ಸಕ್ರಿಯ ರಾಜಕಾರಣಕ್ಕೆ ಜನಾರ್ದನ ರೆಡ್ಡಿ? ವರಿಷ್ಠರಿಂದ ಅನುಮತಿ ಡೌಟು
ಬಳ್ಳಾರಿ, ಫೆ 3: ರಾಜಕೀಯದಲ್ಲಿ ಖಚಿತವಾಗಿ ಹೀಗೇ ನಡೆಯುತ್ತದೆ ಎಂದು ಊಹಿಸಲು ಸಾಧ್ಯವಾಗುವುದು ಕಷ್ಟ. ಸಕ್ರಿಯ ರಾಜಕೀಯಕ್ಕೆ ಬಂದು ಬಿಜೆಪಿಯಲ್ಲಿ ತನ್ನ ಹಿಂದಿನ ಪ್ರಾಭಲ್ಯವನ್ನು ಮುಂದುವರಿಸಲು ಕಾದು ಕುಳಿತಿರುವ ಗಣಿಧಣಿ ಜನಾರ್ದನ ರೆಡ್ಡಿಗೆ ಹಾದಿಗೊಂದು, ಬೀದಿಗೊಂದು ತೊಂದರೆ.
ಬಳ್ಳಾರಿ ಪ್ರವೇಶಿಸಲು ಸರ್ವೋಚ್ಚ ನ್ಯಾಯಾಲಯ ಅವಕಾಶ ನೀಡಿರುವುದು ಮತ್ತು ತಮ್ಮಾಪ್ತ ಬಿ.ಶ್ರೀರಾಮುಲುಗೆ ಬಳ್ಳಾರಿ ಉಸ್ತುವಾರಿ ನೀಡಿರುವುದು ಈ ಡಬಲ್ ಸಂತಶದಲ್ಲಿ ಜನಾರ್ದನ ರೆಡ್ಡಿಯಿದ್ದರೂ, ಬಿಜೆಪಿ ಪುನರ್ ಪ್ರವೇಶಕ್ಕೆ ಬಿಜೆಪಿ ವರಿಷ್ಠರು ಅನುಮತಿ ನೀಡುತ್ತಾರಾ ಎನ್ನುವ ಚರ್ಚೆ ಈ ಭಾಗದಲ್ಲಿ ಜೋರಾಗಿದೆ.
ಅಕ್ರಮ ಅದಿರು ಮಾರಾಟ: ಗಾಲಿ ರೆಡ್ಡಿ ವಿರುದ್ಧ ಕ್ರಿಮಿನಲ್ ದಾವೆಗೆ ಕೋರ್ಟ್ ಆದೇಶ
ಚುನಾವಣೆಗೆ ಹದಿನಾಲ್ಕು ತಿಂಗಳು ಇರುವ ಸಮಯದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಈಗಾಗಲೇ ಪೂರ್ವ ತಯಾರಿಯನ್ನು ಆರಂಭಿಸಿದೆ. ಬಿಜೆಪಿಯೂ ಸಂಪುಟ ವಿಸ್ತರಣೆ/ನಿಗಮ ಮಂಡಳಿ ನೇಮಕ ಮುಂತಾದ ಪ್ರಕ್ರಿಯೆಯನ್ನು ಆರಂಭಿಸಿದೆ.
ಸತತವಾಗಿ ಅಧಿಕಾರವನ್ನು ಅನುಭವಿಸಿರುವ ನಾಯಕರಿಗೆ ಸಂಪುಟದಿಂದ ಕೊಕ್ ನೀಡಿ, ಹೊಸಬರಿಗೆ ಅವಕಾಶ ನೀಡುವ ಮಾತು ಬಿಜೆಪಿ ವಲಯದಲ್ಲಿ ಜೋರಾಗಿ ಕೇಳಿ ಬರುತ್ತಿದೆ. ಇನ್ನು, ಸಚಿವ ಸ್ಥಾನದಲ್ಲಿದ್ದವರನ್ನು ಪಕ್ಷದ ಚುನಾವಣಾ ಪ್ರಚಾರಕ್ಕೆ ಬಳಸಿಕೊಳ್ಳಲು ಬಿಜೆಪಿ ವರಿಷ್ಠರು ತೀರ್ಮಾನಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಜನಾರ್ಧನ ರೆಡ್ಡಿಗೆ ಅವಕಾಶ ಸಿಗುವ ಸಾಧ್ಯತೆ ಕಮ್ಮಿ, ಅದಕ್ಕೆ ಕಾರಣ ಇಲ್ಲದಿಲ್ಲ..
ಅಮವಾಸ್ಯೆ ದಿನ ಹಂಪಿಯಲ್ಲಿ ಶ್ರೀರಾಮುಲು- ಜನಾರ್ದನ ರೆಡ್ಡಿ ರಹಸ್ಯ ಪೂಜೆ?
ಜನಾರ್ದನ ರೆಡ್ಡಿಗೆ ಬಳ್ಳಾರಿ ಪ್ರವೇಶಿಸಲು ಸುಪ್ರೀಂಕೋರ್ಟ್ ಅನುಮತಿ
ಜನಾರ್ದನ ರೆಡ್ಡಿಗೆ ಬಳ್ಳಾರಿ ಪ್ರವೇಶಿಸಲು ಸುಪ್ರೀಂಕೋರ್ಟ್ ಅನುಮತಿ ಏನೋ ನೀಡಿದೆ, ಆದರೆ, ಅವರ ಮೇಲಿನ ಕೇಸುಗಳು ಇನ್ನೂ ವಿಚಾರಣೆಯ ಹಂತದಲ್ಲಿದೆ. ಈ ಹಂತದಲ್ಲಿ ಅವರನ್ನು ಬಿಜೆಪಿಯಲ್ಲಿ ಸಕ್ರಿಯರಾಗಿರಲು ಅವಕಾಶ ನೀಡಿದರೆ, ಕಾಂಗ್ರೆಸ್ ವಿರುದ್ದ ಹೋರಾಡುವುದು ಕಷ್ಟವಾಗಬಹುದು. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಕೇಸುಗಳೂ ವಿಚಾರಣೆಯ ಹಂತದಲ್ಲಿ ಇರುವುದರಿಂದ್ ಡಿಕೆಶಿ ವಿರುದ್ದ ಮುಗಿಬೀಳಲು ಬಿಜೆಪಿಗೆ ಕಷ್ಟವಾಗಬಹುದು ಎನ್ನುವ ಲೆಕ್ಕಾಚಾರವನ್ನು ಬಿಜೆಪಿ ಹೈಕಮಾಂಡ್ ಹೊಂದಿದೆ.
ಜನಾರ್ದನ ರೆಡ್ಡಿ, ರಾಮುಲು ಮೂಲಕ ಸಕ್ರಿಯ ರಾಜಕಾರಣಕ್ಕೆ ಎಂಟ್ರಿ ಕೊಡಲು ಹರಸಾಹಸ
ಇದನ್ನೆಲ್ಲಾ ಅರಿತಿರುವ ಜನಾರ್ಧನ ರೆಡ್ಡಿ ತಮ್ಮ ಜಿಗರ್ ದೋಸ್ತ್ ಶ್ರೀರಾಮುಲು ಮೂಲಕ ಸಕ್ರಿಯ ರಾಜಕಾರಣಕ್ಕೆ ಎಂಟ್ರಿ ಕೊಡಲು ಹರಸಾಹಸ ಪಡುತ್ತಿದ್ದಾರೆ. ರಾಷ್ಟ್ರೀಯ ಸ್ವಯಂಸೇವಕ ಸಂಘದ ನಾಯಕರ ಜೊತೆಗೆ ರಾಮುಲು ಉತ್ತಮ ಬಾಂಧವ್ಯವನ್ನು ಹೊಂದಿರುವುದರಿಂದ, ಆ ಮೂಲಕ ಒತ್ತಡವನ್ನು ಹಾಕಲಾಗುತ್ತಿದೆ. ಸಕ್ರಿಯ ರಾಜಕಾರಣಕ್ಕೆ ಪ್ರವೇಶಿಸಲು ಗ್ರೀನ್ ಸಿಗ್ನಲ್ ಬಿಜೆಪಿ ವರಿಷ್ಠರು ನೀಡಬೇಕಾಗಿರುವುದರಿಂದ ದೆಹಲಿ ಮಟ್ಟದಲ್ಲಿ ಒತ್ತಡವನ್ನು ಹಾಕಲಾಗುತ್ತಿದೆ.
ಲಾಭಕ್ಕಿಂತ ನಷ್ಟವೇ ಹೆಚ್ಚು ಎನ್ನುವುದು ಬಿಜೆಪಿ ದೊಡ್ಡವರ ಲೆಕ್ಕಾಚಾರ
ಕಳೆದ ಮಂಗಳವಾರ (ಫೆ 1) ಮೌನಿ ಅಮಾವಾಸ್ಯೆಯ ದಿನದಂದು ಹೋಮ, ಹವನಗಳನ್ನು ಶ್ರೀರಾಮುಲು ಜೊತೆಗೂಡಿ ಜನಾರ್ಧನ ರೆಡ್ಡಿ ಮಾಡಿದ್ದಾರೆ. ಜ್ಯೋತಿಷಿಗಳು ಸೂಚಿಸಿದಂತೆ ಧಾರ್ಮಿಕ ಕೆಲಸಗಳನ್ನು ಮಾಡಿರುವ ರೆಡ್ಡಿ, ಮಗಳು ಮತ್ತು ಸ್ನೇಹಿತನ ಜೊತೆಗೂಡಿ ತುಂಗಭದ್ರೆಯ ತಟದಲ್ಲಿರುವ ದೇವಾಲಯಗಳು, ವಿರೂಪಾಕ್ಷನ ಸನ್ನಿಧಾನಕ್ಕೂ ಹೋಗಿ ಪೂಜೆ ಸಲ್ಲಿಸಿ ಬಂದಿದ್ದಾರೆ. ಆದರೆ, ಗಣಿ ಲೂಟಿ ಹೊಡೆದ ಗಂಭೀರ ಆರೋಪ ಇರುವ ಕಾರಣ ರೆಡ್ಡಿಗೆ ಅವಕಾಶ ನೀಡಿದರೆ ಲಾಭಕ್ಕಿಂತ ನಷ್ಟವೇ ಹೆಚ್ಚು ಎನ್ನುವುದು ಬಿಜೆಪಿ ದೊಡ್ಡವರ ಲೆಕ್ಕಾಚಾರ ಎಂದು ಹೇಳಲಾಗುತ್ತಿದೆ.
ಜನಾರ್ದನ ರೆಡ್ಡಿಗೆ ಸದ್ಯ ಹಿಂದಿನ ವರ್ಚಸ್ಸು ಇಲ್ಲ
ಹಿಂದೆ ದೊಡ್ಡ ಪ್ರಮಾಣದ ವೋಟ್ ಬ್ಯಾಂಕ್ ಹೊಂದಿದ್ದ ಜನಾರ್ಧನ ರೆಡ್ಡಿಗೆ ಸದ್ಯ ಹಿಂದಿನ ವರ್ಚಸ್ಸು ಇಲ್ಲ. ಚುನಾವಣಾ ಪ್ರಚಾರದ ಸಮಯದಲ್ಲಿ ಸ್ವಚ್ಛ ಆಡಳಿತ ನೀಡಿ ಭ್ರಷ್ಟಾಚಾರದ ವಿರುದ್ಧ ನಾವು ಸಮರ ಸಾರುತ್ತೇವೆ ಎಂದು ಹೇಳಲು ಸಾಧ್ಯವಾಗದ ಪರಿಸ್ಥಿತಿ ಬಿಜೆಪಿಗೆ ರೆಡ್ಡಿಗೆ ಮಣೆ ಹಾಕಿದರೆ ಎದುರಾಗಬಹುದು. ಜೊತೆಗೆ, ಸದ್ಯ ಜಾಮೀನು ಮೇಲೆ ರೆಡ್ಡಿ ಹೊರಗಿರುವ ಕಾರಣ ಇತರ ನಾಯಕರು ಬೆಂಬಲಿಸುವುದು ಅನುಮಾನ, ಇದು ರಾಜ್ಯ ರಾಜಕೀಯದಲ್ಲಿ ಅಸಮಾಧಾನಕ್ಕೆ ಕಾರಣವಾಗಬಹುದು.