ಪ್ರವಾಸಿಗರ ಭೇಟಿಗೆ ವಿಶ್ವ ವಿಖ್ಯಾತ ಹಂಪಿ ಮುಕ್ತ
ವಿಜಯನಗರ, ಜೂನ್ 25; ಕೊರೊನಾ 2ನೇ ಅಲೆ ಕಡಿಮೆಯಾದ ಹಿನ್ನಲೆಯಲ್ಲಿ ಪ್ರವಾಸಿಗರಿಗೆ ವಿಶ್ವವಿಖ್ಯಾತ ಹಂಪಿ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ. ವಿಜಯನಗರ ಜಿಲ್ಲೆಯಲ್ಲಿರುವ ಹಂಪಿ ವೀಕ್ಷಣೆಗೆ ಪ್ರವಾಸಿಗರು ಆಗಮಿಸುತ್ತಿದ್ದಾರೆ.
ಕೇಂದ್ರ ಪುರಾತತ್ವ ಇಲಾಖೆ ಜೂನ್ 24ರ ಗುರುವಾರದಿಂದ ಹಂಪಿಗೆ ಪ್ರವಾಸಿಗರ ಭೇಟಿಗೆ ಅವಕಾಶ ನೀಡಿದೆ. ಬೆಳಗ್ಗೆ 6ರಿಂದ ಸಂಜೆ 5ಗಂಟೆಯ ತನಕ ಐತಿಹಾಸಿಕ ಸ್ಥಳವನ್ನು ವೀಕ್ಷಿಸಬಹುದು. ಕೋವಿಡ್ ಎರಡನೇ ಅಲೆ ಅಬ್ಬರ ಹೆಚ್ಚಾದ ಬಳಿಕ ಏಪ್ರಿಲ್ 15ರಂದು ಹಂಪಿ ಸೇರಿದಂತೆ ದೇಶದ ಐತಿಹಾಸಿಕ ಪ್ರವಾಸಿ ಸ್ಮಾರಕಗಳ ವೀಕ್ಷಣೆಗೆ ನಿರ್ಬಂಧ ಹೇರಲಾಗಿತ್ತು.
ಹೊಸಪೇಟೆಯಿಂದ ಹಂಪಿ ಎಕ್ಸ್ಪ್ರೆಸ್ ಈಗ ಎಲೆಕ್ಟ್ರಿಕಲ್ ರೈಲು
ಒಂದೂವರೆ ತಿಂಗಳುಗಳ ನಂತರ ಹಂಪಿ ಸ್ಮಾರಕಗಳ ವೀಕ್ಷಣೆಗೆ ಅವಕಾಶ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಹಂಪಿಯಲ್ಲಿನ ಭಾರತೀಯ ಪುರಾತತ್ವ ಇಲಾಖೆ ವ್ಯಾಪ್ತಿಯ ವಿಜಯ ವಿಠಲ್ ದೇವಾಲಯ, ಕಮಲ ಮಹಲ್ ಮತ್ತು ಕಮಲಾಪುರದಲ್ಲಿನ ಮ್ಯೂಸಿಯಂ ಸ್ಥಳಗಳನ್ನು ತೆರೆಯಲಾಗಿದೆ. ಜೂನ್ 16ರಿಂದಲೇ ಸ್ಮಾರಕ ವೀಕ್ಷಣೆಗೆ ಅವಕಾಶ ನೀಡಲಾಗಿತ್ತು. ತೀರ್ಮಾನ ಕೈಗೊಳ್ಳುವ ಅಧಿಕಾರವನ್ನು ಸ್ಥಳೀಯ ಆಡಳಿತಕ್ಕೆ ನೀಡಲಾಗಿತ್ತು.
ಡಾ. ಸಿದ್ದಲಿಂಗಯ್ಯ ನೆನಪು ಮಾಡಿಕೊಂಡ ಹಂಪಿ ಕನ್ನಡ ವಿವಿ
ವಿಜಯನಗರ ಜಿಲ್ಲೆಯಲ್ಲಿ ಕೋವಿಡ್ ಸೋಂಕಿನ ಪ್ರಕರಣಗಳು ಹೆಚ್ಚು ಇದ್ದ ಕಾರಣ ಜಿಲ್ಲಾಡಳಿತ ಪ್ರವಾಸಿಗರಿಗೆ ಅವಕಾಶ ಕಲ್ಪಿಸಿರಲಿಲ್ಲ. ನಂತರ ಅವಳಿ ಜಿಲ್ಲೆಗಳಾದ ಬಳ್ಳಾರಿ ಮತ್ತು ವಿಜಯನಗರದಲ್ಲಿ ಸೋಂಕಿನ ಪ್ರಕರಣ ಕ್ಷೀಣಿಸಿದ ಹಿನ್ನೆಲೆಯಲ್ಲಿ ಹಂಪಿ ಸ್ಮಾರಕ ವೀಕ್ಷಣೆಗೆ ಹಸಿರುವ ನಿಶಾನೆ ನೀಡಲಾಗಿದೆ.
ಸಂಕಷ್ಟದಲ್ಲಿದ್ದ ಹಂಪಿ ಗೈಡ್ಗಳಿಗೆ ಸಹಾಯ ಮಾಡಿದ ಸುಧಾಮೂರ್ತಿ
ಹಂಪಿಯ ಗೈಡ್ ಗೋಪಿನಾಥ್ ಪ್ರವಾಸಿಗರ ಭೇಟಿಗೆ ಅವಕಾಶ ನೀಡಿದ್ದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ. "ಇಷ್ಟು ದಿನ ಕೊರೊನಾ ಲಾಕ್ಡೌನ್ನಿಂದಾಗಿ ಪ್ರವಾಸಿಗರು ಇರಲಿಲ್ಲ. ಈಗ ಹಂಪಿ ವೀಕ್ಷಣೆಗೆ ಅವಕಾಶ ನೀಡಲಾಗಿದೆ. ಇದರಿಂದ ನಮಗೆ ಬಹಳ ಸಂತಸವಾಗಿದೆ. ನಾವು ಪ್ರವಾಸಿಗರಿಗೆ ಗೈಡ್ ಮಾಡಿಯೇ ಜೀವನ ಸಾಗಿಸುತ್ತಿರುವುದು" ಎಂದು ಹೇಳಿದ್ದಾರೆ.
ಆನ್ಲೈನ್ ಮೂಲಕ ಟಿಕೆಟ್
ಹಂಪಿ ವೀಕ್ಷಣೆಗೆ ಪ್ರವಾಸಿಗರನ್ನು ಸೆಳೆಯುವ ದೃಷ್ಟಿಯಿಂದ ಪೋನ್ ಪೇ, ಗೂಗಲ್ ಪೇ ಮೂಲಕವೂ ಟಿಕೆಟ್ ಹಣ ಪಾವತಿಸಲು ಅವಕಾಶ ನೀಡಲಾಗಿದೆ. ಆನ್ಲೈನ್ ಟಿಕೆಟ್ ಬುಕ್ಕಿಂಗ್ ಸೌಲಭ್ಯವನ್ನು ಸಹ ನೀಡಲಾಗಿದೆ. ಬೆಳಗ್ಗೆ 6ರಿಂದ ಸಂಜೆ 5ಗಂಟೆಯ ತನಕ ಪ್ರವಾಸಿ ಸ್ಥಳಗಳ ವೀಕ್ಷಣೆಗೆ ಅವಕಾಶವಿದೆ.
ಕೊರೊನಾ ಮಾರ್ಗಸೂಚಿ ಅನ್ವಯ
ಐತಿಹಾಸಿಕ ಹಂಪಿ ಸ್ಮಾರಕಗಳ ವೀಕ್ಷಣೆಗೆ ಆಗಮಿಸುವ ಪ್ರವಾಸಿಗರು ಕೋವಿಡ್ ಮಾರ್ಗಸೂಚಿನೆಗಳನ್ನು ಕಡ್ಡಾಯವಾಗಿ ಪಾಲನೆ ಮಾಡಲೇಬೆಕು. ಗುಂಪುಗಳಾಗಿ ಸ್ಮಾರಕಗಳನ್ನು ವೀಕ್ಷಣೆ ಮಾಡುವಂತಿಲ್ಲ, ಕಡ್ಡಾಯವಾಗಿ ಮಾಸ್ಕ್ ಮತ್ತು ಸ್ಯಾನಿಟೈಸರ್ ಬಳಸಬೇಕು. ಸಾಮಾಜಿಕ ಅಂತರ ಕಾಯ್ದುಕೊಂಡು ಸ್ಮಾರಕಗಳನ್ನು ವೀಕ್ಷಣೆ ಮಾಡಬೇಕು. ಬಸ್ಗಳಲ್ಲಿ ಎರಡು ಸೀಟ್ಗಳಲ್ಲಿ ಒಬ್ಬರು, ಮೂರು ಸೀಟ್ಗಳಲ್ಲಿ ಇಬ್ಬರು ಕುಳಿತುಕೊಂಡು ಹೊಸಪೇಟೆಯಿಂದ ಹಂಪಿ ವೀಕ್ಷಣೆಗೆ ಆಗಮಿಸಬೇಕು.
ಪ್ರವಾಸಿಗರು ವೀಕ್ಷಣೆ ಮಾಡುವ ಸ್ಥಳಗಳು
ಹಂಪಿ ವಿರೂಪಾಕ್ಷೇಶ್ವರ ದೇವಾಲಯ, ವಿಜಯ ವಿಠ್ಠಲ ದೇವಾಲಯ, ರಾಣಿ ಸ್ನಾನ ಗೃಹ, ತುಂಗಭದ್ರಾ ನದಿ ದಡ, ಕಲ್ಲಿನ ತೇರು, ಕಮಲ್ ಮಹಲ್, ಲೋಟಸ್ ಮಹಲ್, ಮಾಹಾನವಮಿ ದಿಬ್ಬ, ಆನೆ ಸಾಲು, ಕಮಲಾಪುರದ ಮ್ಯೂಸಿಯಂ ಹೀಗೆ ಇನ್ನು ಹಲವಾರು ಸ್ಮಾರಕಗಳ ವೀಕ್ಷಣೆಗಳಿಗೆ ಅವಕಾಶ ಕಲ್ಪಿಸಲಾಗಿದೆ. ಸ್ಮಾರಕಗಳನ್ನು ವೀಕ್ಷಣೆ ಮಾಡುವುದಕ್ಕೆ ಸಾಮಾಜಿಕ ಅಂತರದ ಗುರುತುಗಳನ್ನು ಮಾಡಲಾಗಿದೆ. ಸ್ಮಾರಕಗಳಲ್ಲಿ ಬಿದ್ದಿರುವಂತಹ ಕಸ ವಿಲೇವಾರಿ ಮಾಡಲಾಗಿದ್ದು, ಸ್ಯಾನಿಟೈಸ್ ಮಾಡಲಾಗಿದೆ.
ವೀಕ್ಷಣೆಗೆ ಪ್ರವಾಸಿಗರ ದಂಡು
ಹಂಪಿ ಸ್ಮಾರಕಗಳ ವೀಕ್ಷಣೆಗೆ ಕರ್ನಾಟಕ ಒಳಗೊಂಡಂತೆ ಆಂಧ್ರ ಪ್ರದೇಶ, ತಮಿಳುನಾಡು, ಮಹಾರಾಷ್ಟ್ರ, ನವ ದೆಹಲಿ, ಒಡಿಶಾ, ಪಶ್ಚಿಮ ಬಂಗಾಳ ಹೀಗೆ ವಿವಿಧ ರಾಜ್ಯಗಳಿಂದ ಮತ್ತು ಅಮೆರಿಕ, ಇಂಗ್ಲೆಂಡ್, ಫ್ರಾನ್ಸ್, ಜಪಾನ್, ಚೀನಾ, ನೇಪಾಳ ಹೀಗೆ ವಿವಿಧ ದೇಶಗಳಿಂದ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ವೀಕ್ಷಣೆಗೆ ಬರುತ್ತಿದ್ದರು. ಕೋವಿಡ್ ಸಂದರ್ಭದಲ್ಲಿ ಪ್ರವಾಸಿಗರ ಸಂಖ್ಯೆ ಕಡಿಮೆಯಾಗಿತ್ತು. ಜೂನ್ 24ರ ಮೊದಲ ದಿನವೇ ಸ್ಥಳೀಯ ಪ್ರವಾಸಿಗರು ಮತ್ತು ವಿವಿಧ ರಾಜ್ಯಗಳ ಪ್ರವಾಸಿಗರು ಆಗಮಿಸಿದ್ದರು.
ಲಾಕ್ಡೌನ್ ತೆರವು
ಕೋವಿಡ್ ಲಾಕ್ಡೌನ್ ತೆರವು ಮಾಡಿದ ಬಳಿಕ ಪ್ರವಾಸಿಗರ ಸಂಖ್ಯೆ ಕಡಿಮೆ ಇದೆ. ಇನ್ನುಮುಂದೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸಲಿದ್ದಾರೆ ಎಂದು ಕಾಳಿ ಮುತ್ತು ಹಂಪಿ ಕೇಂದ್ರ ಪುರತತ್ವ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.
"ನೋಡಿ ಸ್ವಾಮಿ ಲಾಕ್ಡೌನ್ ಮಾಡಿದಾಗಿನಿಂದ ವ್ಯಾಪಾರವಿಲ್ಲ. ನಮಗೆ ಜೀವನ ನಡೆಸೋದು ಕಷ್ಟವಾಗಿದೆ. ಜನರು ಹಂಪಿ ನೋಡೋಕೆ ಬರುತ್ತಿಲ್ಲ. ಗುರುವಾರದಿಂದ ಓಪನ್ ಮಾಡಿದ್ದರಿಂದ ಪ್ರವಾಸಿಗರು ಆಗಮಿಸುತ್ತಿದ್ದಾರೆ" ಎಂದು ವ್ಯಾಪಾರಿ ಜಿ. ಗಣೇಶ್ ಹೇಳಿದ್ದಾರೆ.