ಇಟ್ಟಿಗೆ ಕಾರ್ಖಾನೆ ಕೂಲಿ ಕಾರ್ಮಿಕನ ಮಗಳು ರಾಜ್ಯಕ್ಕೇ ಫಸ್ಟ್ Rank
ಬಳ್ಳಾರಿ, ಏಪ್ರಿಲ್ 30: ಸರಸ್ವತಿಗೂ, ಲಕ್ಷ್ಮಿಗೂ ಸಂಬಂಧವೇ ಇಲ್ಲ ಎಂಬುದಕ್ಕೆ ಬಳ್ಳಾರಿ ಜಿಲ್ಲೆ ರಾಂಪುರ ಗ್ರಾಮದ ಸ್ವಾತಿ ಅತ್ಯುತ್ತಮ ಉದಾಹರಣೆ. ಕಡು ಬಡತನದ ಕುಟುಂಬದ ಸ್ವಾತಿ ದ್ವಿತೀಯ ಪಿಯುಸಿ ಪರೀಕ್ಷೆ ಕಲಾ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ rank ಗಳಿಸಿದ್ದಾಳೆ.
ಸ್ವಾತಿಯ ತಂದೆ ಎಸ್.ಕೊಟ್ಟಪ್ಪ ಇಟ್ಟಿಗೆ ಭಟ್ಟಿಯಲ್ಲಿ ಕೂಲಿ ಮಾಡಿದರೆ, ತಾಯಿ ರತ್ನಮ್ಮ ಕಟ್ಟಡ ನಿರ್ಮಾಣ ಕಾಮಗಾರಿಯಲ್ಲಿ ಕೂಲಿಯಾಳು. ಕಡು ಬಡತನದಲ್ಲೇ ಓದಿದ ಎಸ್.ಸ್ವಾತಿ ಇಂದು ರಾಜ್ಯವೇ ತನ್ನತ್ತ ನೋಡುವಂತಹಾ ಸಾಧನೆ ಮಾಡಿದ್ದಾಳೆ.
ಕಲೆಯಲ್ಲಿ 2ನೇ rank ಪಡೆದ ರಮೇಶನಿಗೆ, ಅಪ್ಪ ಇಲ್ಲ, ಅಮ್ಮನೇ ಎಲ್ಲ!
ಸ್ವಾತಿ ಓದಿದ್ದು ಕೊಟ್ಟೂರಿನ ಇಂದೂ ಕಾಲೇಜಿನಲ್ಲಿ, ಇದೇ ಕಾಲೇಜಿನಲ್ಲಿ ಓದಿದ ಕಾವ್ಯಾಂಜಲಿಗೆ ಕಲಾ ವಿಭಾಗದ ಮೂರನೇ rank ದೊರೆತಿರುವುದು ವಿಶೇಷ.
ಕರ್ನಾಟಕ ಪಿಯು ಫಲಿತಾಂಶ : ಅತೀ ಹೆಚ್ಚು ಅಂಕ ಗಳಿಸಿದವರು
ಕೊಟ್ಟೂರಿನಿಂದ 5 ಕಿ.ಮೀ ದೂರದಲ್ಲಿರುವ ರಾಂಪುರ ಸ್ವಾತಿಯ ಊರು. ಪ್ರತಿ ದಿನ ಕಾಲೇಜಿಗೆ ಹೋಗುವ ಮುಂಚೆ ಹೂವು ಕಟ್ಟಿ, ಮಾರಿ ಕಾಲೇಜಿಗೆ ಹೋಗುತ್ತಿದ್ದ ಸ್ವಾತಿ ಬಂದ ಹಣವನ್ನು ಕುಟುಂಬ ನಿರ್ವಹಣೆಗೆ ಕೊಟ್ಟು ಉಳಿದಿದ್ದರಲ್ಲಿ ಪುಸ್ತಕ, ಪ್ರತಿ ದಿನ ಕಾಲೇಜಿಗೆ ಹೋಗಿ ಬರಲು ಬಸ್ಚಾರ್ಜ್ಗೆ ಬಳಸುತ್ತಿದ್ದಳಂತೆ.
ಕೂಲಿ ಮಾಡಿ ನನ್ನನ್ನು ಓದಿಸಿದ್ದಾರೆ
ಈ ವರೆಗಿನ ಕಷ್ಟವನ್ನೆಲ್ಲಾ ಸ್ವಾತಿ ಗಳಿಸಿಕೊಂಡ ರ್ಯಾಂಕ್ ಕ್ಷಣ ಕಾಲ ಮರೆಸಿರುವಂತಿದೆ. ಫಲಿತಾಂಶ ಬಂದಾಗಿನಿಂದ ಆಕಾಶಕ್ಕೆ ಮೂರೇ ಗೇಣು ಎಂಬಂತೆ ಖುಷಿಯಾಗಿ ನಲಿಯುತ್ತಿರುವ ಸ್ವಾತಿ 'ಒನ್ ಇಂಡಿಯಾ ಕನ್ನಡ'ದೊಂದಿಗೆ ಮಾತನಾಡಿದ್ದಾರೆ. 'ಅಪ್ಪ-ಅಮ್ಮ ಕೂಲಿ ಮಾಡಿ ಕಷ್ಟಪಟ್ಟು ಓದಿಸಿದ್ದಾರೆ, ಅಮ್ಮನಂತೂ ತನ್ನ ಜೀವನವನ್ನೇ ನನ್ನ ಹಾಗೂ ತಮ್ಮನ ಸಾಕಲು ಕಳೆದಿದ್ದಾಳೆ, ಹಳ್ಳಿಯಲ್ಲಿ ಹೆಣ್ಣು ಮಕ್ಕಳು ಓದಲು ನೂರಾರು ಅಡೆ-ತಡೆ ಆದರೂ ಅವರು ನನ್ನನ್ನು ಓದಿಸಿದ್ದಾರೆ' ಎಂದು ಗದ್ಗದಿತಳಾದಳು ಸ್ವಾತಿ.
ಫಲಿತಾಂಶ ಎಲ್ಲವನ್ನೂ ಮರೆಸಿದೆ
'ದಿನವೂ ಹೂಕಟ್ಟಿ ಮಾರಿ ಕಾಲೇಜಿಗೆ ಹೋಗುತ್ತಿದ್ದೆ. ಬೆಳಗ್ಗೆ ತಡವಾದರೆ ಕಾಲೇಜಿನಲ್ಲಿ ಶಿಕ್ಷಕರು ಬೈಯ್ಗುಳ, ಸಂಜೆ ತಡ ಆದ್ರ ಅಪ್ಪ - ಅಮ್ಮಗೆ ಆತಂಕ ಆದರೆ ಈಗ ಆ ಕಷ್ಟವನ್ನೆಲ್ಲಾ ಫಲಿತಾಂಶ ಮರೆಸಿದೆ' ಎಂದು ಖುಷಿಯಾದರೂ ಸ್ವಾತಿ. ಅಪ್ಪ-ಅಮ್ಮ, ತನಗೆ ವಿದ್ಯೆ ಕಲಿಸಿದ ಶಿಕ್ಷಕರು ಎಲ್ಲರನ್ನೂ ನೆನೆದ ಸ್ವಾತಿ ಎಲ್ಲರ ಪರಿಶ್ರಮದಿಂದಲ ನಾನಿಂದು ಈ ಸಾಧನೆ ಮಾಡಿದ್ದೇನೆ ಎಂದು ಎಲ್ಲಾ ಶ್ರೇಯವನ್ನು ತನ್ನ ಪೋಷಕರಿಗೆ, ಶಿಕ್ಷಕರಿಗೆ ಅರ್ಪಿಸಿದರು.
ಬಡತನ ಮರೆತು ಓದಿಸಿದೆ
ಇಟ್ಟಿಗೆ ಭಟ್ಟಿಯ ಕಪ್ಪು ಹೊಗೆ, ಬಿಸಿ ಶಾಖದಲ್ಲಿ ದುಡಿದು ಮಗಳನ್ನು ಓದಿಸಿದ್ದಕ್ಕೂ ಸಾರ್ಥಕ ಆಯ್ತು ಎನ್ನುವಂತೆ ಎದೆ ಉಬ್ಬಿಸಿಕೊಂಡು ಸ್ವಾತಿಯ ತಂದೆ 'ಒನ್ಇಂಡಿಯಾ ಕನ್ನಡ'ದೊಂದಿಗೆ ಮಾತನಾಡಿದ್ದಾರೆ. 'ರಟ್ಟೆ ಮುರಿದು ದುಡಿದೆ. ನಾನು ಬಡವ ಅನ್ನೋದನ್ನು ಮರೆತು ಅವಳನ್ನು ಕೈಲಾದ ಮಟ್ಟಿದೆ ಓದಿಸಿದೆ, ಈಗ ಮಗಳು ನನ್ನ ದುಡಿಮೆಯನ್ನೇ ಮರೆಸಿ ಖುಷಿ ತಂದುಕೊಟ್ಟಿದ್ದಾಳೆ. ಸಂತೋಷ ಆಗ್ತಿದೆ' ಎನ್ನುತ್ತಾರೆ ಸ್ವಾತಿಯ ತಂದೆ ಎಸ್. ಕೊಟ್ಟಪ್ಪ.
ಮುಂದಿನ ಓದು ದೇವರ ಇಚ್ಛೆ
ಮಗಳ ಸಾಧನೆಯಿಂದ ಖುಷಿಯಾಗಿರುವ ಎಸ್. ರತ್ನಮ್ಮ ಹನಿಗಣ್ಣಾಗಿಯೇ ಮಾಧ್ಯಮದವರೊಂದಿಗೆ ಮಾತನಾಡಿದರು, ಓದು ಅಷ್ಟೇನು ನಮಗೆ ಗೊತ್ತಿಲ್ಲ. ಕಾಲೇಜಿನ ಮೇಷ್ಟ್ರು ಫೋನ್ ಮಾಡಿ, ಬೇಗ ಕಾಲೇಜಿಗೆ ಬಬ್ರೀ, ನಿಮ್ ಸ್ವಾತಿ ಫಸ್ಟ್ ಬಂದಾಳ ಅಂದ್ರು. ಇಲ್ಲಿ ನೋಡಿದ್ರೆ, ಸ್ವೀಟು, ಆರತಿ ತಟ್ಟೆ ಎಲ್ಲಾ ತಂದು ಆರತಿ ಮಾಡ್ತಾವ್ರೆ. ಮಗಳನ್ನು ಕಣ್ಣಾಗಿ ಸಾಕಿದೆ, ಸಾಧಿಸಿದ್ದಾಳೆ. ಮುಂದಿನ ಓದು, ದೇವರಿಚ್ಛೆ' ಎಂದರು.