲಾ ಕೇಂದ್ರವಾಗಿಸುವ ಚೆಂಡು ಸರ್ಕಾರದ ಅಂಗಳದಲ್ಲಿದೆ. ಒಂದೆಡೆ ಈ ಬಗ್ಗೆ ಪರ ಹಾಗೂ ವಿರೋಧದ ಧ್ವನಿ ಎದ್ದಿದೆ. ನಿನ್ನೆಯಷ್ಟೆ ತಮ್ಮನ್ನು ಭೇಟಿಯಾದ ಮಠಾಧೀಶರು ಹಾಗೂ ಜನಪ್ರತಿನಿಧಿಗಳಿಗೆ ಶೀಘ್ರ ಈ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸುವ ಭರವಸೆ ನೀಡಿದ್ದಾರೆ. ಮುಖ್ಯವಾಗಿ ವಿಜಯನಗರ ಜಿಲ್ಲೆ ಮಾಡುವ ಕುರಿತು ಸಿಎಂ ಯಡಿಯೂರಪ್ಪ ಹಾಗೂ ಬಿಜೆಪಿ ವರಿಷ್ಠರಿಗೆ ಆಸಕ್ತಿ ಇದೆ ಎಂದು ಹೇಳಲಾಗುತ್ತಿದೆ. ಆದರೆ ಮತ್ತೊಂದೆಡೆ ಈ ವಿಚಾರ ಸಿಎಂಗೆ ಬಿಸಿ ತುಪ್ಪವಾಗಿ ಪರಿಣಮಿಸಲಿದೆಯಾ ಎನ್ನುವ ಚರ್ಚೆಗಳು ಕೂಡ ಕಲ್ಯಾಣ ಕರ್ನಾಟಕದಲ್ಲಿ ನಡೆದಿವೆ.
Breaking: ಉಪಚುನಾವಣೆಗೆ ದಿನಾಂಕ ನಿಗದಿ, ಇಂದಿನಿಂದಲೇ ನೀತಿ ಸಂಹಿತೆ ಜಾರಿ
ವಿಜಯನಗರ ಜಿಲ್ಲೆಗಾಗಿ ಉಜ್ಜಯಿನಿ ಪೀಠದ ಶ್ರೀಗಳ ನೇತೃತ್ವದಲ್ಲಿ ಹಲವು ಮಠಾಧೀಶರು ಹಾಗೂ ಅನರ್ಹ ಶಾಸಕ ಆನಂದ್ ಸಿಂಗ್, ಅಲ್ಲಂ ವೀರಭದ್ರಪ್ಪ, ಕೆ.ಸಿ ಕೊಂಡಯ್ಯ, ಗಣೇಶ್ ನೇತೃತ್ವದ ಹಲವು ಜನಪ್ರತಿನಿಧಿಗಳು ಹೊಸಪೇಟೆಯನ್ನು ವಿಜಯ ನಗರ ಜಿಲ್ಲೆಯನ್ನಾಗಿ ಘೋಷಿಸಬೇಕು ಎಂದು ಒತ್ತಾಯಿಸಿದ್ದಾರೆ. ಈಗಾಗಲೇ ಬಳ್ಳಾರಿ ನಗರ ಪಶ್ಚಿಮ ತಾಲೂಕುಗಳಿಗೆ ನೂರಾರು ಕಿಲೋಮೀಟರ್ ಅಂತರದಲ್ಲಿರುವುದರಿಂದ ಜನಸಾಮಾನ್ಯರಿಗೆ ಜಿಲ್ಲಾ ಕೇಂದ್ರಕ್ಕೆ ತೆರಳಲು ತುಂಬ ತೊಂದರೆಯಾಗುತ್ತಿದೆ. ಹೀಗಾಗಿ ಸದ್ಯ ಬಳ್ಳಾರಿ ಜಿಲ್ಲೆ 11 ತಾಲೂಕುಗಳನ್ನು ಒಳಗೊಂಡಿದೆ. ಹಗರಿಬೊಮ್ಮನಹಳ್ಳಿ, ಕೊಟ್ಟೂರು, ಕೂಡ್ಲಿಗಿ, ಹರಪನಹಳ್ಳಿ, ಹಡಗಲಿ ತಾಲೂಕುಗಳನ್ನು ಹೊಸಪೇಟೆಗೆ ಸೇರಿಸಿ ವಿಜಯನಗರ ಜಿಲ್ಲೆಯನ್ನಾಗಿ ಮಾಡುವುದರಿಂದ ಸಾಕಷ್ಟು ಅನುಕೂಲವಾಗಲಿದೆ ಎನ್ನುವುದು ಈ ಭಾಗದ ಜನರ ಅಭಿಪ್ರಾಯ.
ಗಣಿಧಣಿಗಳ ಪಾಳೆಯದಿಂದ ತೀವ್ರ ವಿರೋಧ
ಒಂದೆಡೆ ಈ ಬೆಳವಣಿಗೆಗಳು ನಡೆಯುತ್ತಿದ್ದಂತೆ ಬಳ್ಳಾರಿ ಗಣಿ ಧಣಿಗಳ ಪಾಳೆಯದಿಂದ ಇದಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ. ಸಚಿವ ಶ್ರೀರಾಮುಲು, ಜಿ.ಸೋಮಶೇಖರ್ ರೆಡ್ಡಿ ಸೇರಿದಂತೆ ಹಲವರ ತೀವ್ರ ವಿರೋಧಕ್ಕೂ ಕಾರಣವಾಗಿದೆ. ಹೊಸಪೇಟೆಯನ್ನು ವಿಜಯ ನಗರ ಜಿಲ್ಲೆ ಎಂದು ಘೋಷಣೆ ಮಾಡಿದರೆ ತುಘಲಕ್ ದರ್ಬಾರ್ ಆಗಲಿದೆ ಎಂದು ಬಹಿರಂಗವಾಗಿಯೇ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದರು. ಈ ಬಗ್ಗೆ ಸಿಎಂ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅಭಿಪ್ರಾಯ ಸಂಗ್ರಹಿಸಿ ತೀರ್ಮಾನ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ಇದರಿಂದ ಸಚಿವ ಸಂಪುಟ ಸಭೆಯಲ್ಲಿ ಸಚಿವ ಶ್ರೀರಾಮುಲು ಸೇರಿ ಹಲವರು ವಿಜಯನಗರ ಜಿಲ್ಲೆ ಮಾಡಲು ವಿರೋಧ ವ್ಯಕ್ತಪಡಿಸುವುದು ಬಹುತೇಕ ಖಚಿತವಾಗಿದೆ. ಇದರಿಂದಾಗಿ ಸದ್ಯದ ಬಳ್ಳಾರಿ ಜಿಲ್ಲೆಯ ಜನಪ್ರತಿನಿಧಿಗಳಲ್ಲಿ ವಿಜಯನಗರ ಜಿಲ್ಲೆಯ ವಿಚಾರ ಮುನಿಸಿಗೆ ಕಾರಣವಾಗುವ ಸಾಧ್ಯತೆಯೂ ಇದೆ.
ಫಲ ಕೊಡುವುದೇ ಆನಂದ್ ಸಿಂಗ್ ಲೆಕ್ಕಾಚಾರ
ಈಗಾಗಲೇ ಬಳ್ಳಾರಿ ಜಿಲ್ಲೆಯ ಜನಪ್ರತಿನಿಧಿಗಳಲ್ಲಿ ವಿಜಯನಗರ ಜಿಲ್ಲೆ ಮಾಡಲು ಪರ ವಿರೋಧದ ಅಭಿಪ್ರಾಯ ವ್ಯಕ್ತವಾಗಿದ್ದು ತಮ್ಮ ಅಸ್ತಿತ್ವಕ್ಕಾಗಿ ಎಂಬ ಮಾತುಗಳು ಕೂಡ ಚರ್ಚೆಯಲ್ಲಿದೆ. ಇದಕ್ಕೆ ಕಾರಣ ಒಂದು ವೇಳೆ ವಿಜಯನಗರ ಜಿಲ್ಲೆ ಮಾಡಿದರೆ ಜಿಲ್ಲೆಯಲ್ಲಿ ತಾವು ಹಿಡಿತ ಸಾಧಿಸಿ ಮತ್ತಷ್ಟು ಪ್ರಭಾವಿಯಾಗಬಹುದು ಎನ್ನುವ ಅಭಿಪ್ರಾಯ ಹಾಗೂ ಲೆಕ್ಕಾಚಾರ ಆನಂದ್ ಸಿಂಗ್ ಅವರದ್ದು. ಆದರೆ ಬಳ್ಳಾರಿ ಜಿಲ್ಲೆಯನ್ನು ವಿಭಜಿಸದೇ ಬಳ್ಳಾರಿಯನ್ನು ವಿಜಯನಗರ ಜಿಲ್ಲೆಯಾಗಿಸಿ ಎಂದು ಒತ್ತಾಯಿಸುವ ಮೂಲಕ ಗಣಿ ಧಣಿಗಳು ಜಿಲ್ಲೆಯಲ್ಲಿರುವ ತಮ್ಮ ಹಿಡಿತ ಸಡಿಲಗೊಳ್ಳಬಾರದೆಂಬ ಲೆಕ್ಕಾಚಾರದಲ್ಲಿದ್ದಾರೆ. ಈ ಕಾರಣದಿಂದ ಪರ ಹಾಗೂ ವಿರೋಧ ಚರ್ಚೆಗಳು ನಡೆದಿವೆ ಎನ್ನಲಾಗುತ್ತಿದೆ. ಮೂಲವೊಂದರ ಪ್ರಕಾರ ಆನಂದ್ ಸಿಂಗ್ ವಿಜಯನಗರ ಜಿಲ್ಲೆ ಮಾಡುವ ಒಪ್ಪಂದ ಮಾಡಿಕೊಂಡೇ ಕಾಂಗ್ರೆಸ್ ಗೆ ರಾಜಿನಾಮೆ ನೀಡಿದ್ದಾರೆ. ಹೀಗಾಗಿ ಈ ಬಗ್ಗೆ ಬಿಜೆಪಿ ವರಿಷ್ಠರು ಹಾಗೂ ಸಿಎಂ ಅವರಿಗೂ ಆಸಕ್ತಿ ಇದೆ ಎಂಬ ಮಾತುಗಳು ಕೇಳಿ ಬರುತ್ತಿದೆ.
ಈ ಕಾರಣದಿಂದಲೇ ಈಗಾಗಲೇ ನಿನ್ನೆ ತಮ್ಮನ್ನು ವಿಜಯನಗರ ಜಿಲ್ಲೆ ಮಾಡುವ ವಿಚಾರ ಭೇಟಿಯಾದ ಮಠಾಧೀಶರು ಹಾಗೂ ಜನಪ್ರತಿನಿಧಿಗಳಿಗೆ ಜಿಲ್ಲಾ ಕೇಂದ್ರ ಮಾಡುವ ಬಗ್ಗೆ ಆಸಕ್ತಿ ತೋರಿಸಿದ್ದು ಸಚಿವ ಸಂಪುಟದಲ್ಲಿ ತೀರ್ಮಾನಿಸುವ ಭರವಸೆ ನೀಡಿರುವುದು ವಿಜಯನಗರ ಜಿಲ್ಲಾ ಕೇಂದ್ರ ಘೋಷಣೆಯಾಗುವ ಸಾಧ್ಯತೆ ಹೆಚ್ಚಿದೆ. ಇದರಲ್ಲಿ ಬಿಜೆಪಿಯ ಮುಖ್ಯವಾಗಿ ಸದ್ಯದ ಹಾಗೂ ಉಪ ಚುನಾವಣೆಯ ರಾಜಕೀಯ ಲೆಕ್ಕಾಚಾರವೂ ಇದೆ ಎನ್ನುವ ಮಾತುಗಳು ಕೇಳಿಬರುತ್ತಿವೆ.
ಅ.21ಕ್ಕೆ ಬೈ ಎಲೆಕ್ಷನ್ ಘೋಷಣೆ; ಮೈತ್ರಿ ಮುರಿದ ಎಚ್ ಡಿಕೆ
ಧೂಳುರಹಿತ ಜಿಲ್ಲೆ ಮಾಡುವ ಎಂ.ಪಿ. ಪ್ರಕಾಶ್ ಕನಸು
ಮಾಜಿ ಸಚಿವ, ಸಮಾಜವಾದಿ ಚಿಂತಕ ದಿ.ಎಂ.ಪಿ.ಪ್ರಕಾಶ್, ಬಳ್ಳಾರಿ ಜಿಲ್ಲೆಯ ಪಶ್ಚಿಮ ತಾಲೂಕುಗಳನ್ನು ಪ್ರತ್ಯೇಕಿಸಿ ಜಿಲ್ಲಾ ಕೇಂದ್ರ ಮಾಡುವ ಕನಸು ಕಂಡಿದ್ದರು. ಈಗಾಗಲೇ ಬಳ್ಳಾರಿ ಜಿಲ್ಲೆಯ ಬಳ್ಳಾರಿ, ಸೊಂಡೂರು ತಾಲೂಕುಗಳಲ್ಲಿ ಗಣಿ ಮಾಫಿಯಾ ಹೆಚ್ಚಿತ್ತು. ಈ ಕಾರಣದಿಂದ ಧೂಳು ರಹಿತ ಜಿಲ್ಲೆ ಮಾಡುವ ಕನಸು ಎಂ.ಪಿ.ಪ್ರಕಾಶ್ ಅವರದ್ದಾಗಿತ್ತು. ಈ ಬಗ್ಗೆ ಮೂರು ದಶಕದ ಹಿಂದೆಯೇ ಎಂ.ಪಿ.ಪ್ರಕಾಶ್ ಜಿಲ್ಲಾ ರಚನೆಯ ಅಧ್ಯಯನ ಸಮಿತಿ ಅಧ್ಯಕ್ಷರಾಗಿದ್ದರು.
ನೀತಿಸಂಹಿತೆಯಿಂದ ಬಿಎಸ್ ವೈಗೆ ಕೊಂಚ ರಿಲ್ಯಾಕ್ಸ್
ನಿನ್ನೆಯಷ್ಟೆ ಈ ವಿಚಾರ ಬಹಿರಂಗಗೊಂಡ ಬೆನ್ನಲ್ಲೆ ರಾಜ್ಯದಲ್ಲಿ ಉಪ ಚುನಾವಣೆಗೆ ಮುಹೂರ್ತ ನಿಗದಿಯಾಗಿದೆ. ಇದರಿಂದ ಈ ವಿಷಯ ಒಂದೆಡೆ ಶ್ರೀರಾಮುಲು, ರೆಡ್ಡಿ ಹಾಗೂ ಆನಂದ್ ಸಿಂಗ್ ಮಧ್ಯೆ ಪೈಪೋಟಿಗೆ ಕಾರಣವಾಗುವ ಸಾಧ್ಯತೆ ಹೆಚ್ಚು. ಆದರೆ ಸದ್ಯ ಎದುರಾಗಿರುವ ಉಪಚುನಾವಣೆ ಹಿನ್ನೆಲೆ ನೀತಿ ಸಂಹಿತೆ ಕಾರಣದಿಂದ ಸಿಎಂ ಯಡಿಯೂರಪ್ಪ ಅವರಿಗೆ ಕೊಂಚ ರಿಲ್ಯಾಕ್ಸ್ ಸಿಕ್ಕಂತಾಗಿದೆ. ಒಂದು ವೇಳೆ ಉಪಚುನಾವಣಾ ಪೂರ್ವದಲ್ಲಿ ಬಿಜೆಪಿ ಯಾವ ನಿರ್ಧಾರ ಕೈಗೊಂಡರು ಒಂದು ಬಣದ ಮುನಿಸಿಗೆ ಕಾರಣವಾಗಿರುತ್ತಿತ್ತು. ಇದು ಉಪಚುನಾವಣೆಯಲ್ಲಿ ಪರಿಣಾಮ ಬೀರುವ ಸಾಧ್ಯತೆ ಇತ್ತು. ಆದರೆ ಇದೀಗ ಚುನಾವಣೆ ಘೋಷಣೆಯಾಗಿ ನೀತಿ ಸಂಹಿತೆ ಜಾರಿಯಾಗಿರುವುದರಿಂದ ಸಿಎಂ ಬಿಎಸ್ವೈ ಬೀಸೋ ದೊಣ್ಣೆಯಿಂದ ತಪ್ಪಿಸಿಕೊಂಡಂತಾಗಿದೆ. ಬರುವ ದಿನಗಳಲ್ಲಿ ವಿಜಯನಗರ ಜಿಲ್ಲೆಯ ವಿಚಾರ ಏನಾಗಲಿದೆ ಎನ್ನುವುದು ಉಪಚುನಾವಣೆಯ ನಂತರದವರೆಗೂ ಕಾಯಬೇಕಾದ ಅನಿವಾರ್ಯತೆ ಎದುರಾಗಿದೆ.