'ಪಕ್ಕೆಲುಬು' ಶಿಕ್ಷಕ ಕೊನೆಗೂ ಪತ್ತೆ: ಸೇವೆಯಿಂದ ಅಮಾನತು
ಬಳ್ಳಾರಿ, ಜನವರಿ 11: ಶಾಲೆಯಲ್ಲಿ ಶಿಕ್ಷಕರು ಹೇಳಿಕೊಡುವ 'ಪಕ್ಕೆಲುಬು' ಪದವನ್ನು ಹೇಳಲು ಕಷ್ಟಪಡುವ ವಿದ್ಯಾರ್ಥಿಯ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದ ಶಿಕ್ಷಕ ಕೊನೆಗೂ ಪತ್ತೆಯಾಗಿದ್ದಾರೆ.
ಶಿಕ್ಷಣ ಇಲಾಖೆಯು ಹೂವಿನಹಡಗಲಿ ತಾಲೂಕಿನ ಕುರುವತ್ತಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಹ ಶಿಕ್ಷಕ ಟಿ ಚಂದ್ರಶೇಖರಪ್ಪ ಅವರೇ ಈ ವಿಡಿಯೋ ಮಾಡಿದ್ದು ಎಂಬುವುದನ್ನು ಪತ್ತೆಹಚ್ಚಿದೆ.
'ಪಕ್ಕೆಲುಬು' ವಿಡಿಯೋ ಹರಿಬಿಟ್ಟ ಶಿಕ್ಷಕನ ವಿರುದ್ಧ ಶಿಕ್ಷಣ ಸಚಿವ ಗರಂ
ಚಂದ್ರಶೇಖರ್ ಅವರನ್ನು ಶುಕ್ರವಾರ ಸೇವೆಯಿಂದ ಅಮಾನತುಗೊಳಿಸಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಸಿ. ನಾಗರಾಜ ತಿಳಿಸಿದ್ದಾರೆ.
ಜನವರಿ 3ರಂದು ಪಾಠ ಬೋಧನೆ ಮಾಡುವಾಗ 'ಪಕ್ಕೆಲುಬು' ಎಂಬ ಪದವನ್ನು ಉಚ್ಚರಿಸಲು ವಿದ್ಯಾರ್ಥಿಯು ಕಷ್ಟಪಡುತ್ತಿರುವ ವಿಡಿಯೋ ಹಾಸ್ಯಾಸ್ಪದವಾಗಿ ವೈರಲ್ ಆಗಿತ್ತು. ಇದಾದ ಬಳಿಕ ಎಚ್ಚೆತ್ತುಕೊಂಡಿದ್ದ ಶಿಕ್ಷಣ ಸಚಿವ ಎಸ್ ಸುರೇಶ್ ಕುಮಾರ್ ವಿಡಿಯೋ ಹರಿಯಬಿಟ್ಟಿದ್ದ ಶಿಕ್ಷಕನ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಹೇಳಿದ್ದರು.
ವಿಡಿಯೋ ಕುರಿತು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರ ಸುತ್ತೋಲೆ ಹಾಗೂ ಗ್ರಾಮಸ್ಥರು ನೀಡಿದ್ದ ದೂರಿನ ಮೇರೆಗೆ ಶಾಲೆಗೆ ತೆರಳಿ ವಿಚಾರಣೆ ನಡೆಸಿದ ಬಿಇಓ ಆರೋಪಕ್ಕೆ ಗುರಿಯಾಗಿರುವ ಶಿಕ್ಷಕನನ್ನು ಅಮಾನತುಗೊಳಿಸಿದೆ.