ಹಂಪಿಯಲ್ಲಿ ತಲೆ ಎತ್ತಲಿದೆ ವಿಶ್ವದ ಅತಿ ಎತ್ತರದ ಹನುಮಂತನ ಪ್ರತಿಮೆ
ಬಳ್ಳಾರಿ, ನವೆಂಬರ್ 17: ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣಕ್ಕೆ ಚಾಲನೆ ನೀಡಿದ ಬೆನ್ನಲ್ಲೇ ಬಳ್ಳಾರಿ ಬಳಿಯ ಹಂಪಿ ಬಳಿಯ ಅಂಜನಾದ್ರಿ ಬೆಟ್ಟದಲ್ಲಿ ವಿಶ್ವದ ಅತಿ ಎತ್ತರದ ಹನುಮಂತನ ವಿಗ್ರಹವನ್ನು ಪ್ರತಿಷ್ಠಾಪಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ.
ರಾಮಭಕ್ತ ಹನುಮಂತನ ಭವ್ಯ ವಿಗ್ರಹ ಹಂಪಿಯಲ್ಲಿ ತಲೆ ಎತ್ತಲಿದೆ. ಹಂಪಿ ಮೂಲದ ಹನುಮದ್ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್, 215 ಮೀಟರ್ ಎತ್ತರದ ಹನುಮಂತನ ಮೂರ್ತಿಯನ್ನು ನಿರ್ಮಿಸಲು ಮುಂದಾಗಿದೆ. ಹನುಮಂತನ ಜನ್ಮಸ್ಥಳವಾದ ಕಿಷ್ಕಿಂಧಾದಲ್ಲಿ ಒಟ್ಟು 1,200 ಕೋಟಿ ರೂ. ವೆಚ್ಚದಲ್ಲಿ ರಾಮಭಕ್ತ ಹನುಮಂತನ ವಿಗ್ರಹ ನಿರ್ಮಿಸಲು ಯೋಜನೆ ಸಿದ್ಧವಾಗಿದ್ದು, ಮುಂದಿನ ಆರು ವರ್ಷಗಳಲ್ಲಿ ಮೂರ್ತಿ ಪ್ರತಿಷ್ಠಾಪನೆಯ ಕಾರ್ಯ ಪೂರ್ಣಗೊಳಿಸಲು ನಿರ್ಧರಿಸಲಾಗಿದೆ.
ಅಯೋಧ್ಯೆ ರಾಮ ಮಂದಿರ ಭೂಮಿಪೂಜೆ: ಧಾರ್ಮಿಕ ಶಕ್ತಿ ಕೇಂದ್ರವಾಗಿದ್ದ ಉಡುಪಿ, ಪೇಜಾವರ ಶ್ರೀ
ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಶ್ರೀರಾಮನ ಮೂರ್ತಿ 221 ಮೀಟರ್ ಎತ್ತರವಿರಲಿದ್ದು, ಹಂಪಿಯಲ್ಲಿ ನಿರ್ಮಾಣವಾಗಲಿರುವ ಹನುಮಂತನ ಮೂರ್ತಿ 215 ಮೀಟರ್ ಎತ್ತರವಿರಲಿದೆ ಎಂದು ತಿಳಿದುಬಂದಿದೆ. ಪುರಾಣ ಹಾಗೂ ರಾಮಾಯಣದಲ್ಲಿ ಉಲ್ಲೇಖವಾಗಿರುವಂತೆ ಕಿಷ್ಕಿಂಧಾ ವಾನರ ಸಾಮ್ರಾಜ್ಯದ ದೊರೆ ಸುಗ್ರೀವನ ರಾಜಧಾನಿಯಾಗಿತ್ತು. ಇದು ಯುನೆಸ್ಕೋದ ವಿಶ್ವ ಪರಂಪರೆಯ ತಾಣವಾದ ಹಂಪಿಯ ಹೊರವಲಯದಲ್ಲಿದೆ ಎಂದು ನಂಬಲಾಗಿದೆ.
ಸದ್ಯ ಅಂಜನಾದ್ರಿ ಬೆಟ್ಟದಲ್ಲಿ ಹನುಮಂತನ ವಿಗ್ರಹ ಇದ್ದು ಇದೇ ಮಾದರಿಯಲ್ಲಿ 215 ಮೀಟರ್ ಎತ್ತರದ ವಿಗ್ರಹ ನಿರ್ಮಾಣ ಮಾಡಲು ಮುಂದಾಗಿದ್ದಾರೆ. ಅಲ್ಲದೇ ಭಕ್ತರು ಅಂಜನಾದ್ರಿ ಬೆಟ್ಟದ ಹನುಮಂತ ದೇವರನ್ನು ನೋಡಬೇಕೆಂದರೆ ಸುಮಾರು 550 ಮೆಟ್ಟಿಲು ಹತ್ತಬೇಕಾಗಿದೆ. ಆದರೆ ಈಗ ನಿರ್ಮಾಣ ಮಾಡುತ್ತಿರುವ ವಿಗ್ರಹವನ್ನು ಭಕ್ತರು ನೋಡಲು ಅನುಕೂಲವಾಗುವಂತೆ ಎಲಿವೇಟರ್ ನಿರ್ಮಾಣ ಮಾಡುವ ಯೋಜನೆ ಸಹ ಇದೆ. ಅಂದುಕೊಂಡ ಹಾಗೆ ಈ ಯೋಜನೆ ಮುಂದಿನ ಆರು ವರ್ಷದಲ್ಲಿ ಪೂರ್ಣಗೊಂಡರೆ ಹಂಪಿಯಲ್ಲಿ ಮತ್ತೊಂದು ಇತಿಹಾಸ ನಿರ್ಮಾಣವಾಗಲಿದೆ.