ಬಳ್ಳಾರಿ ಅಪಘಾತ ಪ್ರಕರಣ ಏನಾಯಿತು? ರವಿನಾಯ್ಕ ಮನೆಯಲ್ಲಿ ಮತ್ತೊಂದು ಸಾವು
ಬಳ್ಳಾರಿ, ಫೆಬ್ರವರಿ 25: ಕೆಲವೇ ಕೆಲವು ದಿನಗಳ ಹಿಂದೆ ಬಳ್ಳಾರಿಯಲ್ಲಿ ನಡೆದ ಅಪಘಾತ ಪ್ರಕರಣವೊಂದು ರಾಜ್ಯಾದ್ಯಂತ ಸುದ್ದಿಯಾಗಿತ್ತು. ಫೆಬ್ರವರಿ 10ರಂದು ಬಳ್ಳಾರಿಯ ಹೊರವಲಯದ ಮರಿಯಮ್ಮನಹಳ್ಳಿ ಬಳಿ ನಡೆದ ಈ ಅಪಘಾತ ಪ್ರಕರಣದಲ್ಲಿ ಕಂದಾಯ ಸಚಿವ ಆರ್ ಅಶೋಕ್ ಮಗ ಭಾಗಿಯಾಗಿದ್ದರು ಎಂಬ ಆರೋಪ ಎಲ್ಲೆಡೆಯಿಂದ ಕೇಳಿಬಂದಿತ್ತು.
ಆದರೆ ಇದಕ್ಕೂ ನಮಗೂ ಸಂಬಂಧ ಇಲ್ಲ ಎಂದು ಆರ್ ಅಶೋಕ್ ಹೇಳಿಕೆ ನೀಡಿದರು. ಅದಾದ ನಂತರ ಫೆಬ್ರವರಿ 16ರಂದು ಬೆಂಗಳೂರಿನ ಕಾವೇರಿ ನಗರದಲ್ಲಿ ನಡೆದ ಬಿಜೆಪಿ ಕಾರ್ಯಕರ್ತರೊಬ್ಬರ ವಿವಾಹದಲ್ಲಿ ಶರತ್ ಅಶೋಕ್ ಪಾಲ್ಗೊಂಡಿದ್ದರು. ಅವರು ಹೀಗೆ ಕಾಣಿಸಿಕೊಂಡ ನಂತರ ಈ ಪ್ರಕರಣ ಗೊಂದಲದ ವಿಷಯವಾಗೇ ಉಳಿಯಿತು. ಅಪಘಾತ ಪ್ರಕರಣದ ಬಗ್ಗೆ ದಾಖಲಾಗಿದ್ದ ಎಫ್ಐಆರ್ ನಲ್ಲಿ ರಾಹುಲ್ ಕಾರು ಚಲಾಯಿಸುತ್ತಿದ್ದರು ಎಂದು ಉಲ್ಲೇಖಿಸಲಾಗಿದ್ದು, ಬಳ್ಳಾರಿ ಜಿಲ್ಲೆಯ ಸಂಡೂರು ಸಿಪಿಐ ಶೇಖರಪ್ಪ ನೇತೃತ್ವದ ತಂಡ ಬೆಂಗಳೂರಲ್ಲಿ ರಾಹುಲ್ ಬಂಧಿಸಿ ಹೊಸಪೇಟೆಗೆ ಕರೆದುಕೊಂಡು ಹೋಗಿದ್ದರು. ಆದರೆ ಅಪಘಾತದಲ್ಲಿ ಸಾವನ್ನಪ್ಪಿದ ರವಿ ನಾಯ್ಕ ಮನೆಯಲ್ಲಿ ಮತ್ತೂ ಒಂದು ಸಾವು ಸಂಭವಿಸಿತು.
ಬಳ್ಳಾರಿಯಲ್ಲಿ ಕಾರು ಅಪಘಾತ; "ಪ್ರಕರಣ ಮುಚ್ಚಿಹಾಕಲು ಬಿಡುವುದಿಲ್ಲ" ಎಂದ ರವಿ ನಾಯ್ಕ್ ಅಜ್ಜಿ
ಮೊಮ್ಮಗನ ನೆನಪಲ್ಲಿ ಸಾವನ್ನಪ್ಪಿದ ರವಿ ಅಜ್ಜಿ
ಬಳ್ಳಾರಿ ಜಿಲ್ಲೆಯ ಹೊಸಪೇಟೆ ಬಳಿಯ ಮರಿಯಮ್ಮನಹಳ್ಳಿ ಬಳಿಯ ಅಪಘಾತದಲ್ಲಿ ದುರ್ಮರಣಕ್ಕೀಡಾದ ರವಿ ನಾಯ್ಕ ಮನೆಯಲ್ಲಿ ಮತ್ತೆ ಸೂತಕದ ಛಾಯೆ ಕಾಣಿಸಿಕೊಂಡಿದೆ. ರವಿ ನಾಯ್ಕ ಸಾವಿಗೀಡಾದ ಹತ್ತು ದಿನದಲ್ಲೇ ರವಿ ನಾಯ್ಕ ಅಜ್ಜಿ ಕೂಡ ಸಾವನಪ್ಪಿದ್ದಾರೆ. ರವಿ ಸಾವಿನ ನಂತರ ಹಾಸಿಗೆ ಹಿಡಿದಿದ್ದ ಅಜ್ಜಿ ಕೊಟ್ರಿಬಾಯಿ ಕೊನೆಯುಸಿರೆಳೆದಿದ್ದಾಳೆ. ಮೊಮ್ಮಗನ ನೆನಪಿನಲ್ಲಿ ದುಃಖಿಸುತ್ತಿದ್ದ ಅವರು ನಾಲ್ಕು ದಿನಗಳ ಹಿಂದೆ ಸಾವನ್ನಪ್ಪಿದ್ದಾರೆ.
ಒಂದೇ ತಿಂಗಳಲ್ಲಿ 3 ಸಾವು
ಅಪಘಾತದಲ್ಲಿ ಮೃತಪಟ್ಟ ರವಿ ನಾಯ್ಕ ಕುಟುಂಬ ಮರಿಯಮ್ಮನಹಳ್ಳಿಯ ತಾಂಡಾದಲ್ಲಿ ವಾಸವಿದ್ದರು. ತಂದೆ ತಾಯಿ ಮನೆಯವರೆಲ್ಲರೂ ಕೂಲಿ ಕೆಲಸ ಮಾಡುತ್ತಾರೆ. ಬಸವಣ್ಣ ನಾಯ್ಕ ದಂಪತಿಗೆ ಒಟ್ಟು ನಾಲ್ಕು ಮಕ್ಕಳು. ಅದರಲ್ಲಿ ರವಿ ನಾಯ್ಕ ಎರಡನೇ ಮಗನಾಗಿದ್ದ. ಬಸವಣ್ಣ ನಾಯ್ಕ ಅವರ ಮೊದಲ ಮಗ, ಮಂಜುನಾಯ್ಕ ರವಿ ನಾಯ್ಕ ಸಾಯುವ ಹದಿಮೂರು ದಿನಗಳ ಹಿಂದಷ್ಟೆ ಸಾವನ್ನಪ್ಪಿದ್ದ. ಅನಾರೋಗ್ಯದಿಂದ ಸಾವನ್ನಪ್ಪಿದ ಮಗನ ನೋವು ತಗ್ಗುವ ಮುನ್ನವೇ ಮತ್ತೊಬ್ಬ ಮಗನ ಸಾವು ಸಿಡಿಲಿನಂತೆ ಬಡಿದಿತ್ತು. ಇದೀಗ ರವಿ ನಾಯ್ಕ ಅಜ್ಜಿ ಕೂಡ ಸಾವನ್ನಪ್ಪಿದ್ದಾರೆ. ಒಂದೇ ಕುಟುಂಬದಲ್ಲಿ ಒಂದು ತಿಂಗಳ ಅವಧಿಯಲ್ಲಿ 3 ಜನ ಸಾವಿಗಿಡ್ಡಾಗಿದ್ದಾರೆ. ಸಾವಿನ ಮೇಲೆ ಸಾವು ಕಂಡು ರವಿ ನಾಯ್ಕ ಕುಟುಂಬದ ಆಕ್ರಂದನ ಮುಗಿಲು ಮುಟ್ಟಿದೆ.
ಅಪಘಾತವಾದ ಕಾರಿನಲ್ಲಿದ್ದರೇ ಆರ್.ಅಶೋಕ್ ಪುತ್ರ? ಉತ್ತರ ಸಿಗದ ಪ್ರಶ್ನೆಗಳು
ಬೇರೆ ಮನೆಯಲ್ಲಿ ವಾಸವಿರುವ ಕುಟುಂಬ
ಕುಟುಂಬದಲ್ಲಿ ಸಾವಿನ ಮೇಲೆ ಸಾವು ಸಂಭವಿಸುತ್ತಿರುವುದರಿಂದ ನೊಂದಿರುವ ರವಿ ನಾಯ್ಕ ಕುಟುಂಬವರು ಮನೆಯನ್ನೇ ಬದಲಿಸಿದ್ದಾರೆ. ಇವರೆಲ್ಲರೂ ಸ್ವಂತ ಮನೆ ಬಿಟ್ಟು ಬೇರೆ ಮನೆಯಲ್ಲಿ ವಾಸ ಮಾಡುತ್ತಿದ್ದಾರೆ. ಒಂದೇ ತಿಂಗಳಲ್ಲೇ ಕುಟುಂಬದ ಮೂವರನ್ನು ಕಳೆದುಕೊಂಡು ಸೂತಕದ ಛಾಯೆಯಲ್ಲಿ ಜೀವನ ನಡೆಸುತ್ತಿದ್ದಾರೆ.
ಪ್ರಕರಣ ಮುಚ್ಚಿಹಾಕಲು ಬಿಡಲ್ಲ ಎಂದಿದ್ದ ಅಜ್ಜಿ
"ಅಪಘಾತದಲ್ಲಿ ನನ್ನ ಮೊಮ್ಮಗನನ್ನು ಬಲಿ ಪಡೆದರು, ಅವರು ಎಷ್ಟೇ ಶ್ರೀಮಂತರಾದರೂ ಎಲ್ಲರ ಜೀವ ಒಂದೇ ಅಲ್ಲವೇ ಎಂದು ಪ್ರಶ್ನಿಸಿದ್ದರು ರವಿ ನಾಯ್ಕ್ ಅಜ್ಜಿ. "ಕನಿಷ್ಠ ಸೌಜನ್ಯಕ್ಕೂ ನಮ್ಮನ್ನು ಯಾರು ಮಾತನಾಡಿಸಿಲ್ಲ" ಎಂದು ಆಕ್ರೋಶವನ್ನೂ ವ್ಯಕ್ತಪಡಿಸಿದ್ದರು. "ನನ್ನ ಮೊಮ್ಮಗ ಪಂಚರ್ ಹಾಕಸೋಕೆ ಹೋಗಿದ್ದ. ಅವನೇನು ತಪ್ಪು ಮಾಡಿಲ್ಲ, ನನ್ನ ಮೊಮ್ಮಗನನ್ನು ಸಾಯಿಸಿದಾರೆ. ನಾವು ಕಷ್ಟಪಟ್ಟು ಮೊಮ್ಮಗನನ್ನು ಓದಿಸಿದ್ದೇವೆ. ಎಂಜಿನಿಯರ್ ಆಗ್ತೀನಿ ಅಂತಿದ್ದ. ಈಗ ನನ್ನ ಮೊಮ್ಮಗನನ್ನು ತಂದು ಕೊಡ್ತಾರಾ..??" ಎಂದು ಕಣ್ಣೀರಾಗಿದ್ದರು. "ನಮ್ಮ ಮೊಮ್ಮಗಂದು ಏನೂ ತಪ್ಪಿಲ್ಲ. ನಾವು ಈ ಪ್ರಕರಣ ಮುಚ್ಚಿ ಹಾಕಲು ಬಿಡಲ್ಲ. ನಮಗೆ ನ್ಯಾಯ ಬೇಕು" ಎಂದು ಪಟ್ಟು ಹಿಡಿದಿದ್ದರು. ಇದೀಗ ಅವರೇ ಸಾವನ್ನಪ್ಪಿದ್ದಾರೆ.