ಹಂಪಿಯನ್ನು ಉಳಿಸುವ ಕೆಲಸ ನಾವೆಲ್ಲರೂ ಮಾಡಬೇಕು:ಯದುವೀರ ಒಡೆಯರ್
ಬಳ್ಳಾರಿ, ಫೆಬ್ರವರಿ 05: ಹಂಪಿ ಸ್ಮಾರಕಗಳ ರಕ್ಷಣೆಗೆ ಆಗ್ರಹಿಸಿ ಕಮಲಾಪುರ ಪಟ್ಟಣದಲ್ಲಿರುವ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸ್ ಐ) ಕಚೇರಿ ಎದುರು ವಿವಿಧ ಸಂಘಟನೆಗಳ ಪದಾಧಿಕಾರಿಗಳು ಸೋಮವಾರ ಪ್ರತಿಭಟನೆ ನಡೆಸಿದರು.
ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ಜಾಗ್ರತೆವಹಿಸಿ, ಎಲ್ಲಾ ಕಡೆಗೂ ಸಿಸಿ ಕ್ಯಾಮರಾಗಳನ್ನು ಅಳವಡಿಸಬೇಕು. ಹಾಗೆಯೇ, ಹೆಚ್ಚಿನ ಸಿಬ್ಬಂದಿ ನೇಮಿಸಬೇಕು, ಕಲ್ಲಿನ ಕಂಬಗಳನ್ನು ಕೆಡವಿದ ಆರೋಪಿತರನ್ನು ಪತ್ತೆ ಹಚ್ಚಿ ಸೂಕ್ತ ಕ್ರಮ ಜರುಗಿಸಬೇಕು ಎಂದು ಪುರಾತತ್ವ ಇಲಾಖೆ ಉಪ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಹಂಪಿ ಸ್ಮಾರಕ ಧ್ವಂಸ ಪ್ರಕರಣ: ತನಿಖೆಗೆ ಆಗ್ರಹ, ಪ್ರತಿಭಟನೆ
ಪ್ರತಿಭಟನೆಯಲ್ಲಿ ಮೈಸೂರಿನ ಯುವರಾಜ ಯದುವೀರ ಒಡೆಯರ್ ಮತ್ತು ಆನೆಗೊಂದಿ ರಾಜ ಶ್ರೀಕೃಷ್ಣದೇವರಾಯ ಭಾಗಿಯಾಗಿದ್ದು ವಿಶೇಷ.
ಈ ಸಂದರ್ಭದಲ್ಲಿ ಮಾತನಾಡಿದ ಮೈಸೂರಿನ ಯುವರಾಜ ಯದುವೀರ ಶ್ರೀಕಂಠದತ್ತ ಒಡೆಯರ್, ಐತಿಹಾಸಿಕ ಹಂಪಿಯಲ್ಲಿ ಸ್ಮಾರಕಗಳ ರಕ್ಷಣೆಗೆ ಸಾರ್ವಜನಿಕರ ಸಹಭಾಗಿತ್ವವೂ ಇರಬೇಕು. ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ(ಎಎಸ್ ಐ) ಅಧಿಕಾರಿಗಳು ಹೆಚ್ಚಿನ ಗಮನ ನೀಡಬೇಕು. ಮೈಸೂರಿನಲ್ಲೂ ಸ್ಮಾರಕಗಳಿಗೆ ಧಕ್ಕೆಯಾಗುತ್ತದೆ. ಎಎಸ್ ಐ ಅಧಿಕಾರಿಗಳು ನಿಗಾವಹಿಸದಿದ್ದರೆ ಮೇಲಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದರು.
ವೈರಲ್ ವಿಡಿಯೋ: ಸುಂದರ ಹಂಪೆ ಸ್ಮಾರಕ ಕಿಡಿಗೇಡಿಗಳಿಂದ ಧ್ವಂಸ
ವಿಜಯನಗರ ಸ್ಮಾರಕ ಸಂಸ್ಕೃತಿ ಸೇನೆ, ಜನ್ಮಭೂಮಿ ರಕ್ಷಣಾ ಪಡೆ, ವಿಜಯನಗರ ಅಂಗವಿಕಲರ ಸಂಘ ಮತ್ತು ಗಂಡುಗಲಿ ಕುಮಾರರಾಮ ಸೇನೆಯ ನೂರಾರು ಜನರು ಕಮಲಾಪುರದ ಡಾ.ಅಂಬೇಡ್ಕರ್ ವೃತ್ತದಿಂದ ಎಎಸ್ ಐ ಕಚೇರಿವರೆಗೆ ಪ್ರತಿಭಟನೆಯಲ್ಲಿ ತೆರಳಿ, ಅಧಿಕಾರಿಗಳ ಕಾರ್ಯವೈಖರಿ ವಿರುದ್ಧ ಘೋಷಣೆ ಕೂಗಿದರು.