ಬಳ್ಳಾರಿ ಉಪ ಮೇಯರ್ ಪದ್ಮಾವತಿ ಕೊಲೆ ಹಿಂದೆ ಯಾರ ಕೈ?: ಟಪಾಲ್ ಪ್ರಶ್ನೆ
ಬಳ್ಳಾರಿ, ಮಾರ್ಚ್ 26: ಕರಾವಳಿ, ಮಲೆನಾಡು ಭಾಗದ ಯಾರೇ ಕೊಲೆಗೀಡಾಗಲಿ ಬೊಬ್ಬೆ ಹೊಡೆಯುವ ಬಿಜೆಪಿ, ತಮ್ಮದೇ ಪಕ್ಷದ ರಾಜ್ಯ ಮಟ್ಟದ ಮಹಿಳಾ ನಾಯಕಿ, ಬಳ್ಳಾರಿ ನಗರ ಮಾಜಿ ಉಪಮೇಯರ್ ಪದ್ಮಾವತಿ ಯಾದವ್ ಕೊಲೆ ಪ್ರಕರಣದ ಬಗ್ಗೆ ಮೌನ ವಹಿಸಿರುವುದು ಯಾವ ಪುರಷಾರ್ಥಕ್ಕಾಗಿ, ಯಾರಿಗಾಗಿ ಎಂದು ಆರ್ ಟಿಐ ಕಾರ್ಯಕರ್ತ ಟಪಾಲ್ ಗಣೇಶ್ ಪ್ರಶ್ನಿಸಿದ್ದಾರೆ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ
ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಕರಾವಳಿ ಮತ್ತು ಮಲೆನಾಡು ಪ್ರದೇಶದಲ್ಲಿ ಯಾರೇ ಕೊಲೆ ಆಗಲಿ 'ತನ್ನ ಕಾರ್ಯಕರ್ತರ ಕಗ್ಗೊಲೆ, ಪ್ರಜಾಪ್ರಭುತ್ವದ ಕೊಲೆ' ಎಂದು ಆರೋಪ - ಟೀಕೆ ಮಾಡುತ್ತಲೇ ಪ್ರಚಾರ ಪಡೆಯುವ ಬಿಜೆಪಿ, ಸತ್ತವರ ಮನೆಯಲ್ಲಿ ರಾಜಕೀಯ ಮಾಡುತ್ತಿದೆ. ಸತ್ತವರ ಲೆಕ್ಕವನ್ನು ತಮ್ಮ ಖಾತೆಗೆ ಹಾಕಿಕೊಳ್ಳುತ್ತಿದೆ ಎಂದರು.
ಆದರೆ, ಬಳ್ಳಾರಿಯ ಪದ್ಮಾವತಿ ಯಾದವ್ ಕೊಲೆ ಪ್ರಕರಣ ಕುರಿತು ಏತಕ್ಕಾಗಿ ಮಾತನಾಡುತ್ತಿಲ್ಲ? ಬಿಜೆಪಿ ರಾಜ್ಯ ಮತ್ತು ರಾಷ್ಟ್ರೀಯ ಮುಖಂಡರಿಗೆ ತಮ್ಮದೇ ಪಕ್ಷದ ನಾಯಕಿ, ಉಪ ಮೇಯರ್ ಆಗಿದ್ದ ಪದ್ಮಾವತಿ ಯಾದವ್ ಅವರ ನೆನಪಿಲ್ಲವೇ? ಅವರು ಪಕ್ಷಕ್ಕಾಗಿ ಸಲ್ಲಿಸಿದ ಸೇವೆ, ತ್ಯಾಗ, ಪಕ್ಷವನ್ನು ಸಂಘಟಿಸಲು ತೋರಿದ ಬದ್ಧತೆಯನ್ನು ಬಿಜೆಪಿ ಆಗಲೇ ಮರೆತುಬಿಟ್ಟಿತೆ ಎಂದು ಟಪಾಲ್ ಗಣೇಶ್ ಪ್ರಶ್ನಿಸಿದ್ದಾರೆ.
ಯಾವುದೇ ತನಿಖೆಗಳಿಂದ ಈ ಕೊಲೆ ಹಿಂದಿನ ಕೈಗಳು, ಕೊಲೆಗೆ ಕಾರಣ ಮತ್ತು ಆರೋಪಿಗಳ ಸುಳಿವು ಬಹಿರಂಗ ಆಗಲೇ ಇಲ್ಲ. ಏತಕ್ಕಾಗಿ? ಪದ್ಮಾವತಿ ಕೊಲೆ ಆದಾಗ ಬಿಜೆಪಿಯದ್ದೇ ಸರಕಾರ ಇತ್ತು. ಕಾಂಗ್ರೆಸ್ ಸರಕಾರದ ಐದು ವರ್ಷಗಳ ಆಡಳಿತ ಪೂರ್ಣಗೊಳ್ಳುವಾಗಲೂ ಈ ಪ್ರಕರಣದ ಸತ್ಯಾಸತ್ಯತೆ ಬಹಿರಂಗ ಆಗಲೇ ಇಲ್ಲ ಎಂದರು.
ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರದ ಜನತೆಗೆ ಉತ್ತರಿಸಲಿಕ್ಕಾಗಿ ಕಾಂಗ್ರೆಸ್ ಸರಕಾರ ಅಥವಾ ತನಿಖಾ ಅಧಿಕಾರಿಗಳು ಜಿ.ಪದ್ಮಾವತಿ ಯಾದವ್ ಕೊಲೆ ಪ್ರಕರಣದ ತನಿಖೆ ಯಾವ ಹಂತದಲ್ಲಿದೆ ಬಹಿರಂಗಪಡಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಜಿ. ಪದ್ಮಾವತಿ ಯಾದವ್ ಕೊಲೆಯ ಪ್ರಮುಖ ಆರೋಪಿಗಳು ಯಾರು ಎನ್ನುವುದು ಬಳ್ಳಾರಿ ನಗರದ ಜನಸಾಮಾನ್ಯರಿಗೆ ಮತ್ತು ಬಿಜೆಪಿಯ ರಾಜ್ಯ - ಸ್ಥಳೀಯ ಮತ್ತು ಹಿರಿಯ ಮುಖಂಡರಿಗೆ ಗೊತ್ತಿದ್ದರೂ ಅವರನ್ನು ಪಕ್ಕದಲ್ಲಿ ಕೂಡಿಸಿಕೊಂಡು ಆದರ್ಶ, ಭ್ರಷ್ಟಾಚಾರ, ಪ್ರಾಮಾಣಿಕತೆ ಇನ್ನಿತರ ವಿಚಾರಗಳ ಬಗ್ಗೆ ಫುಂಖಾನುಫುಂಖವಾಗಿ ಮಾತನಾಡುತ್ತಿರುವುದು ಹಾಸ್ಯಾಸ್ಪದ ಎಂದು ಟೀಕಿಸಿದ್ದಾರೆ.