ಭಕ್ತರು ಹುಂಡಿಗೆ ಹಾಕಿದ ಹಣ ಎಲ್ಲಿಗೆ ಹೋಗುತ್ತೆ ಗೊತ್ತೆ?
ಬಳ್ಳಾರಿ, ಫೆಬ್ರವರಿ 24 : ಕರ್ನಾಟಕದ ಹಿಂದೂ ಧಾರ್ಮಿಕ ದತ್ತಿ ಉಂಬಳಿಗಳ ಇಲಾಖೆಯ ಹುಂಡಿಯ ಹಣ ಎಲ್ಲಿ ಸೇರುತ್ತದೆ? ಯಾರಿಗೆ ಸೇರುತ್ತದೆ? ಎನ್ನುವ ಬಗ್ಗೆ ಅನೇಕರಲ್ಲಿ ಸಾಕಷ್ಟು ಪ್ರಶ್ನೆಗಳಿವೆ.
ಆದರೆ, ಹುಂಡಿಯಲ್ಲಿ ಹಾಕುವ ಹಣವನ್ನು ಯಾರು? ಹೇಗೆ ಎಣಿಕೆ ಮಾಡುತ್ತಾರೆ. ಯಾವ ರೀತಿಯ ಪಾರದರ್ಶಕತೆಯನ್ನು ಪಾಲಿಸುತ್ತಾರೆ ಎನ್ನುವ ಕೊನೆ ಇಲ್ಲದ ಪ್ರಶ್ನೆಗಳು ಕಾಡುತ್ತಲೇ ಇರುತ್ತವೆ.
ಅಂಥಹ ಪ್ರಶ್ನೆಗಳಿಗೆ ಇಲ್ಲಿಗೆ ಒಂದು ಸಣ್ಣ ಉತ್ತರ.
ಹಿಂದೂ ಧಾರ್ಮಿಕ ದತ್ತಿ ಉಂಬಳಿಗಳ ಇಲಾಖೆ ವ್ಯಾಪ್ತಿಯಲ್ಲಿ ಬರುವ ಹೊಸಪೇಟೆ ತಾಲೂಕಿನ ಕಂಪ್ಲಿ ಸಮೀಪದ ಏಳುಹೆಡೆ ನಾಗಪ್ಪ ದೇವಸ್ಥಾನದಲ್ಲಿ ಫೆಬ್ರವರಿ 23ರಂದು ಹುಂಡಿಯನ್ನು ತೆರೆಯಲಾಯಿತು. ಆಗ, ಅಧಿಕಾರಿಗಳು, ಪೂಜಾರಿಗಳು ಮತ್ತು ಭಕ್ತಾದಿಗಳು ಒಟ್ಟಿಗೆ ಸೇರಿ ಹಣವನ್ನು ಸಂಗ್ರಹಿಸಿದ ರೀತಿಯಲ್ಲಿ ಅಧಿಕಾರಿ ಎಂ.ಎಚ್. ಪ್ರಕಾಶ್ರಾವ್ ದಾಖಲೆಗಳ ಸಮೇತ ವಿವರಿಸಿದ್ದಾರೆ.
2017ರ ಸೆಪ್ಟೆಂಬರ್ 22ರಂದು ಹುಂಡಿಯನ್ನು ಅಳವಡಿಸಿದಾಗಿನಿಂದ ಫೆಬ್ರವರಿ 23ರವರೆಗೆ ಒಟ್ಟು 1,13,873 ರೂಪಾಯಿಗಳು ನಗದು ಹಣವನ್ನು ಹುಂಡಿಯಿಂದ ಎಣಿಕೆ ಮಾಡಲಾಗಿದೆ.
ಒಟ್ಟಾರೆ ಹಣವನ್ನು ಡಿನಾಮಿನೇಷನ್, ಮೊತ್ತದ ಸಮೇತ ರಸೀತಿ ಹಾಕಿ, ಸ್ಥಳದಲ್ಲಿ ಹಾಜರಿದ್ದವರ, ಹಣ ಎಣಿಕೆ ಮಾಡಿದವರ ಸಹಿಯನ್ನು ಪಡೆದು, ರಸೀದಿ ಹಾಕಿ, ರಸೀದಿ ಸಂಖ್ಯೆ ಸಮೇತ ದಾಖಲಿಸಲಾಗುತ್ತದೆ. ಮೊತ್ತವನ್ನು ದೇವಸ್ಥಾನದ ಬ್ಯಾಂಕ್ನ ಖಾತೆಗೆ ಜಮಾ ಮಾಡಿ, ಆ ರಸೀತಿಯನ್ನೂ ಲಗತ್ತಿಸಲಾಗುತ್ತದೆ ಎಂದಿದ್ದಾರೆ ಎಂ.ಎಚ್. ಪ್ರಕಾಶ್ರಾವ್.
ಹುಂಡಿ ತೆಗೆಯುವ, ಹಣ ಎಣಿಕೆ ಮಾಡುವ ಮತ್ತು ಹುಂಡಿಯನ್ನು ಪುನಃ ಸೀಲ್ ಮಾಡುವ ಎಲ್ಲಾ ಪ್ರಕ್ರಿಯೆಯನ್ನು ದಾಖಲು ಮಾಡಲಾಗುತ್ತದೆ. ದೇವಸ್ಥಾನದ ಅರ್ಚಕರು, ಸ್ಥಳೀಯ ಮುಖಂಡರು, ಗಣ್ಯ ಮತ್ತು ಸಾಮಾನ್ಯ ಭಕ್ತಾದಿಗಳು, ಪೊಲೀಸರು ಮತ್ತು ಅಧಿಕಾರಿಗಳು ಈ ಸಂದರ್ಭದಲ್ಲಿ ಸಾಕ್ಷಿಯಾಗಿರುತ್ತಾರೆ. ಈ ಪದ್ಧತಿಯನ್ನು ಸರ್ಕಾರದ ವ್ಯಾಪ್ತಿಯ ಎಲ್ಲಾ ದೇವಸ್ಥಾನಗಳಲ್ಲಿ ಪಾಲನೆ ಮಾಡಲಾಗುತ್ತದೆ ಎಂದು ಹೇಳಿದರು.