ನರಳುತ್ತಿದ್ದರೂ ವೀಲ್ ಚೇರ್ ಕೊಡಲಿಲ್ಲ ವಿಮ್ಸ್ ಸಿಬ್ಬಂದಿ, ಹೆಗಲ ಮೇಲೇ ಮಗಳ ಹೊತ್ತೊಯ್ದ ತಂದೆ
ಬಳ್ಳಾರಿ, ಜನವರಿ 23: ಇಂಥ ಘಟನೆ ಇದೇ ಮೊದಲಲ್ಲ. ಸರ್ಕಾರಿ ಆಸ್ಪತ್ರೆಗಳನ್ನು ಹುಡುಕಿಕೊಂಡು ಬರುವ ಬಡರೋಗಿಗಳನ್ನು ನಿಕೃಷ್ಟವಾಗಿ ಕಾಣುವ ಆಸ್ಪತ್ರೆ ಸಿಬ್ಬಂದಿ, ರೋಗಿಗಳನ್ನು ಸಾಗಿಸಲು ಕನಿಷ್ಠ ವ್ಯವಸ್ಥೆಯೂ ಇಲ್ಲದೆ ಅವರನ್ನು ಅಮಾನವೀಯವಾಗಿ ನಡೆಸಿಕೊಂಡಿರುವ ಉದಾಹರಣೆಗಳು ಈಚೆಗೆ ಸಾಕಷ್ಟು ಸಿಕ್ಕಿವೆ. ಆದರೆ ಇಂಥ ಘಟನೆಗಳಿಂದೇನೂ ಯಾರೂ ಎಚ್ಚೆತ್ತುಕೊಂಡಂತೆ ಕಾಣುವುದಿಲ್ಲ. ಅದಕ್ಕೆ ನಿದರ್ಶನದಂತೆ ಮತ್ತೊಂದು ಅಂಥದ್ದೇ ಘಟನೆ ಬಳ್ಳಾರಿಯಲ್ಲಿ ನಡೆದಿದೆ.
ನಿನ್ನೆ ಗಂಭೀರ ಸ್ಥಿತಿಯಲ್ಲಿರುವ ತನ್ನ ಮಗಳನ್ನು ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆ (ವಿಮ್ಸ್) ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದರು ತಂದೆಯೊಬ್ಬರು. ಆದರೆ ತುರ್ತು ನಿಗಾಘಟಕದಿಂದ ಮತ್ತೊಂದು ಘಟಕಕ್ಕೆ ರೋಗಿಯನ್ನು ಸಾಗಿಸಲು ಕನಿಷ್ಠ ವ್ಹೀಲ್ ಚೇರ್ ಕೂಡ ನೀಡಲಿಲ್ಲ ಆಸ್ಪತ್ರೆ ಸಿಬ್ಬಂದಿ. ಹೀಗಾಗಿ ತನ್ನ ಮಗಳನ್ನು ಹೆಗಲ ಮೇಲೇ ಹೊತ್ತುಕೊಂಡು ತಂದೆ ಕರೆದೊಯ್ದ ಹೃದಯ ವಿದ್ರಾವಕ ಘಟನೆ ನಡೆದಿದೆ.
ಆಂಬುಲೆನ್ಸ್ ನಲ್ಲಿ ಆಸ್ಪತ್ರೆಗೆ ಬಂದಿದ್ದ ಮಾಬಾಷಾ
ಜಿಲ್ಲೆಯ ಸಿರುಗುಪ್ಪ ತಾಲೂಕಿನ ಶಾನವಾಸಪುರ ಗ್ರಾಮದ ಮಾಬಾಷಾ ಎಂಬುವರ ಮಗಳು ಸಿಂಥಾಜ್ ಹೃದಯಕ್ಕೆ ಸಂಬಂಧಿಸಿದ ಗಂಭೀರ ಸ್ವರೂಪದ ಕಾಯಿಲೆಗೆ ತುತ್ತಾಗಿದ್ದರು. ತನ್ನ ಮಗಳಿಗೆ ಚಿಕಿತ್ಸೆ ಕೊಡಿಸುವ ಸಲುವಾಗಿ ಆಂಬುಲೆನ್ಸ್ ವಾಹನದಲ್ಲಿ ವಿಮ್ಸ್ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದರು ಮಾಬಾಷಾ. ಆ ಆಂಬುಲೆನ್ಸ್ ತುರ್ತು ನಿಗಾ ಘಟಕದ ಮುಂದೆ ಇವರನ್ನು ಇಳಿಸಿ ಮುಂದೆ ಹೋಗಿದೆ. ಆದರೆ ಒಳಗೆ ಹೋಗುತ್ತಿದ್ದಂತೆ, ನಿಮ್ಮ ಮಗಳ ಕಾಯಿಲೆಗೆ ಸಂಬಂಧಿಸಿದ ಚಿಕಿತ್ಸೆ ನೀಡುವ ಘಟಕ ಇದಲ್ಲ. ಬೇರೊಂದು ಘಟಕಕ್ಕೆ ಹೋಗಿ ಎಂದು ಸೂಚಿಸಿದ್ದಾರೆ.
12ರ ಬಾಲಕನ ಪ್ರಾಣ ತಂದೆ ಹೆಗಲ ಮೇಲೆ ಹೋಯಿತು...
ವೀಲ್ ಚೇರ್ ಕೊಡುವಂತೆ ಕೇಳಿಕೊಂಡ ತಂದೆ
ಆದರೆ ಸ್ಥಿತಿ ಗಂಭೀರವಾಗಿದ್ದರಿಂದ ಮಗಳಿಗೆ ಏನಾದರೂ ಅವಘಡ ಸಂಭವಿಸುತ್ತದೆ ಎಂದು ಭಯಗೊಂಡಿದ್ದ ತಂದೆ ವ್ಹೀಲ್ ಚೇರ್ ನೀಡುವಂತೆ ಆಸ್ಪತ್ರೆಯವರಿಗೆ ಕೇಳಿಕೊಂಡಿದ್ದಾರೆ. ಆದರೆ ಅದಕ್ಕೂ ಹಿಂದೆ ಮುಂದೆ ನೋಡಿದ್ದಾರೆ ಅಲ್ಲಿನ ಸಿಬ್ಬಂದಿ. ಕನಿಷ್ಠ ತುರ್ತಿನಲ್ಲಿದ್ದ ರೋಗಿಗೆ ವೀಲ್ ಚೇರ್ ಕೊಡದೇ ಇರುವಷ್ಟು ಅಮಾನವೀಯತೆ ಮೆರೆದಿದ್ದಾರೆ ಸಿಬ್ಬಂದಿ.
|
ಮಗಳನ್ನು ಹೆಗಲ ಮೇಲೇ ಹೊತ್ತೊಯ್ದ ತಂದೆ
ವೀಲ್ ಚೇರ್ ಕೇಳುತ್ತಿದ್ದಂತೆ, ಇದು ನಮ್ಮ ಘಟಕದ ವೀಲ್ ಚೇರ್. ಅದನ್ನು ಇಲ್ಲೇ ಬಳಸಬೇಕು. ನೀನು ಹೋಗಬೇಕಾದ ಘಟಕಕ್ಕೆ ಮಾಹಿತಿ ತಿಳಿಸಿ ವ್ಹೀಲ್ ಚೇರ್ ತರುವಂತೆ ತಿಳಿಸಿ ಬಾ ಎಂದು ಸಿಬ್ಬಂದಿ ತಾಕೀತು ಮಾಡಿದ್ದಾರೆ. ಗಾಬರಿಗೊಂಡ ಮಾಬಾಷಾ, ಆ ವಾರ್ಡು ಎಲ್ಲಿದೆ ಎಂದು ವಿಚಾರಿಸಿದ್ದಾರೆ. ನಂತರ ತಾವೇ ಹೆಗಲ ಮೇಲೆ ಹೊತ್ತು ಸಾಗಿದ್ದಾರೆ. ಹೀಗೆ ಹೆಗಲ ಮೇಲೆ ಹೊತ್ತು ಆಸ್ಪತ್ರೆ ಆವರಣದಲ್ಲೆಲ್ಲಾ ವಾರ್ಡ್ ಹುಡುಕುತ್ತಾ ಓಡಾಡಿದ್ದಾರೆ.
ನೋಡುಗರ ಮರುಗುವಂತೆ ಮಾಡಿದ ದೃಶ್ಯ
ಮಗಳನ್ನು ತನ್ನ ಹೆಗಲ ಮೇಲೆ ಹೊತ್ತುಕೊಂಡು ವಿಮ್ಸ್ ಆಸ್ಪತ್ರೆಯ ಸಾರ್ವಜನಿಕ ಸ್ಥಳದಲ್ಲೇ ಮಾಬಾಷಾ ಓಡುತ್ತಿದ್ದ ದೃಶ್ಯ ನೋಡುಗರಲ್ಲೂ ಸಂಕಟ ತಂದಿತ್ತು. ಆದರೆ ಆಸ್ಪತ್ರೆ ಸಿಬ್ಬಂದಿ ಮಾತ್ರ ಇದಕ್ಕೆ ಕರಗಲಿಲ್ಲ. ಈ ರೀತಿ ಆಸ್ಪತ್ರೆ ರೋಗಿಯೆಡೆಗೆ ನಿರ್ಲಕ್ಷ್ಯ ತೋರಿದ ಉದಾಹರಣೆಗಳು ಇದೇ ಮೊದಲಲ್ಲ. ಸರ್ಕಾರಿ ಆಸ್ಪತ್ರೆಗಳನ್ನು ಹುಡುಕಿಕೊಂಡು ಬರುವ ಬಡರೋಗಿಗಳೆಡೆಗೆ ಈ ರೀತಿಯ ನಿರ್ಲಕ್ಷ್ಯ ಎಷ್ಟು ಸರಿ? ಅದೂ ಆರೋಗ್ಯ ಸಚಿವರ ತವರು ಜಿಲ್ಲೆಯಲ್ಲೇ ಹೀಗಾದರೆ ಹೇಗೆ? ಈ ಕುರಿತಾದ ವಿಡಿಯೊ ತುಣುಕೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.