ಬಳ್ಳಾರಿ: ನದಿಯಲ್ಲಿ ಕೊಚ್ಚಿ ಹೋಗುತ್ತಿದ್ದ ವ್ಯಕ್ತಿಯನ್ನು ರಕ್ಷಿಸಿದ ಗ್ರಾಮಸ್ಥರು
ಬಳ್ಳಾರಿ, ಸೆಪ್ಟೆಂಬರ್ 14: ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲ್ಲೂಕಿನ ರಾರಾವಿ ನದಿಯಲ್ಲಿ (ವೇದಾವತಿ ನದಿ) ಕೊಚ್ಚಿ ಹೋಗುತ್ತಿದ್ದ ವ್ಯಕ್ತಿಯನ್ನು ಗ್ರಾಮಸ್ಥರು ರಕ್ಷಣೆ ಮಾಡಿದ್ದಾರೆ.
ನೆರೆಯ ಆಂಧ್ರಪ್ರದೇಶದ ಅಧೋನಿ ನಗರದ ದೇವೇಂದ್ರ ಎಂಬಾತನು ಪ್ರಾಣಾಪಾಯದಿಂದ ಪಾರಾದ ವ್ಯಕ್ತಿಯೆಂದು ಗುರುತಿಸಲಾಗಿದೆ. ಆತನ ಪತ್ನಿ ಹನುಮಂತಮ್ಮ ಅವರೊಂದಿಗೆ ಭಾನುವಾರ ಮಧ್ಯಾಹ್ನ 2 ಗಂಟೆಯ ಸುಮಾರಿಗೆ ಸಿರುಗುಪ್ಪ ನಗರದಲ್ಲಿ ನೆಲೆಸಿರುವ ತನ್ನ ಮಗಳ ಆರೋಗ್ಯ ಸ್ಥಿತಿ ವಿಚಾರಿಸಲು ಬಂದಿದ್ದರು.
ಬಳ್ಳಾರಿಯಲ್ಲಿ ಧಾರಾಕಾರ ಮಳೆ: ಜೀವಕಳೆ ಪಡೆದ 'ಮಾನಸ ಸರೋವರ'
ಮಗಳ ಆರೋಗ್ಯ ವಿಚಾರಿಸಿ ವಾಪಸ್ ಆಧೋನಿಗೆ ಬೈಕ್ ನಲ್ಲಿ ವಾಪಾಸಾಗುತ್ತಿದ್ದಾಗ ರಾರಾವಿ ನದಿಯ (ಹಗರಿ ನದಿಯ ಸೇತುವೆ ಮೇಲೆ ಚಲಿಸುತ್ತಿದ್ದಾಗ) ನೀರಿನ ರಭಸಕ್ಕೆ ಬೈಕ್ ಸ್ಕಿಡ್ ಆದ ಪರಿಣಾಮ ಆ ನದಿಯಲ್ಲಿ ಕೊಚ್ಚಿ ಹೋಗಿ ಪ್ರಾಣಾಪಾಯಕ್ಕೆ ಸಿಲುಕಿದ್ದಾನೆ.
ನದಿಯಲ್ಲಿ ಕೊಚ್ಚಿ ಹೋಗುತ್ತಿರುವಾಗ ಈಜಾಡುತ್ತಾ ಆಸರೆಗಾಗಿ ಜಾಲಿಯ ಬೇಲಿಯನ್ನು ಹಿಡಿದುಕೊಂಡು ರಕ್ಷಣೆಗಾಗಿ ಜೋರಾಗಿ ಕೂಗಿಕೊಂಡಿದ್ದಾನೆ. ಆಗ ಸ್ಥಳೀಯ ಗ್ರಾಮಸ್ಥರು ಆತನನ್ನು ರಕ್ಷಣೆ ಮಾಡಿದ್ದಾರೆ. ಇದರಿಂದ ದೇವೇಂದ್ರ ಪ್ರಾಣಾಪಾಯದಿಂದ ಪಾರಾಗಿದ್ದು, ಬೈಕ್ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದೆ.